Pages

Friday, February 13, 2015

ಆರ್ಷಸ್ಪಂದನ - ಸಾಮಾಜಿಕ ಸಮರಸತೆಗೆ ಒತ್ತು ನೀಡಿದ ಸಾಮೂಹಿಕ ಅಗ್ನಿಹೋತ್ರ

               

                       


                   

     ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಮಲಗುಂದದಲ್ಲಿ ಒಂದು ಹೃದಯಸ್ಪರ್ಷಿ  ಕಾರ್ಯಕ್ರಮ ಇದೇ ತಿಂಗಳ ೯ ಮತ್ತು ೧೦ರಂದು ನಡೆಯಿತು.೯ನೆಯ ದಿನಾಂಕದಂದು ಶ್ರೀ ದಕ್ಷಿಣಾಮೂರ್ತಿ ಸಹಿತ ಸೋಮೇಶ್ವರ ವಿಗ್ರಹದ ಪ್ರತಿಷ್ಠಾಪನೆ ಮತ್ತು ವರಸಿದ್ಧಿ ವಿನಾಯಕ ದೇವಸ್ಥಾನ ೨೫ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪುನರ್ ಪ್ರತಿಷ್ಠಾಪನಾ ಸಹಿತ ಕುಂಭಾಭಿಷೇಕ ದಿವ್ಯ ಯತಿಗಳ ಸನ್ನಿಧಿಯಲ್ಲಿ ಜರುಗಿತು. ಆರ್ಷ ವಿದ್ಯಾನಿಕೇತನದ ವತಿಯಿಂದ ನಡೆದ ಈ ಕಾರ್ಯಕ್ರಮಗಳ ರೂವಾರಿ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರು. ೧೦ನೆಯ ದಿನಾಂಕದಂದು ಮಲಗುಂದದ ಆಶ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿರುವ ೧೦೧ ವರ್ಷಗಳ ಹಿರಿಯ ಸಾಧಕ ಮಾಮಾಜಿಯವರನ್ನು ಗೌರವಿಸುವ ಸೌಭಾಗ್ಯ ಹಿತೈಷಿಗಳೆಲ್ಲದರಾಗಿತ್ತು. ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರು ಹಾಸನದ ವೇದಭಾರತಿಗೆ ಈ ಸಂದರ್ಭದಲ್ಲಿ ಸಾಮೂಹಿಕ ಅಗ್ನಿಹೋತ್ರ ನಡೆಸಿಕೊಡುವ ಹೊಣೆಗಾರಿಕೆ ವಹಿಸಿದ್ದರು. ಕಳೆದ ಎರಡೂವರೆ ವರ್ಷಗಳಿಂದ ಪ್ರತಿನಿತ್ಯ ಸತ್ಸಂಗದಲ್ಲಿ ಅಗ್ನಿಹೋತ್ರವನ್ನು ಸಾಮೂಹಿಕವಾಗಿ ನಡೆಸಿಕೊಂಡು ಬರುತ್ತಿರುವ ವೇದಭಾರತಿಯ ಕಾರ್ಯವನ್ನು ಸ್ವಾಮೀಜಿಯವರು ಮನಸಾರೆ ಮೆಚ್ಚಿ ಆಶೀರ್ವದಿಸಿದ್ದರು. ಇದೇ ಕಾರಣಕ್ಕಾಗಿ ಮಲಗುಂದದಲ್ಲಿ ಸಾಮೂಹಿಕ ಅಗ್ನಿಹೋತ್ರದ ಮೇಲ್ವಿಚಾರಣೆಯ ಹೊಣೆಯನ್ನು ವೇದಭಾರತಿಗೆ ವಹಿಸಿದ್ದರು.

     ಮಲಗುಂದದ ಕಾರ್ಯಕ್ರಮದಲ್ಲಿ ಹಾಸನದಿಂದ ವೇದಭಾರತಿಯ ೬೬ ಕಾರ್ಯಕರ್ತರಲ್ಲದೆ, ಅರಸಿಕೆರೆ, ಹಂಪಾಪುರ, ಮೈಸೂರು, ಬೆಂಗಳೂರುಗಳಿಂದ ಸುಮಾರು ೩೫ ವೇದಭಾರತಿಯ ಹಿತೈಷಿಗಳು ಭಾಗವಹಿಸಿದ್ದು ವಿಶೇಷ. ಕಾರ್ಯಕ್ರಮದ ಸ್ಥಳದಲ್ಲಿ ೨೫೦ ಹೋಮಕಂಡಗಳನ್ನು ಸಿದ್ಧಪಡಿಸಿದ್ದು ಒಂದು ಕುಂಡಕ್ಕೆ ಇಬ್ಬರಂತೆ ೫೦೦ ಜನರು ಸಾಮೂಹಿಕ ಅಗ್ನಿಹೋತ್ರ ಕಾರ್ಯದಲ್ಲಿ ಭಾಗವಹಿಸಿದ್ದರು. ಯಾವುದೇ ಜಾತಿ, ಮತ, ಪಂಥ, ಲಿಂಗ, ವಯಸ್ಸು ಇತ್ಯಾದಿ ತಾರತಮ್ಯಗಳಿಲ್ಲದೆ ಎಲ್ಲರಿಗೂ ಈ ಕಾರ್ಯದಲ್ಲಿ ಭಾಗವಹಿಸಲು ಮುಕ್ತ ಅವಕಾಶ ಮಾಡಿಕೊಡಲಾಗಿತ್ತು. ಬಹುಷಃ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ಸಾಮೂಹಿಕ ಅಗ್ನಿಹೋತ್ರ ಕಾರ್ಯ ನಡೆದಿರುವುದು ಇದೇ ಪ್ರಥಮವಿರಬೇಕು. ಸಾಮಾಜಿಕ ಏಕತೆಗೆ ಒತ್ತು ಕೊಟ್ಟಿದ್ದೂ ಮಹತ್ವದ ಸಂಗತಿಯೇ ಆಗಿದೆ. ಪ್ರತಿ ಮನೆಯಲ್ಲೂ ಪ್ರತಿಯೊಬ್ಬರೂ ಆಚರಿಸಲು ಅನುಕೂಲವಾಗುವಂತೆ ಮಹರ್ಷಿ ದಯಾನಂದ ಸರಸ್ವತಿಯವರು ರೂಪಿಸಿದ್ದ ಸರಳ ಅಗ್ನಿಹೋತ್ರದ ಮಂತ್ರಗಳು, ಕನ್ನಡದಲ್ಲಿ ಅದರ ಅರ್ಥ ಮತ್ತು ಆಚರಿಸುವ ರೀತಿ ಕುರಿತು ವೇದಭಾರತಿ ವತಿಯಿಂದ ಒಂದು ಕಿರುಹೊತ್ತಿಗೆ ಮುದ್ರಿಸಿ ಭಾಗವಹಿಸಿದ ಎಲ್ಲರಿಗೂ ಉಚಿತವಾಗಿ ಕೊಡಲಾಗಿತ್ತು.

     ವೇದಿಕೆಯಲ್ಲಿ ಹಲವಾರು ಯತಿವರೇಣ್ಯರುಗಳು ಉಪಸ್ಥಿತರಿದ್ದು, ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ನಾಂದಿ ಹಾಡಲಾಯಿತು. ಅಗ್ನಿಹೋತ್ರ ಆಚರಿಸುವ ರೀತಿ, ಅನುಸರಿಸಬೇಕಾದ ಕ್ರಮಗಳ ಕುರಿತು ವೇದಭಾರತಿಯ ಸಂಚಾಲಕ ಹರಿಹರಪುರ ಶ್ರೀಧರ್ ಪೂರ್ವಭಾವಿ ಸೂಚನೆ ಮತ್ತು ವಿವರಣೆಗಳನ್ನು ಕೊಡುತ್ತಿದ್ದರು. ಎಲ್ಲರಿಗೂ ಅನುಕರಿಸಲು ಅನುಕೂಲವಾಗುವಂತೆ ವೇದಿಕೆಯಲ್ಲಿ ಬೈರಪ್ಪಾಜಿ, ನಾನು, ಸಣ್ಣಸ್ವಾಮಿ ಶೆಟ್ಟರು ಮತ್ತು ಪಾಂಡುರಂಗ ಅಗ್ನಿಹೋತ್ರ ಮಾಡಿದೆವು. ಭಗಿನಿಯರು ಕಲಾವತಿ, ಶುಭಾ, ಕೋಮಲ, ಪ್ರೇಮಾರವರುಗಳು ಮಂತ್ರೋಚ್ಛಾರಣೆ ಮಾಡುತ್ತಿದ್ದರೆ ಎಲ್ಲರೂ ಪುಸ್ತಕ ನೋಡಿಕೊಂಡು ಧ್ವನಿಗೂಡಿಸುತ್ತಿದ್ದರು. ಅಗ್ನಿಹೋತ್ರದಲ್ಲಿ ಭಾಗವಹಿಸಿದವರ ಶ್ರದ್ಧೆ ಮತ್ತು ಆಸಕ್ತಿಗಳು ಹೃದಯ ತುಂಬಿಬರುವಂತಹದಾಗಿತ್ತು. ಶಾಂತಿ ಮಂತ್ರದೊಂದಿಗೆ ಮುಕ್ತಾಯವಾದಾಗ ಎಲ್ಲರ ಮುಖದಲ್ಲೂ ಧನ್ಯತಾಭಾವ ಎದ್ದು ಕಾಣುತ್ತಿತ್ತು. ವೇದಭಾರತಿಯ ಕಾರ್ಯಕರ್ತರಾದ ನಮಗೂ ಸಹ ಏನೋ ಸಾಧಿಸಿದೆವೆಂಬ ಧನ್ಯತೆಯೊಂದಿಗೆ ಮತ್ತಷ್ಟು ಹೆಚ್ಚು ವೇದದ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಹುಮ್ಮಸ್ಸು ಮೂಡಿದ್ದಂತೂ ಸತ್ಯ. ಶ್ರೀಧರ್ ಅಗ್ನಿಹೋತ್ರದ ಮಹತ್ವ ಕುರಿತು ಸಂಕ್ಷಿಪ್ತವಾಗಿಯಾದರೂ ಪರಿಣಾಮಕಾರಿಯಾಗಿ ವಿವರಿಸಿದರು.





     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋಧನ್ ಸಂಸ್ಥೆಯ ಅಖಿಲ ಭಾರತ ಪ್ರಮುಖರಾದ ಸನ್ಮಾನ್ಯ ಶ್ರೀ ಸು. ರಾಮಣ್ಣನವರು ಮಾತನಾಡಿ ಕುಟುಂಬಗಳ ಮಹತ್ವವನ್ನು ಸಾರಿ ಹೇಳಿದರು. ಧರ್ಮವನ್ನು ರಕ್ಷಿಸಿದವರನ್ನು ಧರ್ಮ ರಕ್ಷಿಸುವಂತೆ, ಕುಟುಂಬವನ್ನು ರಕ್ಷಿಸಿದರೆ ಅದು ಸಮಾಜವನ್ನೇ ರಕ್ಷಿಸುತ್ತದೆ ಎಂದರು. ಮನೆ ಮನೆಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿ ರಾಷ್ಟ್ರದ ಉನ್ನತಿಗೆ ಕೈಗೂಡಿಸಲಿ ಎಂದು ಹಾರೈಸಿದರು.



     ಶತಾಯುಷಿ ಮಾಮಾಜಿಯವರನ್ನು ನಂತರ ಆತ್ಮೀಯವಾಗಿ ಗೌರವಿಸಲಾಯಿತು. ಬೆಲ್ಲ, ಅಕ್ಕಿ ಮತ್ತು ಸಕ್ಕರೆಗಳಿಂದ ಪ್ರತ್ಯೇಕವಾಗಿ ಅವರ ತುಲಾಭಾರ ಮಾಡಿ ನೆರೆದಿದ್ದವರು ಸಂಭ್ರಮಿಸಿದರು. ಪ್ರತಿಯೊಬ್ಬರೂ ಅವರನ್ನು ಸಾರಿ ಬಾಗಿ ನಮಸ್ಕರಿಸುತ್ತಿದ್ದುದು ಅವರ ಸಾಧನೆಯ ಜೀವನಕ್ಕೆ ಸಾರ್ಥಕ ಗೌರವ ತೋರಿಸಿದಂತೆ ಆಗಿತ್ತು. ಸಮಾರಂಭದಲ್ಲಿ ಮಾಡಲಾಗಿದ್ದ ಅಚ್ಚುಕಟ್ಟಾದ ವ್ಯವಸ್ಥೆಗಳು ವಿದ್ಯಾನಿಕೇತನಕ್ಕೆ ಸಂಬಂಧಿಸಿದವರೇ ಮಾಡಿದ್ದರು. ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರು ಐದು ಛಾತ್ರಾಲಯಗಳನ್ನು ನಡೆಸುತ್ತಿದ್ದು, ಅದರಲ್ಲಿ ಒಂದು ಮಲಗುಂದದಲ್ಲಿದೆ. ಯಾವುದೇ ಜಾತಿ, ಮತ, ಲಿಂಗ ಭೇದವಿಲ್ಲದೆ ಬಡ ವಿದ್ಯಾರ್ಥಿಗಳಿಗೆ ಸಂಸ್ಕಾರಯುತವಾದ ಶಿಕ್ಷಣ ಅಲ್ಲಿ ನೀಡಲಾಗುತ್ತಿದೆ. ಛಾತ್ರಾಲಯದಲ್ಲಿ ಓದುತ್ತಿರುವ ಮುಸ್ಲಿಮ್ ವಿದ್ಯಾರ್ಥಿಗಳು ಭಗವದ್ಗೀತೆಯನ್ನು ಸರಾಗವಾಗಿ ಹೇಳಬಲ್ಲವರಾಗಿದ್ದಾರೆ. ಸಾಂಸ್ಕೃತಿಕ ವಿನಿಮಯ ಯೋಜನೆಯನ್ವಯ ಮೇಘಾಲಯದಿಂದ ಬಂದು ಓದುತ್ತಿರುವ ಮಕ್ಕಳೂ ಇದ್ದಾರೆ. ಸಾಯಂಕಾಲದ ಸಮಯದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯುನ್ನತ ಮಟ್ಟದ್ದಾಗಿತ್ತು ಎಂದರೆ ಅದರಲ್ಲಿ ವಿಶೇಷವಿಲ್ಲ. ತಯಾರು ಮಾಡಿದವರ ಮತ್ತು ಭಾಗವಹಿಸಿದ ಮಕ್ಕಳ ನೈಪುಣ್ಯತೆ ಕಂಡು ಬೆರಗಾದೆವು. ಹಿಂದೆ ಗುರುಕುಲದಲ್ಲಿ ಓದಿದ್ದು, ಈಗ ವಿದೇಶದಲ್ಲಿರುವ ವಿದ್ಯಾರ್ಥಿಗಳಿಂದ ಭರತನಾಟ್ಯ, ಕೊಳಲು ವಾದನ, ಸಂಗೀತ ಕಾರ್ಯಕ್ರಮ ಸೊಗಸಾಗಿತ್ತು. ಮೇಘಾಲಯದ ವಿದ್ಯಾರ್ಥಿಗಳು ನಡೆಸಿಕೊಟ್ಟ ಮಲೆ ಮಹಾದೇವನ ಹಾಡಿನೊಂದಿಗೆ ಕಂಸಾಳೆ ನೃತ್ಯ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. ಪ್ರತಿ ಕಾರ್ಯಕ್ರಮ ಮುಗಿದ ಮೇಲೆ ಸಭಿಕರು ಎದ್ದುನಿಂತು ಕರತಾಡನ ಮಾಡಿ ಮೆಚ್ಚುಗೆ ವ್ಯಕ್ತಪಡಿಸುವಷ್ಟು ಉತ್ತಮ ಕಾರ್ಯಕ್ರಮಗಳಿದ್ದವು. ಒಟ್ಟಾರೆಯಾಗಿ ಒಂದು ಸಾರ್ಥಕ ಕಾರ್ಯಕ್ರಮದಲ್ಲಿ ನಾವು ಪಾಲುಗೊಂಡಿದ್ದೆವೆಂಬ ಹೆಮ್ಮೆಯೊಂದಿಗೆ ಹಾಸನಕ್ಕೆ ಮರಳಿದೆವು.

     ಮುಂದಿನ ಕಾರ್ಯ: ೨೪.೨.೨೦೧೫ರಂದು ನಡೆಯಲಿರುವ ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನದ ಯಶಸ್ಸಿಗೆ ವೇದಭಾರತಿ ಕೈಜೋಡಿಸಿ ಶ್ರಮಿಸುತ್ತಿದೆ. ಈ ಸಮ್ಮೇಳನಕ್ಕೆ ಸಹೃದಯರೆಲ್ಲರಿಗೂ ಆತ್ಮೀಯ ಸ್ವಾಗತವಿದೆ.


-ಕ.ವೆಂ.ನಾಗರಾಜ್.

Wednesday, February 4, 2015

ಹಾಸನಜಿಲ್ಲಾ ಸಂಸ್ಕೃತ ಸಮ್ಮೇಳನ

 ಹಾಸನಜಿಲ್ಲಾ ಸಂಸ್ಕೃತ ಸಮ್ಮೇಳನ ಕಾರ್ಯಾಲಯ ಉದ್ಘಾಟನೆ
ದಿನಾಂಕ :5.2.2015 ಗುರುವಾರ ಬೆಳಿಗ್ಗೆ 9.00 ಕ್ಕೆ
ಹತ್ತಿರದಲ್ಲಿರುವವರು ತಪ್ಪದೆ ಬನ್ನಿ.ದೂರದಲ್ಲಿರುವವರು ಸಮ್ಮೇಳನಕ್ಕೆ ಬನ್ನಿ

Friday, January 30, 2015

ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನ ಪೂರ್ವಭಾವಿ ಸಭೆ

ಸಂಸ್ಕೃತ ಭಾರತಿಯ ಕರ್ನಾತಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖರಾದ ಶ್ರೀ ಶ್ರೀನಿವಾಸ್,ಪಕ್ಕದಲ್ಲಿ ಸಂಸ್ಕೃತ ಪೋಷಕರಾದ ಶ್ರೀ ಅಟ್ಟಾವರರಾಮದಾಸ್ ಮತ್ತು ವೇದಭಾರತಿಯ ಸಂಯೋಜಕರಾದ ಶ್ರೀ ಹರಿಹರಪುರಶ್ರೀಧರ್





ಸಭೆಯಲ್ಲಿ ವೇದಭಾರತಿಯ ಸಂಯೋಜಕರಾದ ಶ್ರೀ ಹರಿಹರಪುರಶ್ರೀಧರ್ ಮಾತು

Sunday, January 25, 2015

ನಿನ್ನಲ್ಲಿ ಅಂತಃಸತ್ವ ಇದೆ. ಕುಸಿದು ಕೂರಬೇಡ" ಲೇಖನ ದ ವಿಷಯದಲ್ಲಿ ಓದುಗರ ಅಭಿಪ್ರಾಯ

 


ನಿನ್ನೆಯ ನನ್ನ " ನಿನ್ನಲ್ಲಿ ಅಂತಃಸತ್ವ ಇದೆ. ಕುಸಿದು ಕೂರಬೇಡ" ಲೇಖನ   ಕ್ಕೆ ಅಂತರ್ಜಾಲದ ಹಲವು ತಾಣಗಳಲ್ಲಿ   ಪ್ರಕಟವಾಗಿರುವ  ಕೆಲವು ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.  ನಿನ್ನೆ ಲೇಖನ ಕೊಂಡಿ ಇಲ್ಲೇ ಇದೆ. ಓದುಗರು  ಈ ಲೇಖನದ ಬಗ್ಗೆ ಇಲ್ಲಿ ಚರ್ಚೆ ಮಾಡಲು  ಅವಕಾಶವಿದೆ. ನನ್ನ ವಿಚಾರವನ್ನು ಒಪ್ಪಬೇಕೆಂದೇನೂ ಇಲ್ಲ. ರೂಢಿಯಲ್ಲಿರುವ ಹಲವು ಮೌಢ್ಯಗಳನ್ನು ದೂರಮಾಡುವುದು ಅಷ್ಟು ಸುಲಭವಲ್ಲ.  ವಿದ್ಯಾವಂತರೆನಿಸಿಕೊಂಡಿರುವ ಯುವಕರೇ ಮೌಢ್ಯದಲ್ಲಿ ಸಿಕ್ಕಿ ನೆರಳುತ್ತಿದ್ದಾರೆ. ನಮ್ಮ ಚರ್ಚೆಗಳು ಸತ್ಯವನ್ನು ಎತ್ತಿತೋರಿಸಲು ಕಾರಣವಾಗಲಿ.

http://blog.vedasudhe.com/2015/01/blog-post_87.html

ಈವರಗೆ ಪ್ರಕಟವಾಗಿರುವ ಓದುಗರ ಅಭಿಪ್ರಾಯಗಳು ಇಲ್ಲಿವೆ.
-------------------------------------------------------------------
 ೧. ಇಷ್ಟು ತಿಳಿದುಕೊಂಡರೆ ಮನುಷ್ಯ ಉದ್ಧಾರವಾಗಬಹುದು ಎಂಬುದು ಖಂಡಿತ | - ೨. ಆದರೆ ಇನ್ನೊಂದು ವಿಷಯ -- ಅಕ್ಷರಶಃ ಭವಣೆ ಗಳನ್ನು ಅನುಭವಿಸುವ ಮನುಷ್ಯನು - ಕೆಲವೊಮ್ಮೆ ತಿಳಿದೂ -- ಅದರಿಂದ ಪರಿಹಾರ ಸಿಗಬಹುದೇನೋ ಎಂಬ ಒಂದು ಮನದ ಆಸೆಯಿಂದ -- ಅಲ್ಲಿ ಆಸರೆಯನ್ನು ಬಯಸುತ್ತಾನೆ -- ( ಉದಾ - ಅತ್ಯಂತ ಸೆಳೆತವಿರುವ - ನೀರಿನ ತೊರೆ /ಸುಳಿಯಲ್ಲಿ ಸಿಲುಕಿದವನು ಕೈಗೆ ಎಟುಕಿದ್ದನ್ನು ಹಿಡಿಯುತ್ತಾನೆ- ) | ೩. ಇಲ್ಲಿ ಅತ್ಯಂತ ನೀಚತನವನ್ನು ಮಾಡುವವನು - ಈ ಕಷ್ಟ ಪರಿಸ್ಥಿತಿ ಯಲ್ಲೂ ಅದರ ಲಾಭ ಪಡೆದು - ಯದ್ವಾ ತದ್ವಾ ಜ್ಯೋತಿಷ್ಯ / ಪೂಜೆ,/ಹೋಮಾದಿಗಲನ್ನು ಅವನಿಂದ ಮಾಡಿಸಿ -- ಆ ಬಡ ಜೀವದಿಂದ -ಅಳಿದುಳಿದ ಹಣವನ್ನೂ ದೋಚುವ "ಮಿಥ್ಯಾಚಾರಿ " ವೇಶಧಾರಿ " - ಸತ್ಪುರುಷರು ಎಂದೆನಿಸಿಕೊಳ್ಳುವವರು || - ಇಂತಹವರಿಗೆ ಧಿಕ್ಕಾರ ||
-Edurkala Ishwar Bhat
-----------------------------------------------------------------
 ಆರೋಗ್ಯಪೂರ್ಣ ಚಿಂತನೆ.ದೇವರಲ್ಲೂ ಬೇಡದೆ ಬದುಕುವುದು ಸರಿಯಲ್ಲವೇ? ಕೊಡುವ ಇಚ್ಛೆ ಅವನಿಗಿದ್ದರೆ ಕೊಡದೆ ಬಿಡ,ಇಲ್ಲವಾದರೆ ಬೇಡಿದರೂ ಕೊಡ.ಈ ನೆಲೆಯಲ್ಲಿ ಉದಾತ್ತರೆಲ್ಲ ನಿಮ್ಮ ಚಿತ್ರದ ಹಿನ್ನೆಲೆಯಲ್ಲಿ ಕಾಣುವ ' ಏನೂ ಇಲ್ಲದ, ಏನೂ ಅಲ್ಲದ' ಔನ್ನತ್ಯದಲ್ಲಿ ಕಾಣಿಸುತ್ತಿದ್ದಾರೆ
-Raveesh Karnur
-------------------------------------------------------------------
 ದೇವರು ನಮ್ಮ ಹೃದಯ ಮಂದಿರದಲ್ಲೇ ಇದ್ದಾನೆ. ನಾವು ಅವನನ್ನು ನಮ್ಮಲ್ಲಿಯೇ ಸಂಧಿಸಬಹುದು. ಪ್ರಾರ್ಥನೆ ಎಂದರೆ ಪ್ರ ಎಂದರೆ ಶ್ರೇಷ್ಠ ಮತ್ತು ಅರ್ಥನೆ ಎಂದರೆ ಬೇಡುವುದು ಎಂದು. ಪ್ರಾರ್ಥನಾ ವೈ ಸಂಕಲ್ಪಃ ನಾವು ಯಾವುದನ್ನು ಅಪೇಕ್ಷಿಸುತ್ತೇವೆಯೋ ಅದನ್ನು ಪಡೆಯುವ ಸಂಕಲ್ಪ ಮಾಡಬೇಕು. ಪ್ರಾರ್ಥನೆಯ ಮುಖ್ಯಗುರಿ ನಮ್ಮ ಆತ್ಮದ ವಿಕಾಸ ಅಥವಾ ಆತ್ಮೋನ್ನತಿ. ಇದನ್ನು ಸಾಧಿಸ ಹೊರಟರೆ ನಮ್ಮ ಯಶಸ್ಸು ಶತಸ್ಸಿದ್ಧ, ಇದನ್ನು ಅರ್ಥ ಮಾಡಿಕೊಳ್ಲದೆ ನಮ್ಮಲ್ಲಿರುವರ ಪರಮಾತ್ಮನನ್ನು ದೇವಸ್ಥಾನಗಳಲ್ಲಿ, ಅಲಂಕೃತ ಬೊಂಬೆಗಳಲ್ಲಿ ಅರಸಲು ಹೊರಟಿದ್ದೇ ಇಂದಿನ ದೇವಸ್ಥಾನದ ಹುಚ್ಚಿಗೆ ಮೂಲ. ಎಲ್ಲಿಯವರೆಗೆ ಈ ಬೊಂಬೆ ಸತ್ಕಾರ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ವೈಕ್ತಿ ಮತ್ತು ನಮ್ಮ ಸಮಾಜದ ಏಳಿಗೆ ಕಷ್ಟಸಾಧ್ಯ
-Vasudevarao Rao
------------------------------------------------------------------
Sentiments of weak persons are exploited by FORECASTING community........ It's strange that Media people are also involved in this profiting exercise ........
-Shivaswamy Bhoopalam
--------------------------------------------------------------------

ತುಂಬಾ ಸಮಾಧಾನವಾಯಿತು...ಹಾಗೆಯೇ ಒಂದು ವಿಚಾರ ಹೊಳೆಯಿತು.ಇತ್ತೀಚೆಗೆ ಈ ಜ್ಯೋತಿಷಿಗಳು, ಸ್ವಾಮೀಜಿಗಳು ಟಿ.ವಿ.ವೇದಿಕೆ ಮೇಲೆ ಡಾನ್ಸ್ ಮಾಡುತ್ತಿರುವುದನ್ನು ನೋಡಿ ಅಸಹ್ಯ ಅನ್ನಿಸುತ್ತಿದೆ...
.Sharanappa R Pujar
----------------------------------------------------------------------------

nanoo obba jyotishi. dodda dodda pariharagalu. mantravadagalannu helidare matra fieldnalli hesaru. beligge toiletnalli yava dikkige mukhavirbeku anta kooda jyotishiye helbeku kelavarige. indina jyotishyakku jyotiyagaballa jyotishyakku ajagantara. jyotirvijnana adbhuta. indina jyotishya matra bahala keelumattaddu- Ramachandra Kanjarpane Madantyar
-----------------------------------------------------------------------
ಯಾರೋ ಸಾಧನೆ ಮಾಡಿದ್ದರೆ ನಿನಗೆ ಅದರಿಂದೇನೂ ಪ್ರಯೋಜನವಿಲ್ಲ. ನೀನು ಅವರನ್ನು ಹೊಗಳ ಬಹುದಷ್ಟೆ. ಆದರೆ ನೀನು ಸಾಧನೆ ಮಾಡಬೇಕಾದರೆ ಅದು ನಿನ್ನ ನಡೆ, ನುಡಿ, ವ್ಯವಹಾರಗಳಿಂದ ಮಾತ್ರ ಸಾಧ್ಯ...... ಸುಂದರ ಸಾಲುಗಳು
 .-Nammuru Rajashekhar

ನಿನ್ನಲ್ಲಿ ಅಂತಃಸತ್ವ ಇದೆ. ಕುಸಿದು ಕೂರಬೇಡ.

ಮನದ ಮಾತನ್ನು ಹೇಳಿಬಿಡುವೆ.ನನ್ನ ಬಗ್ಗೆ ಯಾರು ಏನು ಬೇಕಾದರೂ ತಿಳಿದುಕೊಳ್ಳಲಿ. ನಿತ್ಯವೂ ಬೆಳಿಗ್ಗೆ ಟಿ.ವಿ. ಆನ್ ಮಾಡಿದರೆ ಸಾಕು ಜ್ಯೋತಿಷಿಗಳ ದರ್ಶನ! ಪಾಪ! ಜನ ಕಾಯುತ್ತಿರುತ್ತಾರೆ. ಕೆಲವರು ಅವತ್ತಿನ ಜೀವನವನ್ನು ನಿರ್ಧಾರ ಮಾಡುವುದೇ ಜ್ಯೋತಿಷಿಗಳ ಸಲಹೆ ಪಡೆದು! ಕೆಲವು ರಾಶಿಯವರಿಗೆ ಜ್ಯೋತಿಷಿಗಳು ಸಲಹೆ ಕೊಟ್ಟು ಬಿಡ್ತಾರೆ “ ಇವತ್ತು ನಿಮಗೆ ಕ್ರೂರವಾಗಿದೆ. ನೀವು ಗಣೇಶನ ಅಥವಾ ಮತ್ಯಾವುದೋ ದೇವರ ನಾಮಜಪಮಾಡಿ.ನಿಮಗೆ ಕಾರ್ಯ ಸಿದ್ಧಿಯಾಗುತ್ತೆ! ಸರಿ ಹಲವರು ಅದರಂತೆಯೇ ನಡೆದುಕೊಳ್ಳುತ್ತಾರೆ.ಇರಲಿ.ಅದು ಅವರ ಸ್ವಾತಂತ್ರ್ಯ.ನಾನ್ಯಾರು ಆ ಮಾತು ಹೇಳಲು?
ಇನ್ನು ದೇವಾಲಯಗಳ ಬಗ್ಗೆ ನೋಡುವಾಗ. ಕೆಲವಂತೂ ಅಕ್ಷರಷಃ ವ್ಯಾಪಾರಕೇಂದ್ರಗಳು! ಅದಕ್ಕೆ ಮುಗಿಲು ಬಿದ್ದ ಭಕ್ತರು!! ದಿನಗಟ್ಟಲೆ ಸಾಲಿನಲ್ಲಿ ಕ್ಯೂ ನಿಂತು ಅಂತೂ ದರ್ಶನ ಪಡೆದವೆಂದು ನಿಟ್ಟುಸಿರು ಬಿಡುವ ಭಕ್ತರು! ಇನ್ನು ಸಾವಿರಾರು ರೂಪಾಯಿ ಟಿಕೆಟ್ ಕೊಂಡು ವಿಶೇಷ ದರ್ಶನ ಪಡೆಯುವ ಶ್ರೀಮಂತ ಭಕ್ತರು!!
ಒಬ್ಬ ಸ್ವಾಮಿಗಳು ಹೀಗೆ ಹೇಳಿದರು “ ಕ್ಲಬ್ ಗಳಿಗೆ ಹೋಗಿ ಹೆಂಡ ಕುಡಿದು ಜೂಜು ಆಡಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವವರ ಬಗ್ಗೆ,ವೇಶ್ಯಾಗೃಹಗಳಿಗೆ ಹೋಗಿ ಬರಿದಾಗುವವರ ಬಗ್ಗೆ ಮಾತಾಡುವುದಿಲ್ಲ, ದೇವಸ್ಥಾನಗಳ ಬಗ್ಗೆ ಮಾತಾಡ್ತಾರೆ! ಇದು ತಪ್ಪು!
ಅಯ್ಯೋ ರಾಮ –ಕೆಟ್ಟ ಚಟಗಳ ಬಗ್ಗೆ ಅದೆಷ್ಟು ಜಾಗೃತಿ ಸಭೆಗಳು ನಡೆಯುವುದಿಲ್ಲ! ಇವರಿಗೆ ಅದು ಗೊತ್ತಿಲ್ಲ. ಕೆಟ್ಟ ಚಟಗಳು ಮನುಷ್ಯನ ದೌರ್ಬಲ್ಯ. ಆದರೆ ದೇವಾಲಯಗಳಿಗೆ ಹೋಗುವುದು ಮನುಷ್ಯನ ದೌರ್ಬಲ್ಯವಾಗಬಾರದು. ದೇವಾಲಯಗಳಲ್ಲಿ ಮನುಷ್ಯನ ಆತ್ಮೋನ್ನತಿ ಯಾಗಬೇಕು. ಸಾವಿರ ಸಾವಿರ ಜನ ಕ್ಯೂನಲ್ಲಿ ನಿಂತು ದೇವರ ದರ್ಶನ ಮಾಡುವ ದೇವಾಲಯಗಳು ಇಂತಾ ಆತ್ಮೋನ್ನತಿಯ ಕೇಂದ್ರವಾಗಲು ಸಾಧ್ಯವೇ ಹೇಳಿ. ದಿನಗಟ್ಟಲೆ ಸಾಲಿನಲ್ಲಿ ನಿಂತು ಹೋಗಿ ದೇವರ ದರ್ಶನ ಮಾಡುವುದೂ ಕೂಡ ಒಂದು ರೀತಿಯ ದೌರ್ಬಲ್ಯವೇ ಸರಿ. ಮನೆಯಲ್ಲೇನೋ ತಾಪತ್ರಯಗಳು! ಗಂಡ ಹೆಂಡಿರ ಜಗಳ. ಮಕ್ಕಳಲ್ಲಿ ಮನಸ್ಥಾಪ.ಯಾರಿಗೋ ಖಾಯಿಲೆ. ಇವೆಲ್ಲವನ್ನೂ ಆ ದೇವರು ಸರಿಪಡಿಸಬೇಕು, ಆ ಬೇಡಿಕೆಯ ಪಟ್ಟಿ ಹಿಡಿದು ದೇವರ ಮುಂದೆ ಉದ್ದುದ್ದ ಕ್ಯೂ.
ಜ್ಯೋತಿಷಿಗಳಿಗೂ ಡಿಮ್ಯಾಂಡ್!!
ಯಾಕೆ ಇದನ್ನೆಲ್ಲಾ ಬರೆದೆ, ಎಂದರೆ ನಾವು ನಮ್ಮ ವಿವೇಕದಿಂದ ಸರಿಮಾಡಿಕೊಳ್ಳ ಬೇಕಾದ್ದನ್ನು ದೇವರು ಸರಿ ಮಾಡ್ತಾನೆ, ಅಂತಾ ತೆಗೆದುಕೊಂಡು ಹೋಗ್ತೀವಲ್ಲಾ! ಅಂತಾ ಚಿಂತೆಯಾಯ್ತು.
ದೇವರು ಇಲ್ವಾ? ಖಂಡಿತಾ ಇದಾನೆ. ಅವನಿಲ್ಲದಿದ್ದರೆ ಈ ಜಗತ್ತು ನಡೆಯುತ್ತಲೇ ಇರಲಿಲ್ಲ. ಅವನು ಒಂದು ದಿವ್ಯ ಶಕ್ತಿ. ಅವನು ಅಗೋಚರ. ಅವನ ನೆರವು ಬೇಡವೇ? ಖಂಡಿತಾ ಬೇಕು. ನಮ್ಮ ಸಂಕಲ್ಪ ಸರಿಯಾಗಿದ್ದರೆ, ಅದಕ್ಕೆ ತಕ್ಕಂತೆ ನಾವು ನಡೆದುಕೊಂಡರೆ [ಹರಕೆ ತೀರಿಸುವುದಲ್ಲ] ಅಂದರೆ ಮಾಡಬೇಕಾದ್ದನ್ನು ಮಾಡಿದರೆ ಆಗಬೇಕಾದ್ದು ಆಗೇ ತೀರುತ್ತದೆ. ಅವನಿಗೆ ಇಡೀ ಬ್ರಹ್ಮಾಂಡವನ್ನು ನಡೆಸುವ ಹೊಣೆ ಇದೆ.ನಮ್ಮ ಗಂಡ-ಹೆಂಡಿರ ಮನಸ್ಥಾಪ ಬಿಡಿಸಲು ಅವನು ಬರಬೇಕೆ?
ನಿಜವಾಗಿ ನಮ್ಮ ಋಷಿಮುನಿಗಳು ಹಾಕಿಕೊಟ್ಟ ಮಾರ್ಗವನ್ನು ಪಕ್ಕಕ್ಕಿಟ್ಟು ಜನರನ್ನು ದಾರಿತಪ್ಪಿಸುವವರಿಗೇ ಹೆಚ್ಚು ಪ್ರಾಮುಖ್ಯತೆ ಯಾಗಿದೆಯಲ್ಲಾ! ಇದು ಅತ್ಯಂತ ನೋವಿನ ಸಂಗತಿ.
ಸತ್ಯವನ್ನು ಹೂತು ಹಾಕಿ ಸುಳ್ಳಿನ ಮಹಲುಗಳನ್ನು ಕಟ್ಟಿ ದೊಡ್ದ ನಾಟಕದ ಕಂಪನಿಗಳು ನಡೆಯಿತ್ತಿವೆ. ಜನರು ನೋಡುತ್ತಿದ್ದಾರೆ. ಅದನ್ನೇ ಸತ್ಯವೆಂದು ನಂಬಿದ್ದಾರೆ. ಇದಕ್ಕಿಂತ ಆತ್ಮವಂಚನೆ ಬೇರೆ ಇಲ್ಲ.
ನಮಗೆ ಜೀವನದ ನಿಜವಾದ ಅರಿವು ಮೂಡುವುದು ವೇದಜ್ಞಾನದಿಂದ ಮಾತ್ರ.ಆದರೆ ವೇದದಲ್ಲಿ ನಮ್ಮ ಬದುಕಿಗೆ ಅಗತ್ಯವಾದ ಅಮೂಲ್ಯ ಜ್ಞಾನಭಂಡಾರವಿದೆ, ಎಂದು ತಿಳಿಸಿಕೊಡುವವರ ಸಂಖ್ಯೆ ಬಹಳ ಕಡಿಮೆ ಇದೆ.


[ ಈ ಪೋಸ್ಟ್ ಗೆ ಆಧಾರವಾದ ಒಂದು ವೇದ ಮಂತ್ರವನ್ನು ನೋಡಿ]

ಸ್ವಯಂ ವಾಜಿನ್ಸ್ತನ್ವಂ ಕಲ್ಪಯಸ್ವ ಸ್ವಯಂ ಯಜಸ್ವ|

ಸ್ವಯಂ ಜುಷಸ್ವ ಮಹಿಮಾ ತೇ ಅನ್ಯೇನ ನಸನ್ನಶೇ ||

[ಯಜುರ್ವೇದ ೨೩ನೇ ಅಧ್ಯಾಯ ೧೫ ನೇ ಮಂತ್ರ]

ಸ್ವಯಂ = ತಾನೇ ಸ್ವತ:

ವಾಜಿನ್ = ಹೇ ಬಲಶಾಲಿಯೇ,

ತನ್ವಂ = ಶರೀರವನ್ನು

ಕಲ್ಪಯಸ್ವ = ಸಮರ್ಥಗೊಳಿಸಿಕೊ

ಸ್ವಯಂ ಯಜಸ್ವ = ತಾನೇ ಸ್ವತ: ಸತ್ಕರ್ಮ ಮಾಡು

ಸ್ವಯಂ ಜುಷಸ್ವ = ತಾನೇ ಸ್ವತ: ಪ್ರೀತಿಯಿಂದ ಮಾಡು

ತೇ ಮಹಿಮಾ = ಸಾಮರ್ಥ್ಯವು ನಿನ್ನದೇ

ಅನ್ಯೇನ ನ ಸನ್ನಶೇ = ಬೇರೆಯವರೊಂದಿಗೆ ನಷ್ಟವಾಗದಿರಲಿ.

ನನ್ನ ಕೈಲಿ ಈ ಕೆಲಸ ಮಾಡಲು ಸಾಧ್ಯವೇ? ನಾನು ಸಮರ್ಥನೇ? ನನಗೆ ಶಕ್ತಿ ಇದೆಯೇ? ಎಂದು ತಲ್ಲಣಿಸುವ ಕೀಳರಿಮೆಯ ಜನರು ಈ ವೇದ ಮಂತ್ರವನ್ನು ಕೇಳಬೇಕು.

ವೇದ ಮಂತ್ರವು ಸಾರುತ್ತಿದೆ ಹೇ ಅಣುಚೇತನರೇ ನೀನು ಬಲಶಾಲಿ ನೀನು ಕುಸಿದು ಕೂರುವ ಅಗತ್ಯವಿಲ್ಲ. ನಿನಗೆ ಸಾಮರ್ಥ್ಯವಿದೆ! ನಿನ್ನಲ್ಲಿ ಅಂತ:ಸತ್ವ ಇದೆ. ಕುಸಿದು ಕೂರಬೇಡ. ಯಾರಿಗೂ ನಿನ್ನನ್ನು ಹೋಲಿಸಿಕೊಳ್ಳುವ ಅಗತ್ಯವಿಲ್ಲ. ನಿನಗೆ ಎಷ್ಟು ಸಾಮರ್ಥ್ಯವಿದೆಯೋ ಅಷ್ಟನ್ನು ನೀನು ಮಾಡು. ತನ್ವಂ ಕಲ್ಪಯಸ್ವ ಅಂದರೆ ನಿನ್ನ ಶರೀರವನ್ನು ನೀನೇ ಸಮರ್ಥಗೊಳಿಸಿಕೊ. ನಮ್ಮ ಹೊಟ್ಟೆ ತುಂಬಲು ನಾವೇ ಊಟ ಮಾಡಬೇಕು,ನಮ್ಮ ಶರೀರ ಸದೃಢವಾಗಿರಲು ನಾವೇ ವ್ಯಾಯಾಮ ಮಾಡಬೇಕು, ನಾವೇ ವಿಶ್ರಾಂತಿ ತೆಗೆದುಕೊಳ್ಳಬೇಕು ತಾನೇ. ಹಾಗೆಯೇ ನಿನ್ನ ಶರೀರವನ್ನು ನೀನೇ ಸದೃಢ ಗೊಳಿಸಿಕೊ. ಸ್ವಯಂ ಯಜಸ್ವ ಅಂದರೆ ನೀನೇ ಸ್ವತ: ಸತ್ಕರ್ಮಗಳನ್ನು ಮಾಡು. ನಿನ್ನ ಪರವಾಗಿ ಬೇರೆ ಯಾರೋ ಸತ್ಕರ್ಮವನ್ನು ಮಾಡಿದರೆ ಅದರ ಫಲ ಅವರಿಗೇ ಹೊರತೂ ನಿನಗಲ್ಲ. ಸ್ವಯಂ ಜುಷಸ್ವ ಅಂದರೆ ನೀನೇ ಸ್ವತ: ಪ್ರೀತಿಯಿಂದ ಕರ್ಮವನ್ನು ಮಾಡು. ಮಾಡುವ ಕೆಲಸವನ್ನು ಬೇಸರದಿಂದ ಮಾಡಬೇಡ. ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡಿದರೆ ನಿನ್ನ ಅಂತರಂಗದಲ್ಲಿರುವ ಪಾತ್ರೆಯಲ್ಲಿ ಸತ್ಕರ್ಮ ಫಲವೇ ಜಾಸ್ತಿಯಾಗುತ್ತದಲ್ಲಾ! ಮಾಡುವ ಕೆಲಸವನ್ನು ಅಯ್ಯೋ ಮಾಡಬೇಕಲ್ಲಾ! ಎಂದು ಮಾಡುವ ಬದಲು ಸಂತೋಷವಾಗಿ ಮಾಡು. ಅದರಿಂದ ನಿನಗೇ ಲಾಭ. ಎಷ್ಟು ಕಷ್ಟಪಟ್ಟು ಜೀವನ ಮಾಡುತ್ತಿದ್ದೇನೆ, ಗೊತ್ತಾ? ಎಂದು ಯಾರೋ ಕನಿಕರ ಪಡುವಂತೆ ವರ್ತಿಸಬೇಡಿ.ಇದರಿಂದ ನಿಮ್ಮ ಅಂತರಂಗವು ಮಲಿನವಾಗುತ್ತದೆ.

"ತೇ ಮಹಿಮಾ ಅನ್ಯೇನ ನಸನ್ನಶೇ" ಅಂದರೆ ಯಾರೋ ಮಾಡುವ ಸಾಧನೆಯಿಂದ ನಿನ್ನ ಮಹಿಮೆಯು ಸಿದ್ಧಿಸುವುದಿಲ್ಲ. ನೀನು ಒಳ್ಳೆಯ ಅಡುಗೆ ಮಾಡಬೇಕೆಂದರೆ ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ನೀನೇ ಹೊಂದಿಸಿಕೊಳ್ಳ ಬೇಕು. ಬೇಕಾಗುವ ಸಾಮಗ್ರಿಗಳೇನು ? ನಿನ್ನ ಮಾತು, ನಿನ್ನ ನಡೆ, ನಿನ್ನ ವ್ಯವಹಾರ.ಅಷ್ಟೆ. ಯಾರೋ ಸಾಧನೆ ಮಾಡಿದ್ದರೆ ನಿನಗೆ ಅದರಿಂದೇನೂ ಪ್ರಯೋಜನವಿಲ್ಲ. ನೀನು ಅವರನ್ನು ಹೊಗಳ ಬಹುದಷ್ಟೆ. ಆದರೆ ನೀನು ಸಾಧನೆ ಮಾಡಬೇಕಾದರೆ ಅದು ನಿನ್ನ ನಡೆ, ನುಡಿ, ವ್ಯವಹಾರಗಳಿಂದ ಮಾತ್ರ ಸಾಧ್ಯ.

Tuesday, January 20, 2015

ವೇದಮಂತ್ರಗಳಲ್ಲಡಗಿರುವ ಎಚ್ಚರಿಕೆಯನ್ನು ನಮ್ಮನ್ನಾಳುವವರು ಗಮನಿಸುವರೇ?


ಅಥರ್ವವೇದದ ೫ನೇ ಕಾಂಡದ ೧೮ ನೇ ಸೂಕ್ತವು ಬ್ರಹ್ಮಜ್ಞಾನಿಯ ಮಹತ್ವದ ಬಗ್ಗೆ ಅತ್ಯಂತ ನೇರವಾದ ಮಾತುಗಳನ್ನು ರಾಜನಿಗೆ ಹೇಳುತ್ತದೆ.ಮಂತ್ರದಲ್ಲಿ ಬ್ರಾಹ್ಮಣ ಪದ ಪ್ರಯೋಗವಾಗುವುದರಿಂದ ಇದನ್ನು ಯಾರೋ ಬ್ರಾಹ್ಮಣರು [ಜಾತಿಯಲ್ಲಿ] ಬರೆದುಕೊಂಡಿ ದ್ದಾರೆ, ಎಂದು ಮೂದಲಿಸುವ ಜನರನ್ನು ಇಂದಿನ ಸಮಾಜದಲ್ಲಿ ಕಾಣಬಹುದು. ಆದರೆ ಬ್ರಹ್ಮಜ್ಞಾನಿಗೆ ಇಂದು ರೂಢಿಯಲ್ಲಿರುವ  ಜಾತಿ ಇಲ್ಲವೆಂಬ ವೇದದ ಸ್ಪಷ್ಟ ನುಡಿಗಳನ್ನು ಹಲವಾರು ಮಂತ್ರಗಳಲ್ಲಿ ಕಾಣಬಹುದಾಗಿದೆ. ವೇದದ ಕಾಲದ ವರ್ಣ ವ್ಯವಸ್ಥೆಗೂ ಇಂದಿನ ಜಾತಿಗೂ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸುತ್ತಾ , ಬ್ರಾಹ್ಮಣ ಪದವನ್ನು  ಬ್ರಹ್ಮಜ್ಞಾನವನ್ನು ಪಡೆದ ಒಬ್ಬ ಜ್ಞಾನಿ-ಎಂದು ಅರಿತುಕೊಂಡಾಗ ಮುಂದಿನ ಮಂತ್ರಗಳ ಮಹತ್ವವು ನಮಗೆ ಯಾವ ಪೂರ್ವಾಗ್ರಹವಿಲ್ಲದೆ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
ನೈತಾಂ ತೇ ದೇವಾ ಅದದುಸ್ತುಭ್ಯಂ ನೃಪತೇ ಅತ್ತವೇ|
ಮಾ ಬ್ರಾಹ್ಮಣಸ್ಯ ರಾಜನ್ಯ ಗಾಂ ಜಿಘತ್ಸೋ ಅನಾಧ್ಯಾಮ್ ||೧||

ಅನ್ವಯ :
ನೃಪತೇ = ಎಲೈ ದೊರೆಯೇ
ತೇ ದೇವಾಃ = ಆ ದೇವತೆಗಳು [ಬ್ರಹ್ಮಜ್ಞಾನಿಗಳು]
ಏತಾಂ ತುಭ್ಯಂ ಅತ್ತವೇ ನ ದದುಃ = ನಿನಗೆ ಆಗೊವನ್ನು ತಿನ್ನಲು ಕೊಟ್ಟಿಲ್ಲ
ರಾಜನ್ಯ = ಹೇ ರಾಜನೇ
ಬ್ರಾಹ್ಮಣಸ್ಯ ಅನಾದ್ಯಾಂ ಗಾಂ ಮಾ ಜಿಘತ್ಸಃ = ಬ್ರಾಹ್ಮಣನ ಆಗೋವನ್ನು ತಿನ್ನಲು ಬಯಸಬೇಡ
ಭಾವಾರ್ಥ : ರಾಜನು ಬ್ರಾಹ್ಮಣನ ಗೋವನ್ನು [ವಾಣಿಯನ್ನು] ಕೊಲ್ಲಬಾರದು
ವೇದಮಂತ್ರಗಳಲ್ಲಿ ಬೀಜದ ರೂಪದಲ್ಲಿ ಒಂದು ವಿಚಾರವೇ ಅಡಗಿರುತ್ತದೆ. ಈ ಮಂತ್ರದಲ್ಲಿ ಬ್ರಾಹ್ಮಣಸ್ಯ ಗಾಂ ಎಂಬ ಪದವನ್ನು ಎರಡು ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು. ಎರಡೂ ಕೂಡ ಸಮಜಕ್ಕೆ ಹಿತವೇ ಆಗಿದೆ. ಮೊದಲನೆಯದು ಗಾಂ ಎಂಬುದಕ್ಕೆ ಗೋವು ಎನ್ನುವ ಅರ್ಥವಿದೆ. ಹೀಗೆ ಅರ್ಥ ಮಾಡಿಕೊಂಡಾಗ ರಾಜನು ಗೋವುಗಳನ್ನು ಕೊಲ್ಲಬಾರದು. ಅದನ್ನು ರಕ್ಷಿಸಬೇಕೆಂದು  ಅರ್ಥ ಮಾಡಿಕೊಳ್ಳಬಹುದು.ಹೀಗೆ ಅರ್ಥ ಮಾಡಿಕೊಂಡಾಗ ಗೋಸಂತತಿಯನ್ನು ರಕ್ಷಿಸುವುದು ರಾಜನ ಕರ್ತವ್ಯವಾಗುತ್ತದೆ. ಗೋಸಂತತಿಯ ರಕ್ಷಣೆಯ ಹಿಂದೆ ಒಂದು ಸಂಸ್ಕೃತಿಯ  ರಕ್ಷಣೆ ಕೂಡ ಇದೆ. ಆ ಬಗ್ಗೆ ವಿವರವಾಗಿ ಹೋದರೆ ಈ ಅಂಕಣವೆಲ್ಲಾ ಅದೇ ವಿಚಾರದಿಂದ ತುಂಬುತ್ತದೆ. ಆದರೆ ನಮಗೆಲ್ಲಾ ಗೋವಿನ ಮಹತ್ವದ ಅರಿವಿರುವುದರಿಂದ ಇಲ್ಲಿ ಆ ಬಗ್ಗೆ ಹೆಚ್ಚು ಬರೆಯುವುದಿಲ್ಲ.
ಇನ್ನು ಗಾಂ ಪದದ ಎರಡನೆಯ ಅರ್ಥ ವಾಣಿ. ಈ ಮಂತ್ರದಲ್ಲಿ ಬ್ರಾಹ್ಮಣನ ವಾಣಿಯ ಬಗ್ಗೆ ಮಹತ್ವವನ್ನು ಕೊಟ್ಟಿದೆ. ಬ್ರಾಹ್ಮಣನ ವಾಣಿಯನ್ನು ಕೊಲ್ಲಬೇಡ[ನಿರಾಕರಿಸಬೇಡ] ಎಂದು ರಾಜನಿಗೆ ವೇದವು ಕರೆಕೊಡುತ್ತದೆ. ಹೀಗೆ ಒಂದು ವೇಳೆ ಬ್ರಾಹ್ಮಣನವಾಣಿಯನ್ನು ಕಡೆಗಣಿಸಿದರೆ ಅದರ ಪರಿಣಾಮ ಏನಾಗುತ್ತದೆಂಬುದನ್ನು ಮುಂದಿನ ಮಂತ್ರಗಳು ವಿವರಿಸುತ್ತವೆ.
ಅಕ್ಷದ್ರುಗ್ಧೋ ರಾಜನ್ಯಃ ಪಾಪ ಆತ್ಮ ಪರಾಜಿತಃ |
ಸ ಬ್ರಾಹ್ಮಣಸ್ಯ ಗಾಮದ್ಯಾದದ್ಯ ಜೀವಾನಿ ಮಾ ಶ್ವಃ ||೨||

ಅನ್ವಯ :
ಹೇ ರಾಜನೇ,
ಅಕ್ಷದ್ರುಗ್ಧಃ ಪಾಪಃ = ತನ್ನ ಇಂದ್ರಿಯ ಭೋಗಾಭಿಲಾಷೆಯಿಂದ ಪ್ರಜೆಗಳಿಗೆ ದ್ರೋಹ ಮಾಡುವ ಪಾಪಿಯಾದ
ರಾಜನ್ಯಃ = ರಾಜನು
ಆತ್ಮ ಪರಾಜಿತಃ = ಸ್ವಯಂ ನಾಶನಾಗಿ
ಸಃ = ಅವನು
ಬ್ರಾಹ್ಮಣಸ್ಯ ಗಾಂ ಅದ್ಯತ್ = ಬ್ರಾಹ್ಮಣನ ಗೋಸಂಪತ್ತನ್ನು ಭೋಗಿಸಿದ್ದೇ ಆದರೆ
ಅದ್ಯ ಜೀವಾನಿ ಮಾ ಶ್ವಃ = ಇವತ್ತು ಇರುತ್ತಾನೆ, ನಾಳೆ ಇರುವುದಿಲ್ಲ
ಭಾವಾರ್ಥ :
ಭೋಗಾಸಕ್ತನಾಗಿ ಆತ್ಮ ಮತ್ತು ಪ್ರಜೆಗಳಿಗೆ ದ್ರೋಹ ಮಾಡುತ್ತಾ ವ್ಯಸನಿಯಾಗಿ ಬಾಳುವ ರಾಜನು ಬ್ರಾಹ್ಮಣನ ಸಂಪತ್ತಿಗೆ ಕೈ ಹಾಕಿದರೆ, ವಾಣಿಯನ್ನು ನಾಶಮಾಡಿದರೆ ಇವತ್ತು ಬದುಕಬಹುದು, ಆದರೆ ನಾಳೆ ಬದುಕಲಾರ.
ಈ ಮಾತುಗಳು ಪ್ರಪಂಚದ ಯಾವ ರಾಜರುಗಳ ಇತಿಹಾಸ ನೋಡಿದರೂ ಸತ್ಯ ಎನಿಸದೆ ಇರದು. ನಮ್ಮ ದೇಶದ ಇತಿಹಾಸವನ್ನೇ ನೋಡಿದರೂ, ಅದರಲ್ಲೂ ಸ್ವಾತಂತ್ರ್ಯಾನಂತರದ ದಿನಗಳ ನಮ್ಮ ಶಾಸಕರ ಜೀವನವನ್ನು ಅವಲೋಕನ ಮಾಡಿದರೂ ನಮಗೆ ಈ ಮಂತ್ರದ ಸತ್ಯದ ಅರಿವಾಗುತ್ತದೆ. ಒಮ್ಮೆ ಶಾಸಕನಾಗಿ ಚುನಾಯಿತನಾದವನು ದೇಶ ಮತ್ತು ಸಮಾಜವನ್ನು ಮರೆತು ಸ್ವಾರ್ಥಪರನಾಗಿ ಭೋಗಜೀವನವನ್ನು ನಡೆಸುತ್ತಾ ಬ್ರಾಹ್ಮಣವಾಣಿಯನ್ನು ಕಡೆಗಣಿಸಿದವನ ಸ್ಥಿತಿ ಏನಾಗಿದೆ, ಎಂಬ ಉಧಾಹರಣೆಗಳೇ ನಮ್ಮ ಕಣ್ಮುಂದಿವೆ. ಇಲ್ಲಿ ಮತ್ತೆ ಮತ್ತೆ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾಗಿರುವುದೇನೆಂದರೆ ಬ್ರಾಹ್ಮಣ ಪದವನ್ನು  ಇಂದಿನ ಜಾತಿಗೆ ಸಮೀಕರಿಸಬಾರದು. ಇಂದಿನ ಯಾವ ಜಾತಿಗೆ ಸೇರಿದವರೇ ಆಗಲೀ ಅವರು ವೇದವಾಣಿಯನ್ನು ಕಲಿತು ವಿದ್ವಾಂಸನಾಗಿದ್ದು ಸಮಾಜಮುಖಿ ಚಿಂತನೆಯನ್ನು ಮಾಡುತ್ತಾ ಸಮಾಜದ ಸಾಮರಸ್ಯವನ್ನು, ಅಭ್ಯುದಯವನ್ನು ನಿರಂತರ ಬಯಸುತ್ತಿದ್ದರೆ ಅವನಿಗೆ ಶಾಸಕನು ಮನ್ನಣೆ ಕೊಡಬೇಕು. ಮನ್ನಣೆ ಕೊಡದೆ ಅವರ ಮಾತನ್ನು ಕಡೆಗಣಿಸಿ ಸ್ವಾರ್ಥದಲ್ಲಿ ಮುಳುಗಿ ಭೋಗಜೀವದಲ್ಲಿ ಮುಳುಗಿದ್ದರೆ ಅಂತಹ ಶಾಸಕನು ಇಂದು ಶಾಸಕನಾಗಿರಬಹುದು, ಮುಂದೆ ಅವನನ್ನು  ಸಮಾಜವು ಕಡೆಗಾಣಿಸುವುದು ಸತ್ಯ. ವೇದವಾಣಿ-ಎಂದಾಗ ನಾಲ್ಕು ವೇದUಳನ್ನು ಅಧ್ಯಯನ ಮಾಡಿದವನ ಮಾತು ಎಂದು ಭಾವಿಸಬೇಕಾಗಿಲ್ಲ. ವೇದ ಎಂದರೆ ಜ್ಞಾನ, ಎಂದು ಅರ್ಥಮಾಡಿಕೊಂಡರೆ ಸಾಕು.
ಮುಂದಿನ ಮಂತ್ರವು ರಾಜನನ್ನು ಮತ್ತೂ ಎಚ್ಚರಿಸುತ್ತದೆ. . . . . . . . .
ಆವಿಷ್ಟಿತಾಘವಿಷಾ ಪೃದಾಕೂರಿವ ಚರ್ಮಣಾ |
ಸಾ ಬ್ರಾಹ್ಮಣಸ್ಯ ರಾಜನ್ಯ ತೃಷ್ಟೈಷಾ ಗೌರನಾದ್ಯಾ ||೩||
ಅನ್ವಯ :
ರಾಜನ್ಯ = ಹೇ ರಾಜನೇ
ಏಷಾ ಬ್ರಾಹ್ಮಣಸ್ಯ ಗೌಃ ಅನದ್ಯಾ = ಈ ಬ್ರಾಹ್ಮಣನ ಹಸುವು[ವಾಣಿಯು] ಭೋಗ್ಯವಲ್ಲ, ನಿನಗೆ ಉಣ್ಣುವುದಕ್ಕಾಗಿ ಅಲ್ಲ. ಏಕೆಂದರೆ ಅದು
ಸಾ ಚರ್ಮಣಾ ಆವಿಷ್ಟಿತಾ ತೃಷ್ಟಾ ಪೃದಕೂಃ ಇವ = ಆ ಆಕಳು ಚರ್ಮದ ಪೊರೆಯಲ್ಲಿ ಮುಚ್ಚಿದ ಸರ್ಪಿಣಿಯಂತೆ
ಅಘವಿಷಾ = ಭಯಂಕರ ವಿಷದಂತೆ ನಿನಗೆ ಆಪತ್ಕಾರಿಯಾಗುತ್ತದೆ

ಭಾವಾರ್ಥ :
ಭ್ರಾಹ್ಮಣನ ವಾಣಿಯನ್ನು ಕಸಿದುಕೊಂಡು ರಾಜನು ಭೋಗಿಸಬಾರದು.ಅದು ಸರ್ಪದ ವಿಷದಂತೆ ಆತ್ಮಘಾತುಕವಾಗಿ ಪರಿಣಮಿಸುತ್ತದೆ.
ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ಗೌಃ ಪದವನ್ನು ವಾಣಿ ಮತ್ತು ಹಸು ಈ ಎರಡೂ ರೀತಿಯಲ್ಲೂ ಅರ್ಥೈಸಿಕೊಳ್ಳಬಹುದು. ರಾಜನಾದನು ಗೋವನ್ನು ಕೊಂದರೂ ಮತ್ತು ಕೊಲ್ಲಲು ಅವಕಾಶಕೊಟ್ಟರೂ ಗೋಭಕ್ತರ ಅಂತರಂಗದಲ್ಲಡಗಿರುವ ಆಕ್ರೊಶಕ್ಕೆ ಗುರಿಯಾಗಿ ರಾಜನನ್ನು ಇಂದಲ್ಲಾ ನಾಳೆ ಸುಡುವುದು ನಿಶ್ಚಿತ. ಅಂತೆಯೇ ಬ್ರಾಹ್ಮಣನ ವಾಣಿಯನ್ನು ಹತ್ತಿಕ್ಕಿದರೂ ಮುಂದೆ ಅದರ ಪರಿಣಾಮ ಘೋರವಾಗಿರುತ್ತದೆ.
ವೇದಮಂತ್ರಗಳಲ್ಲಡಗಿರುವ ಈ ಎಚ್ಚರಿಕೆಯನ್ನು ನಮ್ಮನ್ನಾಳುವವರು ಗಮನಿಸಿದರೆ ಅವರಿಗೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು. ಕಡೆಗಣಿಸಿ ಅಧಿಕಾರವಿದೆ ಎಂದು ಬಲಪ್ರಯೋಗದಿಂದ ಸುವಿಚಾರಗಳನ್ನು ಹತ್ತಿಕ್ಕಿದರೆ ಅದರ ಫಲವನ್ನು ಆಡಳಿತ ಮಾಡುವವರು ಅನುಭವಿಸಲೇ ಬೇಕಾಗುತ್ತದೆ. ವೇದವು ಸಾರ್ವಕಾಲಿಕ, ಸಾರ್ವದೇಶಿಕ ಮತ್ತು ಸಾರ್ವಭೌಮವಾದ್ದರಿಂದ ಅದನ್ನು ಗೊಡ್ಡು ಎಂದು ಹೇಳುವವರಿಗೂ ಕೂಡ ಈ ಮಂತ್ರವು ಎಚ್ಚರಿಕೆಯ ಗಂಟೆಯಾಗಿದೆ.
-ಹರಿಹರಪುರಶ್ರೀಧರ್