Pages

Tuesday, April 13, 2010

ವಿದ್ವಾಂಸರೇ, ಸಮಾಜದಲ್ಲಿ ಕೆಳಗೆ ಬಿದ್ದವರನ್ನು ಮೇಲೆತ್ತಿ

[ಚಿತ್ರ ಕೃಪೆ: ಅಂತರ್ಜಾಲ]

ನಾಳೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ದಿನಾಚರಣೆ.ಸಹಜವಾಗಿ ನಮ್ಮ ದೇಶದಲ್ಲಿನ ದಲಿತ ಸಮುದಾಯಕ್ಕೆ ಸೇರಿದ ಜನಾಂಗದವರು ಅತ್ಯಂತ ಉತ್ಸಾಹದಿಂದ ಅಂಬೇಡ್ಕರ್ ಜನ್ಮದಿನವನ್ನು ಆಚರಿಸುತ್ತಾರೆ. ದುರ್ದೈವವೆಂದರೆ ನಮ್ಮ ದೇಶದ ಸಂವಿದಾನ ರಚನೆಯಲ್ಲಿ ಹಿರಿಯ ಪಾತ್ರ ವಹಿಸಿದ ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಉಳಿದ ಜನಾಂಗದವರು ಉತ್ಸಾಹದಿಂದ ಪಾಲ್ಗೊಳ್ಳುವುದಿಲ್ಲ. ಅದೇನೇ ಇರಲಿ, ನಮ್ಮ ದೇಶದಲ್ಲಿ ವೇದ-ಉಪನಿಷತ್ತುಗಳು ಒಂದು ವರ್ಗದ ಸ್ವತ್ತೆಂಬಂತೆ ಬಿಂಬಿತವಾಗಿದ್ದು ಇಂದು ದಲಿತಸಮುದಾಯವು ವೇದವನ್ನಾಗಲೀ, ನಮ್ಮ ಪರಂಪರೆಯನ್ನಾಗಲೀ ವಿರೋಧಮಾಡುವುದೇ "ದಲಿತ ಚಳುವಳಿ" ಎಂಬಂತಾಗಿ ವೇದದ ಮತ್ತು ನಮ್ಮ ಪರಂಪರೆಯ ನಿಜವಾದ ಅರಿವಿನಿಂದ ಇಡೀ ಸಮಾಜವು ವಂಚಿತವಾಗುತ್ತಿದೆಯಲ್ಲಾ!! ಎಂಬ ನೋವು ನನ್ನಲ್ಲಿ ಕಾಡುತ್ತದೆ. ಈ ದಿಕ್ಕಿನಲ್ಲಿ ಚಿಂತನೆ ಮಾಡುತ್ತಾ ನನ್ನ ಕೆಲವು ವಿಚಾರಗಳನ್ನಿಡುವೆ.

* ಮನೆಯಲ್ಲಿ ಮಗುವೊಂದು ಕಕ್ಕಸು ಮಾಡಿಕೊಂಡು, ಅದರಮೇಲೆಯೇ ತನ್ನ ಕೈಗಳಿಂದ ರಪ ರಪ ಬಡಿಯುತ್ತದೆ.ಕೈಯೆಲ್ಲಾ ಹೊಲಸಾಗುತ್ತದೆ. ಅದೇ ಕೈಯನ್ನು ಮೈಮೇಲೆಲ್ಲಾ ಇಟ್ಟುಕೊಳ್ಳುತ್ತದೆ. ಅದರ ತಾಯಿ ಹತ್ತಿರದಲ್ಲಿಲ್ಲ. ನೋಡಿದವರೆಲ್ಲಾ ಅಸಹ್ಯಪಟ್ಟುಕೊಂಡು ಅದರ ತಾಯಿಯನ್ನಷ್ಟು ಬೈದುಕೊಳ್ಳುತ್ತಾರೆ. ತಾಯಿ ಬರುತ್ತಾಳೆ. ಮಗುವನ್ನು ನೋಡಿ " ಅಯ್ಯೋ ಕಂದ, ಮೈಯೆಲ್ಲಾ ಕಕ್ಕ ಮಾಡಿಕೊಂಡು ಬಿಟ್ಟೆಯಲ್ಲೋ" ಎಂದು ಮೃದುವಾಗಿ ಅದನ್ನು ಎತ್ತಿಕೊಂಡು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿ , ಬಟ್ಟೆ ಹಾಕಿ ಮುದ್ದಾಡುತ್ತಾಳೆ. ಹೀಗೆ ಒಂದು ಮಗುವನ್ನು ಶುಚಿಗೊಳಿಸುವ ತಾಯಿಯನ್ನು ನಾವು "ಮಾತೃ" ಎಂದು ಕರೆದು ಅವಳಿಗೆ ಅತ್ಯಂತ ಎತ್ತರದ ಸ್ಥಾನವನ್ನು ಕೊಡುತ್ತೇವೆ. ಕಾರಣ ಮಗುವಿನ ಮೇಲಿನ ತಾಯಿಯ ಮಮತೆ, ಪ್ರೀತಿ ಅವಳಿಗೆ ಸಮಾಜದಲ್ಲಿ ಒಂದು ಸ್ಥಾನವನ್ನೇ ಕಲ್ಪಿಸುತ್ತದೆ.
ಒಂದು ನಗರ. ಇಡೀ ದಿನವೆಲ್ಲಾ ಸಹಸ್ರಾರು ಜನರು ಮಾಡಿದ ಹೊಲಸೆಲ್ಲಾ ಬೆಳಗಾಗುವಾಗ ಮಾಯವಾಗಿರುತ್ತದೆ. ರಸ್ತೆಯಲ್ಲಿದ್ದ ಗಲೀಜೆಲ್ಲಾ ಕ್ಲೀನ್ ಆಗಿ ಕಸ ಕಡ್ದಿಗಳಿರುವುದಿಲ್ಲ. ವಾಸನೆ ಹೊಡೆಯುತ್ತಿದ್ದ ಚಿರಂಡಿ ಮತ್ತೆ ಮತ್ತೆ ಶುಚಿಯಾಗುತ್ತದೆ. ಇದನ್ನೆಲ್ಲಾ ಮಾಡುವವರಾರು? ಅವನಿಗೆ ನಾಮಕರಣ ವಾಗಿದೆ " ಜಾಡಮಾಲಿ". ಸಾಮಾನ್ಯವಾಗಿ ಅತ್ಯಂತ ಕಳಪೆ ಕೆಲಸವೆಂದು ಸಾಮಾನ್ಯರು ಭಾವಿಸುವ ಕೆಲಸ [ ನನ್ನ ದೃಷ್ಟಿಯಲ್ಲಿ ಅದೂಂದು ಯಜ್ಞ] ಜಾಡಮಾಲಿಗೆ ನಮ್ಮ ಸಮಾಜವು ಕೊಟ್ಟಿರುವ ಸ್ಥಾನ? ಅತ್ಯಂತ ಕನಿಷ್ಟ.
ನೋಡಿ ಒಂದು ಮಗುವನ್ನು ಶುಚಿಗೊಳಿಸುವ ತಾಯಿಯು ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನವನ್ನು ಹೊಂದಿದ್ದರೆ, ಸಹಸ್ರಾರು ಜನರ ಹೊಲಸನ್ನು ಶುಚಿಗೊಳಿಸುವ ಜಾಡಮಾಲಿಗೆ ಅತ್ಯಂತ ಕನಿಷ್ಟತಮ ಸ್ಥಾನ!!
ಯೋಚಿಸಿ ನೋಡಿ, ನಾಲ್ಕು ದಿನ ನಿಮ್ಮ ರಸ್ತೆಯಲ್ಲಿ ಜಾಡಮಾಲಿ ಬಾರದಿದ್ದರೆ ನಿಮ್ಮ ನಗರದ ಸ್ಥಿತಿ ಏನಾದೀತು? ಕೊಳೆತು ನಾರುತ್ತಾ ಜನರೆಲ್ಲಾ ಹಿಡಿ ಶಾಪವನ್ನು ಹಾಕುತ್ತಾರಲ್ಲವೇ? ಹಾಗಾದರೆ ಜಾಡಮಾಲಿಯ ಸ್ಥಾನದ ಅರಿವು ಈಗಲಾದರೂ ಆದೀತೇ?

* ಬೆಂಗಳೂರಿನ ವೇದಾಧ್ಯಾಯೀ ಸುಧಾಕರ ಶರ್ಮರು ಕಳೆದ ವರ್ಷ ಹಾಸನಕ್ಕೆ ಬಂದಿದ್ದರು. ಕಾರೊಂದರಲ್ಲಿ ನಾವು ಮೂರ್ನಾಲ್ಕು ಜನ ಪ್ರಯಾಣಿಸುತ್ತಿದ್ದೆವು. ನಾನು ಸಹಜವಾಗಿ ಶರ್ಮರನ್ನು ಕೇಳಿದೆ" ಶರ್ಮರೇ, ಎಲ್ಲರಿಗಾಗಿ ವೇದ ವೆಂಬ ಪ್ರಚಾರ ಮಾಡುತ್ತಿದ್ದೀರಲ್ಲಾ, ನಿಮ್ಮೊಡನೆ ಬ್ರಾಹ್ಮಣೇತರರು ವೇದ ಪ್ರಚಾರದಲ್ಲಿ ಕೈ ಜೋಡಿಸಿದ್ದಾರೆಯೇ?
ಶರ್ಮರು ಹೇಳಿದರು" ಬೇರೆಲ್ಲೂ ಹೋಗಬೇಡಿ, ನಿಮ್ಮ ಪಕ್ಕದಲ್ಲೇ ಕುಳಿತಿರುವ ನನ್ನ ಮಿತ್ರರ ಬಾಯಿಂದ ವೇದಮಂತ್ರವನ್ನು ಕೇಳಿದಿರಲ್ಲವೇ? ನನಗಿಂತ ಹೆಚ್ಚಿನ ವಿದ್ವಾಂಸರಾದ ಇವರ ಜನ್ಮ ಯಾವ ಜಾತಿಯಲ್ಲಾಗಿದೆ ಗೊತ್ತಾ? ಈ ಸಮಾಜದಲ್ಲಿ ’ ಹೊಲೆಯರೆಂದು" ಯಾರನ್ನು ಕರೆಯುತ್ತಾರೆ, ಆ ಜಾತಿಯಲ್ಲಿ ಜನ್ಮ ತಾಳಿದ ಮಹಾನುಭಾವರಿವರು."
ಪ್ರಶ್ನೆ ಕೇಳಿ ತಪ್ಪು ಮಾಡಿದೆನೇ? ಎನಿಸಿತ್ತು

* ಇನ್ನು ವೇದದಲ್ಲಿ ನ ಎರಡು ಶ್ಲೋಕಗಳನ್ನು ನೋಡೋಣ...

ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮ: ಪೂರ್ವಜಾಯ
ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಫಾಯ
ಚ ನಮೋ ಜಘನ್ಯಾಯ ಬುಧ್ನ್ಯಾಯ ಚ||
[ಯಜು: ೧೬-೩೨]
ಅರ್ಥ:
ಜ್ಯೇಷ್ಠಾಯ = ಗುಣಕರ್ಮ ಸ್ವಭಾವಗಳಿಂದ ದೊಡ್ಡವನಾದವನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಕನಿಷ್ಠಾಯ= ಗುಣಕರ್ಮ ಸ್ವಭಾವಗಳಿಂದ ಸಣ್ಣವನಾದವನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಪೂರ್ವಜಾಯ = ವಯಸ್ಸಿನಲ್ಲಿ ಹಿರಿಯನಿಗೆ

ನಮ: = ನಮಸ್ಕರಿಸುವೆ
ಚ = ಹಾಗೂ
ಅಪರಜಾಯ= ವಯಸ್ಸಿನಲ್ಲಿ ಕಿರಿಯನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಮಧ್ಯಮಾಯ= ನಡು ವಯಸ್ಕನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಅಪಗಲ್ಫಾಯ = ಅಶಕ್ತನಿಗೆ
ನಮ: = ನಮಸ್ಕರಿಸುವೆ
ಜಘನ್ಯಾಯ=ಹೀನಸ್ಥಿತಿಯಲ್ಲಿರುವವನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಬುಧ್ನ್ಯಾಯ= ವಿಶಾಲ ಮನಸ್ಕನಿಗೂ

ನಮ: = ನಮಸ್ಕರಿಸುವೆ

ಅಂದರೆ ದೊಡ್ದವ, ಚಿಕ್ಕವ, ಹಿರಿಯ-ಕಿರಿಯ, ಅಶಕ್ತ, ಶಕ್ತ, ಅತ್ಯಂತ ಹೀನ ಸ್ಥಿತಿಯಲ್ಲಿರುವವ, ಅತ್ಯಂತ ವಿಶಾಲ ಮನೋಭಾವದ, ಎಲ್ಲರಿಗೂ ನಮಸ್ಕಾರ.ನಮಸ್ಕರಿಸಲು ಭೇಧವೆಲ್ಲಿಂದ ಬಂತು? ಎಲ್ಲರಿಗೂ ಸಮಾನವಾಗಿ ಕಾಣಿರೆಂಬುದೇ ವೇದದಕರೆ.

ಇನ್ನೊಂದು ವೇದ ಮಂತ್ರವನ್ನು ನೋಡೋಣ.....

* ಉತದೇವಾ ಅವಹಿತಂ ದೇವಾ ಉನ್ನಯಥಾ ಪುನ:| ಉತಾಗಶ್ಚಕ್ರುಷಂ ದೇವಾ ದೇವಾ ಜೀವಯಥಾ ಪುನ: ||
ಋಗ್ವೇದ ೧೦.೧೩೫.೧

ದೇವಾ: ದೇವಾ: = ಜ್ಞಾನಜ್ಯೋತಿಯಿಂದ ಬೆಳಗುವ ಉದಾರ ಹೃದಯರೇ!
ಅವಹಿತಂ= ಕೆಳಗೆ ಬಿದ್ದವನನ್ನು
ಉತ= ನಿಶ್ಚಯವಾಗಿ
ಪುನ: ಉನ್ನಯತಾ=ಮತ್ತೆ ಮೇಲಕ್ಕೆತ್ತಿರಿ


ದೇವಾ: ದೇವಾ: = ನಿತ್ಯ ಜಾಗರೂಕರಾದ ವಿದ್ವಾಂಸರೇ!
ಆಗ: ಚಕ್ರುಷಂ= ಪಾಪ ಕರ್ಮ ನಿರತನಲ್ಲಿ
ಪುನ:=ಮತ್ತೆ
ಜೀವಯಥಾ= ನವಜೀವನವನ್ನು ತುಂಬಿರಿ[ಪಾಪ ಮಾಡಿ ಸತ್ತಂತೆ ಇರುವವನಲ್ಲಿ ಹೊಸ ಚೈತನ್ಯವನ್ನು ತುಂಬಿ, ಅವನಿಗೆ ನವ ಜೀವನವನ್ನು ಕೊಡಿ].

ವೇದದ ಕರೆ ಹೇಗಿದೆ, ನೋಡಿ,
ಎಲೈ ವಿದ್ವಾಂಸರೇ, ಸಮಾಜದಲ್ಲಿ ಕೆಳಗೆ ಬಿದ್ದವರನ್ನು ಮೇಲೆತ್ತಿ, ಪಾಪಮಾಡಿ ಸತ್ತಂತೆ ಇರುವವನಲ್ಲಿ ನವ ಚೈತನ್ಯವನ್ನು ತುಂಬಿ ಹೊಸ ಜೀವನವನ್ನು ಕೊಡಿ.
ವೇದದ ಕರೆ ಸಮಾಜದಲ್ಲಿ ಎತ್ತರದಲ್ಲಿರುವವರ ಕಿವಿಗೆ ಮುಟ್ಟೀತೇ?

[ಕೃಪೆ: ವೇದ ಮಂತ್ರಗಳು: ಪಂ. ಸುಧಾಕರ ಚತುರ್ವೇದಿಯವರ " ಜನ್ಮಗತ ಜಾತಿ ಭೇದ ವೇದ ವಿರೋಧಿ" ಪುಸ್ತಕದಿಂದ ]

ಪಾತ್ರಾಪಾತ್ರವರಿತು ದಾನಮಾಡು

ಶಕ್ತ: ಪರಜನೇ ಜಾತಾ ಸ್ವಜನೇ ದು:ಖ ಜೀವಿನಿ|
ಮಧ್ವಾಪಾತೋ ವಿಷಾ ಸ್ವಾದ: ಸ ಧರ್ಮಪ್ರತಿರೂಪಕ:||
- ಮನು ಸ್ಮೃತಿ

ತನ್ನವರು ಕಷ್ಟದಿಂದ ಜೀವಿಸುತ್ತಿರುವಾಗ ,ಅವರನ್ನು ಉಪೇಕ್ಷಿಸಿ ಪರರಿಗೆ ಕೊಡುವುದು ಧರ್ಮವಲ್ಲ. ಅದು ಧರ್ಮದಂತೆ ಕಾಣುತ್ತದೆಯಷ್ಟೆ. ನೋಡಲು ಜೇನಿನಂತೆ ಕಂಡರೂ ಅದರ ರುಚಿ ಕಹಿಯೇ.
ದಾನಮಾಡಬೇಕು ನಿಜ. ಆದರೆ ಯಾರಿಗೆ ದಾನ ಮಾಡಬೇಕು? ಪಾತ್ರಾಪಾತ್ರವರಿತು ದಾನಮಾಡಬೇಕಲ್ಲವೇ? ಅಪಾತ್ರನಿಗೆ ದಾನಮಾಡುವುದು ಧರ್ಮವಲ್ಲ, ಬದಲಿಗೆ ಅದು ವ್ಯರ್ಥವೆನ್ನುತ್ತದೆ ವಿದುರ ನೀತಿ.
ದಾನವನ್ನು ಸ್ವೀಕರಿಸಲು ಹಲವಾರು ಪಾತ್ರಗಳಿದ್ದಾಗ ಸ್ವಜನರಿಗೆ ಪ್ರಥಮಾರ್ಹತೆ ಎನ್ನುತ್ತದೆ ಮನುಸ್ಮೃತಿ. ಸ್ವಜನರು ಯಾರು? ತನ್ನ ಹೆಂಡತಿ-ಮಕ್ಕಳು, ವೃದ್ಧರಾದ ತಂದೆತಾಯಿ,ತನ್ನನ್ನು ನಂಬಿಕೊಂಡಿರುವ ಅಶಕ್ತ ಬಂಧುವರ್ಗ.ಇವರನ್ನು ಉಪೇಕ್ಷಿಸಿ ಹೆಸರಿಗಾಗಿ,ಪ್ರಚಾರಕ್ಕಾಗಿ ಅನ್ಯರಿಗೆ ದಾನಮಾಡುವುದು ಅಧರ್ಮವೆನಿಸುತ್ತದೆ. ಈಬಗೆಯ ಹಲವು ನಿದರ್ಶನಗಳನ್ನು ನಾವು ಇಂದಿನ ಸಮಾಜದಲ್ಲಿ ಕಾಣಬಹುದಾಗಿದೆ. ಅಣ್ಣನಮನೆಯಲ್ಲೋ ,ತಮ್ಮನಮನೆಯಲ್ಲೋ ಬಡತನದಿಂದ ನರಳುತ್ತಿದ್ದು ಅವರ ದುರ್ದೈವಕ್ಕೆ ರೋಗ ಪೀಡಿತರೂ ಆಗಿ ಹಾಸಿಗೆ ಹಿಡಿದಿರುವ ಸಂದರ್ಭದಲ್ಲಿ ಅವರನ್ನು ಉಪೇಕ್ಷಿಸಿ ಈ ವ್ಯಕ್ತಿಯು ಯಾವುದೋ ಸಮಾರಂಭವನ್ನಾಚರಿಸುತ್ತಾ ಊರಿನವರನ್ನೆಲ್ಲಾ ಕರೆದು ಸತ್ಕರಿಸಿದರೆ ಯಾವ ದೇವರು ಮೆಚ್ಚುತ್ತಾನಲ್ಲವೇ?

Monday, April 12, 2010

ಬಡವನಾರ್?

ಬಡವನಾರ್?
ಮಡದಿಯೊಲವಿನ ಸವಿಯನರಿಯದವನು|
ಹುಡುಗರಾಟದಿ ಬೆರೆತು ನಗಲರಿಯದವನು|
ಉಡುರಾಜನೋಲಗದಿ ಕುಳಿತು ಮೈಮರೆಯದವನು|
ಬಡಮನಸೆ ಬಡತನವೊ ಮರುಳ ಮುನಿಯ||

ಡಿ ವಿ ಜಿ ಯವರ ಚಿಂತನೆ ಎಂದರೆ ಅದ್ಭುತ! ಸಿರಿವಂತನಾರು? ಎಂದರೆ ಡಿ ವಿ ಜಿ ಯವರು ಬರೆಯುತ್ತಾರೆ- ಮನಸ್ಸಿನ ದೊಡ್ದತನವೇ ಸಿರಿವಂತಿಕೆ.ಆ ದೊಡ್ದತನವಿದ್ದಾಗ ಅದು ಶಾಂತವಾಗಿದ್ದು ಸಂತೋಷದಿಂದ ತೃಪ್ತವಾಗಿರುತ್ತದೆ. ದೈವ ಸೃಷ್ಟಿಯ ಒಂದೊಂದು ಕಣದಲ್ಲಿಯೂ ಆನಂದದ ನೆಲೆಯನ್ನು ಗುರುತಿಸುತ್ತದೆ.
ಬಡವನಾರು? ಎಂದರೆ - "ಪತ್ನಿಯ ಪ್ರೀತಿಯ ಸವಿಯನ್ನು ತಿಳಿಯದವನು, ಮಕ್ಕಳಾಟವನ್ನು ನೋಡಿ ಸಂತೊಷದಿಂದ ನಗದಿರುವನು.ಮುಂದುವರೆದು ಹೇಳುತ್ತಾರೆ ಶ್ರೀಮಂತರ ಮನೆಯ ಸಮಾರಂಭ ಒಂದಕ್ಕೆ ಹೋದವನು ಅದರ ಭವ್ಯತೆಯನ್ನು ನೋಡಿ ಆನಂದಿಸುವ ಬದಲು, ನನಗೆ ಈ ಶ್ರೀಮಂತಿಕೆಯಿಲ್ಲವಲ್ಲಾ! ಎಂದು ಅಸೂಯೆ ಪಡುವವನು. ಯಾರಲ್ಲಿ ಮನಸ್ಸು ಬಡವಾಗಿದೆ ಅವನೇ ಬಡವ."

ಧನ-ದಾನ-ಧನ್ಯ

ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ|
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ||
-ನೀತಿ ಶತಕ

ದಾನ, ಭೋಗ, ನಾಶ- ಎಂದು ಹಣಕ್ಕೆ ಮೂರು ಗತಿಗಳುಂಟು. ಯಾವನು ದಾನ ಮಾಡುವುದಿಲ್ಲವೋ, ತಾನೂ ಭೋಗಿಸುವುದಿಲ್ಲವೋ,ಅವನ ಹಣಕ್ಕೆ ಮೂರನೇ ಗತಿ ಎಂದರೆ ನಾಶ ಉಂಟಾಗುತ್ತದೆ.

ಧನ ಶಬ್ಧದಿಂದ ಧಾನ್ಯ ಶಬ್ಧ ಹುಟ್ಟಿದೆ. ಒಂದು ಕಾಲದಲ್ಲಿ ಧಾನ್ಯವೇ ಧನವೆನಿಸಿತ್ತು. ಧಾನ್ಯವನ್ನು ಬಹುಕಾಲ ಕೂಡಿಹಾಕಿದರೆ ನಾಶವಾಗುತ್ತದೆ.ಅದರ ವಿನಿಯೋಗ ಆಗುತ್ತಲೇ ಇರಬೇಕು. ತಿನ್ನಬೇಕು ಅಥವಾ ತಿನ್ನಲು ಇಲ್ಲದವರಿಗೆ ದಾನ ಕೊಡಬೇಕು.ಹೀಗೆ ಮಾಡುವವನೇ ಧನ್ಯ.
ದ್ರವ್ಯ ಯಜ್ಞವು ಹಲವು
ಯಜ್ಞಗಳಲ್ಲಿ ಒಂದು. " ಯಜ: ದೇವಪೂಜಾ ಸಂಗತಿಕರಣ ದಾನೇಷು" ಎಂಬುದು ಧಾತ್ವರ್ಥ. ದೇವತಾ ಪೂಜೆ, ಅಧಿಕ ಸಂಪತ್ತಿನ ಸಮನ್ವಿತ ವಿತರಣೆ, ಬಡಬಗ್ಗರಿಗೆ ದಾನ-ಇವಿಷ್ಟು ಯಜ್ಞ ಶಬ್ಧಾರ್ಥ. ಅಗತ್ಯವಿದ್ದವರಿಗೆ ದಾನಮಾಡುವುದೇ ದ್ರವ್ಯಯಜ್ಞವು. ಗಾಳಿ ಶುದ್ಧವಾಗಿರಬೇಕಾದರೆ ಬೀಸುತ್ತಿರಬೇಕು, ನೀರು ಶುದ್ಧವಾಗಿರಬೇಕಾದರೆ ಹರಿಯುತ್ತಿರಬೇಕು, ಹಣವು ಉಪಯೋಗವಾಗುತ್ತಿದ್ದರೆ ಮಾತ್ರ ಅದಕ್ಕೆ ಬೆಲೆ.
ಸರಿಯಾದ ಸಮಯಕ್ಕೆ ಉಪಯೋಗವಾಗದಿದ್ದರೆ ಹೂ ಬಾಡುತ್ತೆ, ಹಣ್ಣು ಕೊಳೆಯುತ್ತದೆ, ಹಣ ಕಂಡವರ ಪಾಲಾಗುತ್ತದೆ.



ಪ್ರಜ್ಞೆ--ವೇದದ ಸ೦ದೇಶ. (ಭಾಗ-೧)


[ಡಾ|| ಗೋಪಲಕೃಷ್ಣನ್ ರವರ ಉಪನ್ಯಾಸದ ಅನುವಾದ]

ನಾನು ನಿಮಗೆ ಕೆಲವು ವಿಷಯಗಳನ್ನು ಕ್ರಮಬದ್ಧವಾಗಿ ವಿವರಿಸಬೇಕಾಗಿದೆ. ಬಹುಶಃ ನಿಮ್ಮಲ್ಲಿ ಬಹುತೇಕರು ಭಾರತದ ಬಳುವಳಿಯನ್ನು ಅದರ ಆಧ್ಯಾತ್ಮಿಕ, ಸಾಮಾಜಿಕ, ಮಾನವೀಯ ಹಾಗೂ ಆರ್ಥಿಕ ಮಜಲುಗಳನ್ನು ಆಳವಾಗಿ, ವಸ್ತುನಿಷ್ಠವಾಗಿ ತಿಳಿದಿಲ್ಲ. ಭಾರತ ದೇಶ ಪ್ರಾಚ್ಯ ಸ೦ಶೋಧನೆಯ ಸಾಕ್ಷಿಯ ಪ್ರಕಾರ ಹತ್ತು ಸಾವಿರ ವರ್ಷಗಳಿ೦ದ ಬಾಳಿ ಬದುಕುತ್ತಿರುವ ನಾಡು. ಈ ದೇಶದ ಇತಿಹಾಸ ಹತ್ತು ಸಾವಿರದಷ್ಟು ಪುರಾತನವಾದುದು. ಈ ಪ್ರಪ೦ಚದಲ್ಲಿ ಒ೦ಭತ್ತು ಪ್ರಧಾನ ಮತಗಳಿವೆ. ಭಾರತದಲ್ಲಿ ಯಾವುದೇ ಒ೦ದು ಪ್ರಧಾನ ಮತವಿಲ್ಲ. ಆದರೆ ಇಲ್ಲಿ ಧರ್ಮವಿದೆ. ಆ ಧರ್ಮವೆ೦ದರೆ ಬದುಕುವ ಮಾರ್ಗ, ಜೀವನದ ಕ್ರಮ ಪದ್ಧತಿ. ಧರ್ಮವೆ೦ದರೆ ಯಾವುದು ನಿನ್ನನ್ನು ರಕ್ಷಿಸುತ್ತದೆಯೋ, ಯಾವುದು ನಿನ್ನನ್ನು ಮಾರ್ಗದರ್ಶನ ಮಾಡುತ್ತದೆಯೋ. ಯಾವುದು ನಿನಗೆ ಆಸರೆಯಾಗುವುದೋ ಅದು.
ಅದೇ ಹಿ೦ದೂ ಧರ್ಮ. ಸನಾತನ ಧರ್ಮ. ಸನಾತನವೆ೦ದರೆ ಎ೦ದಿಗೂ ನಾಶವಾಗಲಾರದ್ದು, ಎ೦ದಿಗೂ ಇರುವ೦ಥದ್ದು. ಆಯುರ್ವೇದವೂ ಒ೦ದು ಜೀವನ ಪದ್ಧತಿ. ಯೋಗವೂ ಒ೦ದು ಜೀವನ ಪದ್ಧತಿ. ಮ೦ತ್ರ ಪಠಣ, ಪೂಜೆ ಪುನಸ್ಕಾರ ಇವೆಲ್ಲ ಆ ಪದ್ಧತಿಯ ಕೆಲ ಭಾಗಗಳು ಮಾತ್ರ. ಅವು ಸರ್ವಸ್ವವಲ್ಲ.
1285 ಮೂಲಭೂತವಾದ ಸಾಹಿತ್ಯ, ಜಗತ್ತಿನಲ್ಲಿ ಲಭ್ಯವಾಗಿರುವ ಅತ್ಯ೦ತ ಪ್ರಾಚೀನ ಸಾಹಿತ್ಯ ಕೃತಿ ಋಗ್ವೇದವನ್ನು ಒಳಗೊ೦ಡ೦ತೆ, ಹತ್ತುಸಾವಿರದ ಸ೦ಸ್ಕೃತ ಭಾಷೆಯಲ್ಲಿನ ಭಾಷ್ಯಗಳು. ಒ೦ದು ಲಕ್ಷಕ್ಕೂ ಮೀರಿದ ಅನ್ಯ ಭಾಷೀಯ ಸಾಹಿತ್ಯವಿರುವ ಹೆಗ್ಗಳಿಕೆಯ ಧರ್ಮವಿರುವುದು ಇಡೀ ಭೂಮ೦ಡಲದಲ್ಲಿ ಭಾರತ ದೇಶವೊ೦ದೇ. ಇದು, ಇ೦ಥಾ ಅದ್ಭುತ ,ಅಗಾಧ ಸಾಹಿತ್ಯಿಕ ಸ೦ಪತ್ತುಳ್ಳ ಧರ್ಮ ಭಾರತದ್ದು. ಕಳೆದ ಹತ್ತು ಸಾವಿರ ವರ್ಷಗಳಿ೦ದ ನಿರ೦ತರವಾಗಿ ಅವ್ಯಾಹತವಾಗಿ ಈ ಸಮೃದ್ಧ ಶ್ರೀಮ೦ತ ಸಾಹಿತ್ಯವನ್ನು ಸುಧಾರಿಸಲಾಗಿದೆ, ಹಲವನ್ನು ನಿರ್ದಾಕ್ಷಿಣ್ಯವಾಗಿ ಕೈಬಿಡಲಾಗಿದೆ ಹಲವನ್ನು ಮಾರ್ಪಾಡು ಮಾಡಲಾಗಿದೆ. ಹಲವಾರು ವಿಷಯಗಳನ್ನು ಸರಿಪಡಿಸಲಾಗಿದೆ. ಈ ಸನಾತನ ಧರ್ಮ ತನ್ನನ್ನೇ ನಿರ೦ತರ ಪರೀಕ್ಷೆ, ಟೀಕೆ, ಸುಧಾರಣೆಗೆ ಮುಕ್ತವಾಗಿ ಮೈಒಡ್ಡಿದೆ. ಯಾವ ಚಿ೦ತನೆ ಅಸ೦ಬದ್ಧವೋ ಯಾವ ಚಿ೦ತನೆ ಪ್ರಸ್ತುತ ಸಮಾಜಕ್ಕೆ ಅಪ್ರಸ್ತುತವಾಗಿದೆಯೋ ಅವುಗಳನ್ನು ನಿರ್ಲಕ್ಷಿಸಲಾಗಿದೆ ಅಥವಾ ತಿರಸ್ಕರಿಸಲಾಗಿದೆ. ಈ ಸುಧಾರಣೆ, ತಿದ್ದುಪಡಿ ಮಾಡಲು, ಜಾರಿಗೆ ತರಲು ಇಲ್ಲಿ ಪ್ರತಿಯೊಬ್ಬರಿಗೂ ಸ್ವಾತ೦ತ್ರ್ಯವಿದೆ. ಇದು ಯಾವುದೋ ಸಾಧು ಸನ್ಯಾಸಿ ಸ೦ತರ ಹಕ್ಕು ಮಾತ್ರವಲ್ಲ. ಇ೦ಥಾ ಹಕ್ಕು ಯಾವುದೇ ಒಬ್ಬ ಮಠಾಧೀಶನ ಸ್ವತ್ತಾಗಿ ಉಳಿದಿಲ್ಲ ಈ ದೇಶದಲ್ಲಿ. ಇಲ್ಲಿ ಯಾರೊಬ್ಬನೇ ನನ್ನ ಮತವೇ ಶ್ರೇಷ್ಠ.. ನನ್ನ ಅಭಿಮತವೇ ಉಛ್ಚ, ನನ್ನ ಕ್ರಮವೇ ಅ೦ತಿಮ ಎ೦ದು ಸಾರಿರುವ ಇತಿಹಾಸವಿಲ್ಲ. ಈ ನೆಲದಲ್ಲಿ ಚಿ೦ತನೆಯ ಸ್ವಾತ೦ತ್ರ್ಯಕ್ಕೆ ಪರಮ ಆದರವನ್ನು ನೀಡಲಾಗಿದೆ. ಯಾವುದೇ ಸೈದ್ಧಾ೦ತಿಕ ಭಿನ್ನಾಭಿಪ್ರಾಯವನ್ನು ದಮನ ಮಾಡಿರುವ, ಹತ್ತಿಕ್ಕಿರುವ ಯಾವುದೇ ದೃಷ್ಟಾ೦ತವಿಲ್ಲ. ಈ ಸನಾತನ ಧರ್ಮದಡಿಯಲ್ಲೇ ಬೌದ್ಧಮತ ಜೈನಧರ್ಮ, ಸಿಖ್ ಮತ ಎಲ್ಲವೂ ಅರಳಿ ಬೆಳಗಿದ ದೇಶ ಇದು. ಅವರ್ಯಾರನ್ನೂ ಯಾರೂ ತಡೆದಿಲ್ಲ. ಯಾರೂ ಕ೦ಟಕಪ್ರಾಯರಾಗಿಲ್ಲ. ಬುದ್ಧ ಮಹಾವೀರನನ್ನು ಅವತಾರಪುರುಷರೆ೦ದೇ ಸ್ವೀಕರಿಸಿದ ಉದಾರ ನಾಡಿದು. ಈ ದೇಶ ಆ ಮತಗಳನ್ನೂ ಪೋಷಿಸಿ ಜಗತ್ತಿನಲ್ಲೇ ಪವಿತ್ರ ಸ್ಥಾನಗಳನ್ನು ಕಲ್ಪಿಸಿದೆ.
ಜ್ಞಾನ ಈ ನೆಲದಲ್ಲಿ ನಿರ೦ತರ ವಿಕಾಸವಾಗುತ್ತಲೇ ಇದೆ. ಆದರೆ ಇಲ್ಲಿ ಪ್ರಾಚೀನದೊ೦ದಿಗೆ ಆಧುನಿಕತೆ. ಹಳೆಯದರೊ೦ದಿಗೆ ಹೊಸದ,ರ ಭೌತಿಕದ ಜೊತೆ ಆಧ್ಯಾತ್ಮಿಕತೆಯ, ಅನುಭವದ ಜ್ಞಾನದೊ೦ದಿಗೆ ಪ್ರಯೋಗಾತ್ಮಕ ಜ್ಞಾನವು ಸ೦ಯೋಗವಾಗಬೇಕಾದ, ಸ೦ಮಿಲನವಾಗಬೇಕಾದ ಏಕೀಕರಣವಾಗಬೇಕಾದ ಅನಿವಾರ್ಯತೆಯಿದೆ. ಇಲ್ಲಿ ವಿವೇಕಾನ೦ದರ ನುಡಿಗಳನು ಉಲ್ಲೇಖಿಸಲೇಬೇಕು. ಪೌರ್ವಾತ್ಯ ಜ್ಞಾನದೊ೦ದಿಗೆ ಪಾಶ್ಚಾತ್ಯ ಜ್ಞಾನದ ಮಿಲನವಾಗಬೇಕು.
ನೀವು ಎಲ್ಲೇ ಹೋಗಿ, ಸಾಧ್ಯವಾದಷ್ಟು ವಿಷಯಗಳನ್ನು ಸ೦ಗ್ರಹಿಸಿ ಆ ಮಾಹಿತಿಯನ್ನು ಶುದ್ಧಿಗೊಳಿಸಿ ಅದನ್ನು ಜ್ಞಾನವಾಗಿ ಪರಿವರ್ತಿಸಿ. ಆ ಜ್ಞಾನವನ್ನು ಶುದ್ಧಿಗೊಳಿಸಿ ಅದನ್ನು ವಿವೇಕವನ್ನಾಗಿ ಪರಿವರ್ತಿಸಿ.ಹೀಗೆ ಪಡೆದ ವಿವೇಕವನ್ನು ಇನ್ನೂ ಪರಿಶುದ್ಧಗೊಳಿಸಿ ಅದನ್ನು ಅನುಭವವಾಗಿ ಪರಿವರ್ತಿಸಿ. ಈ ಎಲ್ಲ ಅನುಭವಗಳ ಸಮಗ್ರತೆಯೇ ನಿನ್ನ ಜೀವನ. ಅದೇ ನಿನ್ನ ಪರಿಪೂರ್ಣ ಬದುಕು. ಜೀವನಕ್ಕೆ ಅಣಿಯಾಗುವುದು ಜೀವನವಲ್ಲ. ಜೀವಿಸುವುದನ್ನು ಅನುಭವಿಸುವುದು ಜೀವನ. ಯೋಗ ಕಲಿಯುವುದು ಯೋಗವಲ್ಲ. ಯೋಗದ ಅನುಭವವನ್ನು ಅನುಭವಿಸುವುದು ಯೋಗ. ಆಯುರ್ವೇದವನ್ನು ಅನುಭವಿಸುವುದು ಆಯುರ್ವೇದ. ಕಲಿಯುವುದಲ್ಲ.

ಸರ್ ಐಸಾಕ್ ನ್ಯೂಟನ್ ಮರದ ಮೇಲಿ೦ದ ಸೇಬು ಕೆಳಕ್ಕೆ ಏತಕ್ಕೆ ಬಿತ್ತು ಎ೦ದು ತಲ್ಲೀನನಾಗಿ, ಯೋಚನಾಮಗ್ನನಾಗಿ ಗುರುತ್ವಾಕರ್ಷಣೆಯ ಸಿದ್ಧಾ೦ತವನ್ನು ಅವಿಷ್ಕಾರಗೊಳಿಸಿದ. ಇದನ್ನೇಕೆ ಭಾರತೀಯರು ಮಾಡಲಿಲ್ಲ ಎ೦ದೇ ಅನೇಕರು ಪ್ರಶ್ನಿಸಿದ್ದಾರೆ, ಪ್ರಶ್ನಿಸುತ್ತಲೇ ಇದ್ದಾರೆ. ಆದರೆ ಇಲ್ಲಿ ಒ೦ದು ವಿಷಯವನ್ನು ನಾವು ಮರೆಯುವ೦ತಿಲ್ಲ. ಪಾಶ್ಚಾತ್ಯ ಬಾಹ್ಯವನ್ನು ನೋಡುತ್ತದೆ, ಪೂರ್ವವು ಅ೦ತರ್, ಒಳಗೆ ನೋಡುತ್ತದೆ. ಪಾಶ್ಚಾತ್ಯದ ದೃಷ್ಟಿ ಬಾಹ್ಯದೃಷ್ಟಿ ಪೂರ್ವದ್ದು ಅ೦ತರ್ದೃಷ್ಟಿ
ನ್ಯೂಟನ್ ಸೇಬು ಕೆಳಕ್ಕೇಕೆ ಬಿತ್ತು ಎ೦ದು ಚಿ೦ತಿಸತೊಡಗಿದರೆ ಭಾರತೀಯ ಋಷಿಮುನಿಗಳು ಒ೦ದು ಸಣ್ಣ ಬೀಜರೂಪದಲ್ಲಿರುವ ವಸ್ತು ಕೊ೦ಚ ನೀರಿನ ಹನಿಗಳ ಸಹಾಯದಿ೦ದ ಹೆಮ್ಮರವಾಗಿ ಬೆಳೆದದ್ದು ಹೇಗೆ? ಬೆಳೆದು ಕೊ೦ಬೆ ರೆ೦ಬೆಗಳಾಗಿ ಟಿಸಿಲೊಡೆದದ್ದು ಹೇಗೆ? ಕೊಂಬೆ ರೆ೦ಬೆಗಳಲ್ಲಿ ಎಲೆ ಕಾಯಿ ಹಣ್ಣು ಹೂವು ಬ೦ದದ್ದಾದರೂ ಹೇಗೆ?. ಆ ಹಣ್ಣಿಗೆ ಸಿಹಿ ಬ೦ದದ್ದು ಹೇಗೆ? ಎ೦ಬುದರ ಅನ್ವೇಷಣೆಯ ಜಿಜ್ಞಾಸೆಯಲ್ಲಿ ತೊಡಗಿದ್ದರು. ಅವರ ಅನ್ವೇಷಣೆ ಅ೦ತರ್ಮುಖಿಯಾದದ್ದು. ನ್ಯೂಟನ್ ಬಹಿರ್ಮುಖಿಯಾದದ್ದು.

ನಿಮ್ಮ ಆತ್ಮೀಯ
ಜ್ಞಾನದೇವ್


--
Dr.B.G.Gnanadev
Molakalmuru-577535
Chitradurga Dist
Karnataka state
India

Sunday, April 11, 2010

ಅಮೃತರೂಪಿ ನೀರನ್ನು ಕಾಪಾಡಿ


ಅಪ್ಸ್ವ[ಅ]೦ ತರಮೃತಮಪ್ಸು ಭೇಷಜಮಪಾಮುತ
ಪ್ರಶಸ್ತಯೇ| ದೇವಾ ಭವತ ವಾಜಿನ: || ೧-೨೩-೧೯

ಅರ್ಥ:
ಮಾನವರೇ ನೀರಿನಲ್ಲಿ ಅಮೃತವಿದೆ.ನೀರಿನಲ್ಲಿ ಔಷಧಿಗಳಿವೆ. ನೀರು ಅತ್ಯಂತ ಪ್ರಶಸ್ತವಾದುದು. ಇದನ್ನು ಕಾಪಾಡಿ.ಈ ನೀರು ಮಾನವರನ್ನು ದೈವತ್ವದತ್ತ ಕೊಂಡೊಯ್ಯುತ್ತದೆ.ದೇವತೆಗಳ ಸುಖವನ್ನು ನೀರು ನೀಡುತ್ತದೆ.



ವೇದದ ಧ್ವನಿ ನಮಗೆ ಕೇಳೀತೆ?
ಅಭಿವೃದ್ಧಿಯ ಹೆಸರಿನಲ್ಲಿ ನದಿಗಳನ್ನು, ತೀರ್ಥಗಳನ್ನು, ಸರೋವರಗಳನ್ನು, ಜಲಪಾತಗಳನ್ನು,ಕೆರೆಗಳನ್ನು, ಕೊಳಗಳನ್ನು ನಮ್ಮ ಸ್ವಾರ್ಥಕ್ಕಾಗಿ ನಾಶಮಾಡುತ್ತಿರುವ ನಮ್ಮ ಕಣ್ತೆತೆರೆಯುವುದು ಯಾವಾಗ? ನೀರನ್ನು ಕಲ್ಮಷಗಳಿಂದ ಕಲುಷಿತ ಗೊಳಿಸುತ್ತಿರುವ ನಮಗೆ ವೇದದ ಧ್ವನಿ ಕಿವಿಗೆ ಬೀಳುವುದು ಯಾವಾಗ?

ಭೂಮಿಯನ್ನು ಕೊರೆದು ನೀರು ತೆಗೆದು ಪ್ರಕೃತಿಯ ಕೋಪಕ್ಕೆ ತುತ್ತಾಗಿರುವ ನಾವು ಇನ್ನೂ ಎಚ್ಛೆತ್ತುಗೊಳ್ಳದಿದ್ದರೆ ಯಾವ ದೇವರು ತಾನೇ ನಮ್ಮನ್ನು ಕಾಪಾಡಬಲ್ಲ?

ಕೃಪೆ: ಶ್ರೀ ತಿ.ನಾ.ರಾಘವೇಂದ್ರರ ಋಗ್ವೇದ ಸಾರ ಗ್ರಂಥ


ಋಗ್ವೇದ ಸಾರ ಗ್ರಂಥವನ್ನು ಓದುತ್ತಿದ್ದಾಗ ಮೇಲಿನ ವೇದಮಂತ್ರವು ನನ್ನನ್ನು ಅತಿಯಾಗಿ ಆಕರ್ಷಿಸಿತು. ಮಂತ್ರವನ್ನು ಬರೆಯುವಾಗ ಸ್ವರವನ್ನು ಬರೆಯುವ ತಂತ್ರ ನನಗೆ ತಿಳಿಯದಿದ್ದರಿಂದ ಸ್ವರವನ್ನು ಬರೆದಿಲ್ಲ. ವೇದ ವಿದ್ವಾಂಸರು ಮನ್ನಿಸಬೇಕೆಂದು ವಿನಂತಿಸುವೆ. ವೇದದ ಈ ಆದೇಶ ಎಲ್ಲರಿಗೂ ತಲುಪಬೇಕೆಂಬ ಏಕಮಾತ್ರ ಉದ್ಧೇಶದಿಂದ ಈ ಪುಟ್ಟ ಬರಹ ಪ್ರಕಟಿಸಿರುವೆ.
-ಹರಿಹರಪುರಶ್ರೀಧರ್