Pages

Saturday, December 3, 2011

ಚಹಾಇಲ್ಲ.

ಧಾರವಾಡದ ಚಿಂತಕ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀ ಸುರೇಶ ಕುಲಕರ್ಣಿಯವರು ನಿನ್ನೆ ನಮ್ಮ ಮನೆಯಲ್ಲಿ ನಡೆದ ಸತ್ಸಂಗಕ್ಕೆ ಬಂದಿದ್ದರು. ಅವರ ಜೀವನದ ಒಂದು ಘಟನೆ ಅವರ ಮಾತಿನಲ್ಲಿ ಕೇಳಿದಾಗ ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಅಭಿಮಾನ ಇಮ್ಮಡಿಯಾಯ್ತು. ಆ ಘಟನೆ ನೀವೂ ಕೇಳಿ.......
ಕುಲಕರ್ಣಿಯವರ ವಿಧ್ಯಾರ್ಥಿ ಜೀವನದ ಒಂದು ಘಟನೆ. ರಾತ್ರಿ  ಬಹಳ ಹೊತ್ತು ನಿದ್ರೆಗೆಟ್ಟು  ಕೆಲವು ಪೈಂಟಿಂಗ್ ಗಳನ್ನು ಮಾಡಿದ್ದರು. ಬೆಳಗಾಗೆದ್ದಾಗ    ಅಮ್ಮನ ಹತ್ತಿರ ಹೋಗಿ ಅರ್ಧ ಲೋಟ ಚಹಾ ಕೇಳಿದರು. ಅಮ್ಮ ಹೇಳಿದರು. 'ಇಲ್ಲ." ಸಕ್ಕರೆ ಖಾಲಿಯಾಗಿದೆ. ಸ್ವಲ್ಪ ಸಮಯ ಕಳೆಯಿತು. ಮನೆಗೆ ಯಾರೋ ಮೂರು ಜನ ಅತಿಥಿಗಳು ಬಂದರು. ಅಮ್ಮ ಅವರನ್ನು ಆದರದಿಂದ ಬರಮಾಡಿಕೊಂಡು ಚಹಾ ಕೊಟ್ಟಿದ್ದೆ ಅಲ್ಲದೆ  ಮಧ್ಯಾಹ್ನ ಊಟ ಮುಗಿಸಿಯೇ ಹೋಗಬೇಕೆಂದು ತಾಕೀತು ಮಾಡಿದ್ದರು. ಇದನ್ನು ಕಂಡ ಸುರೇಶ ಕುಲಕರ್ಣಿಯವರಿಗೆ ಅಮ್ಮನ ಮೇಲೆ ಸಿಟ್ಟು ಬಂದಿತ್ತು. ತಾನು ಕೇಳಿದರೆ ಅಮ್ಮ  ಸಕ್ಕರೆ ಇಲ್ಲವೆಂದು ಚಹಾ ಕೊಡಲಿಲ್ಲ, ಆದರೆ  ಮನೆಗೆ ಬಂದ ಅತಿಥಿಗಳಿಗೆ ಸಂತೋಷ ದಿಂದಲೇ ಚಹಾ ಮಾಡಿಕೊಟ್ಟಳಲ್ಲಾ!!
ಅಷ್ಟೇ ಅಲ್ಲ ಮಧ್ಯಾಹ್ನ ಊಟಕ್ಕೂ ಕೀರು ಮಾಡಿ ಬಡಿಸಿದ್ದಳು. ಕುಲಕರ್ಣಿಯವರಿಗೆ ಸಿಟ್ಟು ಇನ್ನೂ ಹೆಚ್ಚಾಯ್ತು. ಅಮ್ಮನ ಮೇಲೆ ಸಿಟ್ಟಾಗಿಯೇ   ಇದ್ದರು. ಅದನ್ನು ಗಮನಿಸಿದ ಅಮ್ಮ  ಒಂದು ಕಪ್ ಚಹಾ ಮಾಡಿಕೊಂಡು ಮಗನಿಗೆ ಕೊಡಲು ಹೋದರು. ಮಗ ಸಿಟ್ಟಾಗಿ" ನನಗೆ ನಿನ್ನ ಚಹಾ ಬೇಡ, ಅದನ್ನು ಮೋರಿಗೆ ಚೆಲ್ಲು! ಎಂದು ಸಿಟ್ಟಾಗಿ ಹೇಳಿದಾಗ ಅಮ್ಮ ಹಾಗೆಯೇ ಮಾಡಿದರು. ಕಪ್ ತೊಳೆದು ಅದರ ಸ್ಥಾನದಲ್ಲಿರಿಸಿ ಮೌನವಾದರು. 
ಬಂದ ಅತಿಥಿಗಳು ಮನೆಯಿಂದ ತೆರಳಿದರೂ ಮಗನ ಸಿಟ್ಟು ಇಳಿದಿರಲಿಲ್ಲ. ಮಗನ ಹತ್ತಿರ ಹೋದ ತಾಯಿ ಮಗನನ್ನು ಅಡಿಗೆ ಮನೆಗೆ ಕರೆದು " ಇಲ್ಲಿ ನೋಡೋ  ಈ  ಡಬ್ಬದ ಸಾಲುಗಳಲ್ಲಿ ಮೇಲಿನ ಸಾಲು ಇದೆಯಲ್ಲಾ, ಅದು ಅತಿಥಿಗಳಿಗಾಗಿ ಮೀಸಲಿಟ್ಟ ಡಬ್ಬಗಳು! ನೋಡು ಇವುಗಳಲ್ಲಿ  ಚಹಪುಡಿ, ಸಕ್ಕರೆ, ಬೇಳೆ....ಇತ್ಯಾದಿ  ಅಡಿಗೆಗೆ ಬೇಕಾಗುವ ಎಲ್ಲಾ ಸಾಮಾನುಗಳೂ ಇವೆ. ಪ್ರತಿ ತಿಂಗಳು ಅಂಗಡಿಯಿಂದ ಸಾಮಾನು ಕೊಂಡು ತಂದಾಗ ಎಲ್ಲದರಲ್ಲೂ ಒಂದು ಹಿಡಿಯನ್ನು  ಈ ಡಬ್ಬಗಳಿಗೆ ಮೊದಲು ಹಾಕುವೆ. ನಂತರ ನಮ್ಮ ಮನೆಬಳಕೆಗೆ ಇರುವ ಡಬ್ಬಗಳನ್ನು ತುಂಬಿಸುವೆ. ಯಾವುದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಯಾರೇ ಅತಿಥಿಗಳು ಬಂದರೂ ಅವರ ಆತಿಥ್ಯಕ್ಕೆ ಕಷ್ಟವಾಗಬಾರದು . ಆದರೆ ಇವತ್ತು ಮನೆಬಳಕೆಯ ವಸ್ತುಗಳಲ್ಲಿ ಸಕ್ಕರೆ ಮುಗಿದುಹೋಗಿದೆ. ಅತಿಥಿಗಳಿಗಾಗಿ ಇಟ್ಟಿರುವುದರಲ್ಲಿ ನಿನಗೆ ಚಹಾ ಮಾಡಿಕೊಟ್ಟರೆ ನೀನು ನಮ್ಮ ಮನೆಯ ಅತಿಥಿಯಾಗುತ್ತೀಯೇ. ನೀನು ನಮ್ಮ ಮನೆಯ ಮಗನಾಗಿರಬೇಕೋ ಅಥವಾ  ಅತಿಥಿಯಾಗಬೇಕೋ ? ನೀನೇ ಹೇಳು. ಅದಕ್ಕಾಗಿಯೇ ನೀನು ಚಹಾ ಮೋರಿಗೆ ಚೆಲ್ಲು ಎಂದೊಡನೆಯೇ  ನಾನು ಚೆಲ್ಲಿದೆ. ನನ್ನ ಮಗ ನನಗೆ ಮಗನಾಗಿಯೇ ಇರಬೇಕೆಂಬುದು ನನ್ನಿಚ್ಚೆ!!

ಘಟನೆ ಓದಿದಿರಾ?  ಇದಕ್ಕೆ ವಿವರಣೆ ಬೇಕಾ? ನಮ್ಮ ಭಾರತೀಯ ಗೃಹಿಣಿ ಹೇಗಿರಬೇಕೆಂಬುದಕ್ಕೆ ಕುಲಕರ್ಣಿಯವರ ತಾಯಿ ಆದರ್ಶವಲ್ಲವೇ?


                

ಸಂಪಾದಕೀಯ: ಮಡೆಸ್ನಾನದ ಜತೆಗೆ ಪಂಕ್ತಿಭೇದವೂ ನಿಷೇಧವಾಗಬೇಕಲ್ಲವೇ?

ಸಂಪಾದಕೀಯ: ಮಡೆಸ್ನಾನದ ಜತೆಗೆ ಪಂಕ್ತಿಭೇದವೂ ನಿಷೇಧವಾಗಬೇಕಲ್ಲವೇ?: ಮಡೆಸ್ನಾನದ ಬಗ್ಗೆ ಎದ್ದಿರುವ ವಿವಾದ ದೊಡ್ಡದಾಗಿ ಬೆಳೆಯುತ್ತಲೇ ಇದೆ. ಮಡೆಸ್ನಾನ ವಿರೋಧಿಸಿ ಪ್ರತಿಭಟನೆಗೆ ತೆರಳಿದ್ದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಎಂಬ ಸಂಘಟನೆಯ ಶ...

Friday, December 2, 2011

ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ !

ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ !

ವಾಸ್ತವಿಕವಾಗಿ ಹೇಳಬೇಕಾದರೆ ನಾನು ದೈನಿಕ ಧಾರಾವಾಹಿಗಳನ್ನು ನೋಡುವುದಿಲ್ಲ. ಆದರೂ ಆರಂಭದಿಂದ ಇಲ್ಲೀವರೆಗೂ ಆಗಾಗ ಆಗಾಗ ನನ್ನನ್ನು ಸೆಳೆದಿದ್ದು ಒಂದೇ ಒಂದು ಧಾರಾವಾಹಿ ’ಶ್ರೀ ಗುರು ರಾಘವೇಂದ್ರ ವೈಭವ’. ಭರತಭೂಮಿ ಕಂಡ ತಪೋನಿಧಿಗಳಲ್ಲಿ ಮಂಚಾಲೆಯ ಶ್ರೀಗುರು ರಾಘವೇಂದ್ರ ತೀರ್ಥರೂ ಒಬ್ಬರು. ಅವರ ಹುಟ್ಟಿನಿಂದ ಹಿಡಿದು ನಡೆದ ಬಹುತೇಕ ಎಲ್ಲಾ ಘಟನೆಗಳನ್ನೂ ಸವಿಸ್ತಾರವಾಗಿಯೂ ಸಮರ್ಪಕವಾಗಿಯೂ ಜನರಿಗೆ ತಲ್ಪಿಸುವಲ್ಲಿ ನಿರ್ದೇಶಕ ಬ.ಲ.ಸುರೇಶ್ ಯಶಸ್ವಿಯಾಗಿದ್ದಾರೆ. ಆಯಾ ಪಾತ್ರಗಳ ಪೋಷಣೆಗಳನ್ನು ಎಲ್ಲಾ ಕಲಾವಿದರೂ ಅಷ್ಟೇ ಭಕ್ತಿಯಿಂದ, ಪ್ರೀತಿಯಿಂದ ನಿರ್ವಹಿಸುತ್ತಿದ್ದಾರೆ. ಅದರಲ್ಲಂತೂ ರಾಘವೇಂದ್ರರ ಪಾತ್ರಧಾರಿ ಆ ಪಾತ್ರಕ್ಕೆ ಹೇಳಿಮಾಡಿಸಿದ ಹಾಗಿರುವುದು ನನಗೆ ಬಹಳ ಖುಷಿಕೊಟ್ಟಿದೆ. ಭೂಮಿಕೆಯನ್ನು ಹಂಚುವುದರಲ್ಲೂ ಕಲಾವಿದರ ಆಯ್ಕೆಯಲ್ಲೂ ನಿರ್ದೇಶಕರು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅನೇಕ ಹಾಡುಗಳನ್ನೂ ದಾಸರ ಪದಗಳನ್ನೂ ಒಳಗೊಂಡಿರುವ ಧಾರಾವಾಹಿಯಲ್ಲಿ ಕೆಲವು ಹಾಡುಗಳಂತೂ ಅಮೋಘವಾಗಿವೆ, ವಿದ್ಯಾಭೂಷಣರ ಕಂಠಸಿರಿ ಮನಸ್ಸನ್ನು ಸಹಜಸ್ಥಿತಿಯಲ್ಲಿ ಗೆದ್ದುಬಿಡುತ್ತದೆ. ಒಂದು ದಿನ ಹೀಗೇ ತಡವಾಗಿ ಬಂದು ಊಟಕ್ಕೆ ಕುಂತಿದ್ದೆ, ಹತ್ತು ಗಂಟೆಯಾಗಿತ್ತು. ಸಾಮಾನ್ಯವಾಗಿ ಆ ಹೊತ್ತಿಗೆ ಇದ್ದರೆ ಟಿವಿ ೯ ಬಿತ್ತರಿಸುವ ಜಸ್ಟ್ ಬೆಂಗಳೂರು ನೋಡುವುದು ನನ್ನ ಅಭ್ಯಾಸ. ಆದರೆ ಆ ದಿನ ಮಾತ್ರ ಅದರ ಬದಲು ಯಾಕೋ ಸುವರ್ಣ ವಾಹಿನಿಯನ್ನು ನೋಡಲು ಆರಂಭಿಸಿದ್ದೆ. ಸಂಗೀತ ವಾದ್ಯ ಪರಿಕಕರಗಳಿಲ್ಲದೇ ಸಹಜವಾಗಿ ಕೈತಟ್ಟಿಕೊಂಡು ಹಾಡಿದ ಒಂದು ಹಾಡು ನನ್ನನ್ನು ಇನ್ನೂ ಹಿಡಿದಿಟ್ಟಿದೆ. ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಮಂತ್ರಾಲಯ ಮಠದ ಗುರುವಿನ ಶಿಷ್ಯರೂ ಮಠದ ಕೆಲಸಗಳಲ್ಲಿ ನಿರತರಾಗಿರುವ ಜನರು ಸೇರಿ ಒಂದೆಡೆ ಕುಳಿತು ಹಾಡುವ ಸನ್ನಿವೇಶ. ಶ್ವೇತವಸ್ತ್ರಧಾರೀ ಬ್ರಾಹ್ಮಣ ವೇಷದ ಹತ್ತಾರು ಮಂದಿ ಕೂತು ಹಾಡಿದ ಆ ದೃಶ್ಯಾವಳಿ ಈಗಲೂ ಕಾಡುತ್ತದೆ.

ಪಂಢರಾಪುರವೆಂಬ ಒಂದು ನಗರ
ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ....

ನಿಜಕ್ಕೂ ವಿಠೋಬ ಸಾಹುಕಾರನೇ ಹೌದು. ಮಹಾರಾಷ್ಟ್ರದ ಇಂದಿನ ಮರಾಠಾವಾಡಾ[ಹಿಂದೆ ವಿದರ್ಭದಲ್ಲಿತ್ತು]ದಲ್ಲಿರುವ ತನ್ನ ಆಲಯ ಶ್ರೀಮಂತಿಕೆಯಿಂದ ಕೂಡಿದ್ದರೂ ಆ ಜಿಲ್ಲೆಯಾದ್ಯಂತ ರೈತರು ಅನುಭವಿಸುತ್ತಿರುವ ಯಾತನೆಯನ್ನು ಮಾತ್ರ ಆತ ಯಾಕೆ ಕೇಳುತ್ತಿಲ್ಲ ಎಂಬುದು ನನಗೆ ಪ್ರಶ್ನೆಯಾಗಿ ಹಾಗೇ ಉಳಿದಿದೆ! ವರ್ಷವೂ ಕೋಟ್ಯಂತರ ಜನ ಯಾತ್ರೆಬಂದು ದರ್ಶನಮಾಡಿ ಪುನೀತರಾಗುವ ಸ್ಥಳ ಪಂಢರಾಪುರ. ಪಂಢರೀನಾಥನಿಗೆ ಎರಡೇ ಹಸ್ತ! ಸೊಂಟದಮೇಲೆ ಕೈಇಟ್ಟು ನಿಂತ ವಿಠಲನಿಗೆ ಮೀನಿನಾಕೃತಿಯ ಎರಡು ಕಿವಿಗಳು. ಅನೇಕ ಸಾಧು ಸಂತರು, ಸನ್ಯಾಸಿಗಳು, ವಿರಕ್ತರು ಹೀಗೇ ಹಲವಾರು ತೆರನಾದ ಭಕ್ತ-ಭಾವುಕರು ದಿಂಡಿ ಭಜನೆಮಾಡುವುದು ಅಲ್ಲಿನ ವಿಶೇಷ. ವಿಠೋಬ ಎಂದುಬಿಟ್ಟರೆ ಮಹಾರಾಷ್ಟ್ರದ ಜನತೆಗೆ ಅಚ್ಚುಮೆಚ್ಚು. ಹಾಡುತ್ತಾ ಕುಣಿಯುತ್ತಾ ಆತನನ್ನು ಓಲೈಸುವಲ್ಲಿ ಸಫಲರಾಗುತ್ತಾರೆ. ಉತ್ತರಕರ್ನಾಟಕದ ಗಾಣಗಾಪುರ ಕ್ಷೇತ್ರಕ್ಕೆ ಬಂದವರು ಪಂಢರಾಪುರಕ್ಕೆ ಹೋಗುವುದು ಅಥವಾ ಪಂಢರಾಪುರಕ್ಕೆ ಬಂದವರು ಗಾಣಗಾಪುರಕ್ಕೆ ಬರುವುದು ಯಾತ್ರಾರ್ಥಿಗಳ ರೂಢಿ. ಕೆಲವೊಮ್ಮೆ ಈ ಎರಡರ ಜೊತೆಗೆ ಶಿರಡಿ ಕೂಡ ಯಾತ್ರೆಯ ಪಟ್ಟಿಗೆ ಸೇರ್ಪಡೆಗೊಳ್ಳುತ್ತದೆ.


ವಿಠೋಬ ಭಕ್ತಾನುರಾಗಿ. ಭಜನೆಮಾಡುತ್ತಾ ಹೃದಯವನ್ನು ಸಮರ್ಪಿಸಿದರೆ ಏನನ್ನೇ ಕೇಳಿದರೂ ಒಲ್ಲೆ ಎನ್ನದ ಸ್ನೇಹಿತ! ಆತನ ಮೇಲೆ ಮರಾಠಿ ಅಭಂಗಗಳು, ಭಜನೆಗಳು, ಸಂಕೀರ್ತನೆಗಳು, ದೇವರನಾಮಗಳು ಅದೆಷ್ಟೋ ಇವೆ. ಕೆಲವೊಮ್ಮೆ ಅಹೋರಾತ್ರಿ ಜಾಗರಣೆನಡೆಸುತ್ತಾ ಮಾಡುವ ಭಜನೆಗಳಲ್ಲಿ ಕುಣಿತವೂ ಸೇರಿರುತ್ತದೆ. ನಾವು ಚಿಕ್ಕವರಿದ್ದಾಗ ನಮ್ಮೂರಿನ ಮಹಾವಿಷ್ಣು ದೇವಸ್ಥಾನದಲ್ಲೂ ಒಂದಷ್ಟು ಮರಾಠಿ ಭಜನೆಗಳನ್ನು ಹಿರಿಯರು ನಮಗೆ ಹೇಳಿಕೊಟ್ಟಿದ್ದರು. ಅರ್ಥ ಗೊತ್ತಿರಲಿಲ್ಲ. ಆದರೂ ಹಾಡಲು ತುಂಬಾ ಹಾಯಾಗಿರುವುದರಿಂದ ಭಜನೆಮಾಡುತ್ತಿದ್ದೆವು. " ಜೈ ಜೈ ವಿಠೋಬಾ ರಕುಮಾಯಿ ಮಹರಾಜ ವಿಠೋಬಾ ರಕುಮಾಯಿ "--ಇಂತಹ ಹಲವು ಹಾಡುಗಳು ಇಂದಿಗೂ ನೆನಪಿಗೆ ಬರುತ್ತವೆ. ಬೆಳಗಿನಜಾವದಲ್ಲಿ ಮರಾಠಿ ಭಜನೆಗಳು ಎಷ್ಟು ಚೆನ್ನಾಗಿರುತ್ತವೆ ಎಂದರೆ ಆ ಮಾಯೆಯಲ್ಲಿ ನಾವು ದೇವರನ್ನು ಕಾಣುತ್ತಾ ಭಾಷೆಯ ಗಡಿಯನ್ನೂ ಮೀರಿಬಿಡುತ್ತೇವೆ. ಯಾಕೆ ಈ ರೀತಿಯ ಭಜನೆ ಅಥವಾ ಸೇವೆ ವಿಠೋಬನಿಗೆ ಪ್ರೀತಿ ಎಂಬುದರ ಕುರಿತು ಅಲ್ಲಿನ ಸ್ಥಳಪುರಾಣ ಕೇಳಿ ಸ್ವಾರಸ್ಯಕರವಾಗಿದೆ:

ದಂಡಿರವನ ಎಂಬ ಅಡವಿಯಲ್ಲಿ ಜಾನು ಮತ್ತು ಸತ್ಯವತಿ ಎಂಬ ಬಡ ದಂಪತಿ ವಾಸವಾಗಿರುತ್ತಾರೆ. ಅವರಿಗೊಬ್ಬ ಮಗ ಪುಂಡಲೀಕ. ಮಗ ಪ್ರಾಯಪ್ರಬುದ್ಧನಾಗಿ ಮದುವೆಯಾಗುವವರೆಗೆ ತಂದೆ-ತಾಯಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದ. ಯಾವಾಗ ಮದುವೆಯಾಯಿತೋ ಆಗ ಪುಂಡಲೀಕನಿಗೆ ದುರ್ಬುದ್ಧಿ ಬಂದುಬಿಟ್ಟಿತು. ಯುವ ದಂಪತಿ ಮುದಿ ದಂಪತಿಯನ್ನು ತೀರಾ ಹೀನಾಯವಾಗಿ ಕಾಣಹತ್ತಿದರು. ಅವರನ್ನು ಪೀಡಿಸಿ ದುಡಿಸಿಕೊಳ್ಳ ಹತ್ತಿದ್ದರು. ಮಗ-ಸೊಸೆ ಕೊಡುವ ಕಷ್ಟ ತಾಳಲಾರದೇ ವೃದ್ಧ ದಂಪತಿ ತಾವು ಕಾಶೀ ಯಾತ್ರೆಗೆ ಹೋಗುವುದಾಗಿ ಸುಮ್ಮನೇ ಹೇಳಿದರು. ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡ ಪುಂಡಲೀಕ ತಾವೂ ನಿಮ್ಮ ಜೊತೆಗೂಡುತ್ತೇವೆ ಎಂದ ಮಾತ್ರವಲ್ಲ ಎಲ್ಲರೂ ಹೊರಡುವಂತೇ ಮಾಡಿಬಿಟ್ಟ. ಮಗ-ಸೊಸೆ ಕುದುರೆಯೊಂದರ ಮೇಲೆ ಪ್ರಯಾಣಿಸುತ್ತಿದ್ದರೆ ಅಪ್ಪ-ಅಮ್ಮ ಕುದುರೆಯ ಪಕ್ಕ ಕಾಲ್ನಡಿಗೆಯಲ್ಲಿ ಸಾಗಿದ್ದರು.

ನಿತ್ಯವೂ ಆಹಾರಕ್ಕಾಗಿ ಅಪ್ಪ-ಅಮ್ಮ ಅದೂ ಇದೂ ಕೆಲಸಮಾಡುವಂತೇ ಆಜ್ಞಾಪಿಸುತ್ತಿದ್ದ ಪುಂಡಲೀಕ ರಾತ್ರಿ ಎಲ್ಲಾದರೂ ತಂಗುತ್ತಾ ಅಲ್ಲಿ ತನ್ನ ಕುದುರೆಯನ್ನು ಸ್ವಚ್ಛಗೊಳಿಸಿ ಅಣಿಗೊಳಿಸಲು ಅಪ್ಪ-ಅಮ್ಮನಿಗೆ ತಾಕೀತು ಮಾಡುತ್ತಿದ್ದ. ಯಾಕಾದರೂ ಯಾತ್ರೆಗೆ ಹೋಗುತ್ತೇವೆಂದು ಹೇಳಿದೆವಪ್ಪಾ ಎನಿಸುವಷ್ಟು ತೊಂದರೆ ಕೊಡುತ್ತಿದ್ದ ಮಗನ ನಡಾವಳಿಯನ್ನು ಅನುಭವಿಸಿ ಪಾಲಕರು ಕಣ್ಣೀರಿನಲ್ಲಿ ಕೈತೊಳೆಯುತ್ತಾ ದಿನದೂಡುತ್ತಿದ್ದರು. ಬಹುಪ್ರಯಾಸದಿಂದ ಅಂತೂ ಕಾಶೀಪಟ್ಟಣವನ್ನು ತಲ್ಪಿದರು. ಅಲ್ಲಿದ್ದ ಕುಕ್ಕುಟಸ್ವಾಮಿ ಎಂಬ ಸಂತರ ಆಶ್ರಮದಲ್ಲಿ ತಂಗಲು ಏರ್ಪಾಡುಮಾಡಿಕೊಂಡರು. ನಡೆದೂ ನಡೆದೂ ಇನ್ನಾಗದು ಎಂಬ ಸ್ಥಿತಿಗೆ ತಲ್ಪಿದ್ದ ವೃದ್ಧ ದಂಪತಿಗೆ ವಾರದ ಕಾಲವಾದರೂ ಕಾಶಿಯಲ್ಲೇ ಇರಬೇಕಾದ ಅನಿವಾರ್ಯತೆ ಇತ್ತು. ಅದಕ್ಕೆ ಆಶ್ರಮದಲ್ಲಿ ಅನುಮತಿಯೂ ಸಿಕ್ಕಿತು. ಕಾಶೀ ವಿಶ್ವನಾಥನನ್ನು ನೆನೆಯುತ್ತಾ ದಂಪತಿ ಹಾಗೇ ವಿರಮಿಸುತ್ತಿದ್ದರು.

ಒಂದು ರಾತ್ರಿ ಅಕಸ್ಮಾತ್ ಮಗ ಪುಂಡಲೀಕನಿಗೆ ಯಾಕೋ ಎಚ್ಚರವಾಗಿಹೋಯ್ತು. ನೋಡುತ್ತಾನೆ ಹೊರಗಿನಿಂದ ೪-೫ ಮಂದಿ ಕೊಳೆಯಾದ ಸೀರೆ ಧರಿಸಿದ ಸುಂದರ ತರುಣಿಯರು ಕುಕ್ಕುಟಸ್ವಾಮಿಯ ಆಶ್ರಮವನ್ನು ಪ್ರವೇಶಿಸುತ್ತಿದ್ದರು. ಹಾಗೆ ಬಂದವರು ಸ್ವಾಮಿಯ ಮನೆಯನ್ನು ಗುಡಿಸಿ, ಬೇಕಾದ ಸಾಮಗ್ರಿಗಳನ್ನು ಅಣಿಗೊಳಿಸಿಟ್ಟು ನಂತರ ಆಶ್ರಮದ ಪ್ರಾರ್ಥನಾ ಕೊಠಡಿಗೆ ತೆರಳಿದರು. ತುಸು ಹೊತ್ತಿನ ಬಳಿಕ ಮರಳಿ ಹೊರಹೊರಟ ಅವರ ಸೀರೆಗಳು ಆಗ ಪರಿಶುಭ್ರವಾಗಿದ್ದವು! ಇದೆಲ್ಲಾ ಏನು ವಿಚಿತ್ರ ಎಂದು ತನ್ನ ಕಣ್ಣುಗಳನ್ನೇ ನಂಬದಾದ ಪುಂಡಲೀಕ ಮಾರನೇ ರಾತ್ರಿಯೂ ಎಚ್ಚೆತ್ತುಕೊಂಡಿದ್ದು ತರುಣಿಯರು ಬಂದಾಗ ಅವರ ಹತ್ತಿರ ನಡೆದು " ನೀವೆಲ್ಲಾ ಯಾರು? ಇಲ್ಲಿಗೆ ಯಾಕೆ ಹೀಗೆ ಬರುತ್ತೀರಿ? ನಿಮ್ಮ ಬಟ್ಟೆಗಳು ಅದು ಹೇಗೆ ಕ್ಷಣಾರ್ಧದಲ್ಲಿ ಶುಭ್ರಗೊಳ್ಳುತ್ತವೆ ? " ಎಂದೆಲ್ಲಾ ಪ್ರಶ್ನೆಗಳನ್ನಿತ್ತನು. ತಾವು ಪುಣ್ಯನದಿಗಳಾದ ಗಂಗಾ, ಯಮುನಾ, ಸರಸ್ವತೀ ಮೊದಲಾದವರೆಂತಲೂ ಜನರು ಪ್ರತಿನಿತ್ಯ ತಮ್ಮ ಪಾಪಗಳನ್ನು ತೊಳೆಯಲು ನದಿಗಳಲ್ಲಿ ಸ್ನಾನಮಾಡುವುದರಿಂದ ತಮ್ಮ ಸೀರೆಗಳು ಮಲಿನವಾಗುತ್ತವೆ ಎಂದೂ ತಿಳಿಸಿ " ತಂದೆ-ತಾಯಿಗಳಿಗೆ ಕಷ್ಟಕೊಡುತ್ತಿರುವ ನಿನ್ನಂತಹ ಪರಮಪಾಪಿಯನ್ನು ಮಾತ್ರ ಕಾಣಲೇ ಇಲ್ಲ" ಎಂದುಬಿಟ್ಟರು.

ಪುಂಡಲೀಕನಿಗೆ ತಾನು ಮಡುತ್ತಿರುವ ತಪ್ಪಿನ ಅರಿವಾಯಿತು. ಆ ಕ್ಷಣದಿಂದಲೇ ಪುಂಡಲೀಕ ಬದಲಾಗಿ ಹೋದ. ತಂದೆ-ತಾಯಿಗಳ ಸೇವೆಯೇ ತನ್ನ ಪರಮಭಾಗ್ಯ ಮತ್ತು ಆದ್ಯ ಕರ್ತವ್ಯ ಎಂದುಕೊಂಡ ಆತ ತನಗೇ ಶರೀರ ಸ್ವಾಸ್ಥ್ಯವಿಲ್ಲದಿದ್ದರೂ ಮಾತಾ-ಪಿತೃಗಳ ಸೇವೆಯನ್ನು ತೊರೆಯದಾದ. ಮಗನಲ್ಲಾದ ಈ ಅಪೂರ್ವ ಬದಲಾವಣೆ ಕಂಡು ದೇವರೇ ಅವನಿಗೆ ಬುದ್ಧಿ ಕೊಟ್ಟಿರಬೇಕೆಂದು ವೃದ್ಧರು ತಿಳಿದರು. ಯಾವುದೇ ಕೆಲಸದಲ್ಲೂ ತನ್ನ ತಾದಾತ್ಮ್ಯತೆ ಇದ್ದರೆ ಅದು ದೇವರ ಸೇವೆಯಾಗುತ್ತದೆ. ಅದರಂತೇ ಮಾತಾ-ಪಿತೃಗಳ ಸೇವೆಯನ್ನು ಅತಿ ವಿಶೇಷವಾಗಿ ಮಾಡುತ್ತಿರುವ ಪುಂಡಲೀಕನ ಭಕ್ತಿಗೆ ವೈಕುಂಠದ ಮಹಾವಿಷ್ಣು ಪ್ರಸನ್ನಾನಾಗಿ ಪುಂಡಲೀಕನನ್ನು ಕಾಣಲು ಹೊರಟುಬಿಟ್ಟ! ಭಗವಂತ ಮನೆಬಾಗಿಲು ಬಡಿದಾಗ ಪುಂಡಲೀಕ ತಂದೆ-ತಾಯಿಗಳಿಗೆ ಊಟ ನೀಡುತ್ತಿದ್ದ. ಬಾಗಿಲೆಡೆಗೆ ಒಂದು ಇಟ್ಟಿಗೆ ಎಸೆದು ಅದರಮೇಲೆ ನಿಂತುಕೊಳ್ಳುವಂತೆಯೂ ತಾನು ತಂದೆ-ತಾಯಿಗಳ ಸೇವೆ ಮುಗಿದನಂತರ ಬರುವುದಾಗಿಯೂ ಕೂಗಿ ಹೇಳಿದ. ಬಂದಾತ ಭಗವಂತ ಎಂಬ ಸಂದೇಹ ಬಂದಿದ್ದರೂ ತನ್ನ ಕರ್ತವ್ಯದಲ್ಲಿ ವಿಮುಖನಾಗದೇ ಹಾಗೆ ಹೊರಗೇ ಕಾಯಿಸಿದ.

ಇಟ್ಟಿಗೆಯಮೇಲೆ ನಿಂತ ಮಹಾವಿಷ್ಣು ಸಾದಾ ಮಾನವ ರೂಪದಲ್ಲಿದ್ದ! ಸೊಂಟದಮೇಲೆ ಕೈ ಇಟ್ಟುಕೊಂಡು ಕಾದು ನಿಂತಿದ್ದ. ಹೊರಗೆ ಬಂದಾಗ ಪುಂಡಲೀಕನಲ್ಲೇ ಭಗವಂತ ಆತನ ಕ್ಷಮೆಯಾಚಿಸಿದ. ಸೇವಾ ಭಕ್ತಿಯ ಪಾರಮ್ಯವನ್ನು ಕಂಡು ಆನಂದಬಾಷ್ಪ ಸುರಿಸಿದ ವಿಠೋಬ ತಾನು ಯಾರೆಂಬುದನ್ನೂ ತಾನು ಬಂದಿದ್ದೇಕೆ ಎಂಬುದನ್ನೂ ಪುಂಡಲೀಕನಿಗೆ ಅರುಹಿದ. ತನಗೆ ಕೊಟ್ಟ ಈ ದರುಶನ ಭಾಗ್ಯ ಅದೇ ರೂಪದಲ್ಲಿ ತನ್ನಂತಹ ಸಕಲ ಭಕ್ತರಿಗೂ ಇದೇ ಜಾಗದಲ್ಲಿ ಸತತವಾಗಿ ಸಿಗುತ್ತಿರಲಿ ಎಂದು ಪ್ರಾರ್ಥಿಸಿದ ಪುಂಡಲೀಕ. ವಿಠೋಬ "ತಥಾಸ್ತು" ಎಂದು ಅಲ್ಲೇ ನಿಂತುಬಿಟ್ಟ! ನಂತರ ಅದೇ ಜಾಗದಲ್ಲಿ ದೇವಸ್ಥಾನದ ನಿರ್ಮಾಣವಾಯ್ತು.




ಅದೃಷ್ಟಪೂರ್ವಂ ಹೃಷಿತೋಸ್ಮಿ ದೃಷ್ಟ್ಯಾ
ಭಯೇನ ಚ ಪ್ರವ್ಯಥಿತಂ ಮನೋ ಮೇ |
ತದೇವ ಮೇ ದರ್ಶಯ ದೇವರೂಪಂ
ಪ್ರಸೀದ ದೇವೇಶ ಜಗನ್ನಿವಾಸ ||

ಮುಂದೊಂದು ಘಟನೆ ಹೀಗಿದೆ: ಮುಂದಿನ ಸಂತ ನಾಮದೇವ ಮಗುವಾಗಿದ್ದಾಗ ಆತನ ತಾಯಿ ಪ್ರತಿನಿತ್ಯ ಮಗನನ್ನು ಕರೆದುಕೊಂಡು ವಿಠೋಬನಿಗೆ ನೈವೇದ್ಯ ಸಲ್ಲಿಸಲು ಬರುತ್ತಿದ್ದಳು. ಒಂದೆರಡು ದಿನ ಅವಳಿಗೆ ಕಾರಣಾಂತರಗಳಿಂದ ದೇವಸ್ಥಾನಕ್ಕೆ ಬರಲಾಗಲಿಲ್ಲ, ಚಿಕ್ಕವನಾಗಿದ್ದ ಮಗನನ್ನು ನೈವೇದ್ಯ ಅರ್ಪಿಸುವಂತೇ ಕಳಿಸಿದ್ದಳು. ಮನೆಯಲ್ಲಿ ಮಡಿಯಲ್ಲಿ [ಸ್ವಚ್ಛತೆಯಲ್ಲಿ] ಮಾಡಿದ ಅಡಿಗೆಯನ್ನು ಪ್ರಥಮವಾಗಿ ದೇವರಮುಂದಿಟ್ಟು ಅದಕ್ಕೆ ಸುತ್ತ ನೀರನ್ನು ಪರಿಷೇಚಿಸಿ ದೇವರಲ್ಲಿ ಸ್ವೀಕರಿಸು ಎಂದು ಪ್ರಾರ್ಥಿಸುವುದು ವಾಡಿಕೆ. ಹಾಗೇ ಮಾಡಿದ ಮಗು ಭಗವಂತನ ಬರುವಿಕೆಗಾಗಿ ಕಾದ. ಕಾದ ಕಾದ ಕಾದ ಭಗವಂತ ಬರಲೇ ಇಲ್ಲ. ಬೇಸರಗೊಂಡ ನಾಮದೇವ ತನ್ನ ಹಣೆಯನ್ನು ಭವಂತನ ಪಾದಕ್ಕೆ ಜಪ್ಪಿ ಜಪ್ಪಿ ಘಾಸಿಮಾಡಿಕೊಳ್ಳತೊಡಗಿದ. ಬಾಲಕನ ಭಕ್ತಿ ಮತ್ತು ಮುಗ್ಧತೆಯನ್ನು ಕಂಡ ಭಗವಂತ ಪ್ರತ್ಯಕ್ಷನಾಗಿ ನೈವೇದ್ಯವನ್ನು ಸ್ವೀಕರಿಸಿ ನಾಮದೇವನ ಮೈದಡವಿದ! " ನಿನ್ನ ದರುಶನ ಪಡೆಯಲು ಬರುವ ಕೋಟ್ಯಂತರ ಜನ ನನ್ನನ್ನು ಸ್ಪರ್ಶಿಸಿ ಆಮೇಲೆ ನಿನ್ನನ್ನು ದರ್ಶಿಸುವಂತೇ ಅನುಗ್ರಹಮಾಡು ಎಂದ ಬಾಲಕನಿಗೆ ಭಗವಂತ " ತಥಾಸ್ತು" ಎಂದ. ನಾಮದೇವ ಇಂದಿಗೂ ಅಲ್ಲಿನ ಪ್ರಥಮ ಮೆಟ್ಟಿಲಲ್ಲಿ ಇದ್ದು ಎಲ್ಲರನ್ನೂ ಕಂಡು ಹರ್ಷಿಸುತ್ತಾನೆ ಮತ್ತು ನಿತ್ಯವೂ ಭಗವಂತನೊಡನೆ ಸಂವಾದ ಮಾಡುತ್ತಾನೆ ಎಂಬುದು ಅಲ್ಲಿನ ನಂಬಿಕೆ.

|| ಮಾಸಾನಾಂ ಮಾರ್ಗಶೀರ್ಷೋಹಮೃತೂನಾಂ ಕುಸುಮಾಕರಃ || ಎಂದು ಭಗವಂತ ಗೀತೆಯಲ್ಲಿ ಅಪ್ಪಣೆ ಕೊಡಿಸಿದ್ದಾನೆ. ಮಾಸಗಳಲ್ಲೇ ಮಾರ್ಗಶೀರ್ಷ ಮಾಸ ತಾನು ಎಂದಿದ್ದಾನೆ. ಈ ಮಾಸದಲ್ಲಿ ವಿಷ್ಣು ಕ್ಷೇತ್ರಗಳ ದರ್ಶನ, ಅಲ್ಲಿನ ಧೂಳಿಯ ಸ್ಪರ್ಶನ, ಅಲ್ಲಿನ ಸೇವೆಗಳ ಅವಲೋಕನ, ಕೀರ್ತನ-ಸಂಕೀರ್ತನಗಳ ಗಾಯನ, ವಾಚನ ಅತ್ಯಂತ ಪುಣ್ಯಪ್ರದ ಎಂಬುದು ಬಲ್ಲವರ ಅನಿಸಿಕೆ. ಗುರು ರಾಘವೇಂದ್ರರು ಧಾರಾವಾಹಿಯ ರೂಪದಲ್ಲಿ ವಿಠೋಬನ ನೆನಪನ್ನು ತಂದಿದ್ದಕ್ಕೆ ಅವರಿಗೆ ನನ್ನ ನಮನ, ಬಹುಶಃ ನಿಮ್ಮದೂ ಕೂಡಾ ...

ಪಂಢರಾಪುರವೆಂಬ ಒಂದು ನಗರ
ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ....

ವಿಠೋಬನಿರುವುದು ನದಿತೀರ
ಅಲ್ಲಿ ಭಂಡಾರಿ ಭಜನೆಯು ವ್ಯಾಪಾರ ...

---ವಿ .ಆರ್. ಭಟ್

Wednesday, November 30, 2011

ಸತ್ಸಂಗ


 ಬೆಂಗಳೂರಿನ ಭವತಾರಣಿ ಆಶ್ರಮದ ಅಧ್ಯಕ್ಷರಾದ
  ಮಾತಾಜಿ ವಿವೇಕಮಯೀ    
  ಇವರಿಂದ 
 ನಮ್ಮ ಮನೆಯಲ್ಲಿ  ಸತ್ಸಂಗವನ್ನು ಆಯೋಜಿಸಲಾಗಿದೆ. ವಿವರ ಇಲ್ಲಿದೆ.

ಸ್ಥಳ:  ಈಶಾವಾಸ್ಯಂ, ಹೊಯ್ಸಳನಗರ ಮುಖ್ಯರಸ್ತೆ,
 ಹೊಯ್ಸಳನಗರ
 ಪೋಲೀಸ್ ಕಾಲೋನಿ, ಹಾಸನ

ಸತ್ಸಂಗ:  ದಿನಾಂಕ: 2.12.2011 ಶುಕ್ರವಾರ ಸಂಜೆ 6.00 ಕ್ಕೆ 
ಧ್ಯಾನ:  ದಿನಾಂಕ 3.12.2011 ಶನಿವಾರ ಬೆಳಿಗ್ಗೆ 6.30 ಕ್ಕೆ 

ವಿ.ಸೂ: ಹೊರ ಊರಿನಿಂದ ಬಂದವರಿಗೆ ಉಳಿಯಲು ವ್ಯವಸ್ಥೆ ಇದೆ.

 ಸರ್ವರಿಗೂ ಸ್ವಾಗತ

-ಹರಿಹರಪುರ ಶ್ರೀಧರ್ 

Tuesday, November 29, 2011

ಯೋಚಿಸಲೊ೦ದಿಷ್ಟು...೪೬

೧. ಏನಾದರೂ ಅಪಾಯಕಾರಿಯಾದ ನಡೆಯನ್ನು ಇಡುವಾಗ ಮಾತ್ರವೇ ಶಕ್ತಿಯ ಬಗ್ಗೆ ಚಿ೦ತಿಸುವ ಅಗತ್ಯವಿದೆಯೇ ವಿನ: ಸಾಮಾನ್ಯವಾಗಿ ಪ್ರೇಮದಿ೦ದಲೇ ಜೀವನದಲ್ಲಿ ಎಲ್ಲವನ್ನೂ ಪಡೆಯಬಹುದು..
೨. ಮತ್ತೊಬ್ಬರಿ೦ದ ಆರೈಕೆಯನ್ನು ಪಡೆಯುವುದಾಗಲೀ.. ಮತ್ತೊಬ್ಬರ ಆರೈಕೆ ಮಾಡುವುದಾಗಲೀ.. “ಆರೈಕೆ“ ಎ೦ಬುದೊ೦ದು ಸು೦ದರ ಅನುಭವ!
೩. ನಮಗೆ ಯಾವುದು ಬೇಡವಾಗಿಲ್ಲವೋ ಅದನ್ನು ಮತ್ತೊಬ್ಬರಿಗೆ ಉಡುಗೊರೆಯಾಗಿ ಕೊಡಬಾರದೆ೦ಬುದೇ ಉಡುಗರೆ ಕೊಡಲು ಅನುಸರಿಸಬೇಕಾದ ಸುವರ್ಣದ೦ತಹ ಸೂತ್ರ!- ವಿಲಿಯ೦ ಆಲನ್ ನೈಟ್
೪. ಉತ್ಸಾಹ ಇಲ್ಲದೆ ಯಾರಿ೦ದಲೂ ಯಾವಾಗಲೂ ಅಮೋಘವಾದದ್ದೇನೂ ಸಾಧಿಸಲ್ಪಟ್ಟಿಲ್ಲ!
೫. ನಾವು ಪರರಿಗೆ ಮಾಡಿದ ಉಪಕಾರವನ್ನು ಅವರಿಗೆ ನೆನಪಿಸುವುದೆ೦ದರೆ ಅವರನ್ನು ಬೈದ೦ತೆಯೇ!!
೬. ಇನ್ನಷ್ಟು ಪಡೆಯುವ ಆಸೆಯಿ೦ದ ಪರರಿಗೆ ಉಪಕರಿಸಬಾರದು!
೭. ನಾವು ಉಪದೇಶಿಸಿದ೦ತೆ ನಡೆಯಬೇಕೆ೦ದು ಎಲ್ಲರೂ ಒಪ್ಪುತ್ತಾರೆ... ಆದರೆ ನಡೆಯುವ೦ತೆಯೇ ಉಪದೇಶಿಸಬೇಕೆ೦ಬುದನ್ನು ಮಾತ್ರ ಎಲ್ಲರೂ ಖ೦ಡಿಸುತ್ತಾರೆ!!
೮. ನಾಳೆ ಎನ್ನುವವರು ಮೂವರು ಮಾತ್ರ – ದರ್ಜಿ,ಅಕ್ಕಸಾಲಿಗ ಮತ್ತು ಅಗಸ- ಬೀ.ಚಿ.
೯. ಕುಟು೦ಬ ಭ್ರಷ್ಟಾಚಾರದಲ್ಲಿ ನಿರತನಾದ ರಾಜಕಾರಣಿ ತನ್ನ ಜಾತಿಯ ಹೆಸರಿನಿ೦ದ ಮು೦ದೆ ಬರಲು ಯತ್ಸಿಸಿ,ಸಫಲನಾದರೂ ಅದರಿ೦ದ ಅವನಿಗೇ ಲಾಭವೇ ಹೊರತು ಅವನ ಜಾತಿಯ ಸಾಮಾನ್ಯ ಜನರಿಗೆ ಏನೂ ಲಾಭವಾಗಲಾರದು!
೧೦. ರೆಕ್ಕೆಗಳಿಲ್ಲದ ಹಕ್ಕಿ, ಹಲ್ಲು ಕಿತ್ತ ಹಾವು, ಒಣಗಿದ ಮರ, ನೀರಿಲ್ಲದ ಸರೋವರ ಮತ್ತು ಬಡವ ಎಲ್ಲರೂ ಒ೦ದೇ!
೧೧. ಉಪದೇಶದಿ೦ದ ಪ್ರಯೋಜನ ಪಡೆಯಬೇಕಾದರೆ, ಅದನ್ನು ಕೊಡಬೇಕಾದ ಬುಧ್ಧಿಗಿ೦ತ ಹೆಚ್ಚಿನ ಬುಧ್ಧಿಶಕ್ತಿ ಬೇಕು!!
೧೨.ಲೋಕೋಧ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದೇವೆ೦ದು ಯಾರೂ ತಿಳಿದುಕೊಳ್ಳಬಾರದು.. ನಮ್ಮ ಪ್ರಯತ್ನ ನಮ್ಮ ಏಳ್ಗೆಗೆ ಹಾಗೂ ಬಾಳಿನ ಸಫಲತೆಗಾಗಿ!!- ಡಿ.ವಿ.ಜಿ.
೧೩. ನಾವು ಪ್ರತಿಯೊಬ್ಬರೂ ಒ೦ದಲ್ಲ ಒ೦ದು ರೀತಿಯ ಋಣವನ್ನು ಹೊತ್ತವರೇ!!
೧೪. ಏಕಾ೦ತವೆ೦ದರೆ ಎಲ್ಲರನ್ನೂ ಬಿಟ್ಟು ಒ೦ಟಿಯಾಗಿರುವುದಲ್ಲ.. ಅದು ಬಾಳಿನ ಏಕಾ೦ತ- ಎಲ್ಲೇ ಇದ್ದರೂ, ಯಾರೊಡನಿದ್ದರೂ ಅದು ಸಾಧ್ಯವಾಗುತ್ತದೆ!!
೧೫.ಇತರರು ನಮಗೇನನ್ನು ಮಾಡಬಾರದೆ೦ದು ನಾವು ಅಪೇಕ್ಷಿಸುತ್ತೇವೆಯೋ ಅದನ್ನು ನಾವೂ ಅವರಿಗೆ ಮಾಡಬಾರದು!!

Monday, November 28, 2011

ವಿವೇಕ ಚೂಡಾಮಣಿ-ಭಾಗ-೧೭


मूलम् - ಮೂಲ
श्रोत्रियोऽवृजिनोऽकामहतो यो ब्र्ह्मवित्तमः ।
ब्रह्मण्युपरतः शान्तो निरिन्धन इवानलः।
अहेतुक-दयासिन्धुः बन्धुरानमतां सताम्॥३४॥

ಶ್ರೋತ್ರಿಯೋಽವೃಜಿನೋಽಕಾಮಹತೋ ಯೋ ಬ್ರಹ್ಮವಿತ್ತಮಃ|
ಬ್ರಹ್ಮಣ್ಯುಪರತಃ ಶಾಂತೋ ನಿರಿಂಧನ ಇವಾನಲಃ |
ಅಹೇತುಕ-ದಯಾಸಿಂಧುರ್ಬಂಧುರಾನಮತಾಂ ಸತಾಮ್ ||೩೪||

ಪ್ರತಿಪದಾರ್ಥ:
(ಯಃ =ಯಾರು, ಶ್ರೋತ್ರಿಯೋ=ಶ್ರೋತ್ರಿಯನೋ(ಶಾಸ್ತ್ರಾರ್ಥಗಳ ವಿವೇಚನೆಯುಳ್ಳವನು), ಅವೃಜಿನಃ=ಪಾಪವಿಲ್ಲದವನು, ಅಕಾಮಹತಃ=ಬಯಕೆಗಳಿಲ್ಲದವನು,  ಬ್ರಹ್ಮವಿತ್ತಮಃ=ಜ್ಞಾನಿಗಳಲ್ಲಿ ಶ್ರೇಷ್ಠನು, ಬ್ರಹ್ಮಣಿ=ಬ್ರಹ್ಮದಲ್ಲಿ, ಉಪರತಃ=ನೆಲಸಿರುವವನು, ನಿರಿಂಧನಃ ಅನಲಃ ಇವ = ಉರುವಲಿಲ್ಲದ ಬೆಂಕಿಯಂತೆ,  ಶಾಂತಃ= ಶಾಂತನೂ, ಅಹೇತುಕ ದಯಾಸಿಂಧುಃ=ಯಾವ ನಿಮಿತ್ತವೂ ಇಲ್ಲದ ದಯಾಸಿಂಧುವೂ, ಆನಮತಾಂ ಸತಾಮ್= ನಮಿಸುತ್ತಿರುವ ಸತ್ಪುರುಷರಿಗೆ, ಬಂಧುಃ = ಬಾಂಧವನೂ..... (ಆಗಿರುವವನು) )

ತಾತ್ಪರ್ಯ :
ಯಾರು ಶ್ರೋತ್ರಿಯನೋ, ಪಾಪರಹಿತನೋ, ಬಯಕೆಗಳೇ ಇಲ್ಲದವನೋ, ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನೋ, ಕೇವಲ ಬ್ರಹ್ಮದಲ್ಲಿ ಮನಸನ್ನು ನೆಟ್ಟಿರುವವನೋ, ಕಟ್ಟಿಗೆಯಲ್ಲಿ ಉರಿದು ಆರಿಹೋದ ಬೆಂಕಿಯಂತೆ (ಉರುವಲೇ ಇಲ್ಲದ) ಶಾಂತನಾಗಿರುವವನೂ, ಯಾವ ನಿಮಿತ್ತವೂ ಇಲ್ಲದೆ ದಯಾಸಿಂಧುವಾಗಿರುವವನೋ, ಶರಣು ಬಂದ ಸಜ್ಜನರಿಗೆ ಬಂಧುವಂತಿರುವವನೋ .....)

ವಿವರಣೆ :
ಜ್ಞಾನಾರ್ಥಿಯಾಗಿ ಗುರುವಿನ ಬಳಿಸಾರಬೇಕು ಎಂದು ತಿಳಿಸಿದ ನಂತರ ಆಚಾರ್ಯರು ಮತ್ತೆ ಗುರೂಪಸತ್ತಿಯನ್ನು ಮುಂದುವರಿಸುತ್ತಾರೆ. ಅಧಿಕಾರಿಯ ಅರ್ಹತೆಯ ನಿರೂಪಣೆಯ ನಂತರ ಜ್ಞಾನಾರ್ಜನೆಯ ಪಾಠವನ್ನು ಆಚಾರ್ಯರು ಆರಂಭಿಸುತ್ತಾರೆ. ಮೇಲಿನ ಶ್ಲೋಕದಲ್ಲಿ ಮೊದಲಿಗೆ ’ಶ್ರೋತ್ರಿಯಃ’ ಎನ್ನುವುದರ ಮೂಲಕ ಗುರುವು ಶಾಸ್ತ್ರಾರ್ಥಗಳನ್ನು ಅನುಭವದಿಂದ ನಿಶ್ಚಯಿಸಿಕೊಂಡವನಾಗಿರಬೇಕು ಎಂದು ಹೇಳುತ್ತಾರೆ. ಕೇವಲ ಪುಸ್ತಕ ಪಾಂಡಿತ್ಯವಲ್ಲದೆ ಸ್ವಾನುಭದಿಂದಲೂ ತಿಳಿದುಕೊಂಡು ತರ್ಕಕ್ಕೆ-ಶಾಸ್ತ್ರಕ್ಕೆ, ಅನುಭವಕ್ಕೆ-ಶಾಸ್ತ್ರಕ್ಕೆ ವಿರೋಧಗಳು ತೋರ್ಗೊಡದಂತೆ (ಅವಿರೋಧವೆನಿಸುವಂತೆ) ಕಡ್ಡಿಮುರಿದಂತೆ ಹೇಳುವವನಾಗಿರಬೇಕು ಅಥವಾ ಹೇಳುವ ತಿಳುವಳಿಕೆಯನ್ನು ಉಳ್ಳವನಾಗಿರಬೇಕು ಎಂಬರ್ಥದಲ್ಲಿ ತಿಳಿಸುತ್ತಾರೆ. ’ಉಪನಿಷತ್ತುಗಳನ್ನು ಅಧ್ಯಯನ ಮಾಡಿ ಅದರ ಅರ್ಥವನ್ನು ವಿಚಾರಮಾಡಿದವನೇ ಶ್ರೋತ್ರಿಯನು’ ಎಂಬ ಪಾಣಿನಿಯ ಸೂತ್ರದ ವಿಚಾರವನ್ನು ಶ್ರೀ ಚಂದ್ರಶೇಖರ ಭಾರತಿಗಳು ವ್ಯಾಖ್ಯಾನದಲ್ಲಿ ಒಕ್ಕಣಿಸಿರುತ್ತಾರೆ. ’ಅವೃಜಿನಃ’ ಎಂದರೆ ಪಾಪರಹಿತನು ಎಂಬ ಅರ್ಥವಿರುತ್ತದೆ. ಜ್ಞಾನಿಯಾದ ಗುರುವಿನಲ್ಲಿ ನೈತಿಕ ಮೌಲ್ಯಗಳೂ ಇರಬೇಕಾಗುತ್ತದೆ. ಜಗತ್ತಿಗೆ ಮಾದರಿಯಾಗಿ ನಿಲ್ಲಬೇಕಾಗುವ ಗುರುವು ಒಳ್ಳೆಯತನದ ಗುಣಗಳನ್ನು ಇಟ್ಟುಕೊಂಡಿರಬೇಕೇ ಹೊರತು ’ತಾನು ಗುರು ತಾನೇನು ಮಾಡಿದರೂ ಸರಿಯೆ’ ಎನ್ನುವ ಧೋರಣೆಯನ್ನು ಹೊಂದಿರಬಾರದು. ಜಗಕ್ಕೆ ಹಿತಕಾರಿಯಾದ ಕೆಲಸಗಳನ್ನು ಮಾಡುತ್ತಾ ಲೋಕಾನುಗ್ರಹಕ್ಕಾಗಿ ಬದುಕಬೇಕು ಎಂದು ’ಅವೃಜಿನಃ’ ಎನ್ನುವಲ್ಲಿ ಹೇಳಿರುತ್ತಾರೆ. ಮುಂದೆ ’ಅಕಾಮಹತಃ’ ಎಂದು ಹೇಳುತ್ತಾರೆ. ಬಯಕೆಗಳನ್ನೆಲ್ಲಾ ನಾಶಮಾಡಿಕೊಂಡಿರುವವನು ಅಥವಾ ಬಯಕೆಗಳೇ ಏಳದಂತೆ ಸಾಧನೆ ಮಾಡಿಕೊಂಡಿರುವವನನ್ನು ಅಕಾಮಹತಃ ಎಂದು ಹೇಳುತ್ತಾರೆ.  ಮಾನ್ಯ ಡಿ.ವಿ.ಜಿ.ಯವರು ತಮ್ಮ ಕಗ್ಗದಲ್ಲಿ ಈ ಸಂದರ್ಭವನ್ನು ಸೊಗಸಾಗಿ ನಿರೂಪಿಸುತ್ತಾರೆ..

ಬೀಸಿದಲ್ಲದೆ ಬೂದಿಕವಿದ ಕಿಡಿಯುರಿದೀತೆ ?|
ಕೈಸೋಕದಿರೆ ಕೈಯ ಸಪ್ಪುಳಾದೀತೆ? ||
ವಾಸನೆಯೆ ಮಾತೆಯಾಶೆಗೆ ಪಿತನು ಸಂದರ್ಭ|
ದೋಷವೊಳಗೋ ಹೊರಗೋ ? - ಮಂಕುತಿಮ್ಮ ||

’ವಾಸನೆ ತಾಯಿ , ಸಂದರ್ಭ ತಂದೆ’ ಎಂದು ಸೊಗಸಾಗಿ ಡಿ.ವಿ.ಜಿ. ಯವರು ಹೇಳುತ್ತಾರೆ. ಗಸಗಸೆ ಪಾಯಸದ ಬಯಕೆಯೇ ಇಲ್ಲದ ಮೇಲೆ ಅದೆಷ್ಟು ಕೊಳಗ ಪಾಯಸ ತಂದಿಟ್ಟರೂ ಪ್ರಯೋಜನವಾಗಲಾರದು !. ಬಯಕೆ ಎಂಬ ದೋಷವು ಒಳಗಿನದೋ ಅಥವಾ ಹೊರಗಿನದೋ ಎಂಬುದನ್ನು ಯೋಚಿಸಿ ನಿರ್ಧರಿಸಬೇಕಾಗುತ್ತದೆ. ಕಾಮಹತಃ ಎಂದರೆ ವಿಷಯದ ಆಸೆಗಳಿಂದ ಕೂಡಿರುವವನು ಅಥವಾ ತನ್ನನ್ನು ತಾನೇ ಅದರೊಳಗೆ ದೂಡಿಕೊಂಡಿರುವವನು ಎಂದು ಅರ್ಥ. ಅಕಾಮಹತಃ ಎಂದರೆ ವಿಷಯಾಸಕ್ತಿಯಿಂದ ದೂರವಿರುವವನು ಎಂದು ಅರ್ಥ. ನಂತರ, ಬ್ರಹ್ಮಜ್ಞಾನಿಗಳಲ್ಲಿ ಉತ್ತಮೋತ್ತನೂ ಮತ್ತು ವಿಷಯಾಸಕ್ತಿಯನ್ನೆಲ್ಲಾ ಕರಗಿಸಿಕೊಂಡು ಕೇವಲ ಬ್ರಹ್ಮನಲ್ಲಿ ಮನಸನ್ನು ಇಟ್ಟಿರುವವನು ಗುರುವು ಎಂದು ಹೇಳುತ್ತಾರೆ. ಮುಂದೆ ’ಶಾಂತಃ ನಿರಿಂಧನ ಇವಾನಲಃ’ ಎಂದು ಹೇಳುತ್ತಾರೆ. ಈ ವಾಕ್ಯಕ್ಕೆ ಮೇಲಿನ ಕಗ್ಗವೇ ಉತ್ತಮ ವಿವರಣೆಯಾಗಿರುತ್ತದೆ. ಹೇಗೆ ಉರುವಲು ಇಲ್ಲದಿದ್ದರೆ ಬೆಂಕಿಯು ತಣ್ಣಗಾಗಿ ಉರಿಯಿಲ್ಲದೆಯೇ ತೋರುವುದೋ (ಹುಲ್ಲಿಲ್ಲದ ಜಾಗದಲ್ಲಿ ಬೆಂಕಿಯು ಹೊತ್ತಿದರೆ ಹೇಗೆ ತಾನೇ ಆರಿ ಹೋಗುವುದೋ) ಹಾಗೆಯೆ, ವಾಸನೆಯೇ ಇಲ್ಲದವರಲ್ಲಿ ಸಂದರ್ಭಗಳೂ ಹುಟ್ಟಲಾರದು ಮತ್ತು ಗುರುವು ಹೀಗೆಯೇ ಇರಬೇಕು ಎಂದು ಹೇಳುತ್ತಾರೆ. ಹೀಗೆ ಹೊರಗಿನ ವಿಷಯಗಳನ್ನು ಅವಲಂಬಿಸದೆ ’ಶಾಂತ’ನಾಗಿದ್ದು ಬ್ರಹ್ಮದಲ್ಲಿ ಗಟ್ಟಿಮನಸುಳ್ಳವನಾಗಿರಬೇಕು ಎಂದು ನಿರೂಪಿಸುತ್ತಾರೆ.
ನಂತರ ’ ಅಹೇತುಕ ದಯಾಸಿಂಧುಃ ಬಂಧುರಾನಮತಾಂಸತಾಮ್’ ಎಂದು ಹೇಳುತ್ತಾರೆ. ಶರಣಾಗಿ ಬರುವ ಸಜ್ಜನರಿಗೆ ಯಾವ ಪ್ರತಿಫಲದ ಅಪೇಕ್ಷೆಯೂ ಇಲ್ಲದೆ ಕರುಣೆಯ ಸಾಗರದಂತೆ ಇದ್ದು ತಿಳುವಳಿಕೆ ಮೂಡಿಸಬಲ್ಲಂತಹ ಬಂಧುವಿನಂತೆ , ಆಪ್ತ ಗೆಳೆಯನಂತೆ ಇರಬೇಕು ಎಂಬರ್ಥದಲ್ಲಿ ಹೇಳಿರುತ್ತಾರೆ. ಗೀತೆಯಲ್ಲಿ ಕೃಷ್ಣನು ಹೇಳುವ ವಾಕ್ಯವೊಂದು ಹೀಗೆ ಬರುತ್ತದೆ ; ’ ನನಗೆ ಈ ಲೋಕದಿಂದ ಯಾವ ಪ್ರಯೋಜನವೂ ಇಲ್ಲ. ಆದರೂ ಈ ಜಗತ್ತಿಗಾಗಿ ನಾನು ಎಲ್ಲವನ್ನೂ ಮಾಡುತ್ತೇನೆ, ಏಕೆಂದರೆ ಈ ಜಗತ್ತನ್ನು ನಾನು ಪ್ರೀತಿಸುತ್ತೇನೆ ಎಂದರೆ ಅನಿಮಿತ್ತವಾಗಿ ಪ್ರೀತಿಸುತ್ತೇನೆ ’ ಎಂದು. ಯಾವ ನಿಮಿತ್ತ ಕಾರಣವೂ ಇಲ್ಲದೆ ಶರಣಾಗಿ ಬಂದವರಿಗೆ ತಿಳಿಸುವ ಕರುಣೆಯನ್ನು ಗುರುವು ಹೊಂದಿರಬೇಕು ಎಂದು ನಿರೂಪಿಸುತ್ತಾರೆ. ವಾಡಿಕೆಯಂತೆ ಶೆಟ್ಟರ ಅಂಗಡಿಯಲ್ಲಿ ದಿನಸಿಯನ್ನು ಕೊಳ್ಳುವುದು ಬಿಟ್ಟು ಅಂದು ಪುಡ್ ಬಜಾರಿನಲ್ಲಿ ದಿನಸಿ ತಂದಿರುತ್ತೇವೆ. ಹೀಗೆ ತಂದಿದ್ದೇನಾದರೂ ಶೆಟ್ಟರಿಗೆ ತಿಳಿಯಿತೆಂದರೆ ಮುಂದೆ ಅವರ ಅಂಗಡಿಯಲ್ಲಿ ನಮಗೆ ಸಿಗುವುದು ಕಳಪೆ ದಿನಸಿ ಅಥವಾ ಬಜಾರಿಗಿಂತಲೂ ದುಪ್ಪಟ್ಟು ಬೆಲೆಯೆ !. ಶೆಟ್ಟರು ಸಹಿಸಿಕೊಳ್ಳುವರೆ ?!. ಗುರುವಿನ ಕತೆಯು ಹೀಗಾಗಬಾರದು ಎನ್ನುವುದು ಮೇಲಿನ ಶ್ಲೋಕದ ಆಶಯ. ಪ್ರವಾಹಣ ಜೈವಲಿಯು ಶ್ವೇತಕೇತುವಿಗೆ ಹೇಳಿದಂತೆ, ಯಾಜ್ಞವಲ್ಕ್ಯರು ಮೈತ್ರಾದೇವಿಗೆ ಹೇಳಿದಂತೆ, ಯಮನು ನಚಿಕೇತನಿಗೆ ತಿಳಿಸಿದಂತೆ  ವಿನಯದಿಂದ ಬಂದು ಕೇಳುವವರಿಗೆ (ಬೇರೆಯವರಿಗೆ ಅಲ್ಲ) ಗುರುವು ತಿಳಿಸಿಕೊಡುವಂತಹವನಾಗಿರಬೇಕು ಎನ್ನುವುದು ಸಾರಾಂಶ. ರಮಣ ಮಹರ್ಷಿಗಳಂತಹ ಮೌನವ್ಯಾಖ್ಯಾನ ಶಿರೋಮಣಿಗಳೂ ಸಹ ವಿನಯದಿಂದ ಬಂದ ಕೆಲವರಿಗೆ ತಿಳುವಳಿಕೆಯ ಪಾಠವನ್ನು ಹೇಳಿರುವುದನ್ನು ಅವರ ಜೀವನ ಚರಿತ್ರೆಯ ಸಾಹಿತ್ಯದಲ್ಲಿ ಓದಿರುತ್ತೇವೆ.

मूलम् = ಮೂಲ
तमाराध्य गुरुं भक्त्या प्रह्वः प्रश्रयसेवनैः ।
प्रसन्नं तमनुप्राप्य पृच्छेद् ज्ञातव्यमात्मनः॥३५॥ 

ತಮಾರಾಧ್ಯ ಗುರುಂ ಭಕ್ತ್ಯಾ ಪ್ರಹ್ವ-ಪ್ರಶ್ರಯ-ಸೇವನೈಃ|
ಪ್ರಸನ್ನಂ ತಮನುಪ್ರಾಪ್ಯ ಪೃಚ್ಛೇದ್ ಜ್ಞಾತಮಾತ್ಮನಃ ||೩೬||

ಪ್ರತಿಪದಾರ್ಥ :  
(ತಂ ಗುರುಂ= ಅಂತಹ ಗುರುವನ್ನು, ಭಕ್ತ್ಯಾ= ಭಕ್ತಿಯಿಂದ, ಆರಾಧ್ಯ=ಪೂಜಿಸಿ, ಆರಾಧಿಸಿ, ಪ್ರಹ್ವ-ಪ್ರಶ್ರಯ = ನಮ್ರತೆ-ವಿನಯದಿಂದ, ಸೇವನೈಃ= ಸೇವೆ ಮಾಡಿ, ಪ್ರಸನ್ನಂ ತಂ= ತೃಪ್ತನಾದ ಅವನನ್ನು, ಅನುಪ್ರಾಪ್ಯ= ಹೊಂದಿ, ಆತ್ಮನಃ ಜ್ಞಾತವ್ಯಂ= ತಾನು ತಿಳಿದುಕೊಳ್ಳಬೇಕಾದುದನ್ನು, ಪೃಚ್ಛೇತ್ = ಕೇಳಬೇಕು, ಪ್ರಶ್ನಿಸಬೇಕು )

ತಾತ್ಪರ್ಯ:
ಅಂತಹ (೩೪ನೆಯ ಶ್ಲೋಕದಲ್ಲಿ ವಿವರಿಸಿದ) ಗುಣಗಳನ್ನು ಹೊಂದಿರುವ ಗುರುವನ್ನು ಭಕ್ತಿಯಿಂದ ಪೂಜಿಸಿ ನಯ-ವಿನಯಗಳಿಂದ ಸೇವಿಸಿದ ನಂತರ ಶಾಂತನಾದ ಗುರುವಿನ ಸಮೀಪವನ್ನು ಹೊಂದಿ ತಾನು ತಿಳಿದುಕೊಳ್ಳಬೇಕಾಗಿರುವುದರ ವಿಚಾರದ ಬಗೆಗೆ ಕೇಳಬೇಕು ಅಥವಾ ಪ್ರಶ್ನೆ ಮಾಡಬೇಕು.

ವಿವರಣೆ:
ಗುಣಸಂಪನ್ನನಾದ ಗುರುವನ್ನು ನಯ-ವಿನಯಗಳಿಂದ ಪೂಜಿಸಿ ಸೇವೆ ಮಾಡಬೇಕು ಎಂದು ಹೇಳುತ್ತಾರೆ. ಗೀತೆಯಲ್ಲಿ (೧) ಹೇಳುವಂತೆ " ಸಾಷ್ಟಾಂಗ ನಮಸ್ಕಾರದಿಂದಲೂ ಕೇಳುವಿಕೆಯಿಂದಲೂ, ಗುರುಸೇವೆಯಿಂದಲೂ ತಿಳಿದುಕೊಳ್ಳಬೇಕು. ತತ್ವವನ್ನು ಅರಿತ ಜ್ಞಾನಿಗಳು ನಿನಗೆ ಅದನ್ನು ತಿಳಿಸುತ್ತಾರೆ" ಎಂಬ ವಾಕ್ಯವು ಸೊಗಸಾದುದು. ಇಲ್ಲಿ ನಮಸ್ಕಾರ, ಗುರುಸೇವೆ ಎನ್ನುವುದೆಲ್ಲವೂ ನಯ-ವಿನಯಗಳಂತಹ ಸದ್ವಿಚಾರಗಳಿಗೆ ಬೆಂಬಲವಾಗಿ ನಿಲ್ಲುತ್ತದೆ. ಭಕ್ತಿಯಿಂದ-ನಮ್ರತೆಯಿಂದ ಎಂದು ವಿಶೇಷವಾಗಿ ಹೇಳಿರುವುದು ’ಮಾತು-ಮನಸು-ಕೆಲಸ’ (ಕಾಯಾ-ವಾಚಾ-ಮನಸಾ; ತ್ರಿಕರಣ ಶುದ್ಧಿ) ಗಳಲ್ಲಿ  ನಿಯತ್ತನ್ನು ಇಟ್ಟುಕೊಳ್ಳವುದು, ಪಾರದರ್ಶಕ ನಡೆವಳಿಕೆಯನ್ನು ಉಳಿಸಿಕೊಳ್ಳುವುದು ಎನ್ನುವ ಅರ್ಥದಲ್ಲಿ. ಇಂತಹ ಉತ್ತಮ ನಡವಳಿಕೆಗಳಿಂದ ಗುರುವಿನ ಮನಸು ಒಲಿದ ನಂತರ ಆತನ ಸಮೀಪವನ್ನು ಹೊಂದಿ ಯಾವುದು ಆತ್ಮಾರ್ಥ ವಿಚಾರವೋ (ಇನ್ಯಾವುದೋ ವಿಷಯವನ್ನಲ್ಲ) ಅದರ ಬಗೆಗೆ ಕೇಳಿ ತಿಳಿದುಕೊಳ್ಳಬೇಕು ಎಂದು ಮೇಲಿನ ಶ್ಲೋಕದಲ್ಲಿ ಆಚಾರ್ಯರು ಹೇಳಿರುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ...
------------------------------------------------

ಟಿಪ್ಪಣಿ :

ಗೀತೆಯ ವಾಕ್ಯ.." ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ | ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ವದರ್ಶಿನಃ || ( ೪.೩೪) 

ವಂದನೆಗಳೊಂದಿಗೆ....