Pages

Saturday, February 18, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೬

     ವೇದಗಳು, ಪ್ರತಿಯೊಂದು ವರ್ಣದ ಕರ್ತವ್ಯಗಳನ್ನೂ ಸ್ಫುಟವಾಗಿ ವರ್ಣಿಸುತ್ತವೆ.


ಬ್ರಾಹ್ಮಣಾಸಃ ಸೋಮಿನೋ ವಾಚಮಕೃತ ಬ್ರಹ್ಮ ಕೃಣ್ವಂತಃ ಪರಿವತ್ಸರೀಣಮ್ |
ಅಧ್ವರ್ಯವೋ ಘರ್ಮಿಣಃ ಸಿಷ್ವಿದಾನಾಃ ಆವಿರ್ಭವಂತಿ ಗುಹ್ಯಾ ನ ಕೇ ಚಿತ್ || (ಋಕ್.೭.೧೦೩.೮.)


     [ಸೀಮಿನಃ] ಬ್ರಹ್ಮಾನಂದದ ಸವಿಯನ್ನು ಕಾಣುವವರೂ, [ಅದ್ವರ್ಯವಃ] ಅಹಿಂಸಕರೂ, [ಘರ್ಮಿಣಃ] ತಪಸ್ವಿಗಳೂ [ಸಿಷ್ವಿದಾನಾಃ] ಪರಿಶ್ರಮದಿಂದ ಬೆವರುವವರೂ, [ಬ್ರಾಹ್ಮಣಾಸಃ] ಬ್ರಾಹ್ಮಣರು. ಅವರು, [ಪರಿವತ್ಸರೀಣಂ ಬ್ರಹ್ಮಂ ಕೃಣ್ವಂತಃ]  ಸಮಸ್ತ ವಿಶ್ವದಲ್ಲಿಯೂ ವೇದಜ್ಞಾನವನ್ನು ಪಸರಿಸುತ್ತಾ, [ಕೇಚಿತ್ ಗುಹ್ಯಾಃ ನ] ಕೆಲವರು ಗುಪ್ತವಾಗಿದ್ದವರಂತೆ, [ಆವಿರ್ಭವಂತಿ] ಬೆಳಕಿಗೆ ಬರುತ್ತಾರೆ. 
     ಭಗವದುಪಾಸನೆಯಿಂದ ಆನಂದಪ್ರಾಪ್ತಿ, ಅಹಿಂಸಾತತ್ವ, ತಪಸ್ಸಿನ -  ಆಧ್ಯಾತ್ಮಿಕ ಸಾಧನೆಗಳ - ಅನುಷ್ಠಾನ ಮತ್ತು ಕಷ್ಟ ಸಹಿಷ್ಣುತೆ - ಇವು ಬ್ರಾಹ್ಮಣರ ಲಕ್ಷಣಗಳು. ಅವರು ಸದಾ ಹರಟುತ್ತಾ ತಿರುಗುವುದಿಲ್ಲ. ಗುಪ್ತ ಸಾಧನೆಗೂ ಗಮನವಿತ್ತು, ಆತ್ಮಶಕ್ತಿ ಬೆಲೆಸಿಕೊಂಡು ಸಂಪೂರ್ಣ ವಿಶ್ವದಲ್ಲೇ ಬ್ರಹ್ಮಜ್ಞಾನವನ್ನು ಪ್ರಸರಿಸುತ್ತಾರೆ. 


ಧೃತವ್ರತಾಃ ಕ್ಷತ್ರಿಯಾ ಯಜ್ಞನಿಷ್ಕೃತೋ ಬೃಹದ್ದಿವಾ ಅಧ್ವರಾಣಾಮಭಶ್ರಿಯಃ |
ಅಗ್ನಿಹೋತಾರ ಋತಸಾಪೋ ಅದ್ರುಹೋSಪೋ ಅಸೃಜನ್ನನು ವೃತ್ರತೂರ್ಯೇ || (ಋಕ್.೧೦.೬೬.೮.)   


     [ಧೃತವ್ರತಾಃ] ಸತ್ಯಾಹಿಂಸಾದಿ ವ್ರತಗಳನ್ನು ಧರಿಸುವವರೂ, [ಯಜ್ಞನಿಷ್ಕೃತಃ] ಶುಭಕರ್ಮಗಳಿಂದ ಪವಿತ್ರರಾದವರೂ, [ಬೃಹದ್ದಿವಾಃ] ಮಹಾತೇಜಸ್ವಿಗಳೂ, [ಅಧ್ವರಾನಾಂ ಅಭಿಪ್ರಿಯಃ] ಹಿಂಸಾರಹಿತ ಕರ್ಮಗಳ ಸೌಂದರ್ಯವರ್ಧಕರೂ, [ಅಗ್ನಿಹೋತಾರಃ] ಅಗ್ನಿಹೋತ್ರ ಮಾಡುವವರೂ, [ಋತಸಾಪಃ] ಧರ್ಮವನ್ನು ಕ್ರಿಯಾತ್ಮಕವಾಗಿ ಸ್ತುತಿಸುವವರೂ, [ಅದ್ರುಹಃ] ದ್ರೋಹ ಮಾಡದವರೂ, [ಕ್ಷತ್ರಿಯಾಃ] ಕ್ಷತ್ರಿಯರಾಗಿರುತ್ತಾರೆ. ಅವರು, [ವೃತ್ರತೂರ್ಯೇ] ಮೇಲೆ ಆವರಿಸಿ ಬರುವ ಶತ್ರುಗಳನ್ನು ಭಿನ್ನ ಭಿನ್ನ ಮಾಡುವ ಸಂಗ್ರಾಮದಲ್ಲಿ, [ಅಪಃ ಅಸೃಜನ್] ಸಾಹಸಕರ್ಮಗಳನ್ನು ಮಾಡುತ್ತಾರೆ, ಪ್ರಜಾಪಾಲನೆ ಮಾಡುತ್ತಾರೆ. ಕ್ಷತ್ರಿಯರ ಲಕ್ಷಣ ಅತಿ ಸ್ಫುಟವಾಗಿ ಹೇಳಲ್ಪಟ್ಟಿದೆ. 


ಇಂದ್ರಮಹಂ ವಣಿಜಂ ಚೋದಯಾಮಿ ಸ ನ ಐತು ಪುರಏತಾ ಸೋ ಅಸ್ತು |
ನುದನ್ನರಾತಿಂ ಪರಿಪಂಥಿನಂ ಮೃಗಂ ಸ ಈಶಾನೋ ಧನದಾ ಅಸ್ತು ಮಹ್ಯಮ್ || (ಅಥರ್ವ.೩.೧೫.೧.) 


     [ಅಹಮ್] ನಾನು, [ಇಂದ್ರಂ ವಣಿಜಮ್] ಐಶ್ವರ್ಯಶಾಲಿಯಾದ ವೈಶ್ಯನನ್ನು, [ಚೋದಯಾಮಿ] ಸತ್ಕರ್ಮಕ್ಕೆ ಪ್ರೇರಿಸುತ್ತೇನೆ. [ಸಃ ನಃ ಆ ಏತು] ಅವನು ನಮಗೆ ಪ್ರಾಪ್ತನಾಗಲಿ. [ನಃ ಪುರಃ ಏತಾ ಅಸ್ತು] ನಮ್ಮೆಲ್ಲರನ್ನೂ ಆರ್ಥಿಕದೃಷ್ಟಿಯಿಂದ ಸಮೃದ್ಧಿಯೆಡೆಗೆ ನಡೆಯಿಸಲಿ. [ಅರಾತಿಮ್] ಸ್ವಾರ್ಥಭಾವನೆಯನ್ನೂ, [ಪರಿಪಂಥಿನಂ ಮೃಗಮ್] ದಾರಿಗೆ ಅಡ್ಡ ಬರುವ ಚೌರ್ಯವೃತ್ತಿಯನ್ನೂ, [ನುದನ್] ದೂರ ತಳ್ಳುತ್ತಾ, [ನಃ ಈಶಾನಃ] ಆ ಸಂಪದ್ವಂತನು, [ಮಹ್ಯಮ್] ನನಗೆ [ಧನದಾ ಅಸ್ತು] ಧನದಾನ ಮಾಡುವವನಾಗಲಿ.
     ವೇದ, ಈ ಮಾತುಗಳನ್ನು ಆಚಾರ್ಯನ ಬಾಯಿಯಿಂದ ಹೊರಡಿಸಿದೆ. ಸಂಪದ್ವರ್ಧನ, ಸ್ವಾರ್ಥತ್ಯಾಗ, ಕಳ್ಳತನದ ಬಹಿಷ್ಕಾರ, ಉದಾರ ದಾನಭಾವನೆ - ಇವು ವೈಶ್ಯನ ಲಕ್ಷಣಗಳು.


ತೃದಿಲಾ ಅತೃದಿಲಾಸೋ ಅದ್ರಯೋಶ್ರಮಣಾ ಅಶೃಥಿತಾ ಅಮೃತ್ಯವಃ |
ಅನಾತುರಾ ಅಜರಾಃ ಸ್ಥಾಮವಿಷ್ಣವಃ ಸುಪೀವಸೋ ಅತೃಷಿತಾ ಅತೃಷ್ಣಜಃ || (ಋಕ್.೧೦.೯೪.೧೧.)


     [ತೃದಿಲಾಃ] ಮೋಹಬಂಧರಹಿತರೂ [ಅತೃದಿಲಾಸಃ] ಆದರೂ ಜಗತ್ತಿನಿಂದ ದೂರ ಸರಿಯದವರೂ, [ಆದ್ರಯಃ] ಆದರಣೀಯರೂ, [ಆಶ್ರಮಣಾಃ] ಶ್ರಮಕ್ಕೆ ಹಿಂಜರಿಯದವರೂ [ಅಶೃಥಿತಾಃ] ಸಡಿಲವಾಗದವರೂ, [ಅಮೃತ್ಯವಃ] ಸಾವಿಗೆ ಮಣಿಯದವರೂ [ಅನಾತುರಾಃ] ರೋಗರಹಿತರೂ [ಅಜರಾಃ] ಮುಪ್ಪಿಗೆ ಸೋಲದವರೂ, [ಅಮವಿಷ್ಣವಃ] ರಕ್ಷಣೆಯನ್ನು ಅಪೇಕ್ಷಿಸುವವರೂ, [ಸುಪೀವಸಃ] ಧೃಢಕಾಯರೂ, [ಅತೃಷಿತಾಃ] ಲೋಭರಹಿತರೂ, [ಅತೃಷ್ಣಜಃ] ತಮ್ಮ ನಿರ್ಲೋಭಿತ್ವಕ್ಕೆ ಪ್ರಸಿದ್ಧರೂ ಆದವರು, [ಸ್ಥಃ] ಪರಿಶ್ರಮಿಗಳೂ - ಶೂದ್ರರೂ ಆಗಿರುತ್ತಾರೆ.
     ಸಂಪೂರ್ಣ ಮಂತ್ರದಲ್ಲಿ ಎಲ್ಲಿಯೂ ಅಪಮಾನಕರವಾದ ಶಬ್ದವಿಲ್ಲ. ಶೂದ್ರರು ತುಚ್ಛರು, ಕೀಳು ಎಂಬ ಭಾವನೆ ಬರುವುದಿಲ್ಲ. ಆದರೆ, ಆದ್ರಯಃ ಎಂದರೆ ಆದರಣೀಯರು ಎಂಬ ಉತ್ಕೃಷ್ಟ ಅಭಿವ್ಯಕ್ತಿ ಕೊಡಲ್ಪಟ್ಟಿದೆ. 
     ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಲ್ಲರಿಗೂ ಮಾನವತ್ವ, ಅದೇ ಕಾರಣದಿಂದ ಸಮ್ಮಾನ ಸಾಮಾನ್ಯವಾಗಿದೆ. ವರ್ಣ, ವ್ಯಕ್ತಿ, ವ್ಯಕ್ತಿಯ ಶಕ್ತಿಯ ಮಾತು, ಜಾತಿ, ಕುಲ ಯಾವುದಕ್ಕೂ ಗೌರವವಿಲ್ಲ. ಒಂದೇ ಮನೆಯಲ್ಲಿ ಲಾಯರುಗಳು, ಡಾಕ್ಟರುಗಳು, ಸೈನ್ಯಾಧಿಕಾರಿಗಳು, ಕಾರ್ಖಾನೆಯಲ್ಲಿ ದುಡಿಯುವವರು, ಅಧ್ಯಾಪಕರುಗಳು ಇರಲು ಸಾಧ್ಯವಿರುವಂತೆ. ವರ್ಣಗಳನ್ನು ಹಿಡಿದು ಉಚ್ಛ-ನೀಚ ಭಾವನೆಗಳನ್ನು ಪ್ರಸರಿಸುವುದು ಮಾನವದ್ರೋಹ. ಕರ್ತವ್ಯಕ್ಷೇತ್ರಗಳು ಬೇರೆ ಬೇರೆ ಇರಬಹುದು, ಸೇವಾಪ್ರಣಾಳಿಯೂ ಬೇರೆ ಇರಬಹುದು, ಆದರೆ ಸರ್ವ ವರ್ಣೀಯರೂ ಮಾನವರೇ ಎಂಬ ಮೂಲಭೂತ ಸಿದ್ಧಾಂತವನ್ನು ನಾವಾರೂ ಅರೆಕ್ಷಣಕ್ಕೂ ಮರೆಯುವಂತಿಲ್ಲ.
***************
ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು:5ಕ್ಕೆ ಲಿಂಕ್: http://vedajeevana.blogspot.in/2012/02/blog-post.html

5 comments:

  1. ವರ್ಣವು ಗುಣ ಮತ್ತು ಕರ್ಮಾಧಾರಿತ ವೆಂದು ನಮ್ಮ ಶಾಸ್ತ್ರಗಳು ಸದಾಕಾಲ ಹೇಳುತ್ತಲೇ ಇದೆ. ಹಾಗಿದ್ದರೂ ಭಾರತೀಯ ಸಾಮಾಜಿಕ ಇತಿಹಾಸದಲ್ಲಿ ಎಲ್ಲೋ ನುಸುಳಿದ ಈ ವರ್ಣ ಬೇಧದ ಪಿಡುಗು ನಮ್ಮನ್ನು ಇಂದಿಗೂ ಪೀಡಿಸುತ್ತಿದೆ. " ಚತುರ್ವರ್ಣಗಳನ್ನೂ ನಾನು ಗುಣ ಮತ್ತು ಕರ್ಮ ಆಧಾರದ ಮೇಲೆ ಮಾಡಿದ್ದೇನೆ" ಎಂದು ಭಗವದ್ಗೀತೆಯ ಉಕ್ತಿ. " ಜನ್ಮನಾ ಜಾಯೇತೆ ಶೂದ್ರಃ, ಕರ್ಮನಾ ದ್ವಿಜಃ ಜಾಯತೆ" ಎನ್ನುವುದನ್ನೂ ನಾನು ಕೇಳಿದ್ದೇನೆ.
    ನಮ್ಮ ಅಜ್ಜಿ ಒಂದು ವಿಷಯ ಹೇಳುತ್ತಿದ್ದರು. "ಒಂದು ವ್ಯಕ್ತಿ ತನ್ನ ಜೀವನಕಾಲದಲ್ಲಿ ೨೦-೨೫ ವರ್ಷದ ತನಕ ವಿಧ್ಯಾಭ್ಯಾಸ ಮಾಡುವಾಗ ಬ್ರಾಹ್ಮಣನಾಗಿಯೂ, ನಂತರ ಸಂಸಾರವನ್ನು ಕಟ್ಟಿಕೊಂಡಮೇಲೆ, ಉದರ ಫೋಷಣೆಗೆ ಧನಾರ್ಜನೆ ಮಾಡುವಾಗ ವೈಶ್ಯನಾಗಿಯೂ, ತನ್ನವರನ್ನು ರಕ್ಷಿಸಿಕೊಳ್ಳುವಾಗ, ಕ್ಷತ್ರಿಯನಾಗಿಯೂ ಮತ್ತು ಇವೆಲ್ಲವನ್ನೂ ಮಾಡುವಾಗ ಅಂಟಿಕೊಂಡ ಮನಃ ಕ್ಲೇಶವನ್ನು ತೊಳೆದುಕೊಳ್ಳಲು ಆಧ್ಯಾತ್ಮ ಚಿಂತನೆಯಲ್ಲಿ ತೊಡಗಿ ಆತ್ಮೋದ್ಧಾರಕ್ಕಾಗಿ ಪ್ರಯತ್ನ ಮಾಡುತ್ತಾನೆ" ಹಾಗಾಗಿ ಈ ತೊಳೆಯುವ ಕೆಲಸಮಾಡುವ ಶೂದ್ರತ್ವವೇ ಅತೀ ಉತ್ತಮವಾದದ್ದು. ಏಕೆಂದರೆ ಇಹದಿಂದ ಪರಕ್ಕೆ ಮಾರ್ಗ ತೋರಿಸುವುದೇ ಶೂದ್ರತ್ವ ಎಂದು ಹೇಳುತ್ತಿದ್ದರು. ಎಷ್ಟು ಸಮಂಜಸವಾಗಿತ್ತು ಅವರ ವಿಶ್ಲೇಷಣೆ. ಇಂದು ಪರಿಸ್ಥಿತಿ ಸ್ವಲ್ಪ ಬದಲಾಗುತ್ತಿದ್ದರೂ ಈ ಜಾತಿಬೇದದ ಪಿಡುಗು ನಮ್ಮ ಸಮಾಜವನ್ನು ಇನ್ನೂ ಹಿಂಡುತ್ತಲೇ ಇದೆ.

    ReplyDelete
  2. ವೇದೋಕ್ತ ಜೀವನ ಪಥದಲ್ಲಿ ಈ ಭಾಗವು ನನ್ನನ್ನು ಕಟ್ಟಿಹಾಕಿದೆ. ಅದ್ಭುತ! ಇದಕ್ಕಿಂತ ಹೆಚ್ಚು ಹೇಳಲು ಅಕ್ಷರ ಸಾಲದಾಗುತ್ತದೆ.ನಾಲ್ಕು ವರ್ಣಗಳ ವಿವರಣೆ ಎಷ್ಟು ಸೊಗಸಾಗಿದೆ.ಅಷ್ಟೇ ಅಲ್ಲ. ಅವರವರ ಕರ್ತವ್ಯಗಳ ವಿವರಣೆ ಎಷ್ಟು ಅದ್ಭುತವಾಗಿದೆ! ಈ ವ್ಯವಸ್ಥೆಯನ್ನು ಬರುಬರುತ್ತಾ ಜಾತಿ ಮಾಡಿ ಬಿಟ್ಟರಲ್ಲಾ! ಇಂದು ಪ್ರಚಲಿತದಲ್ಲಿರುವಂತೆ ನಾನು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದರೂ ನಾಲ್ಕೂ ವರ್ಣಗಳ ಹಲವು ಸ್ವಭಾವ ನನಗಿದೆ. ಹಾಗೆ ನೋಡಿದರೆ ಬ್ರಾಹ್ಮಣ ವರ್ಣದ ಕರ್ತವ್ಯವನ್ನು ವೇದದ ಕರೆಯಂತೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವಲ್ಲಾ! ಎಂಬ ನೋವಿದೆ. ಶೂದ್ರ ವರ್ಣದ ವಿವರಣೆಯು ಅಚ್ಚರಿ ಮೂಡಿಸಿದೆ. ಆಳವಾಗಿ ನೋಡಿದಾಗ ಯಾವ ವರ್ಣವೂ ಕನಿಷ್ಟವಲ್ಲ. ಎಲ್ಲವೂ ಶ್ರೇಷ್ಠವೇ ಆಗಿದೆ. ಆದರೆ ಶೂದ್ರ ವರ್ಣನೆ ಅತ್ಯದ್ಭುತವಾಗಿದೆ. ನನ್ನ ಚಿಕ್ಕ ವಯಸ್ಸಿನಲ್ಲಿ ನನಗೆ ಈ ವಿಚಾರಗಳ ಸ್ಪಷ್ಟ ಅರಿವು ಇದ್ದಿದ್ದರೆ ನಾನು ಶೂದ್ರ ವರ್ಣವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಆದರೆ ಈಗ ಆಗಬೇಕಾಗಿರುವುದು ಜಾತಿ ಎಂಬ ಸಂಕೋಲೆಗಳಿಂದ ಹೊರಬಂದು ವೇದದ ಆದೇಶದಂತೆ ನಡೆಯುವುದೇ ಆಗಿದೆ. ಆದರೆ ನಾನು ಏನೇ ಹೇಳಿದರೂ ಹೇಗೇ ನನ್ನ ನಡವಳಿಕೆ ಇದ್ದರೂ ಜಾತಿ ವ್ಯವಸ್ಥೆ ಅಳಿಯುವ ವರೆಗೂ ನನ್ನನ್ನು ಬ್ರಾಹ್ಮಣ ನೆಂದೇ ಜನರು ಕರೆಯುತ್ತಾರೆ. ಆದರೆ ವೈಯಕ್ತಿಕವಾಗಿ ನಾನು ನಾಲ್ಕೂ ವರ್ಣದ ಕರ್ತವ್ಯಗಳನ್ನು ಪ್ರೀತಿಯಿಂದಲೇ ಮಾಡುತ್ತೇನೆ.

    ReplyDelete
  3. ಅಂತರಂಗ ಬಹಿರಂಗಗಳ ಅಂತರದ ಕಂದರದ ಆಳ ಹಿರಿದು, ಶ್ರೀಧರ! ಈ ಕುರಿತು ಚಿಂತಿಸುವವರು ಬಹಳ ಕಡಿಮೆ. ಚಿಂತಿಸುವವರಿಗೂ ಅಂತರಂಗದ ಕರೆಗೆ ಓಗೊಡುವುದು ಸುಲಭವಾಗಿಲ್ಲ. ಅರಿಷಡ್ವರ್ಗಗಳ ಮಹಿಮೆ!!!!!!!!!!!

    ReplyDelete
    Replies
    1. ನಾಗರಾಜ್,
      ನಿಮ್ಮ ಮಾತು ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಅರ್ಥೈಸುವಿರಾ?

      Delete
  4. ತಿರುಮಲೈ ರವಿರವರಿಗೆ ವಂದನೆ. ನಿಮ್ಮ ಅಜ್ಜಿಯವರ ಮಾತು ಮನನೀಯವಾಗಿದೆ.

    ReplyDelete