Pages

Saturday, December 26, 2015

K.R.ನಗರ ತಾಲ್ಲೂಕು ಹಂಪಾಪುರದ ಶ್ರೀ ಸುಭಾಷ್.ಎಂ.ರಾವ್ ಚಾರಿಟಬಲ್ ಟ್ರಸ್ಟ್ ಒಂದು ಅನುಕರಣೀಯ ಸಾಮಾಜಿಕ ಸಂಸ್ಥೆ

ನಿನ್ನೆ ಹಂಪಾಪುರದಲ್ಲಿ ಸುಭಾಷ್ ಎಂ ರಾವ್ ಟ್ರಸ್ಟ್ ನಲ್ಲಿ ನಡೆದ ಸುಭಾಷ್ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುವ ಸಂದರ್ಭದಲ್ಲಿ ಭಾಷಣವನ್ನು ಮನಸ್ಸಿಟ್ಟು ಕೇಳಿದ ತಾಯಿ ಯೊಬ್ಬರು ನನಗೆ ಆನಂತರ ಹೇಳಿದ್ದು "ಸಾರ್ ನೀವು ಇಷ್ಟು ನಿಷ್ಟೂರವಾಗಿ ಮಾತಾಡ್ತೀರಲ್ಲಾ! ವಿಚಾರದಲ್ಲಿ ಸತ್ಯವಿದೆ!! ಆದರೆ ಜನರು ನೂರಾರು ವರ್ಷಗಳಿಂದ ಅದು ಸರಿಯೋ ತಪ್ಪೋ ನಡೆಸಿಕೊಂಡು ಬಂದುಬಿಟ್ಟಿದ್ದಾರೆ ! ಅವರ ನಂಬಿಕೆಗೆ ಪೆಟ್ಟು ಕೊಡುವುದು ಸರಿಯೇ? "
ನಿಜವಾಗಿ ಆತಾಯಿಗೆ ನನ್ನ ಮೇಲೆ ಬಲು ವಾತ್ಸಲ್ಯ. ಇಷ್ಟು ಚೆನ್ನಾಗಿ ಮಾತಾಡ್ತಾರೆ. ಕೆಲವರಿಗೆ ಮನಸ್ಸಿಗೆ ಕಿರಿಕಿರಿ ಆಗುತ್ತೆ-ಎಂಬುದನ್ನು ಲೆಕ್ಕಿಸದೆ ಮಾತಾಡ್ತಾರಲ್ಲಾ! ಎಂಬ ಚಿಂತೆ ಅವರಿಗೆ. ಆಗ ನನಗೆ ನೆನಪಾದವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು. ಅವರೊಡನೆ ಸಾಕಷ್ಟು ಜಗಳವಾಡಿದ್ದೇನೆ. " " ಲಕ್ಷ ಲಕ್ಷ ಜನ ವಿದ್ವಾಂಸರು ಮತ್ತು ಈ ಸಮಾಜಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡವರು ನಡೆಸಿಕೊಂಡು ಬಂದಿರುವುದೆಲ್ಲಾ ತಪ್ಪು ಅಂತೀರಾ? ಎಂದಾಗ ವೇದಕ್ಕೆ ವಿರುದ್ಧವಾಗಿ ಯಾರು ಮಾಡಿದರೂ ಅದು ಅವೈದಿಕವೇ!! ತಪ್ಪೇ!! ಎಂದು ಶಾಂತವಾಗಿ ಅವ್ರು ಹೇಳಿದರೆ ನಾನು "ನಿಮ್ಮದು ಹುಚ್ಚುತನ " ಎಂದಿದ್ದೇನೆ.
ಆದರೆ ಶರ್ಮರ ಸಹವಾಸದಲ್ಲಿ ಎಂಟುಹತ್ತು ವರ್ಷಗಳು ಕಳೆದ ಮೇಲೆ " ನನ್ನನ್ನೂ ಹುಚ್ಚರ ಪಟ್ಟಿಗೆ " ಆ ತಾಯಿ ಸೇರಿಸಿದ್ದರು.

ನಾನು ಮಾಡಿದ ತಪ್ಪು ಇಷ್ಟೆ" ಕೋಟಿ ರೂಪಾಯಿ ಖರ್ಚು ಮಾಡಿ ದೇವರಿಗೆ ಕಿರೀಟವನ್ನು ತೊಡಿಸುವ ಬದಲು ಹಸಿದ ಮಕ್ಕಳಿಗೆ ತುತ್ತು ಅನ್ನ ಹಾಕುವ, ಅಳಿದುಹೋಗುತ್ತಿರುವ ಗೋಮಾತೆಯನ್ನು ರಕ್ಷಿಸುವ " ಕೆಲಸಗಳಿಗೆ ನಮ್ಮ ಗಳಿಕೆಯನ್ನು ಖರ್ಚು ಮಾಡಿದರೆ ದೇವರು ಮೆಚ್ಚುತ್ತಾನೆಂದೆ" ಅಷ್ಟೆ

ಹತ್ತಾರು ದೇವಾಲಯಗಳಿಗಾಗಿ ಲಕ್ಷಾಂತರ ರೂಪಾಯಿ ಸೇವೆ ಮಾಡಿಸುವ, ಮಠಾಧಿಪತಿಗಳ ಪಾದ ಪೂಜೆಯನ್ನು ರೆಗ್ಯುಲರ್ ಆಗಿ ಪ್ರತೀ ವರ್ಷ ಮಾಡಿ ಸಮಾಧಾನ ಪಡುವ ಈ ಶ್ರೀಮಂತ ತಾಯಿಗೆ ಯಾಕೋ ಕಸಿವಿಸಿ ಯಾಯ್ತು. ಆದರೂ ಅವರ ಬಾಯಿಂಬ ಬಂತು " ಹೌದು ಸಾರ್ ಇಂತಾ ಜೀವಂತ ದೇವರುಗಳಿಗಾಗಿ ಏನಾದರೂ ಮಾಡಬೇಕೂ ಸಾರ್" ಎಂದರು. ಅವರ ಕಣ್ಣು ತೇವವಾಗಿದ್ದನ್ನು ಗಮನಿಸಿದೆ.

ಸ್ವಾಮಿ ಚಿದ್ರೂಪಾನಂದರು ಕರ್ನಾಟಕದ ಹತ್ತಾರು ಕಡೆ ಛಾತ್ರಾಲಯಗಳನ್ನು ನಡೆಸುತ್ತಿದ್ದು ಅದರಲ್ಲಿ ಸಾವಿರಾರು ಕೊಳಚೆ ಪ್ರದೇಶಗಳಿಂದ ಕರೆದುಕೊಂಡು ಬಂದಿರುವ ಮಕ್ಕಳಿಗೆ ಊಟ ವಸತಿ ಕೊಟ್ಟು ಶಾಲೆಯ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕಾರವನ್ನು ಕೊಡುತ್ತಿದ್ದಾರೆ. ಪ್ರತೀ ದಿನ ಲಕ್ಷಾಂತರ ರೂಪಾಯಿ ಖರ್ಚು ಬರುತ್ತೆ. ಒಬ್ಬ ಸಂನ್ಯಾಸಿಯಾದವರು ನಿತ್ಯವೂ " ಈ ಮಕ್ಕಳನ್ನು ಸಾಕುವ ವಿಚಾರದಲ್ಲಿ ತಲೆ ಕೆಡಸಿ ಕೊಂಡು ಭಿಕ್ಷಾಪಾತ್ರೆಯನ್ನು ಹಿಡಿದು ರಾಜ್ಯದ ಮೂಲೆ ಮೂಲೆಯನ್ನೂ ಸುತ್ತುತ್ತಾರೆ.

ಈಗ ಹೇಳಿ ಭಗವಂತನು ಯಾವ ಸೇವೆಯನ್ನು ಮೆಚ್ಚುತ್ತಾನೆ? ಜೀವಂತ ದೇವರುಗಳ ಸೇವೆಯನ್ನೋ? ಅಥವಾ ದೇವಾಲಯಗಳ ವಿಗ್ರಹಗಳಿಗೆ ತೊಡಿಸುವ ಚಿನ್ನದ ಕವಚ ಅಥವಾ ವಜ್ರದ ಕಿರೀಟ ಸೇವೆಯನ್ನೋ?
ವೇದದ ನಿಜ ಅರಿವು ಮೂಡಿದಾಗ ಇಂತಾ ಮಾನವೀಯ ಚಿಂತನೆಗಳು ಗಟ್ಟಿಯಾಗುತ್ತವೆ. ನಿಷ್ಟುರ ಮಾತುಗಳು ನಮ್ಮ ಅರಿವಿಲ್ಲದೆ ಹೊರಬಂದಿರುತ್ತದೆ. ನಿಜವಾಗಿ ಅದಕ್ಕಾಗಿ ನನಗೆ ಪಶ್ಚಾತ್ತಾಪವಿಲ್ಲ.
-ಹರಿಹರಪುರಶ್ರೀಧರ್
ಹಾಸನ ವೇದಭಾರತಿಯ ವೇದ ಗುರುಗಳಾದ ವೇದಾಧ್ಯಾಯೀ ಶ್ರೀ ನವೀನ್ ಅವರಿಗೆ ಸನ್ಮಾನ ಹಂಪಾಪುರದಲ್ಲಿ


ಟ್ರಸ್ಟ್ ವತಿಯಿಂದ ಸಮ್ಸ್ಕಾರ ಪಡೆಯುತ್ತಿರುವ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದಾಗ


ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ





ಹಂಪಾಪುರದ ನದಿ ತೀರದಲ್ಲಿ ಶ್ರೀ ನವೀನ್ ಅವರಿಂದ ವೇದಮಂತ್ರಪಠಣ.

Tuesday, December 22, 2015

ಹಾಸನ ವೇದಭಾರತಿಯ ಐದನೇ ಸತ್ಸಂಗ ಆರಂಭ

ಗರ್ಭ ಗುಡಿಯಲ್ಲಿ ಶ್ರೀರಾಮನ ಪರಿವಾರ , ದೇವಾಲಯದ ಸುತ್ತ ಪ್ರಕೃತಿಯ ಸೊಬಗು-  ಇಂತಹ  ಸುಂದರವಾತಾವರಣದಲ್ಲಿರುವ ಹಾಸನದ  PWD ಕಾಲೊನಿ ಶ್ರೀ ರಾಮಮಂದಿರದಲ್ಲಿ ಇಂದು ವೇದಭಾರತಿಯ ಐದನೇ ಸತ್ಸಂಗವು ಆರಂಭವಾಯ್ತು. ಪ್ರತೀ ಮಂಗಳವಾರ ಸಂಜೆ 6.00 ರಿಂದ 7.00 ರವರಗೆ ಇನ್ನು ಮುಂದೆ ಶ್ರೀರಾಮ ಮಂದಿರದಲ್ಲಿ  ಅಗ್ನಿಹೋತ್ರ, ವೈದಿಕ ಭಜನೆ, ವೈದಿಕ ಚಿಂತನೆ ನಡೆಯಲಿದೆ.









Monday, November 30, 2015

ಲೌಕಿಕದಲ್ಲಿದ್ದು ಅಲೌಕಿಕ ಚಿಂತನೆ ಭಾಗ-1

ದಿನಾಂಕ 25.11.2015 ರಂದು ಹಾಸನ ಹೊಯ್ಸಳನಗರದ ಈಶಾವಾಸ್ಯಮ್ ನಲ್ಲಿ ವೇದಭಾರತೀ ಸಂಸ್ಥೆಯು ಆಯೋಜಿಸಿದ್ದ ಬೆಂಗಳೂರಿನ ಪೂಜ್ಯ ಶ್ರೀನಾರಾಯಣಾನಂದ ಸರಸ್ವತೀ ಸ್ವಾಮಿಗಳವರ ಉಪನ್ಯಾಸದ ಬರಹರೂಪದ ಮೊದಲ ಕಂತು
ಉಳಿದ ಎರಡು ಕಂತುಗಳನ್ನು ಮುಂದಿನ ಸೋಮವಾರಗಳಲ್ಲಿ ಕ್ರಮವಾಗಿ ಪ್ರಕಟಿಸಲಾಗುವುದು
[ಬರಹ ರೂಪಕ್ಕೆ : ಶ್ರೀ ಭೈರಪ್ಪಾಜಿ, ಸಂಸ್ಕೃತ ಉಪನ್ಯಾಸಕರು]


ಸಾಮಾನ್ಯವಾಗಿ ಅಲೌಕಿಕವೆಂದರೆ, ನಮಗೆ ನಿಲುಕದ್ದು ಎಂಬ ಅಭಿಪ್ರಾಯವಿದೆ. ಆದರೆ ಇದು ಇದು ಕಬ್ಬಿಣದ ಕಡಲೆಯೇನಲ್ಲ. ಅತ್ಯಂತ ಸುಲಭ ಮತ್ತು ಸರಳ. ನಮಗೆ ಯಾವುದು ಅತ್ಯಂತ ಸುಲಭ ಹಾಗೂ ಸರಳವೋ ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಯಾವುದು ಅತ್ಯಂತ ಸಮೀಪದಲ್ಲಿದೆಯೋ ಅದನ್ನು ನೋಡುವುದು ಕಷ್ಟ. ಯಾವುದು ಅತ್ಯಂತ ಪ್ರಕಾಶಮಾನವಾಗಿದೆಯೋ ಅದನ್ನು ನಾವು ಗ್ರಹಿಸುವುದು ಕಷ್ಟ. ಉದಾಹರಣೆಗೆ ಸೂರ್ಯದೇವ ಅತ್ಯಂತ ಪ್ರಕಾಶಮಯ. ನಮಗೆ ನೋಡಲು ಕಷ್ಟ ಅಲ್ಲವೇ ? ನಾವೇನಾದರು ಸೂರ್ಯನನ್ನು ದಿಟ್ಟಿಸಿ ನೋಡಲು ಹೋದರೆ ದೃಷ್ಟಿಯನ್ನೇ ಕಳೆದು ಕೊಳ್ಳಬೇಕಾಗುತ್ತದೆ ಅಲ್ಲವೇ ? ಅತ್ಯಂತ ಪ್ರಕಾಶಮಯ, ಅವನನ್ನು ದಿಟ್ಟಿಸಿ ನೋಡಲು ಸಾಧ್ಯವಿಲ್ಲ. ಹಾಗೆಯೇ ಭಗವಂತನ ಅಸ್ತಿತ್ವ ಅತ್ಯಂತ ಸಮೀಪ ಆದರೆ ನೋಡಲು ಆಗುವುದಿಲ್ಲ. ಹೇಗೆ ನೋಡಲು ಸಾಧ್ಯವಿಲ್ಲವೆಂದರೆ ಉದಾಹರಣೆಗೆ ನಮ್ಮ ಕಣ್ಣನ್ನು ನಾವೇ ಸ್ವತಃ ನೋಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಕಣ್ಣಿನ ಮೂಲಕ ಎಲ್ಲವನ್ನು ನೋಡುತ್ತೇವೆ. ಸ್ವತಃ ಕಣ್ಣನ್ನು ನೋಡಲು ಸಾಧ್ಯವಿಲ್ಲ ನಮಗೆ. ಯಾವುದೇ ಮಾಧ್ಯಮವಿಲ್ಲದೆ, ದರ್ಪಣ, ಕನ್ನಡಿ, ಮತ್ತು ಇತ್ಯಾದಿಗಳಿಲ್ಲದೆ ನಮ್ಮ ಕಣ್ಣುಗಳನ್ನು, ನೇತ್ರಗಳನ್ನು ನಾವೇ ನೋಡಿಕೊಳ್ಳಬೇಕು. ಹೇಗೆ ನೋಡಿಕೊಳ್ಳುವುದು ? ಲೋಕವನ್ನು ಕಣ್ಣುಗಳಿಂದ ನೋಡುತಿದ್ದೇವೆ. ಕಣ್ಣುಗಳಿಂದ ನೋಡುತ್ತಿದ್ದೇವೆ ಎನ್ನುವುದು ಅಲೌಕಿಕ. ಕಿಂಚಿತ್ ನಮ್ಮ ಭಾವನೆಯಲ್ಲಿ ಆಲೋಚನೆಯಲ್ಲಿ ಸ್ವಲ್ಪ ನಾವು ಜಾಗೃತೆಯನ್ನು ವಹಿಸಬೇಕಷ್ಟೆ ಅತ್ಯಂತ ಸುಲಭ ಸರಳ. 
ಒಬ್ಬರು ಆಶ್ರಮಕ್ಕೆ ಬಂದಿದ್ದರು. “ ಸ್ವಾಮೀಜಿ ನನಗೆ ಅತ್ಯಂತ ಉತ್ಸಾಹ ಬಂದು ಬಿಟ್ಟಿದೆ. ವೈರಾಗ್ಯ ತನ್ನಷ್ಟಕ್ಕೆ ತಾನೆ ಏನು ಉಕ್ಕಿ ಹರಿಯುತ್ತಿದೆ. ನೀವು ಏನೇನು ಕಾರ್ಯ ಹೇಳುತ್ತೀರೋ ಎಲ್ಲಾ ಮಾಡ್ತೇನೆ ನಾನು. ಅಹರ್ನಿಶಂ ಸೇವಾಮಹೇ. ಹಗಲೂ ರಾತ್ರಿ ಅನ್ನದೆ ಸೇವೆ ಮಾಡ್ತೇನೆ. ನೀವು ಹೇಳಿದರೆ ಸಾಕು ಇಂತದ್ದು ಅಂತ. ಮಾಡ್ತೇನೆ ನಾನು” ನಾವು ಹೇಳಿದೆವು. ಮಾರಾಯ್ರೆ ತಾವು ಏನು ಮಾಡದೆ ಸುಮ್ಮನೆ ಕೂತರೆ ಸಾಕಾಗಿದೆ. ಅದೇ ದೊಡ್ಡ ಸೇವೆ. ಅವರು ಹೇಳ್ತಾರೆ. ಸ್ವಾಮೀಜಿ ಅದೇ ದೊಡ್ಡ ಕಷ್ಟ. ಸುಮ್ಮನೆ ಕುಳಿತು ಕೊಳ್ಳುವುದು ಕಷ್ಟ ನನಗೆ ನೀವು ಏನಾದರು ಹೇಳಿ ಮಾಡ್ತೀನಿ. ಸುಮ್ಮನೆ ಕೂತ್ಕೋ ಅಂದ್ರೆ ನೋಡಿ ಅದು ಬಹಳ ಕಷ್ಟವಾಗುತ್ತೆ. ನೀವು ನೋಡಿ ಸುಮ್ಮನೆ ಕೂತ್ಕೊಳೋದು ಅಂದ್ರೆ ಏನು ಮಾಡೋದಿದೆ ? ಮಾಡಲು ಅಲ್ಲಿ ಏನಿಲ್ಲ. ಸುಮ್ಮನೆ ಕೂಡ್ರಪ್ಪ ಅಂದರೆ ಬಹಳ ಕಷ್ಟವಾಗುತ್ತೆ “ ನೀವೇನಾದ್ರು ಹೇಳಿ ಅದನ್ನು ಮಾಡ್ತೇನೆ. ಅಕಸ್ಮಾತ್ ಕೆಲಸ ಇಲ್ಲವಾ ? ಈ ಕುರ್ಚಿ ಒರೆಸು ಅಂದ್ರೆ ಒರೆಸ್ತೀನಿ” ನಾವು ಹೇಳಿದೆವು, ಏನು ಬೇಡಪ್ಪ ಸುಮ್ಮನೆ ಕೂತ್ಕೋ, ಅವರು ಹೇಳಿದರು, ಕಷ್ಟ ಸ್ವಾಮೀಜಿ ಬಹಳ ಕಷ್ಟ. 


ಆದ್ದರಿಂದ ಅತ್ಯಂತ ಸುಲಭ, ಆದ್ರೆ ನೋಡಿ ಅತ್ಯಂತ ಕಠಿಣ. ಆದರಿಂದ ಲೋಕದಲ್ಲಿ ಎರಡು ರೀತಿಯಾದಂತಹ ಜನರಿದ್ದಾರೆ. ಒಬ್ಬರು ನಾಸ್ತಿಕರು. ಇನ್ನೊಬ್ಬರು ಆಸ್ತಿಕರು. ಸಾಮಾನ್ಯವಾಗಿ ನಾವು ನಿಘಂಟನ್ನು ನೋಡಿದರೆ. ಸ್ತಿಕ ಅಂದ್ರೆ ದೇವರಲ್ಲಿ ನಂಬಿಕೆಯಿಲ್ಲದವಾ ಅಂತ ಸಾಮಾನ್ಯವಾಗಿ ಹೇಳಿಬಿಡ್ತಾರೆ. ಆದರೆ ವೇದದಲ್ಲಿ ಆ ರೀತಿಯ ಅರ್ಥ ಇಲ್ಲ. ನಾಸ್ತಿಕ ಯಾರು ಅಂತ ಹೇಳಿದ್ರೆ ಯಾರು ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲವೋ ಅವನು ನಾಸ್ತಿಕ. ನಮ್ಮ ಶಾಸ್ತ್ರದಲ್ಲಿ ಮೂರು ವರ್ಗ ಇದೆ ನಾಸ್ತಿಕರಲ್ಲಿ. ೧) ಚಾರ್ವಾಕರು, ೨) ಬೌದ್ಧರು, ೩) ಜೈನರು ಈ ಮೂರು ಜನರನ್ನು ನಾಸ್ತಿಕರು ಅನ್ನುವ ಪಟ್ಟಿಯಲ್ಲಿ ಸೇರಿಸ್ತಾರೆ. ದೇವರನ್ನ ನಂಬುವರಲ್ಲ ಅಂತ ಅರ್ಥ ಅಲ್ಲ. ನಂಬ್ತಾರೆ. ಆದರೆ ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲ. ಆದ್ದರಿಂದಲೇ ಅವರು ನಾಸ್ತಿಕರು. ನ ಅಸ್ತಿ ಇತಿ ಮನ್ಯತೇ | ಇಲ್ಲ ಅಂತ ಹೇಳ್ತಾರೆ, ವೇದವನ್ನು ನಂಬೋದಿಲ್ಲ ಅವರು. ಇನ್ನು ಷಡ್ದರ್ಶನಗಳಿವೆ. ಅವು ವೇದವನ್ನು ಪ್ರಮಾಣವಾಗಿ ಸ್ವೀಕಾರ ಮಾಡುತ್ತವೆ ಆಸ್ತಿಕರು, ಅಸ್ತಿ, ಅಸ್ತಿ, ಅಸ್ತಿ ಇತಿ ಕಥ್ಯತೇ | ಆಸ್ತಿಕರು, ಏನು ಅಸ್ತಿ ಅಂತ ಹೇಳ್ತಾರೆ ? ಏನು ಇದೆ ಅಂತ ಹೇಳ್ತಾರೆ ? ಅಸ್ತಿ ಇತಿ ಮನ್ಯತೇ | ಇದೆ ಅಂತ ಏನು ಇದೆ ? ಮಾನವನ ಒಂದು ಇಂದ್ರಿಯಕ್ಕೆ ನಿಲುಕದಂತ ಒಂದು ವಸ್ತು ಇದೆ. ದಿವ್ಯ ಅದ್ಭುತವಾದ ಒಂದು ಶಕ್ತಿ ಇದೆ. ಈ ಲೋಕ ಮಾತ್ರವಲ್ಲ ಬ್ರಹ್ಮಾಂಡವನ್ನು ನಡೆಸುತ್ತಿರುವ ಒಂದು ಶಕ್ತಿ ಇದೆ. ನಾವೆಲ್ಲರೂ ಅದನ್ನು ನಂಬಿದ್ದೇವೆ. ಇಂದ್ರಿಯಗಳಿಗೆ ಗೋಚರವಾಗಿಲ್ಲ ಅದು, ಗೋಚರವಾಗಲಿಕ್ಕೆ ಸಾಧ್ಯವಿಲ್ಲ ಅದು. ಇಂದ್ರಿಯಾತೀವಾಗಿರುವಂತದ್ದು ಅದು. ಕಣ್ಣಿಂದ ಕಿವಿಗಳಿಂದ ಅಥವಾ ನಮ್ಮ ಯಾವುದೇ ಇಂದ್ರಿಯಗಳಿಂದ ಅದನ್ನು ಅನುಭವಿಸಲು ಸಾಧ್ಯವಿಲ್ಲ. ನಿದ್ದೆಯಲ್ಲಿ ಶೂನ್ಯದ ಅವಸ್ಥೆಯಲ್ಲಿರುತ್ತೇವೆ. ನೋಡಿ ಅದು ಬ್ರಹ್ಮಾನಂದ ಸ್ಥಿತಿ. ಬ್ರಹ್ಮೈಕ್ಯದ ಸ್ಥಿತಿ. ಅದಕ್ಕೆ ಯಾರೋ ಒಬ್ಬರು ಹಿರಿಯರು ಹೇಳ್ತಾ ಇದ್ದರು. ನಾವು ನಿದ್ರೆ ಮಾಡಿದರೆ ಅದು ಅಲ್ಪ ಕಾಲದ ಮರಣ. ನಾವು ಸುಧೀರ್ಘವಾದ ನಿದ್ರೆ ಮಾಡಿದರೆ ಅದು ಮರಣ. ಅಲ್ಪ ಮರಣ ನಿದ್ರೆ. ಸುಧೀರ್ಘ ನಿದ್ರೆ ಮರಣ. ಎಷ್ಟು ಸೊಗಸಾಗಿ ಹೇಳಿದರು ನೋಡಿ. ಆ ಅಲ್ಪ ಮರಣದ ನಿದ್ರೆಯಲ್ಲಿ ಹೇಗೆ ಇರುತ್ತೇವೆ ನೋಡಿ, ಆಗ ಬ್ರಹ್ಮೈಕ್ಯದ ಸ್ಥಿತಿಯಲ್ಲಿರುತ್ತೇವೆ. ಯಾರನ್ನಾದರೂ ಎಬ್ಬಿಸಿ ಕೇಳಿ. ಏನಪ್ಪಾ ಹೇಗಿತ್ತು ? ಅವರು ಹೇಳ್ತಾರೆ. ಹೇಗಿತ್ತು..... ಅಹಂ ಕಿಮಪಿ ನ ಜಾನಾಮಿ | ನನಗೇನು ಗೊತ್ತಾಗಲಿಲ್ಲ. ಆದರೆ ಒಂಥರಾ ಒಂಥರಾ ಸುಖವಾಗಿತ್ತು. ಸುಖವಾಗಿತ್ತು ? ಆದರೆ ಏನು ಗೊತ್ತಾಗಿಲ್ಲ ಅಂತ ಹೇಳ್ತೀರಿ. ಮತ್ತೆ ಸುಖವಾಗಿದ್ದೆ ಅಂತ ಹೇಳ್ತೀರಿ ? ಅಲ್ಲ ಅದೇನೋ ಒಂಥರಾ ಎಲ್ಲ ಮರೆತಿದ್ದೆ ನಾನು. ನಾನು ಯಾರು ಎಂಬುದನ್ನು ಕೂಡ ಮರೆತಿದ್ದೆ. ವಿಚಾರ ಮಾಡಿ. ಆತ ಆಸ್ತಿಕ. ಸತ್ಯದ ಅವಸ್ಥೆಯಲ್ಲಿರುತ್ತಾನೆ. ಅದಕ್ಕೆ ಮಾಂಡೂಕ್ಯ ಉಪನಿಷತ್ತಿನಲ್ಲಿ ಹೇಳ್ತಾರೆ. ಹೇಗೆ ನಾವು ನಿದ್ರಾ ಸ್ಥಿತಿಯಲ್ಲಿದ್ದೆವೋ ಅದೇ ರೀತಿ ಜಾಗೃತಾವಸ್ಥೆಯಲ್ಲಿದ್ದರೆ ಅಲೌಕಿಕ ಚಿಂತನೆಯಲ್ಲಿದ್ದೇವೆ ಅಂತ ಅರ್ಥ. 

ಈ ಆಸ್ತಿಕ ನಾಸ್ತಿಕ ಭೇದದಲ್ಲಿ ಲೋಕದ ಜನರಿದ್ದಾರೆ. ಅಲೌಕಿಕ ಅಂದರೆ ಅರ್ಥ ಏನು ? ಈ ಲೋಕಕ್ಕೂ ಮಿಗಿಲಾಗಿರುವಂತದ್ದು. ಇಂಗ್ಲಿಷ್ ನಲ್ಲಿ ಹೇಳ್ತೇವೆ. ಹಿಯರ್ ಅಂಡ್ ಹಿಯರ್ ಆಫ್ಟರ್ [ಇಲ್ಲಿ ಮತ್ತು ಇಲ್ಲಿಂದಾಚೆ] ಯಾರೂ ಕೂಡ ಇದೂವರೆಗೆ ಇಲ್ಲಿಂದಾಚೆ ಹೋದವರು ಈ ಲೋಕದಿಂದ ಹೋದವರು ವಾಪಸ್ಸು ಬಂದು ನಮಗೆ ರಿಪೋರ್ಟ್ ಕೊಟ್ಟಿಲ್ಲ. ಓ ನೋಡಪ್ಪ ಅಲ್ಲಿ ಇದ್ದೀನಿ ನಾನು ಅಂತಾ ಯಾರೂ ತಿಳಿಸಿಲ್ಲ.ಹೋದರೆ ಹೋದಂತೆ, ಮತ್ತೆ ಅವರು ಎಲ್ಲಿದ್ದಾರೋ? ಯಾವ ಲೋಕ ಸೇರಿಕೊಂಡಿದ್ದಾರೋ ? ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೋ ? ಏನೂ ಗೊತ್ತಿಲ್ಲ. ರಹಸ್ಯವಾಗಿದೆ ಅದು. ಆದರಿಂದಲೇ ನಾವು ವೇದಪ್ರಮಾಣವನ್ನು ತೆಗೆದು ಕೊಂಡಾಗ ಹೇಗೆ ಜೀವಿಸಬೇಕು ಅನ್ನೋದನ್ನ ಕಲಿಯೋದು ಮಾತ್ರವಲ್ಲ. ಹೇಗೆ ಜೀವಿಸಿದರೆ ಹೇಗೆ ಪ್ರಾಪ್ತಿಯಾಗುತ್ತೆ ಅನ್ನೋದು ಕೂಡ ವೇದದಲ್ಲಿದೆ. ಏಕೆಂದರೆ ಅದನ್ನು ಮಾನವನು ಹೇಳೋಕೆ ಸಾಧ್ಯವಿಲ್ಲ. ಮಾನವ ಶರೀರ ಬಿಟ್ಟರೆ ಬಿಟ್ಟ ಹಾಗೆ. ವಾಪಸ್ಸು ಬಂದು ಹೇಳೋದಿಲ್ಲ. ಆದ್ದರಿಂದ ಅಲೌಕಿದಲ್ಲಿ ಹೇಗಿರುತ್ತೇ ಯಾರು ತಿಳಿದಿಲ್ಲ. ಶಾಸ್ತ್ರಮೇವ ಪ್ರಮಾಣಂ | ವಿಚಾರ ಮಾಡಿ ಆದ್ದರಿಂದ ಜೀವನವನ್ನ ಯಾವ ರೀತಿ ನಡೆಸಬೇಕು ಅನ್ನೊದರಲ್ಲಿ ವೇದ ಪ್ರಮಾಣ ಇದೆ. ಯಾವ ರೀತಿ ನಡೆಸಿದರೆ ಏನು ಅದರಿಂದ ಪರಿಣಾಮ ಅನ್ನೋದು ವೇದದಲ್ಲಿದೆ. ಆದ್ದರಿಂದ ನಾವು ಶಾಸ್ತ್ರಾಧಾರಿತವಾಗಿ ಜೀವನವನ್ನು ನಡೆಸಿದಾಗ ಲೋಪದೋಷಗಳು ಉಂಟಾಗುವುದಿಲ್ಲ. ವಿಚಾರ ಮಾಡಿ. ಆದರೆ ಸಾಮಾನ್ಯವಾಗಿ ನಾವು ಚಿಂತನೆ ಮಾಡಿದಾಗ ಪಾರಮಾರ್ಥಿಕ ಚಿಂತನೆ ನಮಗೆ ಎಲ್ಲೋ ಯತ್ಕಿಂಚಿತ್ ಆಗಬಹುದಷ್ಟೆ. ಶೇಕಡ ೯೯ ರಷ್ಟು ನಮ್ಮ ಚಿಂತನೆ ವ್ಯಾವಹಾರಿಕ ದೃಷ್ಟಿಯಲ್ಲೇ ಇರುತ್ತೇ. ಇಲ್ಲೇ ಸಂಚಾರ ಮಾಡ್ತಾ ಇರುತ್ತೇ. ಇದರಿಂದ ಮೇಲೆ ಹೋಗಲಿಕ್ಕೆ ಸಾಧ್ಯಾವಾಗುವುದಿಲ್ಲವೇನೋ ಅನ್ನುವಷ್ಟು ವ್ಯಾವಹಾರಿಕದಲ್ಲಿ ಮುಳುಗಿರುತ್ತೇವೆ ನಾವು. 
ಲೋಕ ಅಂದರೇನು ? ಅಥವಾ ಲೌಕಿಕ ಎಂದರೇನು ? ಅಲೌಕಿಕ ಎಂದರೇನು ? ಸರಳ ರೀತಿಯಲ್ಲಿ ವಿಚಾರ ಮಾಡೋಣ. ಎಲ್ಲಿ ನಾನು ಅನ್ನುವ ಪಟ್ಟಿಯಲ್ಲಿ ಏನೋನು ಬರುತ್ತೋ ಅದರಲ್ಲಿ ನಾವಿದ್ದರೆ ಅದು ಲೌಕಿಕ. ಎಲ್ಲಿ ನಾನು ಅನ್ನುವ ಪಟ್ಟಿಯಲ್ಲಿ ನಾವಿಲ್ಲವೋ ಅದು ಅಲೌಕಿಕ. ಅದೇನು ? ಅರ್ಥ ಮಾಡಿಕೊಳ್ಳುವುದು ಕಷ್ಟವಾಯ್ತಲ್ವಾ? ಇನ್ನು ಸರಳ ಮಾಡೋಣ. ನನ್ನ ಪುಸ್ತಕ, ನನ್ನ ಕೈಗಡಿಯಾರ, ನನ್ನ ಮೈಕ್ರೋಫೋನ್, ನನ್ನ ಒಂದು ಕಟ್ಟಡ, ನನ್ನ ಮಗ, ನನ್ನ ಹೆಂಡತಿ, ನನಗೆ ಸಂಬಂಧ ಪಟ್ಟಿದ್ದು, ಎಲ್ಲೆಲ್ಲಿ ನನಗೆ ಸಂಬಂದಪಟ್ಟಿದೆಯೋ ನಾವು ಲೋಕದಲ್ಲಿದ್ದೇವೆ ಅಂತ ಅರ್ಥ. ಅಲೌಕಿಕಕ್ಕೇ ಅಮೇಲೆ ಬರೋಣ, ಈ ಲೋಕದಲ್ಲಿ ಇನ್ನು ಸ್ವಲ್ಪ ಆಳವಾಗಿ ಮುಳುಗಿ ಆಮೇಲೆ ಎದ್ದು ಬರೋಣ. ಈಗ ನೋಡಿ ಎಷ್ಟು ಸುಲಭ ಅರ್ಥ ಮಾಡಿಕೊಳ್ಳೋದು. ನಾನೊಂದು ವಜ್ರದ ಕೈಗಡಿಯಾರವನ್ನು ಎಷ್ಟೋ ಕೋಟ್ಯಾಂತರ ಬೆಲೆಯನ್ನ ಕೊಟ್ಟು ಕೊಂಡಿದ್ದೇನೆ, ಎಂದು ಭಾವಿಸಿ. ವಜ್ರದ ಕೈಗಡಿಯಾರ. ಯಾರದದು ? ನನ್ನದು!! ಎಲ್ಲರಿಗೂ ತೋರಿಸ್ತೀನಿ! ಅವರು ನೋಡಲೇಬೇಕು ನೋಡದಿದ್ದರೆ ಏನು ಪ್ರಯೋಜನ!!! ಅದನ್ನ ನಾನು ಎಲ್ಲರಿಗೂ ತೋರಿಸ್ತಾ ಬರ್ತೇನೆ. ನೋಡಿ ನೋಡಿ ವಜ್ರದ ಕೈಗಡಿಯಾರ, ನೀವು ಮಾತಾಡ್ಕೋತೀರಿ ಏನು ಸ್ವಾಮಿಗಳಪ್ಪ ಅಯ್ಯೋ ವಜ್ರದ ಕೈಗಡಿಯಾರ. ಎಲ್ಲರಿಗೂ ಹೊಟ್ಟೆ ಉರೀಬೇಕು. ಆಗ ನನಗೆ ಖುಷಿ ನೋಡಿ ನೋಡಿ. ಆಗ ಯಾರೋ ಕೇಳ್ತಾರೆ ನಮ್ಮನ್ನ ನಾನು ಕೋಟ್ಯಾದೀಶ್ವರ. ಸ್ವಾಮೀಜಿ ನಿಮಗ್ಯಾಕದು ನಮಗೆ ಕೊಟ್ಟು ಬಿಡಿ. ನಾನು ತೆಗೆದು ಕೊಳ್ಳುತ್ತೇನೆ ಆಯ್ತು ಇನ್ನೇನು ತಗೋಳಿ ಅಂತ ನಾನು ಕೊಡ್ತೇನೆ, ಕೊಟ್ಟ ಕೂಡಲೇ ಅದಕ್ಕೆ ಏನು ಬೆಲೆ ಇದೆ ಅದು ನನ್ನ ಅಕೌಂಟಿಗೆ ಜಮಾ ಆಗಿ ಬಿಟ್ಟಿರುತ್ತೆ. ಕೊಟ್ಟಾಗಿದೆ. ಈಗ ವಜ್ರದ ಕೈಗಡಿಯಾರ ಯಾರದ್ದು ? ನನ್ನದಾಗಿದೆಯೇ ಅದು ? ನನ್ನದಾಗಿಲ್ಲ ಮಾರಿಬಿಟ್ಟಿದ್ದೇನೆ. ಮಾರಿ ಆದ ಮೇಲೆ ಕೊಡುಕೊಂಡ ಆಕೋಟ್ಯಾಧಿಪತಿ ಮಾರನೆ ದಿನವೇ ನನಗೆ ಮೊಬೈಲ್ ನಲ್ಲಿ ಪೋನ್ ಮಾಡ್ತಾರೆ. ಸ್ವಾಮಿಜಿ, ನೀವು ಕೊಟ್ಟರಲ್ಲ ವಜ್ರದ ಕೈಗಡಿಯಾರ ಕಳೆದು ಹೋಯ್ತು 
-ಆಹೌದಾ ನಾನೇನು ಮಾಡ್ಲಿ ? ನೀವು ಕಳೆದು ಕೊಂಡಿದ್ದು ಏನೂ ಆಗಿಲ್ಲವೆಂಬಂತೆ ನಾನು ಉತ್ತರಿಸುತ್ತೇನೆ. ಒಂದು ವೇಳೆ ವಜ್ರದ ಕೈಗಡಿಯಾರ ಇನ್ನೂ ನನ್ನದೂ ಅನ್ನೋ ಪಟ್ಟಿಯಲ್ಲಿ ಇದ್ದು ಅದನ್ನ ಕಳೆದು ಕೊಂಡಿದ್ದರೆ ನನ್ನ ಅವಸ್ಥೆ ನೀವು ನೋಡೋಕಾಗೋದಾ ? ಯಾಕಂದ್ರೆ ನನ್ನ ಅವಸ್ಥೇ ನಾನು ಕೂಡ ನೋಡಿಕೊಳ್ಳಲಾಗುವುದಿಲ್ಲ ಕನ್ನಡಿಯಲ್ಲಿ. ಅಷ್ಟು ಕರಗಿ ಹೋಗಿಬಿಡ್ತಿದ್ದೆ ನಾನು. ಆದರೀಗ ಮಾರಿ ಬಿಟ್ಟಿದ್ದೀನಿ. ಈಗದು ನನ್ನದು ಅನ್ನೋ ಪಟ್ಟಿಯಲ್ಲಿ ಇಲ್ಲ.
ವಿಚಾರ ಮಾಡಿ. ಯಾವುದು ನನ್ನದಲ್ಲ ಅನ್ನೊ ಪಟ್ಟಿಯಿಂದ ತೆಗೆದು ಹಾಕಿಬಿಡಿ ನೀವು ಆಗ ಅಲೌಕಿದಲ್ಲಿರುತ್ತೀರಿ. ಯಾವುದನ್ನೇ ತಗೊಳ್ಳಿ ನೀವು. ನಾನು ಸುಮ್ಮನೆ ವಜ್ರದ ಕೈಗಡಿಯಾರದ ಉದಾಹರಣೆ ಕೊಟ್ಟೆ. ಅದಕ್ಕೆ ಯಾವುದನ್ನೇ ಜೋಡಿಸಿಕೊಳ್ಳಿ. ನನ್ನದು ಅನ್ನೋ ಪಟ್ಟಿಯಲ್ಲಿ ಯಾರನ್ನೂ ಯಾವ ವಸ್ತುವನ್ನು ಸೇರಿಸಿಕೊಳ್ಳಬಾರದು. ನೀವು ಬಹಳ ಸುಖವಾಗಿರ್ತೀರಿ. ಎಲ್ಲಿ ನಾವು ಲೋಕದಲ್ಲಿ ಅಂಟಿಕೊಂಡಿರುತ್ತೇವೆಯೋ ಆಗ ನನ್ನದು ಅನ್ನೋ ಪಟ್ಟಿಯಲ್ಲಿ ಇರುತ್ತದೆ. ವಿಚಾರ ಮಾಡಿ ಇದು ಲೌಕಿಕ ಚಿಂತನೆ. ನಂದು, ನನ್ನದು, ನಾನು, ಮಮ, ಅಹಂ ಇತಿ ಇವೆರಡು ಇದ್ದು ಬಿಟ್ಟರೆ ನಾವು ಲೋಕದಲ್ಲೇ ಇರುತ್ತೇವೆ. ಅದಕ್ಕೆ ನಾವು ಅಗ್ನಿಹೋತ್ರವನ್ನು ಮಾಡಬೇಕಾದರೆ ನಾವು ಹೇಳುತ್ತೇವೆ. ಅಗ್ನಯೇ ಸ್ವಾಹಾ | ಅಗ್ನಯೇ ಇದಂ ನ ಮಮ | ಅಂದರೆ ನಾನು ಹವಿಸ್ಸನ್ನು ಹಾಕುತ್ತಾ ಇದ್ದೀನಿ. ಯಾವುದೊಂದರ ಅಪೇಕ್ಷೆಗಲ್ಲ. 

Friday, November 27, 2015

ಆದರ್ಶ ಪುರೋಹಿತರಾಗೋಣ!


     ಹೀಗೆ ಹೇಳಿದಾಕ್ಷಣ ಹುಬ್ಬೇರಿಸುತ್ತೀರಿ ಎಂಬುದು ಗೊತ್ತು. ಏಕೆಂದರೆ ಪುರೋಹಿತ ಎಂದಾಕ್ಷಣ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಪೂಜೆ-ಪುನಸ್ಕಾರಗಳನ್ನು ಮಾಡುವ ಒಬ್ಬ  ಅರ್ಚಕನದೇ ಆಗಿರುತ್ತದೆ. ಮತ್ತೊಂದು ಕಾರಣವೂ ಇದೆ. ಬುದ್ಧಿಜೀವಿಗಳೆನಿಸಿಕೊಂಡವರು ಸಾಮಾನ್ಯವಾಗಿ 'ಪುರೋಹಿತಶಾಹಿ' ಎಂಬ ಪದವನ್ನು ಒಂದು ವರ್ಗದವರನ್ನು ದೂಷಿಸಲು ಕಾರಣವಾಗಿಯೋ, ಅಕಾರಣವಾಗಿಯೋ ಸುಲಭವಾಗಿ ಬಳಸುವ ಪದವಾಗಿದೆ. ಇಂದು ಅನೇಕ ಪದಗಳು ಮೂಲ ಅರ್ಥದಲ್ಲಿ ಬಳಕೆಯಾಗದೆ ವಿರುದ್ಧಾರ್ಥದಲ್ಲಿ ಬಳಕೆಯಾಗುತ್ತಿರುವುದು ವಿಪರ್ಯಾಸ. ಜಾತಿಯ ಬಲದಲ್ಲೇ ರಾಜಕಾರಣ ಮಾಡುತ್ತಿರುವವರು ಜಾತ್ಯಾತೀತತೆಯ ಮಾತನಾಡುತ್ತಾರೆ. ಯಾವುದಾದರೂ ಒಂದು ಕೋಮನ್ನು ದ್ವೇಷಿಸುವುದೇ ಬಂಡವಾಳವಾಗಿರುವವರು ಕೋಮು ಸೌಹಾರ್ದತೆಯ  ಮಾತನಾಡುತ್ತಾರೆ. ಕೋಟ್ಯಾಧೀಶರಾದರೂ, ಅಧಿಕಾರಸ್ಥಾನದಲ್ಲಿದ್ದು ಇತರರನ್ನು ನಿಯಂತ್ರಿಸುವ ಶಕ್ತಿಯಿರುವವರೂ ಹಿಂದುಳಿದವರು, ದಲಿತರು, ಶೋಷಿತರು ಎನಿಸಿಕೊಳ್ಳುವವರಿದ್ದಾರೆ. ಕಡುಬಡವರಾಗಿದ್ದರೂ ಹುಟ್ಟಿನ ಜಾತಿಯ ಕಾರಣ ಮುಂದುವರೆದವರು ಎಂದೆನಿಸಿಕೊಂಡವರಿದ್ದಾರೆ. ಮೂಲ ಅರ್ಥ ಕಳೆದುಕೊಂಡು ಸವಕಲಾಗಿರುವ ಪದಗಳ ಸಾಲಿನಲ್ಲಿ ಸೇರಿರುವ ಈ 'ಪುರೋಹಿತ' ಪದದ ಮೂಲ ಅರ್ಥ ಕುರಿತು ವಿಶ್ಲೇಷಿಸುವುದೇ ಈ ಲೇಖನದ ಉದ್ದೇಶವಾಗಿದೆ.
     ಮೂಲ ಸಂಸ್ಕೃತ ಪದವಾದ ಪುರೋಹಿತ ಎಂಬ ಪದದ ಶಬ್ದಾರ್ಥ 'ಪುರಸ್' ಎಂದರೆ ಮುಂದೆ 'ಹಿತ' ಎಂದರೆ ಇಡಲ್ಪಟ್ಟವನು ಅರ್ಥಾತ್ ಮುಂದೆ ಇರಿಸಲ್ಪಟ್ಟವನು, ಅಗ್ರಣಿ, ಮುಂದಿರುವವನು ಎಂದು. ಒಬ್ಬ ವ್ಯಕ್ತಿ ಪುರೋಹಿತನೆಂದು ಗೌರವಿಸಲ್ಪಡಬೇಕಾದರೆ ಆತನಲ್ಲಿ ವಿಶೇಷವಾದ ಜ್ಞಾನ ಮತ್ತು ಗುಣಗಳು ಇರಬೇಕಾಗುತ್ತದೆ. ಸಂದಿಗ್ಧ ಸಂದರ್ಭಗಳಲ್ಲಿ, ಸಮಸ್ಯೆಗಳು ಎದುರಾದ ಸಂದರ್ಭಗಳಲ್ಲಿ ಅದಕ್ಕೆ ಸೂಕ್ತ ಪರಿಹಾರಗಳನ್ನು, ಸಮಸ್ಯೆಗಳಿಂದ ಹೊರಬರುವ ಮಾರ್ಗೋಪಾಯಗಳನ್ನು ತಿಳಿಸಬಲ್ಲ ಶಕ್ತಿ ಆತನಲ್ಲಿರಬೇಕಾಗುತ್ತದೆ. ಮುಂದಿರುವುದರಿಂದ ಹಿಂದೆ ಇರುವವರಿಗೆ ಆತ ಸಹಜವಾಗಿ ಮಾರ್ಗದರ್ಶಕನಾಗಿರಬೇಕಾಗುತ್ತದೆ. ಇತರರಿಗೆ ಬುದ್ಧಿ ಹೇಳಬೇಕಾದರೆ ಆತ ಸ್ವತಃ ಜ್ಞಾನವಂತ, ಶೀಲವಂತ, ಚಾರಿತ್ರ್ಯವಂತನಾಗಿರಬೇಕಾಗುತ್ತದೆ. ಇಂತಹ ಗುಣಗಳಿರುವವರು ಮಾತ್ರ ನೈಜ ಪುರೋಹಿತರೆನಿಸಿಕೊಳ್ಳಬಲ್ಲರು. ಪಂಡಿತರು ಎಂಬ ಪದ ಸಮಾನಾರ್ಥವನ್ನು ಕೊಡುವುದಾಗಿದೆ. ಗುರುಗಳು, ಸಾಧು-ಸಂತರು, ಸರ್ವರ ಹಿತವನ್ನು ಬಯಸುವವರೆಲ್ಲರೂ ಪುರೋಹಿತರೇ ಆಗುತ್ತಾರೆ. ಇದಕ್ಕೆ ಯಾವುದೇ ಜಾತಿಯ ಕಟ್ಟಾಗಲೀ, ಲೇಪವಾಗಲೀ ಇಲ್ಲವೆಂಬುದಕ್ಕೆ ಇತಿಹಾಸದಲ್ಲಿ ಅಸಂಖ್ಯ ಉದಾಹರಣೆಗಳಿವೆ. ವಿಶ್ವಾಮಿತ್ರ, ವಸಿಷ್ಠ, ವ್ಯಾಸ, ವಾಲ್ಮೀಕಿ ಮುಂತಾದ ಅನೇಕ ಋಷಿಮುನಿಗಳು ಒಂದು ಜಾತಿಯ ಎಲ್ಲೆಗೆ ಸೇರಿದವರಲ್ಲವೆಂಬುದನ್ನು ನೆನಪಿನಲ್ಲಿಡಬೇಕಿದೆ.
     ಹೆಮ್ಮೆಯ ವಿಜಯನಗರ ಸಂಸ್ಥಾನದ ರೂವಾರಿ ವಿದ್ಯಾರಣ್ಯರು ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಶಿಷ್ಯ ಮಾಧವನಿಗೂ (ಅರ್ಚಕರ ಮಗನಾಗಿದ್ದ ವಿದ್ಯಾರಣ್ಯರ ಪೂರ್ವಾಶ್ರಮದ ಹೆಸರು) ಕೇಳಿದ್ದರು: "ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?"
ಮಾಧವ ಉತ್ತರಿಸಿದ್ದ: "ಗುರುಗಳೇ, ಮನುಷ್ಯನಲ್ಲಿ ನಾನು ಎಂಬ ಅಹಮಿಕೆ ಇರುವವರೆಗೆ, ಏನನ್ನಾದರೂ ಸಾಧಿಸುವುದು ಕಷ್ಟ. ದೇವರ ಇಚ್ಛೆ ಇದ್ದರೆ, ಕಾಣುವ ದೇವರಾದ ಮನುಕುಲದ ಸೇವೆಗಾಗಿ, ಮೌಢ್ಯದ ಕಾರಣದಿಂದ ಮಲಗಿರುವ ದೇಶದ ಜಾಗೃತಿಗಾಗಿ ನನ್ನ ಜೀವನವನ್ನು ಉಪಯೋಗಿಸುವೆ. ನನ್ನ ದೇಶ ಮತ್ತು ಧರ್ಮದ ರಕ್ಷಣೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಮುಡುಪಿಡಬೇಕೆಂದಿದ್ದೇನೆ."
ಈ ಉತ್ತರದಿಂದ ಆನಂದಿತರಾದ ಗುರುಗಳು ಅವನನ್ನು ಆಲಂಗಿಸಿಕೊಂಡು, "ಮಗು, ಇತರರ ಒಳಿತಿಗೆ ಕೆಲಸ ಮಾಡುವುದು, ದೇಶ, ಧರ್ಮ, ಸ್ವಾತಂತ್ರ್ಯದ ಸಲುವಾಗಿ ಜೀವನ ಮೀಸಲಿಡುವುದು ಪವಿತ್ರವಾದುದು. ನಿನ್ನ ಆದರ್ಶದ ಪಾಲನೆಯಲ್ಲಿ ಯಶಸ್ವಿಯಾಗು. ನಿನ್ನ ಸೇವೆಯಿಂದ ಜಗತ್ತಿಗೆ ಒಳಿತಾಗಲಿ" ಎಂದು ಹೃತ್ಪೂರ್ವಕವಾಗಿ ಆಶೀರ್ವದಿಸಿದ್ದರು. ಮುಂದಿನದು ಇತಿಹಾಸ. ಹಕ್ಕ-ಬುಕ್ಕರನ್ನು ಮುಂದಿಟ್ಟುಕೊಂಡು ದೇಶ ಮತ್ತು ಧರ್ಮದ ಹಿತ ಕಾಪಾಡುವ ಧ್ಯೇಯದ ವಿಜಯನಗರ ಸಂಸ್ಥಾನ ಸ್ಥಾಪಿಸಿದರು. ವಿದ್ಯಾರಣ್ಯರು ಕೇವಲ ಮಾರ್ಗದರ್ಶಕರಾಗಿ ಉಳಿದರು. ಇದು ಆದರ್ಶ ಪುರೋಹಿತನ ಲಕ್ಷಣ.
     ಹಿಂದಿನ ರಾಜ-ಮಹಾರಾಜರುಗಳ ಆಸ್ಥಾನದಲ್ಲಿ ರಾಜಪುರೋಹಿತರುಗಳು ಇರುತ್ತಿದ್ದರು. ಅವರುಗಳು ಧಾರ್ಮಿಕ ಆಚರಣೆಗಳ ಕುರಿತಲ್ಲದೆ, ಸಮಸ್ಯೆಗಳು ಬಂದಾಗ ಅವನ್ನು ಎಲ್ಲಾ ದೃಷ್ಟಿಯಿಂದ ನೋಡಿ ಸೂಕ್ತ ಪರಿಹಾರ ರೂಪಿಸುವಲ್ಲಿ ರಾಜರಿಗೆ ನೆರವಾಗುತ್ತಿದ್ದರು. ಚಾಣಕ್ಯ, ಸಮರ್ಥ ಗುರು ರಾಮದಾಸರು ಮುಂತಾದ ನೂರಾರು ಮಾರ್ಗದರ್ಶಕರ ನೆರವಿನಿಂದ ಸನಾತನ ಸಂಸ್ಕೃತಿ ಜೀವಂತವಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡ, ಸಾವಿರಾರು ಜನರಿಗೆ ಪ್ರೇರೇಪಣೆ ನೀಡಿದ ಸಾಧು-ಸಂತರ ಸಂಖ್ಯೆ ಗಣನೀಯವಾಗಿದೆ. ಒಮ್ಮೆ ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯ ಸ್ವಾಮಿ ಶ್ರದ್ಧಾನಂದರ ಆಶ್ರಮಕ್ಕೆ ಬ್ರಿಟಿಷ್ ಪೋಲಿಸರು ನುಗ್ಗಿ ತಪಾಸಣೆ ನಡೆಸಿದ್ದರು. ಅವರಿಗೆ ಅಲ್ಲಿ ಬಾಂಬುಗಳನ್ನು ತಯಾರಿಸಲಾಗುತ್ತಿದೆಯೆಂಬ ಗುಮಾನಿ ಇತ್ತಂತೆ. ಹುಡುಕಿದರೂ ಏನೂ ಸಿಗದೆ ಪೋಲಿಸರು ವಾಪಸಾಗಿದ್ದರು. ನಂತರದಲ್ಲಿ ಶ್ರದ್ಧಾನಂದರು ಅಲ್ಲಿದ್ದ ತಮ್ಮ ಶಿಷ್ಯರನ್ನು ಉದ್ದೇಶಿಸಿ "ಕಣ್ಣ ಮುಂದೆಯೇ ಇದ್ದ ಜೀವಂತ ಬಾಂಬುಗಳನ್ನು ಪೋಲಿಸರು ಗುರುತಿಸದೇ ಹೋದರಲ್ಲಾ!" ಎಂದು ತಮಾಷೆ ಮಾಡಿದ್ದರು. ಅಲ್ಲಿ ತಯಾರಾಗುತ್ತಿದ್ದುದು ಕೃತಕ ಬಾಂಬುಗಳಲ್ಲ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಬಲ್ಲ ಜೀವಂತ ಶಿಷ್ಯರ ರೂಪದಲ್ಲಿನ ಬಾಂಬುಗಳು! ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದ ವಿವೇಕಾನಂದರು ನಮ್ಮ ಸಂಸ್ಕೃತಿಯ ಪುರೋಹಿತರು! ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ದಾರ್ಶನಿಕತೆ, ವಿದ್ವತ್ತುಗಳಿಗೆ ಹೆಸರಾದ ಸರ್ ಎಂ. ವಿಶ್ವೇಶ್ವರಯ್ಯ, ಡಿವಿಜಿ, ಡಾ. ರಾಧಾಕೃಷ್ಣನ್, ಅಬ್ದುಲ್ ಕಲಾಂ ಮುಂತಾದವರು, ನಾಡು-ನುಡಿಗಳಿಗೆ ಜೀವ ಸವೆಸಿದ ಅಸಂಖ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಗ್ರಣಿಗಳಾಗಿದ್ದು ಇತರರಿಗೆ ಮಾರ್ಗದರ್ಶಿಯಾಗಿದ್ದುದನ್ನು ಸ್ಮರಿಸಬೇಕು. ಇಂತಹವರು ನಿಜ ಪುರೋಹಿತರು, ಪುರದ ಹಿತ ಬಯಸುವವರು!
     ಪುರೋಹಿತನಾದವನ ಗುರುತರವಾದ ಹೊಣೆಗಾರಿಕೆ ಎಂದರೆ ಎಡವದೆ ನಡೆಯಬೇಕಾಗಿರುವುದು ಮತ್ತು ತಿಳಿದ ಜ್ಞಾನವನ್ನು ಸಮಾಜಕ್ಕೆ ತಿಳಿಸಿಕೊಡುವುದಾಗಿರುತ್ತದೆ. ಅಗ್ರಣಿಯಾದವನೇ ಎಡವಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವುದಲ್ಲದೆ ಪುರೋಹಿತರೆಲ್ಲರೂ ಅಂತಹವರೇ ಎಂಬ ಭಾವನೆ ಮೂಡಲು ಕಾರಣವಾಗುತ್ತದೆ. ಕೆಸರೆರಚಲು ಕಾಯುತ್ತಿರುವ ಜನರು ಮತ್ತು ಮಾಧ್ಯಮಗಳವರು ಇದಕ್ಕೆ ನೀರೆರೆಯುತ್ತಾರೆ. ನಿತ್ಯಾನಂದ, ರಾಘವೇಶ್ವರರ ಉದಾಹರಣೆಗಳು ಇಲ್ಲಿ ಪ್ರಸ್ತುತವೆನಿಸುತ್ತವೆ. ಕಾವಿ ಧರಿಸಿದವರೆಲ್ಲರೂ ಸಂತರಾಗಲಾರರು ಮತ್ತು ಸಂತರಾಗಲು ಕಾವಿಯನ್ನೇ ಧರಿಸಬೇಕೆಂದಿಲ್ಲ.  ತಿಳಿದ ಜ್ಞಾನವನ್ನು ಆಸಕ್ತರಿಗೆ ಹಂಚದಿರುವುದು ಸಹ 'ಅಸ್ತೇಯ'(ಕಳ್ಳತನ)ವೆನಿಸುತ್ತದೆ. 'ಸರ್ವೇ ಭವನ್ತು ಸುಖಿನಃ ಸರ್ವೇ ಸಂತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಶಂತು ಮಾ ಕಶ್ಚಿತ್ ದುಃಖಭಾಗ್ಭವೇತ್||'  ಎಂದು ಸಾರುವ ನೈಜ ಪುರೋಹಿತರು ನಾವಾಗೋಣ.
-ಕ.ವೆಂ.ನಾಗರಾಜ್.

Wednesday, November 25, 2015

ಹಾಸನದ ವೇದಭಾರತೀ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ನಾರಾಯಣಾನಂದ ಸರಸ್ವತೀ ಸ್ವಾಮೀಜಿಯವರು ಉಪನ್ಯಾಸ ಮಾಡಿದರು

[ಪೂಜ್ಯ ಶ್ರೀ ನಾರಾಯಣಾನಂದ ಸರಸ್ವತೀ ಸ್ವಾಮೀಜಿಯವರು ಹಾಸನದ ವೇದಭಾರತಿಯಲ್ಲಿ ದಿನಾಂಕ 25.11.2015 ರಂದು ನಡೆಸಿಕೊಟ್ಟ ಉಪನ್ಯಾಸನ ಮೊದಲ ಕಂತು. ಉಪನ್ಯಾಸದ ಬರಹರೂಪವನ್ನು ಸಿದ್ಧಪಡಿಸಿದವರು ಸಂಸ್ಕೃತ ಶಿಕ್ಷಕರಾದ ಶ್ರೀ ಭೈರಪ್ಪಾಜಿ]
ಉಪನ್ಯಾಸದ  ಆಡಿಯೋ  ಮೊದಲ ಕಂತು ಕೆಳಗಿನ ಕೊಂಡಿಯಲ್ಲಿ ಲಭ್ಯ
http://www.vedasudhe.com/wp-content/uploads/2015/11/Astika-Nastika.mp3

ನಾಸ್ತಿಕ ಯಾರು ಅಂತ ಹೇಳಿದ್ರೆ ಯಾರು ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲವೋ ಅವನು ನಾಸ್ತಿಕ. ದೇವರನ್ನ ನಂಬುವರಲ್ಲ ಅಂತ ಅರ್ಥ ಅಲ್ಲ. ನಂಬ್ತಾರೆ. ಆದರೆ ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲ. ಆದ್ದರಿಂದಲೆ ಅವರು ನ ಅಸ್ತಿ ಇತಿ ಮನ್ಯತೇ | ಇಲ್ಲ ಅಂತ ಹೇಳ್ತಾರೆ ವೇದವನ್ನು ನಂಬೋದಿಲ್ಲ ಅವರು. ಇನ್ನು ಷಡ್ದರ್ಷನಗಳಿವೆ. ಅವು ವೇದವನ್ನು ಪ್ರಮಾಣವಾಗಿ ಸ್ವೀಕಾರ ಮಾಡುತ್ತವೆ. ಆಸ್ತಿಕರು, ಅಸ್ತಿ, ಅಸ್ತಿ, ಅಸ್ತಿ ಇತಿ ಕಥ್ಯತೇ | ಆಸ್ತಿಕರು, ಏನು ಇದೆ ಅಂತ ಹೇಳ್ತಾರೆ ? ಅಸ್ತಿ ಇತಿ ಮನ್ಯತೆ | ಇದೆ ಅಂತ ಏನು ಇದೆ ? ಮಾನವನ ಒಂದು ಇಂದ್ರಿಯಕ್ಕೆ ನಿಲುಕದಂತ ಒಂದು ವಸ್ತು ಇದೆ. ದಿವ್ಯ ಅದ್ಭುತವಾದ ಒಂದು ಶಕ್ತಿ ಇದೆ. ಈ ಲೋಕ ಮಾತ್ರವಲ್ಲ ಬ್ರಹ್ಮಾಂಡವನ್ನು ನಡೆಸುತ್ತಿರುವ ಒಂದು ಶಕ್ತಿ ಇದೆ. ನಾವೆಲ್ಲರೂ ಅದನ್ನು ನಂಬಿದ್ದೇವೆ.​ ಅದು ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ. ಅದು​ ಗೋಚರವಾಗಲಿಕ್ಕೆ ಸಾಧ್ಯವಿಲ್ಲ.ಇಂದ್ರಿಯಾತೀವಾಗಿರುವಂತದ್ದು ಅದು. ಕಣ್ಣಿಂದ ಕಿವಿಗಳಿಂದ ಅಥವಾ ನಮ್ಮ ಯಾವುದೇ ಇಂದ್ರಿಯಗಳಿಂದ ಅದನ್ನು ಅನುಭವಿಸಲಿಕ್ಕೆ ಸಾಧ್ಯವಿಲ್ಲ. ನಿದ್ದೆಯಲ್ಲಿ ಶೂನ್ಯದ ಅವಸ್ಥೆಯಲ್ಲಿರುತ್ತೇವೆ. ನೋಡಿ ಅದು ಬ್ರಹ್ಮಾನಂದಸ್ಥಿತಿ. ಬ್ರಹ್ಮೈಕ್ಯದ ಸ್ಥಿತಿ. ಅದಕ್ಕೆ ಯಾರೋ ಒಬ್ಗರು ಹಿರಿಯರು ಹೇಳ್ತಾ ಇದ್ದರು. ನಾವು ನಿದ್ರೆ ಮಾಡಿದರೆ ಅದು ಅಲ್ಪ ಕಾಲದ ಮರಣ. ನಾವು ಸುಧೀರ್ಘವಾದ ನಿದ್ರೆ ಮಾಡಿದರೆ ಅದು ಮರಣ. ಅಲ್ಪ ಮರಣ ನಿದ್ರೆ. ಸುಧೀರ್ಘ ನಿದ್ರೆ ಮರಣ. ಎಷ್ಟು ಸೊಗಸಾಗಿ ಹೇಳಿದರು ನೋಡಿ. ಆ ಅಲ್ಪ ಮರಣದ ನಿದ್ರೆಯಲ್ಲಿ ​ ಹೇಗೆ ಇರುತ್ತೇವೆ ನೋಡಿ. ಆಗ ಬ್ರಹ್ಮೈಕ್ಯದ ಸ್ಥಿತಿಯಲ್ಲಿರುತ್ತೇವೆ. ಯಾರನ್ನಾದರೂ ಎಬ್ಬಿಸಿ ಕೇಳಿ. ಏನಪ್ಪಾ ಹೇಗಿತ್ತು ?​ ಅಂದರೆ​ ಅವರು ಹೇಳ್ತಾರೆ. ಹೇಗಿತ್ತು..... ಅಹಂ ಕಿಮಪಿ ನ ಜಾನಾಮಿ | ನನಗೇನು ಗೊತ್ತಾಗಲಿಲ್ಲ. ಆದರೆ ಒಂಥರಾ ಒಂಥರಾ ಸುಖವಾಗಿತ್ತು. ಸುಖವಾಗಿತ್ತು ? ಆದರೆ ಏನು ಗೊತ್ತಾಗಿಲ್ಲ ಅಂತ ಹೇಳ್ತೀರಿ. ಮತ್ತೆ ಸುಖವಾಗಿದ್ದೆ ಅಂತ ಹೇಳ್ತೀರಿ ? ಅಲ್ಲ ಅದೇನೋ ಒಂಥರಾ ಎಲ್ಲ ಮರೆತಿದ್ದೆ ನಾನು. ನಾನು ಯಾರು ಎಂಬುದನ್ನು ಕೂಡ ಮರೆತಿದ್ದೆ. ವಿಚಾರ ಮಾಡಿ. ಆತ ಆಸ್ತಿಕ. ಸತ್ಯದ ಅವಸ್ಥೆಯಲ್ಲಿರುತ್ತಾನೆ. ಅದಕ್ಕೆ ಮಾಂಡೂಕ್ಯ ಉಪನಿಷತ್ತಿನಲ್ಲಿ ಹೇಳ್ತಾರೆ. ಹೇಗೆ ನಾವು ನಿದ್ರಾ ಸ್ಥಿತಿಯಲ್ಲಿದ್ದೆವೋ ಅದೇ ರೀತಿ ಜಾಗೃತಾವಸ್ಥೆಯಲ್ಲಿದ್ದರೆ ಅಲೌಕಿಕ ಚಿಂತನೆಯಲ್ಲಿದ್ದೇವೆ ಅಂತ ಅರ್ಥ. ಮತ್ತೊಮ್ಮೆ ಹೇಳ್ತೇವೆ. ನಿದ್ರೆಯ ಅವಸ್ಥೆಯಲ್ಲಿ ಹೇಗಿರುತ್ತೇವೆಯೋ ಅದೇ ಅವಸ್ಥೆಯನ್ನು ಜಾಗೃತ ಅವಸ್ಥೆಯಲ್ಲಿ ಅನುಭವಿಸಿದಾಗ ಅದು ಅಲೌಕಿಕವಾದಂತಹ ಸ್ಥಿತಿ. ಅರ್ಥ ಆಯ್ತಲ್ಲ ?
ಈ ಆಸ್ತಿಕ ನಾಸ್ತಿಕ ಭೇದದಲ್ಲಿ ಲೋಕದ ಜನರಿದ್ದಾರೆ. ಅಲೌಕಿಕ ಅಂದರೆ ಅರ್ಥ ಏನು ? ಈ ಲೋಕಕ್ಕೂ ಮಿಗಿಲಾಗಿರುವಂತದ್ದು. ಇಂಗ್ಲಿಷ್ ನಲ್ಲಿ ಹೇಳ್ತೇವೆ. Here and hereafter ಇಲ್ಲಿ ಮತ್ತು ಇಲ್ಲಿಂದಾಚೆ ಯಾರೂ ಕೂಡ ಇದೂವರೆಗೆ ಇಲ್ಲಿಂದಾಚೆ ಹೋದವರು ಈ ಲೋಕದಿಂದ ಹೋದವರು ವಾಪಸ್ಸು ಬಂದು ನಮಗೆ ರಿಪೋರ್ಟ್ ಕೊಟ್ಟಿಲ್ಲ. ಓ ನೋಡಪ್ಪ ಅಲ್ಲಿ ಇದ್ದೀನಿ ನಾನು. ಅಲ್ಲಿದ್ದೆ. No past tense, no present tense ಅಲ್ಲಿ. ಹೋದರೆ ಹೋದಾಗೆ. ಮತ್ತೆ ಅವರು ಎಲ್ಲಿದ್ದಾರೋ ? ಯಾವ ಲೋಕ ಸೇರಿಕೊಂಡಿದ್ದಾರೋ ? ಯಾವ ಹುದ್ದೆ ? ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೋ ? ಏನು ಗೊತ್ತಿಲ್ಲ. ರಹಸ್ಯವಾಗಿದೆ ಅದು. ಆದರಿಂದಲೇ ನಾವು ವೇದಪ್ರಮಾಣವನ್ನು ತೆಗೆದು ಕೊಂಡಾಗ ಹೇಗೆ ಜೀವಿಸಬೇಕು ಅನ್ನೋದನ್ನ ಕಲಿಯೋದು ಮಾತ್ರವಲ್ಲ. ಹೇಗೆ ಜೀವಿಸಿದರೆ ಹೇಗೆ ಪ್ರಾಪ್ತಿಯಾಗುತ್ತೆ ಅನ್ನೋದು ಕೂಡ ವೇದದಲ್ಲಿದೆ. ಏಕೆಂದರೆ ಅದನ್ನು ಮಾನವನು ಹೇಳೋಕೆ ಸಾಧ್ಯವಿಲ್ಲ. ಮಾನವ ಶರೀರ ಬಿಟ್ಟರೆ ಬಿಟ್ಟ ಹಾಗೆ. ವಾಪಸ್ಸು ಬಂದು ಹೇಳೋದಿಲ್ಲ.