Pages

Thursday, December 8, 2011

ನಾ ಸತ್ತೀನೋ? ಇದ್ದೀನೋ?

ಶ್ರೀ ಸುರೇಶ್ ಕುಲಕರ್ಣಿಯವರು ಸ್ವರ್ಗೀಯ ದ.ರಾ.ಬೇಂದ್ರೆಯವರೊಡನಾಡಿದವರು. ಬೇಂದ್ರೆಯವರ ಸಾಹಿತ್ಯವನ್ನು ಚೆನ್ನಾಗಿ ಅಧ್ಯಯನ ಮಾಡಿದವರು. ಬೇಂದ್ರೆಯವರ ಆಧ್ಯಾತ್ಮಿಕ ದೃಷ್ಟಿಯನ್ನು ಬೇಂದ್ರೆಯವರ ಮಾತುಗಳಲ್ಲೇ ಕೇಳಲು ಚೆಂದ. ಕುಲಕರ್ಣಿಯವರು ಬೇಂದ್ರೆಯವರ ಮಾತುಗಳನ್ನು ಯಥಾವತ್ತಾಗಿ ಹೇಳಬಲ್ಲರು. ಅವರ ಧ್ವನಿಯಲ್ಲಿ ಬೇಂದ್ರೆಯವರ ವಿಚಾರವನ್ನು ಇಲ್ಲಿ ಕೇಳಿ.
[ನನಗೆ ಒಂದು ಅನುಮಾನ. ಧ್ವನಿ ನಾನು ಪೇರಿಸಿದ್ದು, ಸಹಜವಾಗಿ ನನ್ನ ಕಿವಿಗೆ ಕೇಳುತ್ತಿದೆ. ಧ್ವನಿ ಕೇಳದೆಹೋದರೆ ದಯಮಾಡಿ ತಿಳಿಸಿ
-ಶ್ರೀಧರ್, ಸಂಪಾದಕ]





Wednesday, December 7, 2011

ಬದುಕು



            


When I am happy, I see the happiness in others. When I am depressed, I notice that people's eyes look sad. 
When I am weary, I see the world as boring and unattractive.

- Steve Chandler -


  ಈ ಬದುಕನ್ನು  ಒಂದು ರೀತಿಯ ರಹಸ್ಯ, ವಿಚಿತ್ರ, ಸುಂದರ, ಅಸಹನೀಯ, ನಿರೀಕ್ಷೆ, ಇತ್ಯಾದಿಯಾಗಿ ಹಲವಾರು ವಿಚಾರವಂತರು ತಮ್ಮ ವಿಚಾರಗಳನ್ನು ಧಾಖಲಿಸಿದ್ದಾರೆ. ಪ್ರತಿಯೊಬ್ಬರೂ ಬದುಕನ್ನ ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅರ್ಥಮಾಡಿಕೊಂಡು ಬದುಕುತ್ತಿದ್ದಾರೆ. ಸುಖ, ದುಃಖ, ನೋವು, ನಲಿವು, ಪ್ರೀತಿ, ದ್ವೇಷ, ರೋಗ,ಬಡತನ, ಸಿರಿತನ, ಇತ್ಯಾದಿ ಮಜಲುಗಳ ಮಧ್ಯೆ ಬದುಕು ಸವೆಯುತ್ತಿದೆ. ಬದುಕು ಕೆಲವರಿಗೆ ಅರ್ಥಪೂರ್ಣವೆನಿಸಿದರೆ ಕೆಲವರಿಗೆ ಅರ್ಥಹೀನ. ಕೆಲವರಿಗೆ ಸುಂದರ ಮತ್ತೆ ಕೆಲವರಿಗೆ ನಿರಾಶೆ.    "ಏಕೆ ಹೀಗೆ? ಹಾಗಾದರೆ ಬದುಕು ಎಂದರೆ ನಿಜವಾದ ಅರ್ಥದಲ್ಲಿ ಏನು?" ಎಂಬ ಪ್ರಶ್ನೆ ಯುವಕನೊಬ್ಬನ ಮನಸ್ಸಿನಲ್ಲಿ ಹುಟ್ಟಿತು. ಸಾಕಷ್ಟು ಯೋಚಿಸಿದ,ಸರಿಯಾದ  ಉತ್ತರ ಸಿಗಲಿಲ್ಲ.
                      ತನ್ನ ಸುತ್ತಲ ಪ್ರಪಂಚ ನೋಡುತ್ತಾ ಹೊರಟ.  ಎಲ್ಲರು ಬದುಕು ನಡೆಸುತ್ತಿರುವವರೇ, ಯಾರನ್ನು ಕೇಳುವುದು? ದಾರಿ ಮಧ್ಯದಲ್ಲಿ ಯುವಕ ಯುವತಿಯರ ತಂಡವನ್ನು ಕಂಡು ವಿಚಾರಿಸಿದ. " ಅಯ್ಯೋ , ಈಗಲೇ ಬದುಕಿನ ಚಿಂತೆ ಏಕೆ? ಮೊದಲು ಖುಷಿಯಾಗಿ ಬದುಕೋಣ."ಎಂದು ಮುಂದೆ ಸಾಗಿದರು. ನಂತರದಲ್ಲಿ ಒಬ್ಬ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕರನ್ನು ಕಂಡು ಬದುಕಿನ ಬಗ್ಗೆ ವಿಚಾರಿಸಿದ. ಅವರು " ಈ ವರಗೆ ಬದುಕು ಹೀಗೆ ನಿರ್ಧಿಷ್ಟ  ಎಂದು ಹೇಳುವ ಯಾವ ಪುಸ್ತಕವನ್ನು ನಾನು  ಓದಿಲ್ಲ. ಹುಡುಕುತ್ತೇನೆ, ಸಿಕ್ಕರೆ ನಿನಗೆ ತಿಳಿಸುತ್ತೇನೆ." ಎಂದು ಜಾರಿಕೊಂಡ.
                      ಏನಿದು? ಬದುಕಿಗೆ ಅರ್ಥವೇ ಗೊತ್ತಿಲ್ಲದೇ ನಾವೆಲ್ಲಾ ಬದುಕುತ್ತೀದ್ದೆವೆಯೇ?  ಎಂದು ಯುವಕ ಚಿಂತೆಗೆ ಒಳಗಾದ. ನಿರಾಶನಾಗದೆ ಮಧ್ಯ ವಯಸ್ಕ ಸಂಸಾರಸ್ತನಲ್ಲಿ  ಬದುಕಿನ ಬಗ್ಗೆ ಕೇಳಿದ. " ನಾನು ಈಗಾಗಲೇ ಅರ್ಧ ಜೀವನ ಸವೆಸಿದ್ದೇನೆ, ಮಕ್ಕಳ ಜವಾಬ್ದಾರಿ ಇನ್ನು ಇದೆ. ನನ್ನದಾಗಿ ಒಂದು ಮನೆ ಇಲ್ಲ. ಸಂಸಾರದ ಜವಾಬ್ದಾರಿಯೆಲ್ಲ ಮುಗಿದಮೇಲೆ ಬದುಕಿನ ಬಗ್ಗೆ ಚಿಂತಿಸುತ್ತೇನೆ " ಎಂಬ ಉತ್ತರ ಬಂತು. ಕೊಂಚ ನಿರಾಶನಾದರು ಬದುಕಿನ ಬಗ್ಗೆ ತಿಳಿಯುವ ಕುತೂಹಲ ಜಾಸ್ತಿ ಇತ್ತು. ನಂತರದಲ್ಲಿ ತನಗೆ ಸಿಕ್ಕ ವಯೋವ್ರುದ್ದ ,ಸಂಗೀತಗಾರ , ರಾಜಕಾರಣಿ ಹೀಗೆ ಎಲ್ಲರಲ್ಲೂ ವಿಚಾರಿಸಿದ. ಯಾರಿಂದಲೂ ಸಮರ್ಪಕ ಉತ್ತರ ಸಿಗಲಿಲ್ಲ. 
                     ಬೇಸರವಾಯಿತು, ನಿರ್ಜನ ಪ್ರದೇಶಕ್ಕೆ ಹೋಗಿ ಅಲ್ಲಿ ಗಿಡ ಮರ, ಹರಿಯುವ ನೀರು, ಹಸಿರು ನೆಲ, ಬೆಟ್ಟ ,ನೀಲಿ ಆಕಾಶ ಎಲ್ಲವನ್ನು ನೋಡಿದ ಮೇಲೆ   ಮನಸ್ಸು ಶಾಂತವಾಯಿತು. ಸ್ವಲ್ಪ ಸಮಯದ ನಂತರದ, ಹತ್ತಿರದಲ್ಲೇ ದ್ಯಾನಸಕ್ತನಾಗಿದ್ದ ಒಬ್ಬ ವಯೋವ್ರುದ್ದ  ಸನ್ಯಾಸಿಯಲ್ಲಿ  ಹೋಗಿ ಬದುಕಿನ ಬಗ್ಗೆ ತಿಳಿಸಲು ಪ್ರಾರ್ಥಿಸಿದ. ಸನ್ಯಾಸಿ ನಸುನಗುತ್ತ, " ಬದುಕು ಎಂದರೆ ಸವಿಜೇನು, ಬದುಕು ಎಂದರೆ ಸದಾಕಾಲ ಹರಿವ ನೀರು; ಬದುಕು ಎಂಬುದು ಸುಂದರ ಸಂಗೀತ; ಬದುಕು ಎಂದರೆ ಸುಂದರ,ಪರಮ ಪ್ರೇಮ ಹಾಗು ಭಕ್ತಿ. ಇದನ್ನು ಸರಿಯಾಗಿ ಅರ್ಥ ಮಾಡಿಕೊ, ಬದುಕಿನ ಅರ್ಥ ತಿಳಿಯುತ್ತದೆ. ನಂತರದಲ್ಲಿ ನಿನಗೆ ಅನುಭವವಾಗುತ್ತದೆ." ಎಂದು ಹೇಳಿದ. ನಮ್ಮ ಯುವಕನಿಗೆ ಹೆಚ್ಚು ಅರ್ಥವಾಗದ್ದಿದ್ದರು ಸಮಾಧಾನವಾಯಿತು. ನಮಸ್ಕರಿಸಿ ಹೊರಟ.  
                     ಹೌದು, ಬದುಕು ಎನ್ನುವುದಕ್ಕೆ ಇಂಥದೇ ಅರ್ಥ ಎನ್ನುವ ಯಾವ ನಿರ್ಧಿಷ್ಟ ಉತ್ತರ ಇಲ್ಲ. ಬದುಕಿನಲ್ಲಿ ಎಲ್ಲವು ಅನಿವಾರ್ಯಗಳೇ! ಯಾವುದರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪಿಸಿಕೊಳ್ಳುವ ಪ್ರಯತ್ನಕ್ಕಿಂತ ಎದುರಿಸುವ ಎದೆಗಾರಿಕೆ ತೋರಿದಲ್ಲಿ ಬದುಕು ಸಹ್ಯವೆನಿಸುತ್ತದೆ.ನಾವು ಹೇಗೆ ಭಾವಿಸುತ್ತೇವೋ ಹಾಗೆ ನಮಗೆ ಬದುಕು ಕಾಣುತ್ತದೆ. ಕಣ್ಣಿಗೆ ಬಣ್ಣದ ಕನ್ನಡಕ ಹಾಕಿಕೊಂಡಂತೆ. ಯಾವ ಬಣ್ಣದ್ದು ಎಂಬುವುದರ ಮೇಲೆ ಬದುಕಿನ ಬಣ್ಣ ನಿರ್ಭರವಾಗುತ್ತದೆ. ನಮ್ಮ ಮನಸ್ಸಿನ  ಸ್ಥಿತಿಯ ಮೇಲೆ ಬದುಕು ತೋರುತ್ತದೆ. ಈ ಮೇಲಿನ ಉದಾಹರಣೆಗಳು ಇದನ್ನೇ ಹೇಳುತ್ತವೆ. ಬದುಕಿನ ಅರ್ಥ ಹುಡುಕುವ ಬದಲಿಗೆ, ಬದುಕಿನಲ್ಲಿ ಹೇಗಿರಬೇಕೆನ್ನುವ ಬಗ್ಗೆ ಚಿಂತಿಸಿ  ಬಾಳುವೆ ಮಾಡಿದರೆ  ಹೆಚ್ಚು ಉಪಯುಕ್ತ. ಕನ್ನಡಿಯನ್ನು ಒರಸಿ ಶುಚಿಮಾಡಿದಂತೆ, ಮನ- ಮನೆಯ ಒಳಗೂ ಹೊರಗು ನಿತ್ಯ ಗುಡಿಸಿ ಕಸ ತೆಗೆದರೆ, ಬಾಳುವೆ ಮಾಡುವ ಬದುಕು ಹೊಸತಾಗಿ ಕಾಣಲು ಸಹಕಾರಿ. ಆಗ ಬದುಕು ಅಮೂಲ್ಯ ಎನಿಸಬಹುದು, ಸಾರ್ಥಕ ಎನಿಸಬಹುದು, ಶಾಂತೆನಿಸಬಹುದು. 
                     ನೀವೇನು ಹೇಳುತ್ತೀರಾ?.................
--

ಸಾವು


ಮೊನ್ನೆ ನಮ್ಮ ಕಾಲೇಜಿನ ವಿಧ್ಯಾರ್ಥಿ ಸತ್ತನೆಂಬ ಸುದ್ದಿ ಬಂತು. 2 ನೆ ವರ್ಷದ ಎಂಜಿನೀರಿಂಗ್ ವ್ಯಾಸಂಗ ಮಾಡುತ್ತಿದ್ದ ಈ ಹುಡುಗ ತನ್ನ ಗೆಳೆಯ ಗೆಳತಿಯರ ಜೊತೆಯಲ್ಲಿ ನಿಸರ್ಗ ಧಾಮಕ್ಕೆ ಪ್ರಕೃತಿ ಸೌಂದರ್ಯ ಸವಿದು ಭಾನುವಾರವನ್ನು ಸಾರ್ಥಕ ಪ್ರವಾಸವನ್ನಾಗಿ ಮಾಡಿ ಬರಲೆಂದು ಹೋಗಿದ್ದ. ನಿಸರ್ಗವನ್ನು ಸವಿಯುವಾಗ ನೀರಿನಲ್ಲಿ ಅಕಸ್ಮಾತ್ತಾಗಿ ಬಿದ್ದು ಹೃದಯಾಘಾತದಿಂದ ಅಸು ನೀಗಿದ. 19 -20 ರ ನಡುವಿನ ಪ್ರಾಯದ ಹುಡುಗ ಅನಿರೀಕ್ಷಿತವಾಗಿ ಎಲ್ಲರಿಂದ ಕಾಣದ ಲೋಕಕ್ಕೆ ಪ್ರಯಾಣ ಬೆಳೆಸಿದ ಎಂದರೆ ಯಾರಿಗೆ ಆದರು ಆಘಾತವೇ! ಚುರುಕು ಬುದ್ದಿಯ, ಬುದ್ದಿವಂತ,ಸ್ನೇಹಮಯಿಯಾಗಿದ್ದನೆಂದು ಅವನನ್ನು ಸಮೀಪದಿಂದ ಬಲ್ಲ ಅವನ ಸ್ನೇಹಿತ ಹೇಳಿಕೊಂಡು ದುಃಖಪಡುತ್ತಿದ್ದ. ಈ ಹುಡುಗನ ಸ್ನೇಹಿತನಿಗೆ ಇಷ್ಟೊಂದು ದುಃಖ ಆಗಿರಬೇಕಾದರೆ ಈ ಹುಡುಗನ ಹೆತ್ತವರ ದುಃಖ ಊಹಿಸಲು ಅಸಾಧ್ಯ.
ಇಂತಹ ಒಂದು ಸಂದರ್ಭದಲ್ಲಿ ಅಲ್ಲಿ ನೆರೆದವರ ಮಾತು ಬೇರೆಯಾಗಿಯೇ ಸಾಗಿತ್ತು. " ದೇವರು ಅದೆಂತ ಕಟುಕ ರೀ, ಇಷ್ಟು ಚೆಂದದ ಹುಡುಗನೇ ಬೇಕಿತ್ತಾ? ಅದೆಷ್ಟು ಜನ ಸಾಯಲು ಹಾತೊರೆಯುತ್ತಿರುವಾಗ ಆ ಕಾಯಿಲೆಯವರನ್ನು, ಮುದುಕರನ್ನು ಬಿಟ್ಟು ಈ ಮುದ್ದಾದ ಹುಡುಗನನ್ನು ಕರೆದುಕೊಂಡು ಬಿಟ್ಟನಲ್ಲ?" ಎಂದು ಸಂತಾಪ ವ್ಯಕ್ತ ಮಾಡಿದರೆ, ಮತ್ತೊಬ್ಬರು " ಈ ಹುಡುಗರಿಗೆ ಬುದ್ದಿ ಇದೆಯೇ? ಅಲ್ಲಾರಿ, ನೀರಿನ ಹತ್ತಿರ ಯಾಕೆ ಹೋಗಬೇಕಾಗಿತ್ತು? ಹುಡುಗಾಟದ ವಯಸ್ಸು ನೋಡಿ ಹೀಗೆಲ್ಲ ಆಡಿಸುತ್ತೆ." "ಇವರು ಟೂರ್ ಹೋಗಲಿಲ್ಲಂತ ಯಾರು ಅಳುತ್ತಿದ್ರು ಹೇಳಿ, ಮಕ್ಕಳು ಏನೋ ಮಾಡಿಕೊಂಡು ಬಿಡ್ತಾರೆ. ಆದರೆ, ಅನುಭವಿಸೋರಿಗೆ ತಾನೇ ತಿಳಿಯೋದು" ಎಂದರು ಮಗದೊಬ್ಬರು. " ಅದೆಷ್ಟು ಕಷ್ಟ ಬಿದ್ದು ಓದಿಸ್ತಾ ಇದ್ರು, ನೋಡಿ ಹೀಗೆ ಆಗೋಯ್ತು". ಎಂದರು ಇನ್ನೊಬ್ಬರು. ಹೀಗೆ ಸಾಗಿತ್ತು ಮಾತಿನ ಲಹರಿ.
ಜನರ ಮಾತಿಗೆ ಕೊನೆ ಮೊದಲಿಲ್ಲದೆ ಹಿಡಿತವಿರದೆ ಸಾಗಿತ್ತು. ಇದನ್ನೆಲ್ಲಾ ದೂರದಲ್ಲಿ ನಿಂತು ಗಮನಿಸುವಾಗ ನನ್ನ ವಿಚಾರ ಲಹರಿ ಓಡಿದ್ದೆ ಬೇರೆ ದಿಕ್ಕಿನಲ್ಲಿ. ಸಾವು ಯಾರನ್ನು ಹೇಳಿ ಕೇಳಿ ಬರುತ್ತೆ? ಯಾವಾಗ ಬರುತ್ತೆ ಎಂಬುದು ಯಾರಿಗೆ ತಾನೆ ಗೊತ್ತು? ಹುಟ್ಟು ಎಂಬುದು ಬಂದ ಕೂಡಲೇ ಸಾವು ನಮ್ಮ ಹಿಂದೆಯೇ ಇರುತ್ತದೆ. ನಾವು ಹುಟ್ಟುವ ಮೊದಲು ಒಂದು unconditional agreement ಮಾಡಿಕೊಂಡೆ ಬಂದಿರುತ್ತೇವೆ. ಯಾವಾಗ ಕರೆದರೂ ಯಾವ ಸಬೂಬು ಹೇಳದೆ ಸುಮ್ಮನೆ ಹೊರಡುತ್ತೇವೆ ಎಂದು. ಸಾವು ಯಾವ ಕ್ಷಣದಲ್ಲಿ ಎಂದು ಯಾರಿಗೂ ಗೊತ್ತಾಗದ ಹಾಗೆ ಯಮ ಕರೆಸುತ್ತಾನೆ. ಸಾವಿಗೊಂದು ಕಾರಣ ಮಾತ್ರ ನೀಡೆ ಕರೆದುಕೊಂಡು ಹೋಗುತ್ತಾನೆ. ಹುಟ್ಟಿನಷ್ಟೇ ಸಾವು ಕೂಡ ನಿಗೂಡ. ಕೆಲವರು ಮುಂದೆ ಹೋಗುತ್ತಾರೆ ಮತ್ತೆ ಕೆಲವರು ಹಿಂದೆ, ಆದರೆ ಎಲ್ಲರು ಹೋಗಲೇ ಬೇಕಾದ ಜಾಗ ಇದು. ಪ್ರತಿ ಸಾವು ಕೂಡ ನಮಗೊಂದು ಎಚ್ಚರಿಕೆ ನೀಡುತ್ತಿರುತ್ತದೆ. "ನೀನು ಸಾವಿನ ಸಾಲಿನಲ್ಲಿ ನಿಂತಿದ್ದಿಯ".
ಉಳಿದಷ್ಟು ದಿನದಲ್ಲಿ ನನ್ನ ಬದುಕನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬಹುದು? ಇರುವಷ್ಟು ಸಮಯದಲ್ಲಿ ನಾವೇನು ಒಳ್ಳೆಯದು ಮಾಡಬಹುದು? ಮತ್ತೊಬ್ಬರಿಗೆ ಸಾಧ್ಯವಾದಷ್ಟು ಮಟ್ಟಿಗೆ ತೊಂದರೆ ಕೊಡದೆ ಹೇಗೆ ಬದುಕಬಹುದು? ನಮ್ಮ ನಮ್ಮ ಕರ್ತವ್ಯವನ್ನ ಎಷ್ಟು ಪ್ರಾಮಾಣಿಕರಾಗಿ ಮಾಡಬಹುದು? ನಾವೆಷ್ಟು ಹೃದಯವನ್ತರಾಗಿ ಬಾಳಬಹುದು? ಹೇಗೆ ಉತ್ಸಾಹದಿಂದ ಜಗತ್ತನ್ನು ನೋಡಬಹುದು? ಪ್ರೀತಿ ಪ್ರೇಮದಿಂದ ಎಷ್ಟು ಕಾಲ ಸ್ವತಂತ್ರರಾಗಿ ಬಾಳುವೆ ನಡೆಸಬಹುದು? ಇತ್ಯಾದಿಗಳನ್ನು ಸಕಾರಾತ್ಮಕವಾಗಿ ಚಿಂತನೆ ನಡೆಸಿ,ಅದರಂತೆ ಬಾಳುವೆ ನಡೆಸಿದರೆ ಸಾವಿನಲ್ಲೂ ಧನ್ಯತೆ ಸಿಗಬಹುದೇನೋ ಎಂದೆನಿಸುತ್ತದೆ.
ಇದಕ್ಕೆ ನಿಮ್ಮ ಚಿಂತನೆ ಏನು?
-ಹೆಚ್.ಏನ್.ಪ್ರಕಾಶ್ 

Saturday, December 3, 2011

ಶ್ರೀ ಶೃತಿ ಪ್ರಿಯರ ಸಂದರ್ಶನ



ವೇದ ತರಂಗ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ಶೃತಿ ಪ್ರಿಯರ ಸಂದರ್ಶನ. ಸಂದರ್ಶಿಸುವವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮ.

ಚಹಾಇಲ್ಲ.

ಧಾರವಾಡದ ಚಿಂತಕ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀ ಸುರೇಶ ಕುಲಕರ್ಣಿಯವರು ನಿನ್ನೆ ನಮ್ಮ ಮನೆಯಲ್ಲಿ ನಡೆದ ಸತ್ಸಂಗಕ್ಕೆ ಬಂದಿದ್ದರು. ಅವರ ಜೀವನದ ಒಂದು ಘಟನೆ ಅವರ ಮಾತಿನಲ್ಲಿ ಕೇಳಿದಾಗ ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಅಭಿಮಾನ ಇಮ್ಮಡಿಯಾಯ್ತು. ಆ ಘಟನೆ ನೀವೂ ಕೇಳಿ.......
ಕುಲಕರ್ಣಿಯವರ ವಿಧ್ಯಾರ್ಥಿ ಜೀವನದ ಒಂದು ಘಟನೆ. ರಾತ್ರಿ  ಬಹಳ ಹೊತ್ತು ನಿದ್ರೆಗೆಟ್ಟು  ಕೆಲವು ಪೈಂಟಿಂಗ್ ಗಳನ್ನು ಮಾಡಿದ್ದರು. ಬೆಳಗಾಗೆದ್ದಾಗ    ಅಮ್ಮನ ಹತ್ತಿರ ಹೋಗಿ ಅರ್ಧ ಲೋಟ ಚಹಾ ಕೇಳಿದರು. ಅಮ್ಮ ಹೇಳಿದರು. 'ಇಲ್ಲ." ಸಕ್ಕರೆ ಖಾಲಿಯಾಗಿದೆ. ಸ್ವಲ್ಪ ಸಮಯ ಕಳೆಯಿತು. ಮನೆಗೆ ಯಾರೋ ಮೂರು ಜನ ಅತಿಥಿಗಳು ಬಂದರು. ಅಮ್ಮ ಅವರನ್ನು ಆದರದಿಂದ ಬರಮಾಡಿಕೊಂಡು ಚಹಾ ಕೊಟ್ಟಿದ್ದೆ ಅಲ್ಲದೆ  ಮಧ್ಯಾಹ್ನ ಊಟ ಮುಗಿಸಿಯೇ ಹೋಗಬೇಕೆಂದು ತಾಕೀತು ಮಾಡಿದ್ದರು. ಇದನ್ನು ಕಂಡ ಸುರೇಶ ಕುಲಕರ್ಣಿಯವರಿಗೆ ಅಮ್ಮನ ಮೇಲೆ ಸಿಟ್ಟು ಬಂದಿತ್ತು. ತಾನು ಕೇಳಿದರೆ ಅಮ್ಮ  ಸಕ್ಕರೆ ಇಲ್ಲವೆಂದು ಚಹಾ ಕೊಡಲಿಲ್ಲ, ಆದರೆ  ಮನೆಗೆ ಬಂದ ಅತಿಥಿಗಳಿಗೆ ಸಂತೋಷ ದಿಂದಲೇ ಚಹಾ ಮಾಡಿಕೊಟ್ಟಳಲ್ಲಾ!!
ಅಷ್ಟೇ ಅಲ್ಲ ಮಧ್ಯಾಹ್ನ ಊಟಕ್ಕೂ ಕೀರು ಮಾಡಿ ಬಡಿಸಿದ್ದಳು. ಕುಲಕರ್ಣಿಯವರಿಗೆ ಸಿಟ್ಟು ಇನ್ನೂ ಹೆಚ್ಚಾಯ್ತು. ಅಮ್ಮನ ಮೇಲೆ ಸಿಟ್ಟಾಗಿಯೇ   ಇದ್ದರು. ಅದನ್ನು ಗಮನಿಸಿದ ಅಮ್ಮ  ಒಂದು ಕಪ್ ಚಹಾ ಮಾಡಿಕೊಂಡು ಮಗನಿಗೆ ಕೊಡಲು ಹೋದರು. ಮಗ ಸಿಟ್ಟಾಗಿ" ನನಗೆ ನಿನ್ನ ಚಹಾ ಬೇಡ, ಅದನ್ನು ಮೋರಿಗೆ ಚೆಲ್ಲು! ಎಂದು ಸಿಟ್ಟಾಗಿ ಹೇಳಿದಾಗ ಅಮ್ಮ ಹಾಗೆಯೇ ಮಾಡಿದರು. ಕಪ್ ತೊಳೆದು ಅದರ ಸ್ಥಾನದಲ್ಲಿರಿಸಿ ಮೌನವಾದರು. 
ಬಂದ ಅತಿಥಿಗಳು ಮನೆಯಿಂದ ತೆರಳಿದರೂ ಮಗನ ಸಿಟ್ಟು ಇಳಿದಿರಲಿಲ್ಲ. ಮಗನ ಹತ್ತಿರ ಹೋದ ತಾಯಿ ಮಗನನ್ನು ಅಡಿಗೆ ಮನೆಗೆ ಕರೆದು " ಇಲ್ಲಿ ನೋಡೋ  ಈ  ಡಬ್ಬದ ಸಾಲುಗಳಲ್ಲಿ ಮೇಲಿನ ಸಾಲು ಇದೆಯಲ್ಲಾ, ಅದು ಅತಿಥಿಗಳಿಗಾಗಿ ಮೀಸಲಿಟ್ಟ ಡಬ್ಬಗಳು! ನೋಡು ಇವುಗಳಲ್ಲಿ  ಚಹಪುಡಿ, ಸಕ್ಕರೆ, ಬೇಳೆ....ಇತ್ಯಾದಿ  ಅಡಿಗೆಗೆ ಬೇಕಾಗುವ ಎಲ್ಲಾ ಸಾಮಾನುಗಳೂ ಇವೆ. ಪ್ರತಿ ತಿಂಗಳು ಅಂಗಡಿಯಿಂದ ಸಾಮಾನು ಕೊಂಡು ತಂದಾಗ ಎಲ್ಲದರಲ್ಲೂ ಒಂದು ಹಿಡಿಯನ್ನು  ಈ ಡಬ್ಬಗಳಿಗೆ ಮೊದಲು ಹಾಕುವೆ. ನಂತರ ನಮ್ಮ ಮನೆಬಳಕೆಗೆ ಇರುವ ಡಬ್ಬಗಳನ್ನು ತುಂಬಿಸುವೆ. ಯಾವುದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಯಾರೇ ಅತಿಥಿಗಳು ಬಂದರೂ ಅವರ ಆತಿಥ್ಯಕ್ಕೆ ಕಷ್ಟವಾಗಬಾರದು . ಆದರೆ ಇವತ್ತು ಮನೆಬಳಕೆಯ ವಸ್ತುಗಳಲ್ಲಿ ಸಕ್ಕರೆ ಮುಗಿದುಹೋಗಿದೆ. ಅತಿಥಿಗಳಿಗಾಗಿ ಇಟ್ಟಿರುವುದರಲ್ಲಿ ನಿನಗೆ ಚಹಾ ಮಾಡಿಕೊಟ್ಟರೆ ನೀನು ನಮ್ಮ ಮನೆಯ ಅತಿಥಿಯಾಗುತ್ತೀಯೇ. ನೀನು ನಮ್ಮ ಮನೆಯ ಮಗನಾಗಿರಬೇಕೋ ಅಥವಾ  ಅತಿಥಿಯಾಗಬೇಕೋ ? ನೀನೇ ಹೇಳು. ಅದಕ್ಕಾಗಿಯೇ ನೀನು ಚಹಾ ಮೋರಿಗೆ ಚೆಲ್ಲು ಎಂದೊಡನೆಯೇ  ನಾನು ಚೆಲ್ಲಿದೆ. ನನ್ನ ಮಗ ನನಗೆ ಮಗನಾಗಿಯೇ ಇರಬೇಕೆಂಬುದು ನನ್ನಿಚ್ಚೆ!!

ಘಟನೆ ಓದಿದಿರಾ?  ಇದಕ್ಕೆ ವಿವರಣೆ ಬೇಕಾ? ನಮ್ಮ ಭಾರತೀಯ ಗೃಹಿಣಿ ಹೇಗಿರಬೇಕೆಂಬುದಕ್ಕೆ ಕುಲಕರ್ಣಿಯವರ ತಾಯಿ ಆದರ್ಶವಲ್ಲವೇ?


                

ಸಂಪಾದಕೀಯ: ಮಡೆಸ್ನಾನದ ಜತೆಗೆ ಪಂಕ್ತಿಭೇದವೂ ನಿಷೇಧವಾಗಬೇಕಲ್ಲವೇ?

ಸಂಪಾದಕೀಯ: ಮಡೆಸ್ನಾನದ ಜತೆಗೆ ಪಂಕ್ತಿಭೇದವೂ ನಿಷೇಧವಾಗಬೇಕಲ್ಲವೇ?: ಮಡೆಸ್ನಾನದ ಬಗ್ಗೆ ಎದ್ದಿರುವ ವಿವಾದ ದೊಡ್ಡದಾಗಿ ಬೆಳೆಯುತ್ತಲೇ ಇದೆ. ಮಡೆಸ್ನಾನ ವಿರೋಧಿಸಿ ಪ್ರತಿಭಟನೆಗೆ ತೆರಳಿದ್ದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಎಂಬ ಸಂಘಟನೆಯ ಶ...