Pages

Friday, February 18, 2011

ಸ್ವರ್ಗೀಯ ನಂಜುಂಡಸ್ವಾಮಿ-ಒಂದು ಸ್ಮರಣೆ

ಇಲ್ಲೊಬ್ಬ ಮಹನೀಯರ ಸ್ಮರಣೆ ಮಾಡಬೇಕೆನಿಸಿದೆ. ಕೆ.ಎಸ್.ಆರ್.ಟಿ.ಸಿಯಲ್ಲಿ ಒಬ್ಬ ಸಾಮಾನ್ಯ ನೌಕರ.ಹೆಸರು ನಂಜುಂಡಸ್ವಾಮಿ.ಅರಕಲಗೂಡು ಸಮೀಪ ಬೆಳವಾಡಿ ಇವರ ಹುಟ್ಟೂರು. ತಂದೆ ಬಿ.ಎನ್.ಶ್ರೀಕಂಠಯ್ಯನವರು ಒಬ್ಬ ಪ್ರಾಥಮಿಕ ಶಾಲೆಯ ಟೀಚರ್. ಯಾವಾಗಲೂ ಮನೆ ತುಂಬಾ ಜನರು. ಬಡತನ ತುಂಬಿತುಳುಕುತ್ತಿದ್ದರೂ ಶ್ರೀಮಂತಹೃದಯ.ಅಲ್ಲಿಲ್ಲಿ ನೌಕರಿ ಮಾಡಿದಮೇಲೆ  ನಿವೃತ್ತಿ ನಂತರ ಹಾಸನ ಸೇರಿದರು.ಅದಕ್ಕೂ ಕಾರಣವಿತ್ತು. ಮಗ ನಂಜುಂಡಸ್ವಾಮಿ ಕೆ.ಎಸ್.ಆರ್.ಟಿ.ಸಿಯಲ್ಲಿ ಕೆಲಸಮಾಡುತ್ತಿದ್ದರೆ  ಸೊಸೆ ಸಾವಿತ್ರಮ್ಮ ಕೂಡ ಹಾಸನದಲ್ಲಿ ಪ್ರಾಥಮಿಕ ಶಾಲೆಯ ಟೀಚರ್ ಆಗಿ ನೌಕರಿಯಲ್ಲಿದ್ದರು. ಹಾಗಾಗಿ ನಂಜುಂಡಸ್ವಾಮಿಯವರ ಸಂಸಾರ ದೊಟ್ಟಿಗೇ ಒಂದು ಬಾಡಿಗೆ ಮನೆಯಲ್ಲಿ ಐದು ಜನ ಗಂಡುಮಕ್ಕಳು ಹಾಗೂ ನಾಲ್ಕು ಜನ ಹೆಣ್ಣುಮಕ್ಕಳೊಡನೆ  ವೃದ್ಧ ಶ್ರೀಕಂಠಯ್ಯ ದಂಪತಿಗಳ ಅವಿಭಕ್ತ ಕುಟುಂಬ  ಸಾಗಿತ್ತು.ಮಕ್ಕಳೆಲ್ಲಾ ಮದುವೆ ವಯಸ್ಸು ತಲುಪಿದರೂ ನಂಜುಂಡಸ್ವಾಮಿಯ ಹೊರತಾಗಿ ಯಾರಿಗೂ ಸರಿಯಾದ ನೌಕರಿ ಇಲ್ಲ. ಇವರ ಬದುಕೇ ಒಂದು ಹೋರಾಟದಂತಿದ್ದರೂ ಮನೆಯಲ್ಲಿ ನೆಂಟರಿಷ್ಟರಿಲ್ಲದ ದಿನವೇ ಇಲ್ಲ. ಪರಿಚಯದ ಯಾರೇ ಆಗಲೀ ಹಾಸನಕ್ಕೆ ಆಸ್ಪತ್ರೆಗೋ ಅಥವಾ ಯಾವುದಾದರೂ ಕೆಲಸಕ್ಕೋ ಬಂದರೆ ಇವರ ಮನೆ ಯಾವಾಗಲೂ ತೆರೆದಿರುತ್ತಿತ್ತು.
ಶ್ರೀಕಂಠಯ್ಯನವರ ತಮ್ಮನ ಮಗಳೇ ನನ್ನ ಪತ್ನಿ. ನಾನು ಆಗ ಅರಸೀಕೆರೆಯ ಸಮೀಪ ಗಂಡಸಿಯಲ್ಲಿ ಕೆ.ಇ.ಬಿ.ಯಲ್ಲಿ ಕೆಲಸಮಾಡುತ್ತಿದ್ದೆ. ನನ್ನ ಪತ್ನಿ  ಮೊದಲ ಹೆರಿಗೆಯಲ್ಲಿ ಬಲು ನೋವು ಅನುಭವಿಸಿ ಮಗುವನ್ನು ಕಳೆದುಕೊಂಡು ತಾಯಿಯ ಪ್ರಾಣವು ಉಳಿಯುವುದೇ ಕಷ್ಟವಾಗಿತ್ತು.ಅಂತೂ ನನ್ನ ಪತ್ನಿ ಬದುಕುಳಿದಿದ್ದಳು. ಕೆಲವು ವರ್ಷಗಳನಂತರ ಪುನ: ಗರ್ಭ ಧರಿಸಿದಾಗ  ನಂಜುಂಡಸ್ವಾಮಿ ಹೇಳಿದ್ದರು" ಶ್ರೀಧರ, ಈ ಭಾರಿ ಮಂಗಳನನ್ನು ನಮ್ಮ ಮನೆಯಲ್ಲಿ ಬಿಟ್ಟುಬಿಡು. ಅವಳನ್ನು ಪುಟ್ಟಮ್ಮನ ಶಾಪಿನಲ್ಲಿ ತೋರಿಸಿ ಸುಖವಾಗಿ ಹೆರಿಗೆ ಮಾಡಿಸುವುದು ನನ್ನ ಜವಾಬ್ದಾರಿ.ಇನ್ನೂ ಹೆರಿಗೆಯಾಗಲು ಒಂದು ತಿಂಗಳು ಕಾಲಾವಕಾಶವಿದ್ದರೂ ನನ್ನ ಪತ್ನಿಯನ್ನು ನಂಜುಂಡಸ್ವಾಮಿಯವರು ಕರೆಸಿಕೊಂಡೇಬಿಟ್ಟರು. ಕಾಲಕಾಲಕ್ಕೆ ಪರೀಕ್ಷೆ ನಡೆದಿತ್ತು. ಪತ್ನಿ ಅವರ ದೊಡ್ದಪ್ಪನ ಮನೆ ಸೇರಿದಮೇಲೆ ಆಗಿಂದಾಗ್ಗೆ ನಾನೂ ಹೋಗಿಬರುತ್ತಿದ್ದೆ. ಆ ದಿನಗಳಲ್ಲಿ ಅವರು ಮಾಡುತ್ತಿದ್ದ ಉಪಚಾರವನ್ನು ನೆನಪು ಮಾಡಿಕೊಂಡರೆ ಈಗ ಕಣ್ಣೀರು ಬರುತ್ತೆ. ಕಾರಣ ಕಳೆದ ಹದಿನೈದು ದಿನಗಳಲ್ಲಿ ನಂಜುಂಡಸ್ವಾಮಿಯವರು ಇಹಲೋಕವನ್ನು ತ್ಯಜಿಸಿದರು.
ಅವರ ಮನೆಯಲ್ಲಿ ಅಣ್ಣ-ತಮ್ಮಂದಿರಲ್ಲಿದ್ದ ವಾತ್ಸಲ್ಯವಂತೂ ಅನುಕರಣೀಯ. ಶ್ರೀಕಂಠಯ್ಯನವರಿಗೆ ಆರುಜನ ತಮ್ಮಂದಿರು. ಎಲ್ಲರೂ ಬೇರೆ ಬೇರೆಕಡೆ ಉದ್ಯೋಗದಲ್ಲಿದ್ದರು. ಅದಾಗಲೇ ಬಹುಪಾಲು ಎಲ್ಲರೂ ನಿವೃತ್ತಿಯ ಅಂಚಿನಲ್ಲಿದ್ದರು, ಕೆಲವರದ್ದು ನಿವೃತ್ತಿಯೂ ಆಗಿತ್ತು. ಅಂತಹ ವಯಸ್ಸಿನಲ್ಲೂ ಸಹ ಎಲ್ಲಾ ಆರೂ ಜನ ಅಣ್ಣತಮ್ಮಂದಿರು ಪ್ರತಿ ವರ್ಷ ಅವರ ಅಪ್ಪ-ಅಮ್ಮನ ಶ್ರಾದ್ಧವನ್ನು  ಒಟ್ಟಿಗೆ ಸೇರಿ ಮಾಡುತ್ತಿದ್ದ ಚಿತ್ರವನ್ನಂತೂ ಮರೆಯಲು ಸಾಧ್ಯವೇ ಇಲ್ಲ.[ಶ್ರಾದ್ಧ ಮಾಡಬೇಕೆ ಬೇಡವೇ-ಎಂಬುದು ಬೇರೆಯ ವಿಚಾರ]
ಮನೆಯಲ್ಲಿ ಯಾವಾಗಲೂ ನೆಂಟರಿಷ್ಟರು ಇದ್ದೇ ಇರುತ್ತಿದ್ದರು. ಹಾಗಾಗಿ ಪ್ರತೀ ದಿನವೂ ನಂಜುಂಡಸ್ವಾಮಿಯವರು ಆಫೀಸಿನಿಂದ ಮನೆಗೆ ಬರುವಾಗ ಒಂದು ಚೀಲದಲ್ಲಿ ತರಕಾರಿ ಕೊಂಡು ತರುತ್ತಿದ್ದುದು ಸಾಮಾನ್ಯವಾಗಿತ್ತು.ಶ್ರೀಕಂಠಯ್ಯನವರ ಧರ್ಮಪತ್ನಿ ಲಲಿತಮ್ಮನವರಂತೂ ಮನೆಗೆ ಬಂದ ಅತಿಥಿಗಳಿಗೆ ಉಪಚಾರಮಾಡುವುದೇ ಅವರ ದೈನಂದಿನ ಕಾಯಕವಾಗಿತ್ತು. ಅಡಿಗೆ ಮನೆಯಿಂದ ಅವರು ಹೊರಬಂದಿದ್ದನ್ನು ನಾನು ಕಾಣಲೇ ಇಲ್ಲ. ಬೇರೆ ಎಲ್ಲಾ ತಮ್ಮಂದಿರು ತಮ್ಮ ಕೈಲಾದ ಮಟ್ಟಿಗೆ ದುಡಿಯುತ್ತಿದ್ದರೂ ಸಾವಿತ್ರಮ್ಮ ಮತ್ತು ನಂಜುಂಡಸ್ವಾಮಿಯವರ ದುಡಿಮೆ ಮತ್ತು ಶ್ರಮದಿಂದ ಆ ಒಂದು ದೊಡ್ದ ಸಂಸಾರವು ಹಲವು ಜನರಿಗೆ ಆಶ್ರಯ ಕೊಟ್ಟಿತ್ತು. ಈಗ ಶ್ರೀಕಂಠಯ್ಯನವರಾಗಲೀ ಲಲಿತಮ್ಮನವರಾಗಲೀ ನಂಜುಂಡಸ್ವಾಮಿಯವರಾಗಲೀ ನಮ್ಮ ಮಧ್ಯೆ ಇಲ್ಲ. ಆದರೆ ಇವರಿಂದ ಉಪಕೃತರಾದ ನೂರಾರು ಜನರ ಸ್ಮರಣೆಯಿಂದ ಇವರುಗಳು ಹೇಗೆ ತಾನೇ ದೂರವಾದಾರು?

No comments:

Post a Comment