Pages

Wednesday, May 13, 2015

ಶರ್ಮರಿಗೆ ನಿಮ್ಮ ಪ್ರಶ್ನೆ

ಯಾವುದೇ ವಿಚಾರಗಳ ಬಗ್ಗೆ ಚಿಂತನ-ಮಂಥನ ನಡೆಸಿದಾಗ ಅದರಲ್ಲಿ ಪಾಲ್ಗೊಂಡಿದ್ದವರಲ್ಲಿ ಒಬ್ಬಿಬ್ಬರು    ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಉಳಿದ ಸಮಾಜಕ್ಕೆ ಈ ವಿಚಾರಗಳು ಮುಂಚೆ ಹೇಗಿತ್ತೋ ಈಗಲೂ ಹಾಗೆಯೇ ಇರುತ್ತದೆ. ಉಧಾಹರಣೆಗೆ ನನ್ನ ವಿಚಾರದಲ್ಲಿ ಹೇಳಬೇಕೆಂದರೆ ಸುಮಾರು ಹತ್ತು ವರ್ಷಗಳು ಸುಧಾಕರಶರ್ಮರೊಡನೆ ನಡೆಸಿದ ಮಾತುಕತೆಯಿಂದ ನನ್ನ ವಿಚಾರಗಳಲ್ಲಿ ಕೆಲವು ಬದಲಾಗಿವೆ. ಬಹುಪಾಲು ಮುಂಚಿನಂತೆಯೇ ಇವೆ. ಆದರೆ ಹತ್ತು ವರ್ಷಗಳ   ಹಿಂದೆ  ಈ ವಿಚಾರಗಳು ಸಮಾಜದಲ್ಲಿ ಹೇಗಿತ್ತೋ ಈಗಲೂ ಹಾಗೆಯೇ ಇದೆ.  ವಿದ್ಯಾವಂತರಲ್ಲಿ ಮೌಢ್ಯ ಹೆಚ್ಚಾಗಿದೆ,. ಅದಕ್ಕೆ ಉಧಾಹರಣೆಗಳನ್ನು ನಿತ್ಯವೂ ಟಿ.ವಿ ಚಾನಲ್ ಗಳಲ್ಲಿ ನೋಡಬಹುದು. ಇರಲಿ. ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೀನೆಂದರೆ ಸುಧಾಕರಶರ್ಮರಿಂದ ಒಂದು ಚಿಂತನ ಗೋಷ್ಠಿಯನ್ನು ಮೇ 31 ರಂದು ಬೆಂಗಳೂರಿನಲ್ಲಿ  ಹಾಸನ ವೇದಭಾರತಿಯು ಆಯೋಜಿಸಿರುವ ವಿಷಯವು ನಿಮ್ಮ ಗಮನಕಕ್ಕೆ ಬಂದಿರಬಹುದು. ಇದುವರೆವಿಗೆ ಆ ಬಗ್ಗೆ ವಿಚಾರ ಮಾಡಿದ್ದರಲ್ಲಿ ನನಗೆ ತಿಳಿದ ಅಂಶವೆಂದರೆ 98% ಜನರಿಗೆ ಹೊರಗೆ ಬರುವ ಇಚ್ಚೆ ಇಲ್ಲ. face book ನಲ್ಲಿ ಹಾಕಿದರೆ ನೋಡಲು ತಮ್ಮ ಕಾಮೆಂಟ್ ಹಾಕಲು ತಯಾರ್. ಹಾಗಾಗಿ ಅಂದಿನ ಗೋಷ್ಠಿಯಲ್ಲಿ ಚರ್ಚೆ ನಡೆಸಲು ನಿಮ್ಮಿಂದಲೇ ವಿಷಯಗಳನ್ನು ಆಹ್ವಾನಿಸಿದರೆ ಸೂಕ್ತವೆಂದು ನನ್ನ ಭಾವನೆ. ನಿಮ್ಮ ಪ್ರಶ್ನೆಗಳನ್ನು ಶರ್ಮರಿಗೆ ಈ ಮೂಲಕವೇ ಕೇಳುವಿರಾ? ಕೇಳುವುದಕ್ಕೆ ಮುಂಚೆ ನನ್ನದೊಂದು ಮನವಿ. ವಿಗ್ರಹಾರಾದನೆ ನೀವು ಒಪ್ಪುತ್ತೀರಾ? ಒಪ್ಪದಿದ್ದರೆ ಅದಕ್ಕೆ ವೇದದ ಆಧಾರ ಕೊಡಿ- ಇಂತಾ ಪ್ರಶ್ನೆಗಳು ಬೇಡ. ನಮ್ಮ ಅಂದಿನ ಚರ್ಚೆಯಲ್ಲಿ ವಿಗ್ರಹಾರಾಧನೆ ವಿಚಾರ ಚರ್ಚೆ ಬೇಡ. ಆವಿಚಾರ ಬಂದರೆ ಇಡೀ ದಿನ ಅದೇ ಸಮಯವನ್ನು ನುಂಗಿಹಾಕುತ್ತದೆ. ಅದಕ್ಕೆ ಹೊರತಾಗಿ........

1. ಹುಟ್ಟು-ಸಾವು
2. ಆತ್ಮೋನ್ನತಿ
3. ಶ್ರಾದ್ಧ ಕರ್ಮಗಳು
4. ಪಾಪ-ಪುಣ್ಯ
5. ಆರೋಗ್ಯ
6. ಭೂತ-ಪ್ರೇತ ಇದೆಯೇ?
7. ಕರ್ಮಫಲ

ಈ ವಿಚಾರಗಳನ್ನೊಳಗೊಂಡಂತೆ  ನಿಮ್ಮ ಹೆಸರು-ಫೋನ್ ನಂಬರ್-ಊರು  ವಿವರಗಳೊಂದಿಗೆ ಪ್ರಶ್ನೆಗಳನ್ನು ಕೇಳುವಿರಾ?

ನಿಮ್ಮ ಪ್ರಶ್ನೆಗಳನ್ನು ಇಲ್ಲೂ ಬರೆಯಬಹುದು. ಅಥವಾ    vedasudhe@gmail.com ಗೆ ಮೇಲ್ ಮಾಡಬಹುದು.

ಆದರೆ ನೀವೇ ಹಾಜರಾದಾಗ ಶರ್ಮರ ಮಾತಿಗೆ ನೀವು ಮರು ಪ್ರಶ್ನೆ ಹಾಕಲು ಅವಕಾಶ ಇರುತ್ತೆ.ಅಲ್ಲವೇ?
-----------------------------------------------------------------------------------------------

ಪ್ರಶ್ನೆ-1
Raveesh Karnur ಮುಕ್ತವಾಗುವುದು,ಅಥವಾ ಮೋಕ್ಷ ಹಿಂದು ಚಿಂತನೆಯ ಪ್ರಕಾರ ಅಂತಿಮ ಗಮ್ಯ.ಸ್ವರ್ಗ,ನರಕ,ಕೈಲಾಸ,ವೈಕುಂಠ ಅಲ್ಲ.ಯಾಕೆಂದರೆ ಅಲ್ಲಿನ ಅಧಿಪತಿಗಳೂ ಖಾಯಂ ಅಲ್ಲಿರಲ್ಲ.ಈ ಮುಕ್ತಿ ಅಥವಾ ಮೋಕ್ಷಕ್ಕೇನಾದರೂ ಸುಲಭವಾಗಿ ಅರ್ಥವಾಗುವ ವ್ಯಾಖ್ಯಾನ ಇದೆಯೇ?

 ಪ್ರಶ್ನೆ-2
ವಿ ಭಾ :  ಕರ್ಮಫಲ ಈ ಜನ್ಮಕ್ಕೋ? ಮರುಜನ್ಮಕ್ಕೋ?

Sunday, May 10, 2015

ಆ ಹಳ್ಳಿಯ ಅವಿದ್ಯಾವಂತ ಮುದುಕಿಯ ನಡೆಯು ವೇದಕ್ಕನುಗುಣವಾಗಿಯೇ ಇದೆ-ಅಲ್ಲವೇ?

ಆ ತಾಯಿ ಹಳ್ಳಿ ಮುದುಕಿ ಗಂಡನ ಶವದ ಮುಂದೆ ಕುಳಿತಿದ್ದಳು. ಮಗಳು ರೋಧಿಸುತ್ತಿದ್ದಳು " ಅಪ್ಪಾ! ನೀನು ಹೋಗಿ ಬಿಟ್ಯೆಲ್ಲಾ!! ಇನ್ನು ತೌರಮನೆಗೆ ನಾನು ಹ್ಯಾಗ್ ಬರಲಿ? ನನ್ನ ಸುಖ -ದುಃಖ ಕೇಳೋರ್ಯಾರು? -ಹೆಣ್ಣು ಮಗಳ  ರೋದನ ಮುಗಿಲು ಮುಟ್ಟಿತ್ತು. ಎಷ್ಟಾದರೂ ಹೆಣ್ಣು ಮಕ್ಕಳಿಗೆ ಅಪ್ಪನ ಬಗ್ಗೆ ಬಲು ವಾಂಚಲ್ಯ.
ಸ್ವಲ್ಪ ಹೊತ್ತು ಮಗಳು ಅಳುವುದನ್ನು ಕೇಳಿದ ತಾಯಿ ಮಗಳನ್ನು ತಬ್ಬಿಕೊಂಡಳು " ಸುಮ್ಕಿರು ಮಗ , ಅವ್ನು ಒಂಟು ಬಿಟ್ಟಾ ಅಂದ್ರೆ ಈ ಜೀವ ಬದುಕಿಲ್ವಾ? ನನ್ನ ಕೈಲಿ ಸಕ್ತಿ ಇರೋವರ್ಗೂ ಕೂಲಿನಾರೂ ಮಾಡಿ ನಿಂಗೆ ಗೌರಿಕಾಯಿ ಕೊಡ್ತೀನಿ.ಬಿಡಾಕಿಲ್ಲ, ಸುಮ್ಕಿರು ಅಳ್ ಬ್ಯಾಡ. ಆ ಮಗಿನ್ ಕಡೆ ನೋಡು, ಆ ಮಗಿಗ್ ಏನಾದ್ರೂ ಕುಡ್ಯಕ್ಕಾರು ಕೊಡು"
ಅಯ್ಯಪ್ಪ! ಆ ತಾಯಿ ಅಲ್ಲಿರೋ ತನ್ ಮಕ್ಕಳಿಗೆಲ್ಲಾ ಸಾಂತ್ವನ ಹೇಳುತ್ತಿದ್ದಳು.ಅವಳ ಗಂಡು ಮಕ್ಕಳೂ ಕೂಡ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ " ಏಳ್ಲಾ ಮಗ, ಮಾಡ  ಜಬಾಬ್ದಾರಿ ಮಾಡು"

-ಈ ಮಾತು ಕೇಳುವಾಗ ನನಗೆ ವೇದಮಂತ್ರ ಒಂದರ ನೆನಪಾಯ್ತು

ಮಾ ಗತಾನಾಮಾ ದಿಧೀಥಾ ಯೇ ನಯಂತಿ ಪರಾವತಮ್|
ಆ ರೋಹ ತಮಸೋ ಜ್ಯೋತಿರೇಹ್ಯಾ ತೇ ಹಸ್ತೌರಭಾಮಹೇ
[ಅಥರ್ವ ವೇದ ಕಾಂಡ-೮,  ಸೂಕ್ತ-೧ , ಮಂತ್ರ- ೮ ]

ಅರ್ಥ:-
ಹೇ ಜೀವಾತ್ಮನೇ, ಶರೀರಧಾರಿಯಾದ ಪುರುಷನೇ,
ಯೇ ಪರಾವತಮ್ = ಯಾರು ಪರಲೋಕವನ್ನು
ನಯಂತಿ = ತಲುಪಿರುತ್ತಾರೋ ಅವರಿಗಾಗಿ
ಮಾ ದೀಧೀಥಾಃ = ನೀನು ನೆನೆನೆನೆದು ಹಂಬಲಿಸುತ್ತಾ ಕೂಡದಿರು
ಗತಾನಾಮ್ ಮಾ  ಆ ದಿಧೀಥಾಃ = ಗತಿಸಿದವರ ಬಗ್ಗೆ ದುಃಖಿಸುತ್ತಾ ಕೂಡದಿರು
ತಮಃ ಆರೋಹ = ತಮಸ್ಸಿನಿಂದ ಮೇಲೇಳು
ಜ್ಯೋತಿಃ ಆ ಇಹಿ = ಬೆಳಕಿನತ್ತ ಪಯಣಿಸು
ತೇ ಹಸ್ತೌ ರಭಾಮಹೇ = ನಿನ್ನ ಕೈಗಳನ್ನೆತ್ತಿ ನಾವು ಹಿಡಿದು ಉದ್ಧರಿಸುತ್ತೇವೆ

ಭಾವಾರ್ಥ:-
ಹೇ ಜೀವಾತ್ಮನೇ, ಶರೀರಧಾರಿಯಾದ ಪುರುಷನೇ,ಯಾರು ಪರಲೋಕವನ್ನು ತಲುಪಿರುತ್ತಾರೋ ಅವರಿಗಾಗಿ  ನೀನು ನೆನೆನೆನೆದು ಹಂಬಲಿಸುತ್ತಾ ಕೂಡದಿರು, ಗತಿಸಿದವರ ಬಗ್ಗೆ ದು:ಖಿಸುತ್ತಾ ಕೂಡದಿರು. ತಮಸ್ಸಿನಿಂದ ಮೇಲೇಳು ಬೆಳಕಿನತ್ತ ಪಯಣಿಸು ನಿನ್ನ ಕೈಗಳನ್ನೆತ್ತಿ ನಾವು ಹಿಡಿದು ಉದ್ಧರಿಸುತ್ತೇವೆ.
ಈ ಮಂತ್ರವು ಗತಿಸಿದವರ ಬಗ್ಗೆ ದು:ಖಿಸುವುದನ್ನು  ಅಜ್ಞಾನವೆಂದೇ ಹೇಳುತ್ತದೆ. ವೇದದ ಈ ಮಾತನ್ನು ಅರಗಿಸಿಕೊಳ್ಳುವುದು ಕಷ್ಟವೇ ಹೌದು. ಹಾಗಾದರೆ ಗತಿಸಿದವರ ಬಗ್ಗೆ ದುಃಖಿಸಬಾರದೇ? ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಅವನ ಸಂಬಂಧಿಕರು ಶೋಕಿಸದಿದ್ದರೆ ಸುತ್ತಮುತ್ತಲ ಜನರಾದರೂ ಏನೆಂದಾರು? ಇವರಿಗೆ ಮನುಷ್ಯತ್ವವೇ ಇಲ್ಲವೇ? ಇಷ್ಟೇನಾ ಸಂಬಂಧ? ಇವರ ಮುಖದಲ್ಲಿ ದುಃಖದ ಛಾಯೆಯೇ ಇಲ್ಲವಲ್ಲಾ!!
ನಾವು ಅತ್ಯಂತ ಮಹತ್ವಉಳ್ಳ ಈ ವಿಷಯದ ಬಗ್ಗೆ ಅತ್ಯಂತ ಗಂಭೀರವಾಗಿ ವಿಚಾರ ಮಾಡಬೇಕು. ಸತ್ತವರ ಬಗ್ಗೆ ಶೋಕಿಸುತ್ತಾ ಕೂರುವುದು ಅಜ್ಞಾನವೆಂದು ವೇದವು ಹೇಳುವುದು ಸತ್ಯವಾಗಿದೆ. ನಾವು ಶವದ ಮುಂದೆ ಕುಳಿತು ಅಳುವುದರಿಂದ ಪ್ರಯೋಜನವಾದರೂ ಏನು? ನಮ್ಮೊಳಗಿನ ದುಃಖವು ಕಡಿಮೆಯಾಗಬಹುದು ನಿಜ. ಆದರೆ ನಮಗೆ ದುಃಖವಾಗಿರುವುದನ್ನೇ ವೇದವು ತಮಸ್ಸು ಎಂದು ಹೇಳುತ್ತದೆ. ಈ ಕತ್ತಲಿನಿಂದ ಬೆಳಕಿನ ಕಡೆಗೆ ಅರ್ಥಾತ್ ಜ್ಞಾನದ ಕಡೆಗೆ ಪಯಣಿಸು ನಿನ್ನ ಕೈಗಳನ್ನು ನಾನು ಹಿಡಿದು ಮೇಲೆತ್ತುತ್ತೇನೆಂದು ಭಗವಂತನು ನುಡಿಯುತ್ತಾನೆ.
ಸಾವು ಯಾರ ವಯಸ್ಸನ್ನೂ ಕೇಳುವುದಿಲ್ಲ. ಆದರೆ ವಯಸ್ಸಾದಮೇಲೆ ಬರುವುದು ಸಹಜ ಸಾವು.   ಹೆತ್ತ ಅಪ್ಪ-ಅಮ್ಮನನ್ನು ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳಬೇಕಾದ್ದು ಮಕ್ಕಳ ಕರ್ತವ್ಯ. ಮಕ್ಕಳು ವೃದ್ಧ ತಂದೆ-ತಾಯಿಯರ ಸೇವೆಮಾಡುತ್ತಿರುವಾಗ ಸಹಜವಾಗಿ ಸಾವು ಬಂದರೆ ಮಕ್ಕಳು ಅಳುತ್ತಾ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ. ಬದುಕಿದ್ದಾಗ ತಂದೆ-ತಾಯಿಯರ ಸೇವೆ ಮಾಡಿದ ಸಮಾಧಾನವಿರುತ್ತದೆ. ಆದರೆ ಸೇವೆ ಮಾಡಬೇಕಾದಾಗ ಸೇವೆ ಮಾಡದೆ ಅಪ್ಪ-ಅಮ್ಮ ಸತ್ತಾಗ ಮೃತದೇಹದ ಮುಂದೆ ಕುಳಿತು ಕಣ್ಣೀರು ಹಾಕಿದರೇನು ಪ್ರಯೋಜನ? ಆಗ ನಿರ್ವಹಿಸಬೇಕಾದ ಜವಾಬ್ದಾರಿಯೇ ಬೇರೆ. ಮೃತದೇಹವನ್ನು ಪಂಚಭೂತಗಳಲ್ಲಿ ಲೀನವಾಗಿಸಲು ಅಗತ್ಯವಾದ ಅಂತ್ಯಸಂಸ್ಕಾರ ಕ್ರಿಯೆಗಳು. ಅಷ್ಟೆ.

 ಪುನರಪಿ ಜನನಮ್-ಪುನರಪಿ ಮರಣಮ್ ಪುನರಪಿ ಜನನೀ ಜಠರೇ ಶಯನಮ್, ಇಹಸಂಸಾರೇ ಬಹುದುಸ್ತಾರೇ  ಕೃಪಯಾ ಪಾರೇ ಪಾಹಿ ಮುರಾರೇ,ಭಜಗೋವಿಂದಮ್, ಭಜಗೋವಿಂದಮ್, ಗೋವಿಂದಮ್ ಭಜ ಮೂಢಮತೇ-ಎಂದು ಶಂಕರರು ಹೇಳುತ್ತಾರೆ.

ಮತ್ತೆ ಹುಟ್ಟುವುದು ಮತ್ತೆ ಸಾಯುವುದು ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯ ಸಂಸಾರಕ್ಕೆ ಪಾರವೇ ಇಲ್ಲ. ಬಹಳ ಸುಲಭವಾಗಿ ಈ ಹುಟ್ಟು-ಸಾವುಗಳ ಚಕ್ರದಿಂದ ಹೊರಬರಲಾಗುವುದಿಲ್ಲ.ಆದ್ದರಿಂದ ಹುಟ್ಟಿರುವಾಗ ಆ ಭಗವಂತನ ಸ್ಮರಣೆಯನ್ನು ಮಾಡು, ಎಂದು ಶಂಕರರು ಹೇಳುತ್ತಾರೆ.
ಅಂದರೆ ಹುಟ್ಟು-ಸಾವುಗಳನ್ನು ಯಾರೂ ತಪ್ಪಿಸುಕೊಳ್ಳಲು ಸಾಧ್ಯವೇ ಇಲ್ಲ. ಹುಟ್ಟಿದವನು ಸಾಯಲೆ ಬೇಕು. ಸತ್ತವನು ಹುಟ್ಟಲೇ ಬೇಕು.  ಈ ಹುಟ್ಟು ಸಾವುಗಳೆಲ್ಲಾ ಜಡ ಶರೀರಕ್ಕೇ ಹೊರತೂ ಆತ್ಮಕ್ಕಲ್ಲ. ಆದ್ದರಿಂದ ಶೋಕಿಸುವ ಅಗತ್ಯವಿಲ್ಲ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿ..
[ಸಾಂಖ್ಯಾಯೋಗ ಶ್ಲೋಕ - ೨೭]

ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ |
ತಸ್ಮಾದಪರಿಹಾರ್ಯೇಽರ್ಥೇ ನತ್ವಂ ಶೋಚಿತು ಮರ್ಹಸಿ ||
ಹುಟ್ಟಿದವನಿಗೆ ಮರಣವು ನಿಶ್ಚಯವು ಮತ್ತು ಸತ್ತವನಿಗೆ ಜನ್ಮವು ನಿಶ್ಚಯವು. ಆದುದರಿಂದ ಪರಿಹರಿಸಲಾಗದ ಈ ವಿಷಯದಲ್ಲಿ ನೀನು ಶೋಕಿಸಬಾರದು.

ದೇಹೀ ನಿತ್ಯ ಮವಧ್ಯೋಽಯಂ ದೇಹೇ ಸರ್ವಸ್ಯ ಭಾರತ |
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ ||
[ಸಾಂಖ್ಯಾಯೋಗ ಶ್ಲೋಕ - ೩೦]

ಎಲ್ಲರ ದೇಹದಲ್ಲೂ ಇರುವ ಈ ಆತ್ಮನು ಎಂದಿಗೂ ನಾಶವಾಗುವುದಿಲ್ಲ. ಆದ್ದರಿಂದ ನೀನು ಸಮಸ್ತ ಪ್ರಾಣಿಗಳನ್ನು ಕುರಿತು ಶೋಕಿಸಬಾರದು.  ಹೀಗೆ ಸಾವಿನ ಬಗ್ಗೆ ವೇದವು ಏನು ಹೇಳಿದೆಯೋ ಅದನ್ನೇ ಶ್ರೀ ಕೃಷ್ಣನೂ ಹೇಳಿದ್ದಾನೆ.  ಶಂಕರಾಚಾರ್ಯರೂ ಹೇಳಿದ್ದಾರೆ.
ಗತಿಸಿದವರ ಬಗ್ಗೆ ಶೋಕಿಸದಿರು,ತಮಸ್ಸಿನಿಂದ ಮೇಲೇಳು, ನಿನ್ನ ಕೈ ಹಿಡಿದು ನಾನು ಮೇಲೆತ್ತುತ್ತೇನೆ- ಎಂಬ  ಭಗವಂತನ ಮಾತು ನಮಗೆ ಧೈರ್ಯವನ್ನು ಕೊಡುವಂತಹದ್ದು. ತನ್ನ ಚಿಕ್ಕ ಪ್ರಾಯದಲ್ಲಿ ಪತಿಯನ್ನು ಕಳೆದುಕೊಂಡು ಚಿಕ್ಕಪುಟ್ಟ ಮಕ್ಕಳೊಡನೆ ಒಬ್ಬ ಸ್ತ್ರೀ ಬದುಕಬೇಕಾದ ಅನಿವಾರ್ಯ ಪರಿಸ್ಥಿಗಳು ಬಂದಿರುವ ಹಲವು ಉಧಾಹರಣೆಗಳನ್ನು ಕಾಣಬಹುದು. ಆ ಸಂದರ್ಭದಲ್ಲಿ ತಾಯಿಯಾದವಳು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕೋ ಅಥವಾ ಸತ್ತ ಪತಿಯ ಬಗ್ಗೆ ಶೋಕಿಸುತ್ತಾ ಕುಳಿತುಕೊಳ್ಳಬೇಕೋ. ಇಂತಹ ಸಂದರ್ಭದಲ್ಲಿ ವೇದವು ನಮಗೆ ಸಹಾಯಕ್ಕೆ ಬರುತ್ತದೆ. ಇಂತಹಾ ದು:ಖದ ಸ್ಥಿತಿಯಲ್ಲೂ ತಾಯಿಯಾದವಳು ಮಕ್ಕಳ ಅಭ್ಯುದಯದ ಬಗ್ಗೆ ಯೋಚಿಸಬೇಕೇ ಹೊರತೂ ಸತ್ತ ಪತಿಯ ಬಗ್ಗೆ ದು:ಖಿಸುತ್ತಾ ಕುಳಿತುಕೊಳ್ಳಕೂಡದು. ಅಂತಹಾ ತಮಸ್ಸಿನಿಂದ ಹೊರ ಬರಲು ವೇದವು ಕರೆಕೊಡುತ್ತದೆ. ಸಮಾಜದಲ್ಲಿ ತನ್ನ ಬಗ್ಗೆ ಜನರು ಏನು ಅಂದುಕೊಂಡಾರೋ ಎಂಬ ಭೀತಿಯಲ್ಲಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವ ಅನೇಕ ಸ್ತ್ರೀಯರನ್ನು ಸಮಾಜದಲ್ಲಿ ಕಾಣಬಹುದು. ಅಂತಹಾ ಸೋದರಿಯರಿಗೆಲ್ಲಾ ವೇದವು ಮಾನಸಿಕವಾಗಿ ಶಕ್ತಿಯನ್ನು ತುಂಬುತ್ತದೆ.
 ಒಬ್ಬ ವ್ಯಕ್ತಿಯ ಸಾವಿನಿಂದ ಕುಟುಂಬದವರು ಶೋಕಸಾಗರದಲ್ಲಿ ಮುಳುಗಿದಾಗ  ಅಂತವರಿಗೆ ವೇದವು ಹೇಳುತ್ತದೆ.. . . .

ಮೈತಂ ಪಂಥಾಮನು ಗಾ ಭೀಮ ಏಷ ಯೇನ ಪೂರ್ವಂ ನೇಯಥ ತಂ ಬ್ರವೀಮಿ|
ತಮ ಏತತ್ ಪುರುಷ ಮಾ ಪ್ರ ಪತ್ಥಾ ಭಯಂ ಪರಸ್ತಾದಭಯಂ ತೇ ಅರ್ವಾಕ್ ||
[ಅಥರ್ವ ವೇದ ಕಾಂಡ-೮, ಸೂಕ್ತ-೧, ಮಂತ್ರ-೧೦]

ಅನ್ವಯಾರ್ಥ:
ಏತಮ್ ಪಂಥಾನಮ್ ಮಾ ಅನುಗಾಃ = ಈ ಪಲಾಯನವಾದದ ಮಾರ್ಗವನ್ನು ಅನುಸರಿಸದಿರು
ಭೀಮ ಏಷ: = ಇದು ಭಯಾನಕವಾಗಿದೆ
ಯೇನ ಪೂರ್ವಮ್ ನ ಇಯಥ = ಯಾವ ಮಾರ್ಗದಲ್ಲಿ ನೀನು ಮೊದಲಿನಿಂದಲೂ ಹೋಗಿಲ್ಲವೋ
ತಮ್ ಬ್ರಮೀಮಿ = ಅದನ್ನು ಕುರಿತು ನಿನಗೆ ಹೇಳುತ್ತೇನೆ
ಏತತ್ ತಮಃ = ಈ ಮೌಢ್ಯದ ಮಾರ್ಗವು ತಮಸ್ಸಿನಿಂದ ತುಂಬಿದೆ
ಪುರುಷ = ಹೇ ಜೀವ ಪುರುಷನೇ
ಮಾ ಪ್ರಪತ್ಥಾಃ = ನೀನು ಕತ್ತಲೆಯಲ್ಲಿ ಹೋಗದಿರು,ಕೆಳಗೆ ಬೀಳದಿರು [ಏಕೆಂದರೆ]
ಪರಸ್ಥಾತ್ ಭಯಮ್ = ಅದರಾಚೆಗೆ ಭಯವಿದೆ
ತೇ ಅರ್ವಾಕ್ ಅಭಯಮ್ = ಮುಂದೆ ಮುನ್ನಡೆದರೆ ನಿನಗೆ ಅಭಯವಿದೆ,ಬೆಳಕಿದೆ.

ಭಾವಾರ್ಥ:-
ಯಾರೇ ಸತ್ತರೂ ದುಃಖಿಸಿ ಕೂರುವಂತಹ ಪಲಾಯನ ವಾದವನ್ನು ಅನುಸರಿಸಬೇಡ.ಏಕೆಂದರೆ ಆ ಮಾರ್ಗವು ಆತ್ಮಘಾತಕವೂ, ಭಯಕಾರವೂ ಆದುದಾಗಿದೆ. ನಿರ್ಭಯವಾದ ಸ್ವಚ್ಚ ಬೆಳಕಿನಲ್ಲಿ ಮುನ್ನಡೆದೆಯಾದರೆ  ಅಲ್ಲಿ ಅಭಯವೂ ಇದೆ, ಬೆಳಕೂ ಇದೆ.
ಈ ವೇದ ಮಂತ್ರದ ಅರ್ಥವನ್ನು ಅರಿಯುತ್ತಾ ಹೋದಂತೆ ರೋಮಾಂಚನವಾಗದಿರದು. ಯಾವುದೇ ದುಃಖದ ಸಮಯದಲ್ಲಿ ಶೋಕಿಸುತ್ತಾ ಕುಳಿತರೆ ಆ ಪರಿಸ್ಥಿತಿಯು  ಸರಿಹೋಗುವುದಿಲ್ಲ.ಬದಲಿಗೆ ಭಯವು ಹೆಚ್ಚಾಗುತ್ತದೆ. ತನ್ನ ಬದುಕಿನ ಬಗ್ಗೆ ಬೇಸರಮೂಡುತ್ತದೆ. ಇದನ್ನೇ ವೇದವು ತಮಸ್ಸು ಎನ್ನುತ್ತದೆ. ಬದಲಿಗೆ ದುಃಖಿಸದೆ ಮುಂದೆ ಮುನ್ನಡೆದರೆ ದಾರಿ ಕಾಣುತ್ತದೆ, ಪರಿಸ್ಥಿಯನ್ನು ಮೆಟ್ಟಿ ನಿಲ್ಲುವಂತಹ ಸಾಮರ್ಥ್ಯವು ತಾನೇ ತಾನಾಗಿ ಬರುತ್ತದೆ. ನಾನು ಕೈ ಹಿಡಿದು ಮೇಲೆತ್ತುತ್ತೇನೆ ಎಂಬ ಭಗವಂತನ  ಅಭಯದ ಮಾತು ಎಷ್ಟು ಶಕ್ತಿಯನ್ನು ಕೊಡುತ್ತದೆ! ಅಲ್ಲವೇ?

ಆ ಹಳ್ಳಿಯ ಅವಿದ್ಯಾವಂತ ಮುದುಕಿಯ ನಡೆಯು ವೇದಕ್ಕನುಗುಣವಾಗಿಯೇ ಇದೆ-ಅಲ್ಲವೇ?

ಈ ಸಂದರ್ಭದಲ್ಲಿ ಹತ್ತಿರದ ಹಂಪಾಪುರದಲ್ಲೇ ಇಪ್ಪತ್ತು ವಯಸ್ಸಿನ ಮಗನನ್ನು ಕಳೆದುಕೊಂಡು ತಾಯಿಯು ಅವನ ಕೊರಗಿನಲ್ಲಿ ಹಾಸಿಗೆ ಹಿಡಿದಾಗ RSS ಪ್ರಚಾರಕರೊಬ್ಬರ ಸಲಹೆಯಂತೆ ನಾಲ್ಕು ಹಸುಗಳನ್ನು ಸಾಕಲು ಆರಂಭಿಸಿದವರು, ಈಗ ಗೋಶಾಲೆಯನ್ನೇ ನಡೆಸುತ್ತಾ ಗೋವುಗಳಲ್ಲೇ ಮಗನನ್ನು ಕಂಡು ಗೋ ಸೇವೆ ಮಾಡಿಕೊಂಡು ಸಮಾಜ ಮುಖಿ ಕೆಲಸದಲ್ಲಿ ಪೂರ್ಣ ತೊಡಗಿಸಿಕೊಂಡಿದ್ದಾರೆ.ಕಳೆದ ಕೆಲವು ದಿನಗಳಲ್ಲಿ ನನ್ನ ಸಂಬಂಧಿಗಳು ಮೂರು ಜನ ಕ್ಯಾಲಿಕಟ್ ಬೀಚ್ ನಲ್ಲಿ ಸಮುದ್ರದ ಅಲೆಗೆ ಸಿಕ್ಕಿ ಕೊನೆಯುಸಿರೆಳೆದರು. ಒಂದು ಮನೆಯ ಇಬ್ಬರು ಅಳಿಯಂದಿರು ಮತ್ತು ಒಬ್ಬ ಮೊಮ್ಮಗ. ಆ ಅತ್ತೆ-ಮಾವ ಮೌನವಾಗಿ ಎಲ್ಲವನ್ನೂ ಸಹಿಸಿದರೆ  ಅಪ್ಪ-ಅಮ್ಮಂದಿರು ಕಂಗಾಲಾಗಿದ್ದರು. ಎಲ್ಲರಿಗೂ ವೇದದ ಹಾದಿಯೊಂದೇ ಪರಿಹಾರ. ಭಗವಂತನ ಮೇಲಿನ ಅಚಲ ನಂಬಿಕೆಯೇ ಅವರನ್ನೆಲ್ಲಾ ಮಕ್ಕಳ ಅಗಲುವಿಕೆಯ ನೋವಿನಿಂದ ಪಾರುಮಾಡಬೇಕು.

Friday, May 8, 2015

ವೇದ ಚಿಂತನ ಗೋಷ್ಠಿ

ಓಂ
ವೇದಭಾರತೀ, ಹಾಸನ , ಪ್ರಸ್ತುತಪಡಿಸುತ್ತಿದೆ
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಮಾರ್ಗದರ್ಶನದಲ್ಲಿ
ವೇದ-ಚಿಂತನಗೋಷ್ಠಿ
ದಿನಾಂಕ:೩೧.೫.೨೦೧೫ ಭಾನುವಾರ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೪.೦೦
ಸ್ಥಳ: ವಂದೇಮಾತರಮ್ ಹೋಟೆಲಿನ ಕಾನ್ಫೆರೆನ್ಸ್ ಹಾಲ್,
 ಇಸ್ಕಾನ್ ಸಮೀಪ, ರಾಜಾಜಿ ನಗರ, ಬೆಂಗಳೂರು
ಮನವಿ: ಸುಧಾಕರಶರ್ಮರ ವಿಚಾರಗಳನ್ನು ಒಪ್ಪದಿರುವವರೂ ಬನ್ನಿ-ಒಪ್ಪುವವರೂ ಬನ್ನಿ-ವೇದದ ಬೆಳಕಿನಲ್ಲಿ ವಿಚಾರ ಮಾಡೋಣ ಬನ್ನಿ. ಪರಸ್ಪರ ಸದ್ಭಾವನೆಯನ್ನು ಮೂಡಿಸೋಣ  ಬನ್ನಿ.

ಪ್ರವೇಶ ಶುಲ್ಕ ರೂ: 1000.00 ವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ  20.5.2015 ರೊಳಗೆ  ಜಮಾಮಾಡಿ ಪ್ರವೇಶ ಪಡೆಯಬಹುದು

ಸಂಗ್ರಹವಾದ ಪ್ರವೇಶಶುಲ್ಕದಲ್ಲಿ ಅಂದಿನ ಕಾರ್ಯಕ್ರಮಕ್ಕೆ ಕನಿಷ್ಠ ಖರ್ಚು ಮಾಡಿ ಉಳಿದ ಮೊತ್ತವನ್ನು ಶ್ರೀ ಸುಧಾಕರಶರ್ಮರ ವೈದ್ಯಕೀಯ ವೆಚ್ಚಕ್ಕಾಗಿ ವಿನಿಯೋಗಿಸಲಾಗುವುದು

ಬ್ಯಾಂಕ್ ಖಾತೆ ವಿವರ

Name of the Bank: Punjab National Bank
Branch: Hassan
Type of Account : S.B
Name of the Account Holder : Vedabharatee, Hassan
SB.A/C No: 2004000100149348
IFSC: PUNB 0200400

ಖಾತೆಗೆ ಜಮಾಮಾಡಿ ಹರಿಹರಪುರಶ್ರೀಧರ್ , ಸಂಯೋಜಕರು, ವೇದಭಾರತೀ, ಹಾಸನ ಇವರ ಮೊಬೈಲ್ ನಂಬರ್ 9663572406 ಗೆ ಕರೆಮಾಡಿ ಹೆಸರು ನೊಂದಾಯಿಸಿಕೊಳ್ಳ ಬಹುದು .


E-Mail: vedasudhe@gmail.com

Wednesday, April 29, 2015

ಜೀವನವೇದ-6



ನಿನ್ನಲ್ಲಿ ಚೈತನ್ಯವಿದೆ, ನೀನು ಸಾಮರ್ಥ್ಯವನ್ನು ಹೊಂದಿದ್ದೀಯ, ಮುನ್ನಡೆ

ಮನುಷ್ಯನ ಜೀವನಕ್ಕೆ ಉತ್ಸಾಹ ತುಂಬುವ ಒಂದು ವೇದ ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.

ಶುಕ್ರೋsಸಿ ಭ್ರಾಜೋsಸಿ ಸ್ವರಸಿ ಜ್ಯೋತಿರಸಿ| ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ||
[ಅಥರ್ವ: ೨-೧೧-೫]

ಅರ್ಥ:
ಶುಕ್ರಃ ಅಸಿ= ಓ ಮಾನವ ನೀನು ನಿರ್ಮಲ ನಾಗಿದ್ದೀಯೇ
ಭ್ರಾಜಃ ಅಸಿ = ನೀನು ತೇಜಸ್ವಿಯಾಗಿದ್ದೀಯೇ
ಸ್ವಃ ಅಸಿ = ಸ್ವಸಾಮರ್ಥ್ಯಶಾಲಿಯಾಗಿದ್ದೀಯೇ
ಜ್ಯೋತಿಃ ಅಸಿ = ಜ್ಞಾನ ಪ್ರಕಾಶದಿಂದ ಬೆಳಗುವನಾಗಿದ್ದೀಯೇ
ಶ್ರೇಯಾಂಸಂ ಆಪ್ನುಹಿ = ಶ್ರೇಯಸ್ಸನ್ನು ಸಾಧಿಸಿಕೋ
ಸಮಂ ಅತಿಕ್ರಾಮ = ಸಮನಾದವನನ್ನು ಮೀರಿಸಿ ಮುಂದೆ ನಡೆ

ಈ ಮಂತ್ರದ ಹಿರಿಮೆ ನೋಡಿ, ಹೇಗಿದೆ! ಮನುಷ್ಯನನ್ನು “ನೀನು ಪಾಪಿ” ಎನಲಿಲ್ಲ. ಬದಲಿಗೆ ನೀನು ನಿರ್ಮಲನಾಗಿದ್ದೀಯೆ, ನೀನು ಪ್ರಕಾಶಮಾನವಾಗಿದ್ದೀಯೇ, ನೀನು ತೇಜಸ್ವಿಯಾಗಿದ್ದೀಯೇ,ನೀನು ಸ್ವಸಾಮರ್ಥ್ಯಶಾಲಿಯಾಗಿದ್ದೀಯೇ,ನೀನು ಜ್ಞಾನಪ್ರಕಾಶದಿಂದ ಬೆಳಗುವನಾಗಿದ್ದೀಯೇ,  ಶ್ರೇಯಸ್ಸನ್ನು ನೀನೇ ಸ್ವvಃ ಸಾಧಿಸಿ ಅಧ್ಯಾತ್ಮ ಮಾರ್ಗದಲ್ಲಿ ನಿನ್ನ ಸಮ ಇರುವವರನ್ನು ಮೀರಿಸಿ ಮುಂದೆ ನಡೆ. ವೇದದ ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ಒಮ್ಮೆ ನನ್ನ ಮೈ ಝುಮ್ ಎಂದಿತು. ಮಂತ್ರದ ಅರ್ಥವನ್ನು ಮನಸ್ಸಿಟ್ಟು ಓದಿ ,ನಿಮಗೂ ಹಾಗನ್ನಿಸದೆ ಇರದು.


ಈ ಮಂತ್ರವು ಯಾವುದೋ ಒಂದು ಜಾತಿಗಾಗಿ ಹೇಳಿದೆಯೇ? ವೇದ ಮಂತ್ರಗಳು ಸಕಲ ಮಾನವನ ಅಭ್ಯುದಯಕ್ಕಾಗಿ ಇರುವ  ಮಾರ್ಗದರ್ಶನ. ಒಂದು ವೇಳೆ ಒಬ್ಬ ಮನುಷ್ಯನು ಇನ್ನೊಬ್ಬನಿಗಿಂತ  ಅವನು ಕೆಳಗಿದ್ದೀನಿ, ಎಂದು ಕೀಳರಿಮೆ ಹೊಂದಿದ್ದರೆ, ಅವನಿಗೆ ಎಂತಾ ಆತ್ಮವಿಶ್ವಾಸವನ್ನು ತುಂಬುತ್ತದೆಂದರೆ ನಿನ್ನಲ್ಲಿ ಚೈತನ್ಯವಿದೆ, ನೀನು ಸಾಮರ್ಥ್ಯವನ್ನು ಹೊಂದಿದ್ದೀಯ, ಮುನ್ನಡೆ  ಎಂದು ಹುರಿದುಂಬಿಸುತ್ತದೆ.

ನೀನು ಪಾಪಿ! ನಿನಗೆ ಪುಣ್ಯ  ಸಿಗಬೇಕಾದರೆ ಇಂತಾ ದೇವರನ್ನು ನಂಬು, ಈ ಗ್ರಂಥವನ್ನು ಓದು, ಈ ಪ್ರವಾದಿಯನ್ನು ನಂಬು ಎಂದು ಹೇಳುವ, ಮನುಷ್ಯನನ್ನು ಭೀತಿಯಲ್ಲಿ ತಳ್ಳುವ ಮತಗಳ ಬಗ್ಗೆ ನಮಗೆ ಅರಿವಿದೆ. ಆದರೆ ಹಾಗೆ   ವೇದವು  ಹೇಳಲೇ ಇಲ್ಲ. ವೇದವನ್ನು ನಂಬು ಎಂದೂ ಕೂಡ ವೇದವು ಹೇಳಲಿಲ್ಲ. ಮನುಷ್ಯನು ಯಾವ ಮಾರ್ಗದಲ್ಲಿ ನಡೆಯಬೇಕೆಂಬುದನ್ನು ವೇದಮಂತ್ರ ಒಂದು ಹೇಳುತ್ತದೆ ಯಾವುದು ಪ್ರಾಚೀನದಿಂದ ಬಂದಿದೆಯೋ, ಯಾವುದು ಇಂದಿನ ನವೀನ ಜ್ಞಾನವಿದೆಯೋ, ಯಾವುದು ಶಾಸ್ತ್ರಗಳಲ್ಲಿ ಹೇಳಿದೆಯೋ, ಯಾವುದು ನಿನ್ನ ಅಂತರಂಗದಲ್ಲಿ ಹುಟ್ಟುತ್ತದೋ, ಎಲ್ಲವಕ್ಕೂ ಕಿವಿಗೊಡು, ಆದರೆ ಯಾವುದು ನಿನ್ನನ್ನು  ಕಲ್ಯಾಣಮಾರ್ಗದಲ್ಲಿ ಕರೆದುಕೊಂಡು ಹೋಗಬಲ್ಲದೆಂದು ನಿನ್ನ ವಿವೇಕ ಹೇಳುತ್ತದೆಯೋ, ಆ ಮಾರ್ಗದಲ್ಲಿ ನಿನ್ನ ಜೀವನರಥ ಸಾಗಲಿ ಈ ಮಂತ್ರದ ಬಗ್ಗೆ ಪ್ರತ್ಯೇಕವಾಗಿಯೇ ವಿಚಾರ ಮಾಡೋಣ. ಆದರೆ ಸಧ್ಯಕ್ಕೆ ಇಷ್ಟನ್ನು ನಾವು ಅರ್ಥ ಮಾಡಿಕೊಳ್ಳಬಹುದು. ವೇದದಲ್ಲಿ ನಮ್ಮ ಬದುಕಿಗೆ ಅಗತ್ಯವಾದ ಎಲ್ಲಾ ಮಾರ್ಗದರ್ಶನ ಲಭ್ಯವಿದ್ದರೂ ವೇದವು ತನ್ನನ್ನೇ ನಂಬಿ ಎಂದು ಎಲ್ಲೂ ಹೇಳಿಲ್ಲ.
ಮನುಷ್ಯನಿಗೆ ಉನ್ನತಿಹೊಂದಲು ಇದಕ್ಕಿಂತ ಇನ್ನೇನು ಬೇಕು? ಇಂತಹಾ ಆತ್ಮಸ್ಥೈರ್ಯವನ್ನು ತುಂಬುವಂತಹ ವೇದಮಂತ್ರವನ್ನು ಬದಿಗಿಟ್ಟು ಅದನ್ನು ಪಂಡಿತರ ಮಡಿವಂತ ಪಟ್ಟಿಗೆ ಸೇರಿಸಿ ಅದರಿಂದ ದೂರವಿದ್ದೀವಲ್ಲಾ! ಇದಕ್ಕಿಂತ ದೌರ್ಭಾಗ್ಯ ಮತ್ತೊಂದಿದೆಯೇ?
ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ನಮ್ಮ ಟೀಚರ್ ಗಳು ಪಾಠಮಾಡುವ ಚಿತ್ರವು ನನ್ನ  ಕಣ್ಮುಂದೆ ಬಂತು.ಎಲ್ಲರಿಗೂ ಈ ವಿಚಾರ ಗೊತ್ತಿದೆಯಾದರೂ ಈ ಸಂದರ್ಭದಲ್ಲಿ ನಾನು ನನ್ನೆಲ್ಲಾ ಮಿತ್ರರ ಗಮನವನ್ನು ಇತ್ತ ಸೆಳೆಯಲು ಬಯಸುತ್ತೇನೆ.
ನಮ್ಮ ಪ್ರೈಮರಿ ಶಾಲೆಗಳಿಗೆ ಹೋಗಿ ನೋಡಿ[ಕೆಲವು ಶಾಲೆಗಳು ಅಪವಾದ ವಿರಬಹುದು] ಅಲ್ಲಿನ ಟೀಚರ್‌ಗಳ ಬಾಯಲ್ಲಿ ಬರುವ ಮಾತುಗಳನ್ನು ಕೇಳಿ ಇನ್ನು ಹತ್ತು ಜನ್ಮ ಎತ್ತಿ ಬಂದರೂ ನಿನಗೆ ಬುದ್ಧಿ ಬರುದಿಲ್ಲ! ಅಂತಾ  ದಡ್ಡಾ ನೀನು!! ಅವನನ್ನು ನೋಡು ಎಷ್ಟು ಸೊಗಸಾಗಿ ಇಂಗ್ಳೀಶಲ್ಲಿ ಮಾತನಾಡುತ್ತಾನೆ! ಎಷ್ಟು ಶಿಸ್ತಾಗಿ ಅವರ ಮನೆಯಲ್ಲಿ ಬೆಳೆಸಿದ್ದಾರೆ, ನೋಡು! ನೀನು ಇದೀಯ ಮಂಕು ಮುಂಡೇದು!!
ವೇದವು ಹೇಳುತ್ತಿದೆ  ನೀನು ಸಮರ್ಥ, ನೀನು ತೇಜಸ್ವೀ, ನೀನು ಪರಿಶುದ್ಧ
ಆದರೆ ನಮ್ಮ ಶಾಲೆಯ ಟೀಚರ್ ಗಳು ಹೇಳುತ್ತಾರೆ  ನೀನು ದಡ್ಡ, ನೀನು ಪೆದ್ದ, ನೀನು ನಿಶ್ಪ್ರಯೋಜಕ ನೋಡಿ ಗ್ರಹಚಾರ ಹೇಗಿದೆ? ಟೀಚರ್ ಗಳ ಹತ್ತಿರ ಛೀಮಾರಿ  ಹಾಕಿಸಿಕೊಳ್ಳುವ ವಿದ್ಯಾರ್ಥಿಯ ಮಾತಾ ಪಿತೃಗಳು ಆ ಶಾಲೆಯ ಭವ್ಯವಾದ ಕಟ್ಟಡ, ಫುಲ್‌ಸೂಟ್ ಹಾಕಿರುವ ಪ್ರಿನ್ಸಿಪಾಲ್ [ನಮ್ಮ ಕಾಲದಲ್ಲಿ ಕಾಲೇಜುಗಳಲ್ಲಿ ಮಾತ್ರ ಪ್ರಿನ್ಸಿಪಾಲರಿರುತ್ತಿದ್ದರು. ಹೈಸ್ಕೂಲ್‌ಗಳಿಗೆ ಇರುತ್ತಿದ್ದವರೂ ಹೆಡ್ ಮಾಸ್ಟರ್ ಮಾತ್ರವೇ. ಈಗೆಲ್ಲಾ ಪ್ರೈಮರಿ ಶಾಲೆಗೂ ಪ್ರಿನ್ಸಿಪಾಲರಿರುತ್ತಾರೆ] ಶಾಲೆಯ ಗೇಟ್‌ನಲ್ಲೊಬ್ಬ ಮಿಲಿಟರಿ ಉಡುಪು ಧರಿಸಿರುವ  ಗಾರ್ಡ್,ಇವೆಲ್ಲಾ ಚಿತ್ರಣವನ್ನು ನೋಡಿ ಕೇಳಿದಷ್ಟು ಡೊನೇಶನ್ ಕೊಟ್ಟು ಮಕ್ಕಳನ್ನು ಶಾಲೆಗೆ ಸೇರಿಸಿ ನಂತರ ಟೀಚರ್ ಗಳಿಂದ ಮಕ್ಕಳಿಗೆ ಮಾನಸಿಕ ಹಿಂಸೆ ಕೊಡುವಂತಹ ಕೆಟ್ಟ ಶಿಸ್ತನ್ನು ಹೇರಿಸಿಕೊಳ್ಳುವುದು!! ಇದು  ಬೇಕಿತ್ತಾ? ಯಾವಾಗ ನಮ್ಮ ಪೋಷಕರುಗಳಿಗೆ ಬುದ್ಧಿ ಬರುತ್ತೋ ಗೊತ್ತಿಲ್ಲ.

ಮಕ್ಕಳನ್ನು ಅಯೋಗ್ಯರೆಂದು ಯಾರಾದರೂ ಟೀಚರ್ ಹೇಳಿದರೆ ಅಂತವರು ಈ ಸುಭಾಷಿತವನ್ನು ಮೊದಲು ಅರ್ಥಮಾಡಿಕೊಳ್ಳ  ಬೇಕು.

ಅಮಂತ್ರಂ ಅಕ್ಷರಮ್ ನಾಸ್ತಿ  ನಾಸ್ತಿ ಮೂಲ ಮನೌಷಧಮ್|
ಅಯೋಗ್ಯಃ ಪುರುಷೋ ನಾಸ್ತಿ  ಯೋಜಕಸ್ತತ್ರ ದುರ್ಲಭಃ ||

ಎಷ್ಟು ಸರಳವಾಗಿದೆ ಅರ್ಥ! ಮಂತ್ರವಾಗದ ಅಕ್ಷರವಿಲ್ಲ. ಔಷಧಿಯಾಗದ ಗಿಡಮೂಲಿಕೆಗಳಿಲ್ಲ.ಯಾವ ವ್ಯಕ್ತಿಯೂ ಅಯೋಗ್ಯನಲ್ಲ. ಆದರೆ ಯೋಜನೆ ಮಾಡುವವರು ವಿರಳ. ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು ಮನುಷ್ಯನ ಜನ್ಮವಾಗುವಾಗ ಭಗವಂತನು ಎಲ್ಲರಲ್ಲಿ ಚೈತನ್ಯದ ಮೂಟೆಯನ್ನೇ ಇಟ್ಟು ಕಳಿಸಿದ್ದಾನೆ, ಕೆಲವರು ಮೂಟೆಯ ಬಾಯ್ಬಿಚ್ಚಿ ತೆರೆದು ಚೈತನ್ಯವನ್ನು ಜಾಗೃತಗೊಳಿಸಿಕೊಂಡು ಪ್ರಭಾವಶಾಲಿಗಳಾಗುತ್ತಾರೆ. ಕೆಲವರು ಮೂಟೆಯ ಬಾಯನ್ನೇ ತೆರೆಯುವುದಿಲ್ಲ. ಒಳಗಿರುವ ಚೈತನ್ಯದ ಜಾಗೃತಿ ಮಾಡಬೇಕಾದವರು ಯಾರು? ಮನೆಯಲ್ಲಿ ಅಪ್ಪ-ಅಮ್ಮ, ಶಾಲೆಯಲ್ಲಿ ಟೀಚರ್. ಆದರೆ ಮಗುವಿನ ಅಂತಃಶಕ್ತಿಯನ್ನು ಜಾಗೃತ ಗೊಳಿಸುವ ಕೆಲಸ ಆಗುತ್ತಿದೆಯೇ? ನಮ್ಮ ಕಣ್ಮುಂದಿರುವ ದಾರಿ ಯಾವುದು?
ನಮ್ಮ ಮಕ್ಕಳು ಸಾಫ್ಟ್ ವೇರ್ ಇಂಜಿನಿಯರಾಗಬಾರದೆಂದಲ್ಲ, ವೈದ್ಯರುಗಳಾಗಬಾರದೆಂದಲ್ಲ. ಆದರೆ ಮೊದಲು ಮಾನವೀಯತೆಯ ಶಿಕ್ಷಣ , ನೈತಿಕ ಮೌಲ್ಯಗಳ ಶಿಕ್ಷಣ, ಆತ್ಮಸ್ಥೈರ್ಯ,ಧೈರ್ಯ,ಪ್ರೀತಿ,ಪ್ರೇಮ, ವಾತ್ಸಲ್ಯಗಳಂತಹ ಗುಣಗಳನ್ನು ಅರಳಿಸುವ ಸಂಸ್ಕಾರ ಕೊಡಬೇಡವೇ? ವೇದ ಮಂತ್ರವು ಹೇಳುವಂತೆ   ನೀನು ಪುಣ್ಯವಂತ, ನೀನು ಭಾಗ್ಯಶಾಲಿ, ನೀನು ಶಕ್ತಿವಂತ, ನೀನು ಸಮರ್ಥ. . . . .ಎಂಬ ಮಾತುಗಳನ್ನು ಮಕ್ಕಳ ಮುಂದೆ ಹೇಳುತ್ತಿರಿ, ಅವರು ಸಮರ್ಥರೇ ಆಗುತ್ತಾರೆ. ಆದರೆ ಹೊರಗಿನ ವೇಷಭೂಷಣ, ಹೇರಿಕೆಯ ಶಿಸ್ತು,  ಈ ನೆಲಕ್ಕೆ ಒಗ್ಗದ ನಮ್ಮದಲ್ಲದ ಸಂಸ್ಕೃತಿಯ ಅಂಧಾನುಕರಣೆ, ಇವೆಲ್ಲವೂ ಮಕ್ಕಳ ಆತ್ಮವಿಕಾಸ ಮಾಡಲಾರದು.
ಮಕ್ಕಳು ಕೇವಲ ಬುದ್ಧಿವಂತರಾದರೆ ಸಾಕೇ? ಹೌದೆನ್ನುತ್ತಾರೆ ಇಂದಿನ ಹಲವಾರು ಪೋಷಕರು. ಆದರೆ ಮಕ್ಕಳ ಬುದ್ಧಿವಂತಿಕೆಯ ಜೊತೆಗೇ ಮನಸ್ಸನ್ನುಅರಳಿಸುವ, ಸದ್ಗುಣಗಳನ್ನು  ಬೆಳೆಸುವ ಶಿಕ್ಷಣವು ಇಂದು ಎಲ್ಲಾ ದಿನಗಳಿಗಿಂತಲೂ ಹೆಚ್ಚು ಅನಿವಾರ್ಯವಾಗಿದೆ. ಕಾರಣ ಮೌಲ್ಯಾಧಾರಿತ ಶಿಕ್ಷಣದ ಕೊರತೆಯಿಂದ ಮಕ್ಕಳಲ್ಲಿ ನೈತಿಕ ಮೌಲ್ಯದ ಕೊರತೆ ಎದ್ದು ಕಾಣುತ್ತಿದೆ. ಆತ್ಮವಿಶ್ವಾಸದ ಕೊರತೆಯಿಂದ ಹಲವು ಮಕ್ಕಳು ಆತ್ಮಹತ್ಯೆಗೆ ಒಳಗಾಗಿರುವ ಉಧಾಹರಣೆಗಳನ್ನು   ಕಾಣುತ್ತೇವೆ.
ನಿಮ್ಮ ಮಕ್ಕಳಿಗೆ ವೇದಮಂತ್ರದಲ್ಲಿ ತಿಳಿಸಿರುವಂತೆ ನೀನು ಸಮರ್ಥನಾಗಿದ್ದೀಯೇ, ನೀನು ಒಳ್ಳೆಯವ, ನೀನು ಶಕ್ತಿಶಾಲಿ,ನೀನು ಮೇಧಾವಂತ, ನೀನು ಗುಣವಂತ  ಎಂದು ಇಂದಿನಿಂದಲೇ ಹೇಳುತ್ತಾ ಬನ್ನಿ, ಅವರು ಹಾಗೆಯೇ ಆಗುತ್ತಾರೆ. ಒಳ್ಳೆಯ ಮಾತಿಗೇಕೇ ದಾರಿದ್ರ್ಯ?
ಮತ್ತೊಂದು ವೇದದಮಾತನ್ನು ಇಲ್ಲಿ ನಾವು ಗಮನಿಸಬೇಕು. ನಿನ್ನ ಸ್ವಸಾಮರ್ಥ್ಯದಿಂದ ಸಮನಾದವರನ್ನು ಮೀರಿಸಿ ಮುಂದೆ ನಡೆ. ಅಂದರೆ ನಮ್ಮನ್ನು ಮುನ್ನಡೆಸಲು ಮಧ್ಯವರ್ತಿಗಳು ಬೇಕಾಗಿಲ್ಲ. ನಮ್ಮ ಸಾಮರ್ಥ್ಯದಲ್ಲಿ ನಂಬಿಕೆಯಿಟ್ಟು ನಾವೇ ಮುನ್ನಡೆಯಬೇಕು.

Tuesday, April 28, 2015

ಚಿಂತನ ಗೋಷ್ಠಿ



ವೇದಭಾರತೀ, ಹಾಸನ, ಬೆಂಗಳೂರಿನಲ್ಲಿ ಪ್ರಸ್ತುತ ಪಡಿಸುತ್ತಿದೆ
ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರಿಂದ
 ಚಿಂತನ ಗೋಷ್ಠಿ
ವಿಷಯ: ವೇದಗಳ ವೈಜ್ಞಾನಿಕ ಚಿಂತನೆ
ಸ್ಥಳ: ವಂದೇಮಾತರಮ್ ಹೋಟೆಲಿನ ಕಾನ್ಫೆರೆನ್ಸ್ ಹಾಲ್
ಇಸ್ಕಾನ್ ಸಮೀಪ, ರಾಜಾಜಿ ನಗರ,ಬೆಂಗಳೂರು.
ದಿನಾಂಕ: 31.5.2015  ಭಾನುವಾರ ಬೆಳಿಗ್ಗೆ 9.30 ರಿಂದ ಮದ್ಯಾಹ್ನ 4.00 ರವರಗೆ
-----------------------------------------------------------

* ವೇದಗಳು ಇಂದಿಗೂ ಪ್ರಸ್ತುತವೇ?
* ವೇದ ಮತ್ತು ಆತ್ಮೋನ್ನತಿ
* ಇಂದಿನ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವು ವೇದದಲ್ಲಿದೆಯೇ 
* ಸಾಮಾಜಿಕ ಸದ್ಭಾವನೆ ಮತ್ತು ವೇದ   
* ಅಗ್ನಿಹೋತ್ರ-ಏನಿದರ ಪಾತ್ರ?
* ಎಲ್ಲರಿಗಾಗಿ ವೇದ  
* ನೆಮ್ಮದಿಯ ಬದುಕಿಗೆ ವೇದ. . . . . . .ಇಂತಾ ಹತ್ತು ಹಲವು ವಿಷಯಗಳ ಬಗ್ಗೆ ನಮ್ಮ ಪ್ರಶ್ನೆಗಳಿಗೆ ಶರ್ಮರಿಂದ ಉತ್ತರ ಪಡೆಯೋಣ ಬನ್ನಿ
* ಪ್ರವೇಶ ಶುಲ್ಕ ರೂ.1000.00 
[ಗೋಷ್ಠಿಯ ವ್ಯವಸ್ಥೆಗೆ ಅತ್ಯಂತ ಕಡಿಮೆ ಮೊತ್ತವನ್ನು ಉಪಯೋಗಿಸಿ ಮಿಕ್ಕೆಲ್ಲಾ ಮೊತ್ತವನ್ನು ಶ್ರೀ ಶರ್ಮರ ವೈದ್ಯಕೀಯ ವೆಚ್ಚಕ್ಕೆ ಉಪಯೋಗಿಸುವ ಉದ್ಧೇಶ]
ವಿ.ಸೂ: ಈಗಾಗಲೇ ಹಾಸನದಿಂದ 50 ಜನ ವೇದಾಭಿಮಾನಿಗಳು ಹೊರಡಲು ನಿರ್ಧರಿಸಿದ್ದು ಇನ್ನು ಕೇವಲ 50 ಜನರಿಗೆ ಮಾತ್ರ ಅವಕಾಶ. ಮೊದಲು ಬಂದವರಿಗೆ ಆಧ್ಯತೆ.

ಪ್ರವೇಶ ಶುಲ್ಕವನ್ನು
"ವೇದಭಾರತೀ, ಹಾಸನ " SB.A/C No: 2004000100149348
IFSC:  PUMB 0200400

ಖಾತೆಗೆ ಜಮಾಮಾಡಿ  ಹರಿಹರಪುರಶ್ರೀಧರ್ , ಸಂಯೋಜಕರು, ವೇದಭಾರತೀ, ಹಾಸನ ಇವರ ಮೊಬೈಲ್ ನಂಬರ್ 9663572406 ಗೆ ಕರೆಮಾಡಿ ಹೆಸರು ನೊಂದಾಯಿಸಿಕೊಳ್ಳ ಬಹುದು .
E-Mail: vedasudhe@gmail.com

ಹೆಚ್ಚಿನ ಮಾಹಿತಿಗಾಗಿ:   ಆಸಕ್ತರು  "ವಂದೆ ಮಾತರಮ್" ಹೋಟೆಲಿನ ಮಾಲಿಕರಾದ ಶ್ರೀ ನಾಗೇಶ್ [9902922155] ಇವರನ್ನು ಸಂಪರ್ಕಿಸಬಹುದು.

Thursday, April 23, 2015

ಸಾರ್ಥಕ ಹೊತ್ತು, ಸನ್ಮಿತ್ರನಿಗೆ ಅರವತ್ತು!

 ಜೀವನವೇದ ಪುಸ್ತಕ ಲೋಕಾರ್ಪಣೆಯ ಆ ಕ್ಷಣ!

     ಕಳೆದ ಭಾನುವಾರ ನನ್ನ ದೀರ್ಘಕಾಲದ ಮಿತ್ರ ಶ್ರೀಧರ ೬೦ ವಸಂತಗಳನ್ನು ಕಂಡು ಮುಂದಡಿಯಿಟ್ಟ ದಿನ. ಆ ಸುಸಂದರ್ಭದ ನಿಮಿತ್ತ ಮಿತ್ರನ ಮನೆಯಲ್ಲಿ ಅಗ್ನಿಹೋತ್ರ, ವಿಶೇಷ ಕಾರ್ಯಕಲಾಪಗಳು, ಬಂಧು-ಮಿತ್ರರ ಶುಭ ಹಾರೈಕೆಗಳ ಮೇಳೈಕೆಗಳೊಂದಿಗೆ ರಾ.ಸ್ವ.ಸಂಘದ ಜ್ಯೇಷ್ಠ ಪ್ರಚಾರಕ ಸನ್ಮಾನ್ಯ ಶ್ರೀ ಸು.ರಾಮಣ್ಣನವರ ಆಶೀರ್ವಾದಪೂರ್ವಕ ಸಂದೇಶಸೂಚಕವಾದ ಮಾತುಗಳು, ದೂರವಾಣಿ ಮೂಲಕವೇ ಸಾಂದರ್ಭಿಕವಾಗಿ ಮಾತನಾಡಿದ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾತುಗಳು ಶುಭಸಂದರ್ಭವನ್ನು ಮತ್ತಷ್ಟು ಮಹತ್ವಗೊಳಿಸಿದವು. ಸಮ್ಮಿಶ್ರಭಾವದಿಂದ ನನ್ನ ಕಣ್ಣುಗಳಿಂದ ಜಾರಿದ ಒಂದೆರಡು ಹನಿಗಳನ್ನು ಬೇರೆಯವರು ಗಮನಿಸದಂತೆ ಒರೆಸಿಕೊಂಡೆ. ನನ್ನ ಮತ್ತು ಶ್ರೀಧರರ ಗೆಳೆತನ ಸಾಗಿಬಂದ ದಿನಗಳನ್ನು ಮನಸ್ಸು ಮೆಲುಕು ಹಾಕಿತ್ತು.                                                              
     ಅರವತ್ತು ವರ್ಷಗಳು ಜೀವಿಯ ಕಾಲದಲ್ಲಿ ಆತ್ಮಾವಲೋಕನದ ಸಮಯ. ಕಳೆದ ಆ ವರ್ಷಗಳಲ್ಲಿ ಬಾಳಿನಲ್ಲಿ ಕಳೆದುದೆಷ್ಟೋ, ಕೂಡಿದುದೆಷ್ಟೋ, ಗುಣಿಸಿದೆಷ್ಟೋ ಮತ್ತು ಭಾಗಿಸಿದದೆಷ್ಟೋ ಎಲ್ಲ ಲೆಕ್ಕವನ್ನೂ ಮಾಡಿದ ನಂತರ ಉಳಿವ ಶೇಷವೇ ಆ ಸಮಯದ ಬದುಕಿನ ಸ್ಥಿತಿ! ನನ್ನ ಸನ್ಮಿತ್ರನ ಈಗಿನ ಸ್ಥಿತಿಯಲ್ಲಿ ಈ ರೀತಿ ಲೆಕ್ಕ ಹಾಕಿದರೆ ಪುಣ್ಯದ ಲೆಕ್ಕದಲ್ಲಿ ಗಣನೀಯ ಶಿಲ್ಕು ಇರುವುದು ಗೋಚರವಾಗದೇ ಇರದು. ಧನ್ಯತೆ ಮತ್ತು ಮಾನ್ಯತೆ ಎರಡನ್ನೂ ಗಳಿಸಿಕೊಂಡಿರುವುದಕ್ಕೆ ಪೂರ್ವಾರ್ಜಿತ ಕರ್ಮ ಮತ್ತು ಈಗ ಮಾಡಿರುವ ಸುಕರ್ಮಗಳ ಫಲಗಳೇ ಕಾರಣವೆಂದರೆ ತಪ್ಪಿಲ್ಲ.

ವೇದಭಾರತಿಯ ತಂಡದ ಸಹಕಾರದೊಡನೆ ವಿಶೇಷ ಅಗ್ನಿಹೋತ್ರ

     ಇದು ವಾನಪ್ರಸ್ಥಾಶ್ರಮದ ಸಮಯ. ವಾನಪ್ರಸ್ಥವೆಂದರೆ ಜನರಿಂದ ದೂರವಾಗಿ ಬಾಳುವುದಲ್ಲ. ಇಂದಿನ ಕಾಲಮಾನದ ಪರಿಸ್ಥಿತಿಯಲ್ಲಿ ವಾನಪ್ರಸ್ಥದ ಮೂಲ ಪರಿಕಲ್ಪನೆಯನ್ನು ಸೂಕ್ತವಾಗಿ ಪರಿವರ್ತಿಸಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ವೃತ್ತಿ, ಪ್ರವೃತ್ತಿ, ಹವ್ಯಾಸಗಳು ತೃಪ್ತಿ, ಸಂತೋಷ ಕೊಡುವ ಸಂಗತಿಯಾಗಿರುತ್ತದೆ. ನಿವೃತ್ತಿಯೆಂದರೆ ಅಂತಹ ಹವ್ಯಾಸಗಳನ್ನು ನಿಲ್ಲಿಸುವುದಲ್ಲ. ಬದಲಾಗಿ ಅವುಗಳನ್ನು ಇತರರ ಹಿತಕ್ಕಾಗಿ ಬಳಸುವುದು. ಕೇವಲ ಆತ್ಮತೃಪ್ತಿ ಮತ್ತು ಇತರರಿಗೆ ಮಾರ್ಗದರ್ಶಿಯಾಗಿರಲು ಮಾತ್ರ ಇವುಗಳ ಬಳಕೆಯಾಗಬೇಕು. ಪಡೆಯುವುದಕ್ಕಿಂತ ಕೊಡುವುದಕ್ಕೆ ಆದ್ಯತೆಯಿರಬೇಕು. ಅಷ್ಟಕ್ಕೂ ನಮ್ಮಲ್ಲಿರುವುದೆಲ್ಲಾ ನಾವು ಪಡೆದಿದ್ದೇ ಅಲ್ಲವೇ? ಬದುಕಿನ ಜಂಜಾಟದಲ್ಲಿ ತನ್ನತನಕ್ಕೆ ಅದುವರೆಗೆ ಸಿಕ್ಕದ ಆದ್ಯತೆಯನ್ನು ಜೀವನದ ಅಂತಿಮ ಘಟ್ಟದಲ್ಲಾದರೂ ಸಿಕ್ಕುವಂತೆ ನೋಡಿಕೊಂಡು ತಾನು ತಾನಾಗಿರಬೇಕು, ಅರ್ಥಾತ್ ತನಗಾಗಿ ಬಾಳಬೇಕು. ತನಗಾಗಿ ಬಾಳುವ ಈ ರೀತಿಯ ಬಾಳುವಿಕೆಯಲ್ಲಿ ಸ್ವಾರ್ಥವಿರಲಾರದು. ಏಕೆಂದರೆ, ಅದು ಆತ್ಮತೃಪ್ತಿಯ, ಆತ್ಮ ಚಿಂತನೆಯ, ಆತ್ಮಾನುಸಂಧಾನದ ಮಾರ್ಗ. ನನ್ನ ಮಿತ್ರನ ಸದ್ಯದ ಗುರಿಯೆಂದರೆ ವೇದದ ಕುರಿತು ಪ್ರಚಾರ, ಪ್ರಸಾರದಲ್ಲಿ ತೊಡಗುವುದು, ಅಗ್ನಿಹೋತ್ರವನ್ನು ಜನಪ್ರಿಯಗೊಳಿಸುವುದು ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗುವುದು ಮತ್ತು ಇತರರನ್ನೂ ಆ ದಿಸೆಯಲ್ಲಿ ಪ್ರೇರಿಸುವುದು. ಆತ ಸಾಗುತ್ತಿರುವ ರೀತಿಯಿಂದ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದು ಕಾಣುತ್ತಿದೆ. ಯಶಸ್ವಿಯೂ ಆಗಲಿ ಎಂಬುದು ಮನದಾಳದ ಹಾರೈಕೆ.
ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಮಲಗುಂದದ ಆರ್ಷ ವಿದ್ಯಾ ಗುರುಕುಲದಲ್ಲಿ ಸಾಮೂಹಿಕ ಅಗ್ನಿಹೋತ್ರ ನಡೆಸಿಕೊಟ್ಟಾಗ


     ೧೯೭೦ರ ದಶಕದ ಸಮಯದಲ್ಲಿ ಶ್ರೀಧರರ ಪರಿಚಯವಾದಾಗ ಆತ ಇನ್ನೂ ಐ.ಟಿ.ಐ. ಓದುತ್ತಿದ್ದ ವಿದ್ಯಾರ್ಥಿ. ನಾನು ಆಗಿನ್ನೂ ಕೆಲಸಕ್ಕೆ ಸೇರಿ ಒಂದು ವರ್ಷವಾಗಿತ್ತು. ನಾನು ಜಿಲ್ಲಾ ಫುಡ್ ಇನ್ಸ್‌ಪೆಕ್ಟರ್ ಆಗಿದ್ದೆ. ಇಬ್ಬರೂ ಸಂಘದ ಕಾರ್ಯಕರ್ತರಾದ್ದರಿಂದ ಪರಿಚಯ ಸಹಜವಾಗಿ ಆಗಿತ್ತು. ೧೯೭೩ರಲ್ಲಿ ಶ್ರೀಧರ್ ಸಂಘದ ಕಾರ್ಯಾಲಯದಲ್ಲಿ ಇದ್ದುಕೊಂಡು ವಾರಾನ್ನ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯ. ಆತ ವಾಣಿವಿಲಾಸ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯುತ್ತಿದ್ದ ಶೈಲೇಂದ್ರ ಸಾಯಂಶಾಖೆಯ ಮುಖ್ಯಶಿಕ್ಷಕನಾಗಿದ್ದರೆ, ನಾನು ಭಾಗ ಕಾರ್ಯವಾಹ ಮತ್ತು ನಂತರದಲ್ಲಿ ನಗರ ಸಹಕಾರ್ಯವಾಹನಾಗಿ ಜವಾಬ್ದಾರಿ ಹೊಂದಿದ್ದೆ. ಚ.ವಾಸುದೇವ್ ಜಿಲ್ಲಾ ಪ್ರಚಾರಕ್, ಬಿ.ಎನ್.ಹರಿಪ್ರಸಾದ್ (ಈಗಿನ ಬೆಂಗಳೂರಿನ ಜನಪ್ರಿಯ ಶಾಸಕರಾದ ಬಿ.ಎನ್.ವಿಜಯಕುಮಾರರ ತಮ್ಮ) ನಗರ ಪ್ರಚಾರಕ್, ಎ.ವಿ. ಚಂದ್ರಶೇಖರ್ (ಈಗ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು) ವಿಸ್ತಾರಕ್ ಮತ್ತು ಸು.ರಾಮಣ್ಣನವರು ಮೈಸೂರು ವಿಭಾಗ ಪ್ರಚಾರಕರಾಗಿದ್ದ ಸಮಯವದು. ಹೊ.ವೆ.ಶೇಷಾದ್ರಿಯವರು ಪ್ರಾಂತ ಪ್ರಚಾರಕರಾಗಿದ್ದರು. ನಾನು ಪ್ರತಿನಿತ್ಯ ನನ್ನ ವ್ಯಾಪ್ತಿಯಲ್ಲಿನ ಒಂದೊಂದು ಶಾಖೆಗೆ ಹೋಗುತ್ತಿದ್ದೆ. ಶ್ರೀಧರ್ ನಡೆಸುತ್ತಿದ್ದ ಶಾಖೆಗೂ ವಾರಕ್ಕೆ ಎರಡು-ಮೂರು ದಿನಗಳು ಹೋಗುತ್ತಿದ್ದೆ. ಶ್ರೀಧರ್ ನಡೆಸುತ್ತಿದ್ದ ಶಾಖೆ ಸಂಖ್ಯಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಉತ್ತಮದ್ದಾಗಿತ್ತು. ಅವರು ಬಾಲ ಸ್ವಯಂಸೇವಕರೊಂದಿಗೆ ಬೆರೆಯುತ್ತಿದ್ದ ರೀತಿ, ಆಟವಾಡಿಸುತ್ತಿದ್ದ ಶೈಲಿ, ಗಟ್ಟಿ ಕಂಠದಲ್ಲಿ ಹೇಳಿಕೊಡುತ್ತಿದ್ದ ದೇಶಭಕ್ತಿಗೀತೆಗಳು, ಶಾಖೆಗೆ ಬಾರದಿದ್ದ ಬಾಲಕರ ಮನೆಗಳಿಗೆ ಹೋಗಿ ಅವರನ್ನು ಮಾತನಾಡಿಸುತ್ತಿದ್ದುದು, ಮುಂತಾದವು ಹೊಸ ಹೊಸ ಬಾಲಕರನ್ನು ಶಾಖೆಯೆಡೆಗೆ ಸೆಳಯುತ್ತಿದ್ದವು. ಶ್ರೀಧರರ ಇಂದಿನ ಕಾರ್ಯಕ್ಷಮತೆ, ಸಂಘಟನಾಚತುರತೆ, ವಾಕ್ಪಟುತ್ವಗಳಿಗೆ ಅವರು ಶೈಲೇಂದ್ರ ಶಾಖೆಯ ಮುಖ್ಯಶಿಕ್ಷಕನಾಗಿದ್ದುದು, ಮೇಲೆ ತಿಳಿಸಿದ ಮಹನೀಯರ ಮಾರ್ಗದರ್ಶನ, ಜೊತೆಯಲ್ಲಿದ್ದ ಸಮರ್ಥ ಸಂಘದ ಕಾರ್ಯಕರ್ತರ ಸಹವಾಸ, ಬಡತನದ ಕಷ್ಟ-ನಷ್ಟಗಳ ಅರಿವುಗಳು ಗಟ್ಟಿ ತಳಹದಿ ಹಾಕಿತ್ತೆಂಬುದರಲ್ಲಿ ಅನುಮಾನವೇ ಇಲ್ಲ.
ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಮಲಗುಂದದ ಆರ್ಷ ವಿದ್ಯಾ ಗುರುಕುಲದಲ್ಲಿ ಸಾಮೂಹಿಕ ಅಗ್ನಿಹೋತ್ರ ನಡೆಸಿಕೊಟ್ಟಾಗ

     ಅಧಿಕಾರದಾಹದಿಂದ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಜನತೆಯ ಮೇಲೆ ಹೇರಿದ್ದ ೧೯೭೫-೭೭ರ ತುರ್ತುಪರಿಸ್ಥಿತಿ ದೇಶವನ್ನು ಸರ್ವಾಧಿಕಾರಕ್ಕೆ ದೂಡಿತ್ತು. ವಿರೋಧಿಗಳನ್ನೆಲ್ಲಾ ಜೈಲುಪಾಲಾಗಿಸಿದ್ದರು. ಪತ್ರಿಕಾ ಮತ್ತು ಇತರ ಮಾಧ್ಯಮಗಳಿಗೆ ದಿಗ್ಬಂಧನ, ರಾ.ಸ್ವ.ಸಂಘ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ನಿಷೇಧ ದೇಶದ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಗಂಡಾಂತರ ತಂದಿತ್ತು. ಆ ಅವಧಿ ನನ್ನ ಪಾಲಿಗೂ ಕರಾಳ ಅವಧಿಯಾಗಿತ್ತು. ನಾನೂ ಸೇರಿದಂತೆ ಹಲವರನ್ನು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿ ಜೈಲಿಗೆ ಅಟ್ಟಿದ್ದರು. ನನ್ನ ನೌಕರಿ ಹೋಗಿತ್ತು. ಸುಮಾರು ಆರು ತಿಂಗಳುಗಳ ಕಾಲ ಹಾಸನದ ಜೈಲಿನಲ್ಲಿ ಕಳೆದಿದ್ದೆ. ಶ್ರೀಧರ್ ಆ ಸಮಯದಲ್ಲಿ ೧೯೭೪ರಿಂದ೭೭ರವರೆಗೆ ಬೆಂಗಳೂರಿನಲ್ಲಿದ್ದು ತುರ್ತುಪರಿಸ್ಥಿತಿ ಅವಧಿಯಲ್ಲಿ ಭೂಗತನಾಗಿ ತುರ್ತುಪರಿಸ್ಥಿತಿ ವಿರುದ್ಧ ಜನರನ್ನು ಜಾಗೃತಗೊಳಿಸುವ ಕಹಳೆ ಪತ್ರಿಕೆಯ ವಿವಿದೆಡೆಗೆ ತಲುಪಿಸುವ ಕೆಲಸ ಮಾಡುತ್ತಿದ್ದರು. ತೆರೆಮರೆಯ ಈ ಕೆಲಸ ಅತ್ಯಂತ ಮಹತ್ವದ್ದು ಮತ್ತು ಅಪಾಯಕಾರಿಯಾಗಿದ್ದುದಾಗಿತ್ತು. ಹಲವು ಸಲ ಚಾಣಾಕ್ಷತೆಯಿಂದ ಪೋಲಿಸರ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡಿದ್ದರು. ಆ ಕರಾಳ ಅವಧಿ ನೂರಾರು ಸ್ವಯಂಸೇವಕರ ಜೀವನವನ್ನೇ, ಸಂಸಾರಗಳನ್ನೇ ನಾಶ ಮಾಡಿತ್ತು. ಸಂಘದ ದಿಟ್ಟ ಹೋರಾಟದಿಂದ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಿದ್ದು ಈಗ ಇತಿಹಾಸ.
ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕನಾಗಿ
     ೧೯೭೭ರಿಂದ ೭೯ರವರೆಗೆ ಕೆಜಿಎಫ್ ನಲ್ಲಿದ್ದ ಶ್ರೀಧರ್ ೧೯೭೯ರಲ್ಲಿ ಹಾಸನ ಜಿಲ್ಲೆಗೆ ಬಂದವರು ತದನಂತರದಲ್ಲಿ ಹಾಸನ ಜಿಲ್ಲೆಯಲ್ಲಿಯೇ ಕೆಲಸ ಮಾಡಿದರು. ನನ್ನ ಮತ್ತು ಶ್ರೀಧರರ ಮರುಭೇಟಿ ೧೯೮೦ರ ದಶಕದ ಆರಂಭದ ವರ್ಷಗಳಲ್ಲಿ ಹೊಳೆನರಸಿಪುರದಲ್ಲಾಯಿತು. ನಾನು ಹೊಳೆನರಸಿಪುರಕ್ಕೆ ಉಪತಹಸೀಲ್ದಾರನಾಗಿ ಹೋದಾಗ ಅವರು ಕೆ.ಇ.ಬಿ. ನೌಕರರಾಗಿ ಅಲ್ಲಿ ಕೆಲಸ ಮಾಡುತ್ತಿದ್ದರು. ಸಂಘದ, ವಿಶ್ವಹಿಂದು ಪರಿಷತ್ತಿನ ಅನೇಕ ಚಟುವಟಿಕಗಳಲ್ಲಿ ಇಬ್ಬರೂ ಸಕ್ರಿಯವಾಗಿ ತಡಗಿಸಿಕೊಂಡಿದ್ದೆವು. ನಾನು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಮತ್ತ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯೂ ಆಗಿದ್ದರಿಂದ ಆ ಸಂಘಗಳ ಮೂಲಕವೂ ಸಮಾಜಮುಖಿ ಚಟುವಟಿಕೆಗಳನ್ನು ಮಾಡಲು ಅವಕಾಶವಾಗಿತ್ತು. ಅಂತಹ ಚಟುವಟಿಕೆಗಳಿಗೆ ಶ್ರೀಧರರ ಸಕ್ರಿಯ ಸಹಕಾರ ಲಭಿಸುತ್ತಿತ್ತು. ಅಲ್ಲಿಂದ ನನಗೆ ವರ್ಗಾವಣೆಯಾದಾಗ ಮತ್ತೆ ಬೇರ್ಪಟ್ಟೆವು.
ಸಂಸ್ಕೃತ ಸಮ್ಮೇಳನದಲ್ಲಿ ಸಮ್ಮೇಳನ ಸಂಯೋಜಕನಾಗಿ


     ಸಕಲೇಶಪುರ, ಬೇಲೂರು, ಮಂಗಳೂರು ಜಿಲ್ಲೆಯ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಿ ಹಾಸನಕ್ಕೆ ೧೯೯೧-೯೨ರಲ್ಲಿ ವರ್ಗ ಮಾಡಿಸಿಕೊಂಡು ಜಿಲ್ಲಾಧಿಕಾರಿ ಕಛೇರಿಗೆ ಕಾರ್ಯ ಮಾಡಲು ಬಂದಾಗ ಶ್ರೀಧರ್ ಸಹ ಹಾಸನದಲ್ಲಿದ್ದರು. ನಾನು ಶಾಂತಿನಗರದ ಸ್ವಂತ ಮನೆಯಲ್ಲಿದ್ದರೆ, ಅವರೂ ಶಾಂತಿನಗರದಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಶ್ರೀಧರ್ ಆಗ ವಿಶ್ವಹಿಂದುಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಗಳಾಗಿದ್ದರು.ಅದೇ ಸಮಯದಲ್ಲಿ  ಶ್ರೀರಾಮಜನ್ಮಭೂಮಿಮುಕ್ತಿ ಹೋರಾಟ ಆರಂಭವಾಗಿ  ವಿಶ್ವಹಿಂದು ಪರಿಷತ್ತಿನ ಮೇಲೆ ಸರ್ಕಾರವು ನಿಶೇಧವನ್ನು ಹೇರಿದ್ದರಿಂದ ವಿಶ್ವಹಿಂದು ಪರಿಷತ್ತಿನ ಹೆಸರಲ್ಲಿ ಚಟುವಟಿಕೆ ನಡೆಸುವಂತಿರಲಿಲ್ಲ. ಆಗ ರೂಪುಗೊಂಡಿದ್ದೇ ಮನೆ-ಮನೆ ಭಜನೆ ಕಾರ್ಯಕ್ರಮ. ಶ್ರೀಧರ್, ನಾನು, ವಿಶ್ವೇಶ್ವರಯ್ಯ (ಈಗ ಮೈಸೂರಿನಲ್ಲಿದ್ದಾರೆ) ಮತ್ತು ಉಪೇಂದ್ರ (ಈಗ ಚಿಕ್ಕಮಗಳೂರಿನಲ್ಲಿ) ನಾವು ನಾಲ್ವರು ಮಾತನಾಡಿಕೊಂಡು ಪ್ರತಿ ಶನಿವಾರ ಒಂದೊಂದು ಮನೆಯಲ್ಲಿ ಸಾಮೂಹಿಕ ಭಜನೆ ನಡೆಸುವುದೆಂದು ತೀರ್ಮಾನಿಸಿ ಆರಂಭಿಸಿಯೇ ಬಿಟ್ಟೆವು. ಸಾಯಂಕಾಲ ೭ರಿಂದ ೭.೪೫ರವರೆಗೆ ಭಜನೆ, ೧೦ ನಿಮಿಷಗಳ ಕಾಲ ಸಾಮಯಿಕ ಮಹತ್ವದ ವಿಷಯದ ಕುರಿತು ಯಾರಾದರೂ ಒಬ್ಬರ ಮಾತು, ನಂತರ ಮಂಗಳಾರತಿ (ಯಾರ ಮನೆಯಲ್ಲಿ ಭಜನೆ ನಡೆಯುತ್ತಿತ್ತೋ ಆ ಮನೆಯವರು ಪೂಜಿಸುವ ದೇವರಿಗೆ), ಜೊತೆಗೆ ಭಾರತಮಾತಾ ನಮನವೂ ಇರುತ್ತಿತ್ತು. ಪ್ರಸಾದ ವಿನಿಯೋಗದೊಂದಿಗೆ ೮ರ ವೇಳೆಗೆ ಕಾರ್ಯಕ್ರಮ ಮುಗಿಯುತ್ತಿತ್ತು. ಸುಮಾರು ಎರಡು ವರ್ಷಗಳ ಕಾಲ ನಡೆದ ಈ ಕಾರ್ಯಕ್ರಮ ಶಾಂತಿನಗರ ಮತ್ತು ಹೇಮಾವತಿನಗರದ  ಅನೇಕರ ಮನೆಗಳಲ್ಲಿ ನಡೆದು, ಪರಸ್ಪರರಲ್ಲಿ ಸೌಹಾರ್ದತೆ, ಬಡಾವಣೆಯವರೆಲ್ಲಾ ಒಂದೇ ಕುಟುಂಬದವರು ಎಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಫಲವಾಗಿ ಅಂಚೆ-ತಂತಿ ಗಣಪತಿ ದೇವಸ್ಥಾನದ ಆವರಣದಲ್ಲಿ ನಾವುಗಳೇ ರಾಮನವಮಿ ಉತ್ಸವವನ್ನು ಸುಮಾರು ೧೦ ವರ್ಷಗಳವರೆಗೆ ವಿಜೃಂಭಣೆಯಿಂದ ಮಾಡಿದ್ದೆವು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ದೊಡ್ಡ ಮೆರವಣಿಗೆಗಳು ನಡೆಯುತ್ತಿದ್ದವು. ನಂತರದಲ್ಲಿ ಶ್ರೀಧರ್ ಸ್ವಂತ ಮನೆ ಈಶಾವಾಸ್ಯಮ್ವಾಸಿಯಾದರೆ ನಾನು ವರ್ಗಾವಣೆಯಾಗಿ ಬೇರೆ ಜಿಲ್ಲೆಗಳಲ್ಲಿ ಸುತ್ತುತ್ತಿದ್ದುದರಿಂದ ಈ ಕಾರ್ಯಕ್ರಮ ಸ್ಥಗಿತಗೊಂಡಿತು. ಶ್ರೀಧರ್ ಅರಸಿಕೆರೆಯ ತಾಲ್ಲೂಕು ಸಹಕಾರ್ಯವಾಹ ಮತ್ತು ನಂತರದಲ್ಲಿ ಜಿಲ್ಲಾಸಹಕಾರ್ಯವಾಹರಾಗಿ, ವಿಶ್ವ ಹಿಂದು ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಯಾಗಿ ಗಣನೀಯ ಕಾರ್ಯ ಮಾಡಿದ್ದಾರೆ. ಸಂಘದ ಜಿಲ್ಲಾ ಪ್ರಚಾರ ಪ್ರಮುಖರಾಗಿಯೂ ಅವರು ಜವಾಬ್ದಾರಿ ನಿರ್ವಹಿಸಿದ್ದರು.
     ಹಾಸನ ನಗರದಲ್ಲಿ ಸೇವಾಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವ ಸಲುವಾಗಿ ಅಕ್ಟೋಬರ್, ೧೯೯೩ರಲ್ಲಿ ಸೇವಾಭಾರತಿ ಸಂಸ್ಥೆ ಉದಯವಾಗಿ ಅದಕ್ಕಾಗಿ ೧೩ ಸದಸ್ಯರ ತಂಡ ಜೋಡಿಸಲಾಯಿತು. ನಾನು ಈ ಸಂಸ್ಥೆಯ ಸಂಯೋಜಕರಾಗಿದ್ದರೆ, ಡಾ. ಗುರುರಾಜ ಹೆಬ್ಬಾರ್ ಅಧ್ಯಕ್ಷರು, ಡಾ. ವೈ.ಎಸ್. ವೀರಭದ್ರಪ್ಪ ಹಾಗೂ ಡಾ. ಭಾರತಿ ರಾಜಶೇಖರ್ ಉಪಾಧ್ಯಕ್ಷರು, ಶ್ರೀ ಹೆಚ್.ಬಿ ಲಕ್ಷ್ಮಣ್ ಕಾರ್ಯದರ್ಶಿ, ಶ್ರೀ ಸುಬ್ರಹ್ಮಣ್ಯ ಭಟ್ ಸಹಕಾರ್ಯದರ್ಶಿ, ಶ್ರೀ ಎಂ.ಎಸ್. ಶ್ರೀಕಂಠಯ್ಯ ಖಜಾಂಚಿಯಾಗಿದ್ದರೆ, ಸದಸ್ಯರುಗಳಾಗಿ ಶ್ರೀಯುತರಾದ ಹರಿಹರಪುರ ಶ್ರೀಧರ್, ಕೆ. ವೆಂಕಟಯ್ಯ, ನರಹರಿ, ಗಿರಿಜಮ್ಮ, ಸೀತಾಲಕ್ಷ್ಮಮ್ಮ, ಡಾ. ದೇವದಾಸ್‌ರವರು ಇದ್ದರು. ಆ ಸಮಯದಲ್ಲಿ ಶ್ರೀಧರ್ ಸಂಘದ ಜಿಲ್ಲಾ ಸೇವಾಪ್ರಮುಖ್ ಆಗಿ ಜವಾಬ್ದಾರಿ ಹೊಂದಿದ್ದರು. ಯೋಗ ಮತ್ತು ಸಂಸ್ಕೃತ ತರಗತಿಗಳು, ವೈದ್ಯಕೀಯ ಸೇವೆ, ಆಪ್ತ ಸಲಹಾ ಕೇಂದ್ರ ಮತ್ತು ಶಿಕ್ಷಣ ವಿಭಾಗಗಳಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ನಿರ್ಧರಿಸಿದೆವು. ಹೆಸರಿಗೆ ೧೩ ಜನರ ತಂಡವಿದ್ದರೂ ಡಾ. ಗುರುರಾಜ ಹೆಬ್ಬಾರ್ ಮತ್ತು ಡಾ. ವೈ.ಎಸ್. ವೀರಭದ್ರಪ್ಪನವರ  ಅತ್ಯಮೂಲ್ಯ ಸಹಕಾರ ಪಡೆದು ನಿಜವಾಗಿ ಸೇವಾಭಾರತಿಯ ಕೆಲಸದಲ್ಲಿ ತೊಡಗಿಕೊಂಡವರು ನಾನು, ಶ್ರೀಧರ್ ಮತ್ತು ವಿಜಯಾ ಬ್ಯಾಂಕ್ ಉದ್ಯೋಗಿ ಲಕ್ಷ್ಮಣ್ ಮಾತ್ರ. ಇದು ವಾಸ್ತವ ಸಂಗತಿ. ಈ ಮೂವರ ತಂಡವನ್ನು  ಸೇವಾ ಆಟೋ ಎಂದು ಸ್ನೇಹಿತರು ಹಾಸ್ಯ ಮಾಡುತ್ತಿದ್ದರು. ೩ ಚಕ್ರಗಳ ಪೈಕಿ ಒಂದಕ್ಕೆ ತೊಂದರೆಯಾದರೂ ಸೇವಾ ಆಟೋ ಸಾಗುತ್ತಿರಲಿಲ್ಲ. ಈ ಆಟೋದ ಎಂಜಿನ್ ಹೆಬ್ಬಾರರಾಗಿದ್ದರು. ಸುಮಾರು ೪ ವರ್ಷಗಳ ಕಾಲ ಈ ಸೇವಾಚಟುವಟಿಕೆಗಳು ನಡೆದು ಜನಮನ್ನಣೆ ಗಳಿಸಿತ್ತು. ನಂತರದಲ್ಲಿ ಲಕ್ಷ್ಮಣ್ ಮೈಸೂರಿಗೆ ಮತ್ತು ನಾಗರಾಜ್ ಮಂಗಳೂರಿಗೆ ವರ್ಗಾವಣೆಗೊಂಡದ್ದರಿಂದ ನಡೆಯುತ್ತಿದ್ದ ಸೇವಾಚಟುವಟಿಕೆಗಳನ್ನು ಮುಂದುವರೆಸಲಾಗಿರಲಿಲ್ಲ. ಸೇವಾಭಾರತಿಯಿಂದ ಹಾಸನದ ಅಂಬೇಡ್ಕರ್ ನಗರ ಮತ್ತು ಸಿದ್ದಯ್ಯನಗರಗಳ ವ್ಯಾಪ್ತಿಯಲ್ಲಿ ೮ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ, ರಕ್ತದಾನಿಗಳ ವಿವರ ಸಂಗ್ರಹಿಸಿ ರಕ್ತದಾನ ಮಾಡುವ ವ್ಯವಸ್ಥೆ, ಸೇವಾದಿನದ ಆಚರಣೆ, ಸಂಸ್ಕೃತ ಸಂಭಾಷಣಾ ಶಿಬಿರಗಳು, ಸ್ವದೇಶಿ ಜಾಗರಣ ಆಂದೋಲನ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ಶಾಂತಿನಗರ ಬಡಾವಣೆಯಲ್ಲಿ ಪಾರ್ಥೇನಿಯಂ ನಿರ್ಮೂಲನಾ ಕಾರ್ಯದ ಜೊತೆಗೆ ವಿನೂತನ ರೀತಿಯ ರಕ್ಷಾಬಂಧನ ಕಾರ್ಯಕ್ರಮ, ಇತ್ಯಾದಿ ಚಟುವಟಿಕೆಗಳು ಸುಮಾರು ನಾಲ್ಕು ವರ್ಷಗಳವರೆಗೆ ನಡೆದು ಜನಮನ್ನಣೆ ಗಳಿಸಿತ್ತು. ನಂತರದಲ್ಲಿ ನಾನು ತಹಸೀಲ್ದಾರನಾಗಿ ಮಂಗಳೂರಿಗೆ, ಲಕ್ಷ್ಮಣ್ ಮೈಸೂರಿಗೆ ವರ್ಗವಾಗಿ ಹೋದನಂತರದಲ್ಲಿ ಸೇವಾಭಾರತಿ ಚಟುವಟಿಕೆ ಸ್ತಬ್ಧವಾಯಿತು. ಈಗಲೂ ಯಾರಾದರೂ ತರುಣರು ಈ ಕಾರ್ಯ ಮುಂದುವರೆಸಲು ಮುಂದೆ ಬಂದಲ್ಲಿ ನನ್ನ ಮತ್ತು ಶ್ರೀಧರರ ಕ್ರಿಯಾತ್ಮಕ ಸಹಕಾರ ಸಿಗಲಿದೆ.
     ನಂತರದ ಮತ್ತು ಈಗಿನ ಚಟುವಟಿಕೆಗಳು ವೇದಭಾರತಿಯ ಯಶೋಗಾಥೆಯದು. ಶಿಕಾರಿಪುರ ಮತ್ತು ಶಿವಮೊಗ್ಗಗಳಲ್ಲಿ ಕಾರ್ಯ ನಿರ್ವಹಿಸಿ ೨೦೦೯ರ ಡಿಸೆಂಬರಿನಲ್ಲಿ ಸ್ವಯಂ ನಿವೃತ್ತಿ ಪಡೆದು ಹಾಸನಕ್ಕೆ ಬಂದೆ. ಶ್ರೀಧರ್ ಸಹ ಒಂದೆರಡು ವರ್ಷಗಳ ನಂತರ ಸ್ವಯಂ ನಿವೃತ್ತಿ ತೆಗೆದುಕೊಂಡರು. ವೇದಸುಧೆ ಅಂತರ್ಜಾಲದ ಬ್ಲಾಗ್ ಅನ್ನು ಶ್ರೀಧರ್ ತೆರೆದರು. ನನ್ನನ್ನು ಗೌರವ ಸಂಪಾದಕರಾಗಿರಲು ಮತ್ತು ಲೇಖನಗಳನ್ನು ಬರೆಯಲು ಕೋರಿದರು. ಈ ಬ್ಲಾಗ್ ಎಷ್ಟು ಜನಪ್ರಿಯವಾಯಿತೆಂದರೆ ಇದುವರೆಗೆ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಪುಟವೀಕ್ಷಣೆಗಳನ್ನು ಇದು ಕಂಡಿದೆ. ಬ್ಲಾಗಿನ ವಾರ್ಷಿಕೋತ್ಸವವನ್ನೂ ಆಚರಿಸಿದೆವು. ಶ್ರೀಧರ್ ಮತ್ತು ನನ್ನ ತಮ್ಮನ ಒತ್ತಾಯದ ಮೇರೆಗೆ ನನ್ನ ಮೂಢ ಉವಾಚ ಸಹ ಈ ಸಂದರ್ಭದಲ್ಲಿ ಬಿಡುಗಡೆಯಾಯಿತು. ವೇದಭಾರತಿಯ ಚಟುವಟಿಕೆಗಳ ಬಗ್ಗೆ ವಿವರಗಳು ಪ್ರಚುರವಾಗುತ್ತಲೇ ಇರುವುದರಿಂದ ಇಲ್ಲಿ ಪುನಃ ಅ ಬಗ್ಗೆ ವಿವರಿಸಹೋಗುವದಿಲ್ಲ. ತಮ್ಮ ಮನೆಯ ಹಾಲ್ ಅನ್ನೇ ಈ ಚಟುವಟಿಕೆಗಳಿಗೆ ಮೀಸಲಿಟ್ಟು ವೇದಭಾರತಿಯ ಬೆನ್ನೆಲುಬಾಗಿರುವ ಶ್ರೀಧರರಿಗೆ ಸಕ್ರಿಯ ಸಹಕಾರ, ಬೆಂಬಲಗಳನ್ನು ವೇದಭಾರತಿ ಕಾರ್ಯಕರ್ತರು ಹೀಗೆಯೇ ಮತ್ತು ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರೆಸಲಿ ಎಂದು ಹಾರೈಸುವೆ.
      ಹಾಸನದಲ್ಲಿ ನಡೆದ ನಮ್ಮ ಕೆಳದಿ ಕವಿಮನೆತನದವರ ವಾರ್ಷಿಕ ಸಮಾವೇಶದಲ್ಲಿ ಅದು ತಮ್ಮದೇ ಕೆಲಸವೆಂಬಂತೆ ನನ್ನ ಹೆಗಲಿಗೆ ಹೆಗಲಾಗಿ ಶ್ರಮಿಸಿದ ಶ್ರೀಧರರಿಗೆ ನಾನು ಕೃತಜ್ಞ. ಜಿಲ್ಲಾ ಸಂಸ್ಕೃತ ಸಮ್ಮೇಳನದ ಬಗ್ಗೆ ಹೇಳಲೇಬೇಕು. ಸಮ್ಮೇಳನದ ಸಂಯೋಜಕರಾಗಿ ಸಮ್ಮೇಳನವು ರಾಜ್ಯದ ಬೇರೆ ಜಿಲ್ಲೆಗಳಲ್ಲಿ ನಡೆದ ಸಮ್ಮೇಳನಗಳಿಗಿಂತ ಅತ್ಯದ್ಭುತವಾಗಿ ಯಶಸ್ವಿಗೊಳಿಸಲು ಶ್ರೀಧರ್ ವಹಿಸಿದ ಶ್ರಮ ಅಭಿನಂದನೀಯ. ಅವರ ಸಂಘಟನಾ ಚತುರತೆ ಇಲ್ಲಿ ಫಲ ನೀಡಿತು. ಅವರು ಹಾಸನದ ಜನಮಿತ್ರ ಮತ್ತು ಜನಹಿತ ಪತ್ರಿಕೆಗಳಲ್ಲಿ, ವಿಕ್ರಮ ವಾರಪತ್ರಿಕೆಯಲ್ಲಿ ನಿರಂತರವಾಗಿ ವೇದದ ವಿಚಾರಗಳ ಬಗ್ಗೆ ಬರೆಯುತ್ತಿದ್ದ ಲೇಖನಗಳ ಸಂಗ್ರಹ ಜೀವನವೇದ ನಿಜಕ್ಕೂ ಒಂದು ಅದ್ಭುತ ಕೃತಿಯಾಗಿದ್ದು ಸಮ್ಮೇಳನದಲ್ಲಿ ಬಿಡುಗಡೆಯಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವೂ ಆಗಿ ಜನಪ್ರಿಯವೆನಿಸಿರುವುದು ಹೆಮ್ಮೆಯ ಸಂಗತಿ.
     ಬರೆಯುತ್ತಾ ಹೋದರೆ ಮುಗಿಯಲಾರದು. ಸಂಕ್ಷಿಪ್ತವಾಗಿ ನನ್ನ ಮತ್ತು ಶ್ರೀಧರರ ದಶಕಗಳ ಒಡನಾಟದ ಕೆಲವು ಸಂದರ್ಭಗಳನ್ನು ಸ್ಮರಿಸಿಕೊಂಡಿರುವೆ. ಶ್ರೀಧರರಿಂದ ಇನ್ನೂ ಹೆಚ್ಚು ರಭಸದಲ್ಲಿ ಸಮಾಜಮುಖಿ ಚಟುವಟಿಕೆಗಳಿಗೆ ಚಾಲನೆ ಸಿಗಲಿ ಎಂದು ಹಾರೈಸುತ್ತೇನೆ. ಅವರಿಗೆ ಇನ್ನೂ ಹೆಚ್ಚಿನ ಧನ್ಯತೆ ಮತ್ತು ಮಾನ್ಯತೆ ಎರಡೂ ಸಿಗಲಿ ಎಂದು ಪುನಃ ಹಾರೈಸುತ್ತಾ, ಅವರಿಗೆ ನನ್ನ ಕ್ರಿಯಾತ್ಮಕ ಸಹಕಾರ ಸದಾ ಇರುತ್ತದೆಂದು ತಿಳಿಸುತ್ತಾ ಈ ಕೆಲವು ಸಾಲುಗಳನ್ನು ಅವರ ಅರವತ್ತರ ಸಂದರ್ಭಕ್ಕೆ ಉಡುಗೊರೆಯಾಗಿ ನೀಡಿರುವೆ.

ಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ಉರಿಯುವಾ
-ಕ.ವೆಂ.ನಾಗರಾಜ್.