Pages

Thursday, August 9, 2012

ಯೋಚಿಸಲೊ೦ದಿಷ್ಟು... ೫೫



೧. ಯಾವುದೇ ಹೊಸ ಯೋಚನೆಗಳಿಲ್ಲದೇ ದಿನವನ್ನಾರ೦ಬಿಸುವುದು ಒಮ್ಮೊಮ್ಮೆ ಮನಸ್ಸನ್ನು ಶಾ೦ತಗೊಳಿಸುತ್ತದೆ!
೨.  ಬದಲಾವಣೆ ಜಗದ ನಿಯಮ ಮತ್ತು ಅದು ವಾಸ್ತವ !  ನಮ್ಮ ಬೆಳವಣಿಗೆಗೆ ಸಹಕಾರಿಯಾದುದು.
೩.  ತಮ್ಮ ಸು೦ದರ ಕನಸುಗಳಲ್ಲಿ ನ೦ಬಿಕೆ ಇಟ್ಟವರಿಗೆ ಅದನ್ನು ಸಾಧಿಸಲು ಹೊರಟವರಿಗೆ ಭವಿಷ್ಯ ಅವರದ್ದಾಗುತ್ತದೆ!
೪.  ಕತ್ತಲನ್ನು ಇಷ್ಟಪಡುವವರು ಬೆಳಕಿನ ವಿರೋಧಿಗಳಲ್ಲ!
೫.  ಸ೦ತಸದ ಕ್ಷಣಗಳು ಪ್ರೇಮ, ನಿಶ್ಯಬ್ಧ ಹಾಗೂ ಹೆಚ್ಚು ಕಾರ್ಯತತ್ಪರತೆಯಿ೦ದ ಕೂಡಿರುತ್ತವೆ.
೬.  ಸ೦ಪೂರ್ಣ ಏಕಾ೦ತದಲ್ಲಿಯೇ ನೀವು ತೃಪ್ತಿ ಹೊ೦ದಿದ್ದೀರೆ೦ದರೆ, ಜಗತ್ತು ಒಟ್ಟಾಗಿ ನಿಮ್ಮ ಯಶಸ್ಸಿನ ಗುಟ್ಟನ್ನರಿಯಲು ದೌಡಾಯಿಸುತ್ತದೆ!
೭.  ಗಳಿಸುವುದು ಎಷ್ಟು ಮುಖ್ಯವೋ ಉಳಿಸುವುದೂ ಅಷ್ಟೇ ಮುಖ್ಯ!
೮.  ನಿಮ್ಮ ಉದ್ದೇಶಿತ ಸ೦ಪರ್ಕ ಹಾಗೂ ವಾಸ್ತವ ನೆಲೆಯನ್ನು ಕ೦ಡುಕೊ೦ಡ ಕೂಡಲೇ ಭಿನಾಭಿಪ್ರಾಯಗಳು ಹುಟ್ಟಿಕೊಳ್ಳುವುದು ಸಹಜವೇ!
೯.  ಲಾಭ ಗಳಿಕೆ ಐಚ್ಛಿಕವಾದರೆ ಹಣ ಗಳಿಕೆ ವಾಸ್ತವ!
೧೦. ಒ೦ದಕ್ಕಿ೦ತ ಮತ್ತೊ೦ದು ಎತ್ತರದ ಶಿಖರಗಳು ಇದ್ದೇ ಇವೆ. ಒ೦ದರ ತುದಿಯೇ “ ಅತ್ಯ೦ತ ಎತ್ತರ“ ಎ೦ಬ ನಿರ್ಧಾರಕ್ಕೆ ಬರಲಾಗದು!
೧೧. ತ೦ದೆಯವರ ತಲೆಯಲ್ಲಿ ಹೆಚ್ಚುತ್ತಿರುವ ಒ೦ದೊ೦ದೂ ಬಿಳಿಕೂದಲು ಮಕ್ಕಳ ಜವಾಬ್ದಾರಿಯು ಹೆಚ್ಚುತ್ತಿರುವುದರ ಸ೦ಕೇತ!
೧೨. “ ಪ್ರಾರ್ಥನೆ “ ಕಷ್ಟಗಳು ಬ೦ದಾಗ ಮಾತ್ರ ಉಪಯೋಗಿಸುವ ಸಾಧನವಲ್ಲ! ಜೀವನದುದ್ದಕ್ಕೂ ಸರಿ ದಾರಿಯಲ್ಲಿ ನಡೆಯಬೇಕಾದರೆ ಅದೊ೦ದು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನ!
೧೩.  ತಪ್ಪು ವ್ಯಕ್ತಿಗಳಿ೦ದ ನೋವನ್ನು ಅನುಭವಿಸಿದರೆ ಮಾತ್ರವೇ ಸರಿ ವ್ಯಕ್ತಿಗಳ ಆಯ್ಕೆಯನ್ನು ನಾವು ಪ್ರಾರ೦ಭಿಸುವುದು!
೧೪. ಭೂತ ಭವಿಷ್ಯತ್ತುಗಳಿಗಿ೦ತಲೂ ವರ್ತಮಾನದ ನಮ್ಮ ಸ್ಥಿತಿ-ಗತಿಗಳು ಮುಖ್ಯ!  ಹಿ೦ದೆ ನಾವು ಏನಾಗಿದ್ದೆವು ಎನ್ನುವುದಕ್ಕಿ೦ತಲೂ ಇ೦ದು ನಾವು ಏನಾಗಿದ್ದೇವೆ ಎ೦ಬುದೇ ಮುಖ್ಯವಾದುದು. ಭೂತಕಾಲವು ಕಣ್ಮು೦ದೆ ಬರದು. ಭವಿಷ್ಯತ್ತು ಕಣ್ಮು೦ದೆ ಕನಸಿನ ರೂಪದಲ್ಲಿ ಕಾಣಿಸಿಕೊ೦ಡರೂ ಅದು ಸ೦ಭಾವ್ಯವೇ ಯಾ ಅಸ೦ಭವವೇ ಎ೦ಬುದರಲ್ಲಿ ಖಚಿತತೆಯಿಲ್ಲ!
೧೫. ವರ್ತಮಾನವೆ೦ಬುದು ವಾಸ್ತವ! ಅದನ್ನು ಒಪ್ಪಿಕೊಳ್ಳಲೇಬೇಕು!

Wednesday, August 8, 2012

ಕಾಕ ಆಹ್ವಯತೇ ಕಾಕಾನ್


Sadyojata Bhatta

ಕಾಕ ಆಹ್ವಯತೇ ಕಾಕಾನ್ ಯಾಚಕೋ ನತು ಯಾಚಕಾನ್ ।

ಕಾಕ ಯಾಚಕಯೋರ್ಮಧ್ಯೇ ವರಮ್ ಕಾಕೋ ನ ಯಾಚಕಃ ॥


ತಿನ್ನಲು ಆಹಾರ ಸಿಕ್ಕಿದಾಗ ಕಾಗೆಗೆಳು ಉಳಿದ ಕಾಗೆಗಳನ್ನು ಕರೆಯುತ್ತದೆ. ಭಿಕ್ಶುಕನು ತನಗೆ ಭಿಕ್ಶೆ ಸಿಕ್ಕಿದಾಗ ಉಳಿದ ಭಿಕ್ಷುಕರನ್ನು ಹತ್ತಿರ ಸೇರಿಸಲಾರ . ಆದುದರಿಂದ ಕಾಗೆ ಮತ್ತು ಭಿಕ್ಷುಕರಲ್ಲಿ ಕಾಗೆಯೇ ಶ್ರೇಷ್ಟ. ತನಗೆ ಸಿಕ್ಕಿರುವುದನ್ನು ಹಂಚಿಕೊಳ್ಳುವ    ಮನೊಭಾವ ಅತಿ ಮುಖ್ಯವಾದದ್ದು.



ಮಂತ್ರಕ್ಕೆ ಮಾವಿನಕಾಯಿ ಉದುರೀತೇ

ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದೇ ಒಂದಿಷ್ಟು ಅಧ್ಯಯನ ಮಾಡಲು,ಸಿಕ್ಕಬೇಕಾಗಿದ್ದ ವಯಸ್ಸಿನಲ್ಲಿ ಸಿಗದಿದ್ದ ಅವಕಾಶಗಳು ಈಗಲಾದರೂ ಸಿಕ್ಕುತ್ತಿದೆ. ಅದಕ್ಕಾಗಿ ಗುರುಗಳಾದ ಶ್ರೀ ಸುಧಾಕರಶರ್ಮರು, ಶ್ರೀ ವಿಶ್ವನಾಥಶರ್ಮರನ್ನು ಸ್ಮರಿಸುತ್ತೇನೆ.ಈಗ ವಿಚಾರಕ್ಕೆ ಬರುವೆ. ಯಾವಾಗಲೂ ಶ್ರೀ ಸುಧಾಕರಶರ್ಮರು ಒಂದು ಮಾತನ್ನು ಸ್ಪಷ್ಟ ವಾಗಿ ಹೇಳುತ್ತಲೇ ಇರುತ್ತಾರೆ," ಏನೇ ಮಾಡ ಬೇಕಾದರೂ ಅದರ ಅರ್ಥ ತಿಳಿದುಕೊಂಡು ಮಾಡಿ, ಆಗ ತಾನೇ ತಾನಾಗಿ ಯಾವುದು ಮಾಡಬೇಕು, ಯಾವುದು ಮಾಡುವುದರಿಂದ ಪ್ರಯೋಜನವಿಲ್ಲ ಎಂಬುದು ನಿಮಗೇ ಅರ್ಥವಾಗುತ್ತೆ" .ಆರಂಭದಲ್ಲಿ ಅವರ ಮಾತನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. "ಎಲ್ಲ ವಿಚಾರಗಳಿಗೂ ವೇದವೇ ಮೂಲ. ಅದರ ಹೊರತಾಗಿ ನೀವು ಎಲ್ಲೆಲ್ಲಿ ಸುತ್ತಿ ಬಂದರೂ ಮತ್ತೆ ನೀವು ವೇದವನ್ನು ಆಶ್ರಯಿಸಿದಾಗಲೇ  ನಿಮಗೆ ಪರಿಹಾರ ದೊರಕುವುದು, ಎಂದು ಕಟು      ವಾಗಿಯೇ ಹೇಳುತ್ತಾರೆ-ಸುಧಾಕರ ಶರ್ಮರು.  ನಾನೂ ಒಂದಿಷ್ಟು ಅವರ ಆಡಿಯೋ ಕೇಳಿ, ಚತುರ್ವೇದಿಗಳು ವೇದದ ಬಗ್ಗೆ ಸರಳ ವಾಗಿ ಬರೆದಿರುವ ಸಾಹಿತ್ಯವನ್ನು ಓದಿ, ಕೆಲವು ವೇದಮಂತ್ರಗಳ ಅರ್ಥವನ್ನು ತಿಳಿದೊಕೊಳ್ಳುವ ಪ್ರಯತ್ನ ಮಾಡುತ್ತಿರುವಾಗ ನನಗೆ ಮೊದಮೊದಲು ನನ್ನ ಮನದಲ್ಲಿ ಈ ರೀತಿ ಭಾವನೆಗಳು ಮೂಡಿದವು...

1.ಅಗ್ನಿಮೀಳೇ ಪುರೋಹಿತಂ ಜ್ಞಸ್ಯದೇವ ಮೃತ್ವಿಜಮ್|
ಹೋತಾರಂ ರತ್ನ ಧಾತಮಂ||

ಈ ಮಂತ್ರಕ್ಕೆ ಅರ್ಥವನ್ನು  ನೋಡಿದಾಗ...

ಅನಾದಿಹಿತಕಾರಿಯೂ,ಎಲ್ಲಕ್ಕಿಂತಲೂ ಎಲ್ಲರಿಗಿಂತಲೂ ಶ್ರೇಷ್ಠನೂ,ಋತುಪರಿವರ್ತನಕಾರಿಯೂ,ಸತ್ಕರ್ಮ ಪ್ರಕಾಶಕನೂ,ಸರ್ವದಾತೃವೂ, ಸರ್ವ ಗೃಹೀತೃವೂ,ಪ್ರಕಾಶಮಯ ಗ್ರಹೋಪಗ್ರಹಗಳ ಸರ್ವೋಚ್ಛಧಾರಕನೂ, ಆದ ಸರ್ವಾಗ್ರಣೀ ತೇಜೋಮಯ ಪ್ರಭುವನ್ನು ಸ್ತುತಿಸುತ್ತೇನೆ.

......ಪದಗಳ ಅರ್ಥ ನೋಡಿದ್ದಾಯ್ತು. ಏನು ಇದರಿಂದ ಪ್ರಯೋಜನ? ಹೀಗೆ ಯಾವ ಮಂತ್ರವನ್ನು ನೋಡಿದಾಗಲೂ, ಇಲ್ಲಾ ಭಗವಂತನ ಸ್ತುತಿ, ಇಲ್ಲವೇ ಶಾಂತಿಕೊಡು, ಪುಷ್ಟಿಕೊಡು,...ಇತ್ಯಾದಿ...ಇತ್ಯಾದಿ.... ಈ ಮಂತ್ರಗಳನ್ನು   ಒಳಗೊಂಡಿರುವ  ವೇದವನ್ನು ಸುಧಾಕರ ಶರ್ಮರು" ಜೀವನ ವಿಜ್ಞಾನ  ಅಂತಾರಲ್ಲಾ!! ಏನಿದೆ, ಇದರಲ್ಲಿ?!!

ಅನೇಕ ದಿನಗಳು  ಯಾವ ಮಂತ್ರವನ್ನು ನೋಡಿದರೂ ಹೀಗೆಯೇ ಅನ್ನಿಸುತ್ತಿತ್ತು. ನನಗೆ ಖುಷಿಯನ್ನೇ ಕೊಡುವುದಿಲ್ಲ ವಲ್ಲಾ! ಅನ್ನಿಸುತ್ತಿತ್ತು.

ಗಾಯತ್ರಿ ಮಂತ್ರದ ಅರ್ಥವನ್ನು ಒಮ್ಮೆ  ಮನಸ್ಸಿನಲ್ಲೇ ಚಿಂತನೆ ನಡೆಸಿದೆ   | ಧಿಯೋ ಯೋ ನ: ಪ್ರಚೋದಯಾತ್|  ...ಅಂದರೆ...."ನನ್ನಲ್ಲಿ ಧೀ ಶಕ್ತಿಯನ್ನು ಪ್ರಚೋದಿಸು"
ಗಾಯತ್ರಿ ಮಂತ್ರದಿಂದ  ಅದೆಷ್ಟು ಜನರು ಸ್ಪೂರ್ಥಿ ಪಡೆದಿದ್ದಾರೆ! ಅದರಲ್ಲಿ ಅದೆಂತಹ ಅದ್ಭುತ ಶಕ್ತಿ!!...ಹೀಗೆಯೇ ಯೋಚಿಸುವಾಗ ಶರ್ಮರ     ಮಾತು ನೆನಪಾಯ್ತು. ಅರ್ಥವನ್ನು ತಿಳಿದು ಆಚರಿಸಿ. ಅಂದರೆ ನನ್ನಲ್ಲಿ ಧೀಶಕ್ತಿಯನ್ನು ಪ್ರಚೋದಿಸು, ಎಂದು ಭಗವಂತನಲ್ಲಿ ಪ್ರಾರ್ಥಿಸಿ ನಾನು ರಗ್ ಹೊದ್ದು  ಬೆಚ್ಚಗೆ ಮಲಗಿದರೆ  ಫಲಸಿಗುತ್ತದೆಯೇ? ಸಾಧ್ಯವೇ ಇಲ್ಲ. ಸಾವಿರ ಸಾವಿರ ಗಾಯತ್ರಿ ಮಂತ್ರ ಜಪ ಮಾಡಿ ಅಂತಾ ಹೇಳ್ತಾರೆ, ಅದರರ್ಥವೇನು?   ಪ್ರತಿ ಭಾರಿ ಮಂತ್ರವನ್ನು ಹೇಳಿದಾಗಲೂ ಅದರ ಅರ್ಥವನ್ನು ಅನುಸಂಧಾನ ಮಾಡಿಕೊಂಡಾಗ ನಮ್ಮಲ್ಲಿ " ಧೀಶಕ್ತಿ " ಹೆಚ್ಚಾಗದೇ ಇದ್ದೀತೇ?

ಹಾಗೆಯೇ ನಮಗೆ ಶಕ್ತಿ ಕೊಡು, ಶಾಂತಿ ಕೊಡು, ನೆಮ್ಮದಿ ಕೊಡು, ಎಂದೆಲ್ಲಾ ಮಂತ್ರಗಳ ಅರ್ಥ ಇದೆ. ಮಂತ್ರ ಹೇಳಿದ ಮಾತ್ರಕ್ಕೆ  ನಮಗೆ ಶಕ್ತಿಯಾಗಲೀ, ನೆಮ್ಮದಿಯಾಗಲೀ, ಶಾಂತಿಯಾಗಲೀ ದೊರಕಲು ಸಾಧ್ಯವೇ? ಮಂತ್ರಕ್ಕೆ ಮಾವಿನಕಾಯಿ ಉದುರೀತೇ? ಖಂಡಿತಾ ಸಾಧವಿಲ್ಲ. ಹಾಗಾದರೆ... ಮಂತ್ರ ದಿಂದ ಪ್ರಯೋಜನ ಇಲ್ಲವೇ?
ಖಂಡಿತಾ ಇದೆ.ಆದರೆ ಅದರ ಅರ್ಥದ ಅನುಸಂಧಾನ ಮಾಡಿಕೊಂಡು ಅದರಂತೆ ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳಬೇಕು, ಅದಕ್ಕೆ ತಕ್ಕಂತೆ ನಮ್ಮ ಜೀವನ ಕ್ರಮವನ್ನು ರೂಢಿಸಿಕೊಳ್ಳಬೇಕು,  ಶಕ್ತಿ ನಮಗೆ ಬೇಕೆಂದರೆ ಒಳ್ಳೆಯ ಆಹಾರವನ್ನು ಒಳ್ಳೆಯ ಆಲೋಚನೆಯೊಂದಿಗೆ ಸ್ವೀಕರಿಸಬೇಕು, ಶಾಂತಿ, ನೆಮ್ಮದಿ ಬೇಕೆಂದರೆ ನಾವು ಅದಕ್ಕೆ ನ್ಯಾಯ ಒದಗಿಸುವಂತೆ ಜೀವನ ಮಾಡಬೇಕು. ಸತ್ಯ ಪಥದಲ್ಲಿ ನಡೆಯಬೇಕು, ವಂಚನೆ ಮಾಡಕೂಡದು, ನಿಸ್ವಾರ್ಥ ಬದುಕು ನಡೆಸಬೇಕು.

ಅಂತೂ ನಿತ್ಯವೂ ವೇದ ಮಂತ್ರಗಳನ್ನು ಅರ್ಥ ಅನುಸಂಧಾನ ಮಾಡಿಕೊಂದು ಪಠಿಸಿದರೆ ನಮ್ಮ  ಜೀವನ ಕ್ರಮ ಶಿಸ್ತು ಬದ್ಧ ವಾದೀತು. ಆಗ ತಾನೇ ತಾನಾಗಿ ಮಂತ್ರದಲ್ಲಿ ನಾವು ಪ್ರಾರ್ಥಿಸಿದಂತೆ ಸುಖ,ನೆಮ್ಮದಿ, ಶಾಂತಿ ಎಲ್ಲವೂ ಸಿಗುವುದರಲ್ಲಿ ಸಂಶಯವಿಲ್ಲ. ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಹೇಳಿದ ಒಂದು ಮಾತು ನೆನಪಾಗುತ್ತೆ  "  ಅರ್ಧ ಗಂಟೆ ಧ್ಯಾನ
 ಮಾಡಬೇಕೆಂದರೆ ದಿನದಲ್ಲಿ ಉಳಿದ 23 ಗಂಟೆ 30ನಿಮಿಷಗಳು ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಅಂದರೆ ನಮ್ಮ ಬದುಕು  ಹೇಗಿದ್ದರೆ ಧ್ಯಾನದ ಒಂದು ಉತ್ತಮ ಸ್ಥಿತಿ ಲಭಿಸೀತು, ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕಲ್ಲವೇ?

Tuesday, August 7, 2012

ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?


ಮಾರನಯಕನ ಹಳ್ಳಿ ಎಂಬಲ್ಲಿಗೆ ಹೊರಟಿದ್ದ ಒಬ್ಬ ನಗರವಾಸಿಗಳು ಬೇರೆ ಸಂಚಾರ ವ್ಯವಸ್ತೆ ಇಲ್ಲದೆ ಬಸ್ಸಿಂದ ಇಳಿದು ಮರದಡಿ ನಿಂತಿದ್ದರು.  ಘಲ್...ಘಲ್....ಸದ್ದು ಮಾಡುತ್ತಾ ಬಂದ ಜೋಡಿ ಎತ್ತಿನ ಗಾಡಿಯವನು ಮರದ ಕೆಳಗೆ ನಿಂತಿದ್ದ ಈ ನಗರವಾಸಿಗಳನ್ನು ನೋಡಿ "ಎಲ್ಲಿಗೆ ಹೋಗಬೇಕು?" ಎಂದು ಕೇಳಿದ.  " ಸ್ವಲ್ಪ ದೂರದಲ್ಲಿರುವ ಮಾರನಾಯಕನ ಹಳ್ಳಿಗೆ " ಎಂದು ಹೇಳಿ " ನನ್ನ ಅಲ್ಲಿತನಕ ತಲುಪಿಸಿ ಬಿಟ್ಟರೆ ನಿನ್ನ ಬಾಡಿಗೆ ಏನಿದೆಯೋ ಅದನ್ನ ಕೊಡುತ್ತೀನಿ. ಅಷ್ಟು ಮಾಡಿ ಪುಣ್ಯ ಕಟ್ಕೊ" ಎಂದು ಒಂದೇ ಸಮನೆ ಹೇಳಿದರು.  " ಅದಕ್ಕೇನಂತೆ, ನಾನು ಆ ಕಡೆಗೆ ಹೋಗ್ತಾ ಇದೀನಿ. ಬನ್ನಿ ಸ್ವಾಮೀ" ಎಂದು ಸ್ನೇಹದಿಂದ ಕರೆದ. ಎತ್ತಿನ ಗಾಡಿ ಬಹಳ ದಿನದ ನಂತರ ಹತ್ತಿ ಕೂತರು. ಕುಲುಕಾಟದ ಮಣ್ಣಿನ ರಸ್ತೆಯಲ್ಲಿ ಧೂಳು ಅಡರುತ್ತಿತ್ತು ಜೊತೆಗೆ ರಣ ಬಿಸಿಲು.  ಇದನ್ನು ಗಮನಿಸಿದ ಗಾಡಿಯವ " ಸ್ವಾಮೀ,  ಅಲ್ಲೇ  ಛತ್ರಿ ಮಡಗಿವ್ನಿ ಬಿಚ್ಚಿಕೊಳಿ. ಪ್ಯಾಟೆ ಜನಕ್ಕೆ ಈ ಬಿಸಿಲು ಆಗಬರಂಗಿಲ್ಲಾ." ಎಂದು ಸಹಜವಾಗಿ ಅಂದ.

ಗಾಡಿ ಸಾಗುತ್ತ ಇದ್ದಂಗೆ " ಈ ಗ್ರಾಮದಲ್ಲಿ ಒಬ್ಬರು ವೆಂಕಪ್ಪ ನಾಯಕರು ಅಂತ........ ತುಂಬಾ ದೊಡ್ಡ ಮನುಷ್ಯರು, ದೊಡ್ಡ ದಾನಿಗಳು....... ಅವರು ಈಗ ಹೇಗಿದ್ದಾರೆ? ನಿಮಗೇನಾದರೂ ಗೊತ್ತ?  ನಾನು ಅವರನ್ನ ......" ಹೇಳುತ್ತಿರುವ ಮಧ್ಯೆ ಬಾಯಿಹಾಕಿ " ಅವ್ರು ಇನ್ನೆಲ್ಲಿ ಸ್ವಾಮೀ? ಅವರನ್ನ ಆ ಸ್ವಾಮೀ ಕರಕ್ಕಂಡು ಬಿಟ್ಟ.  ಅದಿರ್ಲಿ, ನೀವು ಯಾಕೆ ಅವರನ್ನ ಕೇಳ್ತಾ ಇದ್ದೀರಿ?" ಎಂದು ಮರು ಪ್ರಶ್ನೆ ಹಾಕಿದ. ಈ  ಮಾತು ಕೇಳಿದ ನಗರವಾಸಿಗಳಿಗೆ ಅತ್ಯಂತ ನಿರಾಸೆಯಾಯಿತು.  ಏನೂ ತಿಳಿಯದೆ  ತಲೆ ಕೆಳಕ್ಕೆ ಮಾಡಿ ಕಣ್ಣು ತುಂಬಿಕೊಂಡರು. ಇದನ್ನು ಗಮನಿಸಿದ ಗಾಡಿಯವ " ನಿಮಗೆ ಸಂಬಂಧವಾ? ನಿಮ್ಮ ಕಣ್ಣನೀರು ನೋಡಿದರೆ ನಿಮಗೆ ತುಂಬಾ ಹತ್ತಿರದವರು ಅನಿಸುತ್ತೆ? " ಎಂದು ಅನುಮಾನ ವ್ಯಕ್ತ ಪಡಿಸಿದ.  " ನಾನು ಈ ಊರಿನವನೇ, ಈಗ್ಗೆ 35 ವರ್ಷಗಳ ಹಿಂದೆ ಈ ಊರು ಬಿಟ್ಟು ಪಟ್ನ ಸೇರಿಕೊಂಡವಿ. ವೆಂಕಪ್ಪ ನಾಯಕರು ನನ್ನ ಓದಿಗೆ ಸಹಾಯ ಮಾಡಿ ಚನ್ನಾಗಿ ಓದು ಅಂತ ಪ್ರೋತ್ಸಾಹ ಕೊಟ್ಟರು. ನಾನು ಒಳ್ಳೆ ಕೆಲಸಕ್ಕೆ ಸೇರಿಕೊಂಡು ವಿದೇಶಕ್ಕೆ ಹೋಗಿಬಿಟ್ಟೆ. ಕಳೆದ ಸಾರಿ ಭಾರತಕ್ಕೆ ಬಂದಾಗ ಈ ಹಳ್ಳಿಗೆ  ಬರಲಾಗಲಿಲ್ಲ. ಈ ಸಾರಿ ನಾಯಕರನ್ನ ನೋಡೇ ಹೋಗಬೇಕೆಂದು ಬಂದೆ.  ಆದರೆ, ನಂಗೆ ಅವರನ್ನ ನೋಡಿ ಆಶೀರ್ವಾದ ಪಡೆಯುವ ಭಾಗ್ಯ ಇಲ್ಲವಾಯಿತಲ್ಲ ಎಂದು ದುಃಖ ಆಗ್ತಾ ಇದೆ. " ಎಂದು ಬಿಕ್ಕಳಿಸಿದರು.  ಅಷ್ಟರಲ್ಲಿ ಗಾಡಿ ನಾಯಕರ ಮನೆ ಹತ್ತಿರಕ್ಕೆ ಬಂತು.

" ಸ್ವಾಮೀ......ಇಳೀರಿ. ನಾಯಕರ ಮನೆ ಬಂತು.  ಬನ್ನಿ ಒಳಕ್ಕೆ." ಎಂದು ಆತ್ಮೀಯವಾಗಿ ಒಳಕ್ಕೆ ಕರೆದ.  ಒಳಗೆ ಹೋಗಿ ಕುರ್ಚಿಯ ಮೇಲೆ ಕೂತ ಅವರ ಕಣ್ಣಿಗೆ ಬಿದ್ದದ್ದು ವೆಂಕಪ್ಪ ನಾಯಕರ ದೊಡ್ಡ ಫೋಟೋ. ಕಣ್ಣು ತುಂಬಿ ಬಂತು.  ಎದ್ದು ನಿಂತು ಕೈ ಜೋಡಿಸಿ "ನನ್ನನ್ನ  ಕ್ಷಮಿಸಿ ಬಿಡಿ,  ನಾನು ನಿಮ್ಮನ್ನ ನೋಡಲು ಬಹಳ ವರ್ಷ ಬರಲಿಲ್ಲ. ನೀವು ನನಗೆ ಮಾಡಿದ ಉಪಕಾರ ಹೇಗೆ ತೀರಿಸಲಿ? " ಎಂದು ಗದ್ಗದಿತರಾದರು.  ಅಷ್ಟರಲ್ಲಿ ಮನೆ ಒಳಗಿದ್ದವರೆಲ್ಲ ಹಜಾರಕ್ಕೆ ಬಂದರು.  ಗಾಡಿಯವ "ಇವರು ಅಯ್ಯಂಗೆ ಬೇಕಾದವರು."  ಎಂದು ಪರಿಚಯ ಹೇಳಿದ. ಜೋಬಿಗೆ ಕೈ ಹಾಕಿ ಗಾಡಿ ಬಾಡಿಗೆ ಕೊಡಲು ಪಾಕೆಟ್ ತೆಗಯಲು ಹೋದಾಗ " ಸ್ವಾಮೀ, ನಾನೂ ನಾಯಕರ ಕುಟುಂಬದ ಕುಡಿ. ಏನೋ ಕಾರಣ ಎಲ್ಲವನ್ನು ಕಳೆದುಕೊಂಡು ಈಗ ನಾವೆಲ್ಲಾ ಗತಿ ಕೆಟ್ಟವರಾಗಿದ್ದೇವೆ. ಕೊನೆ ಉಳಿದಿರುವ ಈ ಜೋಡಿ ಎತ್ತು ನಮ್ಮನ್ನ ಸಾಕ್ತಾ ಇತೆ. ನನ್ನ ಹಿರಿಯರು ನಮ್ಮನ್ನ ಕೈ ಬಿಟ್ಟಿಲ್ಲ ಸ್ವಾಮೀ" ಎಂದ .   ಅವರು ದಂಗಾಗಿ ಹೋದರು.  ತಕ್ಷಣ ಅವರ ಮನಸ್ಸಿನಲ್ಲಿ ಇದು ನನಗೆ ಸರಿಯಾದ ಸಮಯ ಇವರಿಗೆ ಸಹಾಯ ಮಾಡಲು ಎಂದು ಜೇಬಿಂದ ಸಾವಿರದ ಹತ್ತು ನೋಟುಗಳನ್ನು ಗಾಡಿಯವನ ಕೈಯಲ್ಲಿಡಲು ಮುಂದೆ ಬಾಗಿದರು.  ಹಾವು ತುಳಿದವನಂತೆ  ನಾಕು ಹೆಜ್ಜ ಹಿಂದೆ ಹೋಗಿ " ನಮ್ಮ ಹಿರಿಯರು ಕೈನೀಡಿ ಕೊಟ್ಟು ಬೆಳೆಸಿದ ನಿಮ್ಮಂತಹವರ ಹತ್ತಿರ ನಾವು ಪಡ ಕೊಂಡರೆ,  ದಾನ ಕೊಟ್ಟಿದ್ದನ್ನ ಮತ್ತೆ ಹಿಂದ್ದಕ್ಕೆ ಪಡೆದ ಪಾಪ ಬರುತ್ತೆ. ನಮ್ಮ ಹಿರಿಯರಿಗೆ ಅವಮಾನ ಮಾಡಿದ ಹಾಗಾಗುತ್ತೆ. ಖಂಡಿತ ಬೇಡ. ನಿಮಗೆ ನಮ್ಮ ಅಯ್ಯನ ಮೇಲೆ ಗೌರವ ಇದ್ರೆ ಇವೆಲ್ಲ ಏನೊ ಬೇಡ." ಎಂದು ಸಾರಾಸಗಟಾಗಿ ತಿರಸ್ಕರಿಸಿದ.  ಇವರ ಬಾಯಿಂದ ಏನೂ ಹೊರಳಲೇ ಇಲ್ಲ.

ದಾನಶೂರರಾಗಲು ಹಣ ಮುಖ್ಯವೋ?  ಮನಸ್ಸು ಮುಖ್ಯವೋ? ನಮ್ಮ ಮನಸ್ಸೇ ಮಿತ್ರ, ನಮ್ಮ ಮನಸ್ಸೇ ಶತ್ರು. ನಾವು ಎಷ್ಟು ದೊಡ್ಡ ಮನಸ್ಸಿನವರು ಆಗಬಹುದು, ಹಾಗೆಯೇ ಚಿಕ್ಕವರೂ ಆಗಬಹುದು.  ನಾವು ಏನು ಚಿಂತಿಸುತ್ತೆವೋ   ಅದೇ ಆಗುತ್ತೇವೆ.  ಎಲ್ಲವು ನಮ್ಮ ಕೈಯಲ್ಲೇ ಇದೆ. ಮನಸ್ಸಿನ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡರೆ ಬದುಕಿನಲ್ಲಿ ಮೇಲೇರಲು ಸಾಧ್ಯ.  

(ನನ್ನ ಮಿತ್ರರ  ಜೀವನದಲ್ಲಿ ಆದ ಸತ್ಯ ಘಟನೆಯ ಚಿತ್ರಣ )




ಜಗತ್ತೇ ಅವನ ವಶವಾಗುತ್ತದೆ

ನಾದಾತವ್ಯಂ ನ ದಾತವ್ಯಂ ನಕರ್ತವ್ಯಂ ಚ ಕಿಂಚನ ।
ಸಾಂತ್ವಮೇಕಂ ಪ್ರಯೋಕ್ತವ್ಯಂ ಸರ್ವಂ ತಸ್ಯ ವಶೇ ಜಗತ್ ॥


ತೆಗೆದುಕೊಳ್ಳಬೇಕಾದದ್ದು ಇಲ್ಲ, ಕೊಡಬೇಕಾದದ್ದು ಇಲ್ಲ, ಮಾ
ಬೇಕಾದದ್ದು ಏನೂ ಇಲ್ಲ !
 ಒಳ್ಳೆಯ ಮಾತನಾಡುತ್ತಿದ್ದರೆ ಜಗತ್ತೇ ಅವನ ವಶವಾಗುತ್ತದೆ. ||

ಸಿಗರೇಟು ಹೇಳಿದ ಬುದ್ಧಿ


ಒಂದು ಭಾನುವಾರ ಎಂದಿನಂತೆ ಗುರುನಾಥರನ್ನು ನೋಡಲು ಹೋಗಿದ್ದಾಗ ಅಲ್ಲಿ ನಡೆದ ಒಂದು ಘಟನೆಯನ್ನು ತಮ್ಮೊಂದಿಗೆ  ಹಂಚಿಕೊಳ್ಳುತ್ತಿದ್ದೇನೆ. 

ಹಜಾರ ಹೆಚ್ಚುಕಡಿಮೆ ತುಂಬಿಹೋಗಿತ್ತು ಎನ್ನಬಹುದು.  ಗುರುನಾಥರು ಯಾವುದೊ ಹಾಸ್ಯ ಪ್ರಸಂಗದಲ್ಲಿ ಎಲ್ಲರನ್ನು ನಗೆಕಡಲಿನಲ್ಲಿ ಮುಳುಗಿಸಿದ್ದರು.  ನಂತರದ ಕೆಲವು ನಿಮಿಷದಲ್ಲಿ ಒಬ್ಬ ದಂಪತಿಗಳ ಕಡೆ ತಿರುಗಿ " ಏನು ಬಂದಿದ್ದು? " ಎಂದು ಪ್ರಶ್ನಿಸಿದರು.  ಅಲ್ಲಿದ್ದ ಎಲ್ಲ ಗುರುಬಂಧುಗಳ ಗಮನ ಅವರ ಕಡೆಗೆ ಹೊರಳಿತು. ಆ ದಂಪತಿಯಲ್ಲಿ ಒಬ್ಬರು ಮಧ್ಯ ವಯಸ್ಸಿನ ಹೆಂಗಸರು ಎದ್ದು ನಿಂತು " ನಮ್ಮ ಯಜಮಾನರು ತುಂಬಾ ಸಿಗರೇಟು ಸೇದುತ್ತಾರೆ. ಯಾರು ಎಷ್ಟು ಹೇಳಿದರೂ ಕೇಳುವುದೇ ಇಲ್ಲ. ತಾವು ಅವರಿಗೆ ಸರಿಯಾಗಿ ಬುದ್ಧಿ   ಹೇಳಬೇಕು" ಎಂದು ಸ್ವಲ್ಪ ಅಹಂಕಾರ  ಮಿಶ್ರಿತ ದ್ವನಿಯಲ್ಲಿ ಹೇಳಿದರು. " ನಿಮ್ಮ ಯಜಮಾನರು ಸಿಗರೇಟು ಸೇದುತ್ತಾರೆ, ಯಾರು ಹೇಳಿದರು ಕೇಳಿಲ್ಲ. ಇನ್ನು ನಾನು ಹೇಳಿದರೆ ಕೇಳುತ್ತಾರೋ?   ಇರಲಿ.  ಈವರೆಗೆ ನೀವು ಹೇಳಿದ ಎಲ್ಲಾ ಮಾತನ್ನು ಕೇಳಿರುವ ನಿಮ್ಮ ಯೆಜಮಾನರು ಈ ಮಾತನ್ನು ಯಾಕೆ ಕೇಳಿಲ್ಲಾ?" ಎಂದು ಮರು ಪ್ರಶ್ನೆ ಹಾಕಿದರು. " ಯಾವಮಾತು ಕೇಳ್ತಾರೆ? " ಎಂದು ತನ್ನ ಯಜಮಾನರ ಕಡೆಗೆ ಒಮ್ಮೆ ನೋಡಿದರು.  ಆ ಯಜಮಾನರು ಅವಮಾನವಾದವರಂತೆ ತಲೆ ತಗ್ಗಿಸಿ ಬಿಟ್ಟರು.

" ಅಲ್ಲಮ್ಮಾ.....ನೀವು ಹೇಳಿದಿಕ್ಕೆ ತಾನೇ ಅವರ ಅಪ್ಪ ಅಮ್ಮನ್ನ ಊರಲ್ಲೇ ಬಿಟ್ಟು ಬಂದಿರುವುದು. ನೀವು ಹೇಳಿದ್ದಿಕ್ಕೆ ತಾನೇ ಇದ್ದೊಬ್ಬ ತಂಗಿ ಮದುವೆಗೂ ಏನೂ ಸಹಾಯ ಮಾಡದಲೆ ಎಲ್ಲರ ಹತ್ರ ಬೈಸಿಕೊಂಡರು. ನೀವು ಹೇಳಿದ್ದಕ್ಕೆ ತಾನೇ ಊರಿನ ಜಮೀನು  ಮಾರಿ, ನೀವು ಮನೆ ಕಟ್ಟಿಕೊಂಡು ನಿಮ್ಮ ಅತ್ತೆ ಮಾವನ್ನ ಅದೇ ಹಳೆ ಹಂಚಿನ ಮನೆಯಲ್ಲೇ ಉಳಿಸಿದ್ದು. ಇನ್ಯಾವ ಮಾತು ಕೇಳಬೇಕಮ್ಮ?  ಜೀವನ ಪೂರ್ತಿ ನೀವು ಹೇಳಿದ್ದನ್ನ ಚಾಚು ತಪ್ಪದ ಹಾಗೆ ಕೇಳಿಕೊಂಡೆ ಬಂದಿದ್ದಾರೆ........... ಈಗ ಸಿಗರೇಟು ಸೇದೊದುಕ್ಕೆ ನಿಮ್ಮ ಮಾತು ಕೇಳಲಿಲ್ಲ ಅಂತ ಬೇಜಾರೆ?  ಇದೊಂದಾದರೂ ಅವರ ಸ್ವಾತಂತ್ರದಲ್ಲಿ ಮಾಡಲಿ ಬಿಡಿ." ಎಂದು ಹಾಸ್ಯ ಮಿಶ್ರಿತ ದನಿಯಲ್ಲಿ ಹೇಳಿಬಿಟ್ಟರು.   ಆಕೆಗಂತೂ ದಿಕ್ಕೇ ತೋಚಲಿಲ್ಲ.  ಸೆರಗಿನಿಂದ ಬಾಯಿ ಮುಚ್ಚಿಕೊಂಡು ಎದ್ದು ಹೊರಗೆ ನಡೆದೇ ಬಿಟ್ಟರು.   ಆಕೆಯ ಯಜಮಾನರು ಹೊರಡಲು ಎದ್ದಾಗ " ಏನಪ್ಪಾ.......ಸಿಗರೇಟು ಸೇದೋದು ಒಳ್ಳೆದೆನಪ್ಪಾ?  ನಿನಗೆ ಗೊತ್ತಿಲ್ಲವೇ?  ಇರೋ ಅರೋಗ್ಯ ಕೆಡಸಿ ಕೊಂಡರೆ ನಿನ್ನ ಯಾರಯ್ಯ ನೋಡುತ್ತಾರೆ?  ಅವರೂ ಇಲ್ಲ , ಇವರೂ ಇಲ್ಲ ಅನ್ನೋಹಾಗೆ ಅಗ್ತಿಯಲ್ಲಪ್ಪ........ ಸಿಗರೇಟು ಬೇಡ....... ಬಿಟ್ಟುಬಿಡು."  ಎಂದು ತಂದೆ ಮಗನಿಗೆ ಹೇಳುವ ರೀತಿ ಬುದ್ಧಿವಾದ ಹೇಳಿದರು   ಆ ಯಜಮಾನರ ಕಣ್ಣು ತುಂಬಿ ಬಂತು.  ನೇರ ಬಂದು ಗುರುನಾಥರ ಪಾದಕ್ಕೆರಗಿ ಏನೋ ಹೇಳಬೇಕೆಂದು ಇರುವಾಗಲೇ ಗುರುನಾಥರು " ಏನೂ ಹೇಳಬೇಡ, ನಡಿ......." ಎಂದು ಬೆನ್ನು ತಟ್ಟಿದರು.

 ಅಲ್ಲಿ ನೆರೆದ ನಮಗೆಲ್ಲ ಒಂದು ರೀತಿಯ ಹೇಳಲಾಗದ ಸ್ಥಿತಿ.  ಒಂದೆರಡು ನಿಮಿಷದಲ್ಲಿ ಆದ ಈ ಘಟನೆ ಅದೆಷ್ಟು ಪರಿಣಾಮ ಬೀರಿತೆಂದರೆ ಅಲ್ಲಿದ್ದ ಕೆಲವರಿಗೆ ಚಳಿಯಲ್ಲೂ ಬೆವರಿನ ಅನುಭವ.  ಗುರುನಾಥರು ಇನ್ನು ಯಾರನ್ನು ಉದ್ದೇಶಿಸಿ ಏನು ಹೇಳುತ್ತಾರೋ ಎಂಬ ಆತಂಕ ಕೆಲವರಿಗಾದರೆ, ಮತ್ತೆ ಕೆಲವರು ನಮಗೇನೂ ಹೇಳದಿದ್ದರೆ ಸಾಕು  ಎನ್ನುವಂತೆ ಅಲ್ಲಿನ ಸನ್ನಿವೇಶ ಇತ್ತು.  ಗುರುನಾಥರು ಈ ಘಟನೆಯಲ್ಲಿ ಇಬ್ಬರಿಗೂ ಬುದ್ಧಿವಾದವನ್ನು ಅವರವರ ಮಾತಿನಲ್ಲೇ ಹೇಳಿದ್ದರು.  ಅವರ ಗುಣದೋಷಗಳನ್ನು  ಸರಿಯಾದ ಸಮಯದಲ್ಲಿ  ಎತ್ತಿ ಹಿಡಿದಿದ್ದರು.  ಇದು ಕೇವಲ ಅವರಿಗೆ ಮಾತ್ರ ಹೇಳಿದ ಬುದ್ಧಿವಾದವಾಗಿರದೆ ಎಲ್ಲರಿಗು ನೀಡಿದ ಎಚ್ಚರಿಕೆ ಘಂಟೆಯಾಗಿತ್ತು.  ಇಲ್ಲಿ ಸಿಗರೇಟು ನೆಪಮಾತ್ರವಾಗಿತ್ತು.